ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ ಅನು ಗ್ರೋವರ್ ಬಲಿಗಾ ಅವರನ್ನು ವರ್ಗಾವಣೆ ಮಾಡಿದೆ. ಒಟ್ಟು 138 ನ್ಯಾಯಾಂಗ ಅಧಿಕಾರಿಗಳನ್ನು ಒಳಗೊಂಡ ಬೃಹತ್ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಬಲಿಗಾ ಅವರ ವರ್ಗಾವಣೆ ನಡೆದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಪಬ್ಲಿಕ್ ಪರೀಕ್ಷೆಗಳಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ದೆಹಲಿ ಹೈಕೋರ್ಟ್ ಜುಲೈ 23ರಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿತ್ತು. ಜುಲೈ 2ರಂದು ನ್ಯಾಯಾಧೀಶೆ ಬಲಿಗಾ ಅವರು ಈ ನ್ಯಾಯಾಲಯದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
ದೆಹಲಿ ಹೈಕೋರ್ಟ್ ಹೊರಡಿಸಿರುವ ವರ್ಗಾವಣೆ ಆದೇಶದ ಪ್ರಕಾರ, ನ್ಯಾಯಾಧೀಶೆ ಬಲಿಗಾ ಅವರನ್ನು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆಯಡಿ ರಚಿಸಲಾದ ವಿಶೇಷ ನ್ಯಾಯಾಲಯಕ್ಕೆ ನೇಮಿಸಲಾಗಿದೆ. ಇವರೊಂದಿಗೆ ವಿಶೇಷ ನ್ಯಾಯಾಧೀಶರುಗಳಾದ ವಿಕಾಸ್ ಧುಲ್, ಪ್ರಶಾಂತ್ ಶರ್ಮಾ, ಪುಲಸ್ತ್ಯ ಪ್ರಮಾಚಲ, ಕಿರಣ್ ಬನ್ಸಾಲ್ ಮತ್ತು ಅಮಿತ್ ಬನ್ಸಾಲ್ ಅವರನ್ನು ಸಹ ಎನ್ಐಎ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ನೀಟ್ ಸೇರಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಧೀಶ ಅಜಯ್ ಗುಪ್ತಾ ಅವರು, ನ್ಯಾಯಾಧೀಶೆ ಬಲಿಗಾ ಅವರಿಂದ ಈ ತ್ವರಿತಗತಿ ನ್ಯಾಯಾಲಯದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಗಳ ವಿರುದ್ಧದ ವ್ಯಾಪಕ ಪ್ರತಿಭಟನೆಗಳು ಮತ್ತು ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಡಗಳು ಹೆಚ್ಚಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಪಬ್ಲಿಕ್ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024 ಮತ್ತು ಇತರ ಸಂಬಂಧಿತ ಅಪರಾಧಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗಾಗಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಈ ತ್ವರಿತಗತಿ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಅಂತಹ ಎಲ್ಲಾ ಪ್ರಕರಣಗಳನ್ನು ಈ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ದೇಶಿಸಲಾಗಿದೆ.
ಆದಾಗ್ಯೂ, ಮತ್ತೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅತ್ಯಂತ ಮೊದಲ ವಿಚಾರಣೆಗೆ ಹಾಜರಾಗಲು ವಿಫಲವಾದ ಕಾರಣ, ದೆಹಲಿಯ ಈ ತ್ವರಿತಗತಿ ನ್ಯಾಯಾಲಯ ಜುಲೈ 27ರಂದು ಆರಂಭದಲ್ಲೇ ಅಡಚಣೆಯನ್ನು ಎದುರಿಸಿತ್ತು ಎಂದು ದಿ ವೈರ್ ಈ ಹಿಂದೆ ವರದಿ ಮಾಡಿತ್ತು. ಆ ದಿನ, ಪ್ರಕರಣಕ್ಕೆ ಸಂಬಂಧಿಸಿದ ಎರಡು ಜಾಮೀನು ಅರ್ಜಿಗಳ ವಿಚಾರಣೆ ನಡೆಯಬೇಕಿತ್ತು.
ಪ್ರತಿವಾದಿ ವಕೀಲರ ಕೋರಿಕೆಯ ಮೇರೆಗೆ ನ್ಯಾಯಾಲಯದ ನಡಾವಳಿಗಳನ್ನು ಮುಂದೂಡಲಾಗಿತ್ತು. ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿ ಹಾಗೂ ಇಬ್ಬರು ಆರೋಪಿಗಳ ಜಾಮೀನು ಅರ್ಜಿಗಳ ಪರಿಶೀಲನೆಗಾಗಿ ಈ ವಿಷಯವನ್ನು ಆಗಸ್ಟ್ 3ಕ್ಕೆ ಪಟ್ಟಿ ಮಾಡಲಾಗಿದೆ.
ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ನಡೆಸುವಲ್ಲಿ ಸರಣಿ ವೈಫಲ್ಯಗಳು ಉಂಟಾದ ನಂತರ, ಶೈಕ್ಷಣಿಕ ಸುಧಾರಣೆಗಳಿಗಾಗಿ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯು ಈ ತ್ವರಿತಗತಿ ನ್ಯಾಯಾಲಯವನ್ನು ಕೇವಲ ಒಂದು ‘ತಾತ್ಕಾಲಿಕ ಉಪಶಮನ’ ಎಂದು ಹೇಳಿದೆ.
ಮಾಜಿ ಸಚಿವ ಹಾಗೂ ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಅವರು ಕೂಡ ಪ್ರಶ್ನೆ ಪತ್ರಿಕೆ ಸೋರಿಕೆ ಬಿಕ್ಕಟ್ಟಿಗೆ ತ್ವರಿತಗತಿ ನ್ಯಾಯಾಲಯವನ್ನು ಒಂದು ಪರಿಹಾರವಾಗಿ ತಂದಿದ್ದಕ್ಕಾಗಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರಶ್ನೆ ಪತ್ರಿಕೆ ಸೋರಿಕೆ ಬಿಕ್ಕಟ್ಟಿಗೆ ತ್ವರಿತಗತಿ ನ್ಯಾಯಾಲಯಗಳೇ ಪರಿಹಾರ ಎಂದು ಮೋದಿ ಸರ್ಕಾರ ಯಾವ ಮುಖ ಇಟ್ಟುಕೊಂಡು ಡಂಗುರ ಸಾರುತ್ತಿದೆ? ಈ ಪ್ರಕರಣಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆ ನಡೆಸುವಲ್ಲಿ ಅದರದೇ ಆದ ಸಿಬಿಐ ಶೂನ್ಯ ಆಸಕ್ತಿಯನ್ನು ಪ್ರದರ್ಶಿಸುತ್ತಿದೆ” ಎಂದು ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.


