ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಿಪಿಐ(ಎಂ) ಹಿರಿಯ ನಾಯಕಿ ಬೃಂದಾ ಕಾರಟ್ ಅವರು ಸುಪ್ರೀಂ ಕೋರ್ಟ್ನ ಏಪ್ರಿಲ್ 29ರ ತೀರ್ಪಿನ ವಿರುದ್ಧ ಈ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಜುಲೈ 29, 2026 ರಂದು ನೀಡಿರುವ ಆದೇಶದಲ್ಲಿ, “ನಾವು ನೀಡಿರುವ ಆಕ್ಷೇಪಾರ್ಹ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ, ತೀರ್ಪಿನ ಮರುಪರಿಶೀಲನೆಗೆ ಅರ್ಹವಾಗುವಂತಹ ಯಾವುದೇ ಕಾನೂನಾತ್ಮಕ ಅಥವಾ ವಾಸ್ತವಿಕ ದೋಷಗಳು ನಮಗೆ ಗೋಚರಿಸುತ್ತಿಲ್ಲ” ಎಂದು ಸ್ಪಷ್ಟಪಡಿಸಿದೆ.
ಇದರೊಂದಿಗೆ ಈ ವಿಷಯದಲ್ಲಿ ಬಹಿರಂಗ ನ್ಯಾಯಾಲಯದಲ್ಲಿ (ಓಪನ್ ಕೋರ್ಟ್) ವಿಚಾರಣೆ ನಡೆಸಬೇಕು ಎಂಬ ಮನವಿಯನ್ನೂ ನ್ಯಾಯಪೀಠ ನಿರಾಕರಿಸಿದೆ. ಸುಪ್ರೀಂ ಕೋರ್ಟ್ನ ನಿಯಮಾವಳಿಗಳ ಪ್ರಕಾರ, ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಧೀಶರು ತಮ್ಮ ಚೇಂಬರ್ಗಳಲ್ಲಿ, ವಕೀಲರ ನೇರ ಉಪಸ್ಥಿತಿ, ಮೌಖಿಕ ವಾದಗಳಿಲ್ಲದೆ ಕೇವಲ ಲಿಖಿತ ದಾಖಲೆಗಳ ಪರಿಶೀಲನೆಯ ಮೂಲಕ ವಿಲೇವಾರಿ ಮಾಡುತ್ತಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಮಾಜಿ ಕೇಂದ್ರ ಸಚಿವರಾಗಿದ್ದರೆ, ಪರ್ವೇಶ್ ವರ್ಮಾ ಅವರು ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ದ್ವೇಷ ಭಾಷಣದ ವಿರುದ್ಧ ಸಿಆರ್ಪಿಸಿಯ ಸೆಕ್ಷನ್ 156(3) ರ ಅಡಿಯಲ್ಲಿ ದೆಹಲಿ ಪೊಲೀಸರಿಗೆ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಈ ನಿರ್ಧಾರವನ್ನು ಎತ್ತಿಹಿಡಿದಿದ್ದ ದೆಹಲಿ ಹೈಕೋರ್ಟ್ನ ಜೂನ್ 2022 ರ ಆದೇಶವನ್ನು ಪ್ರಶ್ನಿಸಿ ಬೃಂದಾ ಕಾರಟ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಜನವರಿ 27, 2020 ರಂದು ದೆಹಲಿ ಚುನಾವಣಾ ಪ್ರಚಾರದ ವೇಳೆ ಅನುರಾಗ್ ಠಾಕೂರ್ ಅವರು “ದೇಶ್ ಕೆ ಗದ್ದರೋಂ ಕೋ, ಗೋಲಿ ಮಾರೋಂ ಸಾಲೋಂ ಕೋ” (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂದು ಬಹಿರಂಗವಾಗಿ ಜನರಿಂದ ಘೋಷಣೆ ಕೂಗಿಸಿದ್ದರು. ಮತ್ತೊಂದೆಡೆ ಪರ್ವೇಶ್ ವರ್ಮಾ ಅವರು ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಉದ್ದೇಶಿಸಿ, “ಅವರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಮೇಲೆ ಅತ್ಯಾಚಾರ ಮಾಡಿ ಕೊಲ್ಲುವ ಒಳನುಸುಳುಕೋರರು” ಎಂದು ನಿಂದನಾತ್ಮಕ ಭಾಷಣ ಮಾಡಿದ್ದರು. ಈ ಹೇಳಿಕೆಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ, 153 ಬಿ, 295 ಎ ಮತ್ತು 505 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಕಾರಟ್ ವಾದಿಸಿದ್ದರು.
ಈ ಮೊದಲು ಏಪ್ರಿಲ್ 29 ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪೀಠವು, ಸೆಕ್ಷನ್ 156(3) ರ ಅಡಿಯಲ್ಲಿ ತನಿಖೆಗೆ ಆದೇಶಿಸಲು ಮ್ಯಾಜಿಸ್ಟ್ರೇಟ್ಗೆ ಸೆಕ್ಷನ್ 196 CrPC ಅಡಿಯಲ್ಲಿ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಹೇಳಿತ್ತಾದರೂ, ಈ ಭಾಷಣಗಳು ಯಾವುದೇ ನಿರ್ದಿಷ್ಟ ಸಮುದಾಯವನ್ನು ನೇರವಾಗಿ ಗುರಿಯಾಗಿಸಿಕೊಂಡಿಲ್ಲ ಹಾಗೂ ಯಾವುದೇ ಗುರುತಿಸಬಹುದಾದ ಪ್ರಥಮ ದೃಷ್ಟಿಯ ಅಪರಾಧವನ್ನು ಬಹಿರಂಗಪಡಿಸಿಲ್ಲ ಎಂದು ಕೆಳ ನ್ಯಾಯಾಲಯಗಳ ಅಭಿಪ್ರಾಯವನ್ನು ಎತ್ತಿಹಿಡಿದಿತ್ತು.
ಆದರೆ, ಸುಪ್ರೀಂ ಕೋರ್ಟ್ನ ಈ ತೀರ್ಮಾನವು “ದಾಖಲೆಗಳ ಮೇಲ್ಮೈಯಲ್ಲಿಯೇ ಗೋಚರಿಸುವ ಸ್ಪಷ್ಟ ದೋಷ” ಎಂದು ಬೃಂದಾ ಕಾರಟ್ ತಮ್ಮ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣಾ ನ್ಯಾಯಾಲಯವಾಗಲಿ ಅಥವಾ ಹೈಕೋರ್ಟ್ ಆಗಲಿ ವಾಸ್ತವಿಕ ಆರೋಪಗಳನ್ನು ಮತ್ತು ವಿಡಿಯೋ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿಲ್ಲ. ಹೈಕೋರ್ಟ್ ಕೇವಲ ಸರ್ಕಾರದ ಅನುಮತಿಯ ಕಾನೂನು ಪ್ರಶ್ನೆಗೆ ಸೀಮಿತವಾಗಿ ಪರಿಶೀಲನೆ ನಡೆಸಿತ್ತು ಮತ್ತು ತನ್ನ ಯಾವುದೇ ಅವಲೋಕನಗಳು ಭವಿಷ್ಯದ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಬಾರದು ಎಂದು ಸ್ಪಷ್ಟಪಡಿಸಿತ್ತು ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿತ್ತು.
ಅಲ್ಲದೆ, ಜನವರಿ 2020 ರಲ್ಲಿ ಕೇಂದ್ರ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶಗಳನ್ನು ಕಾರಟ್ ಅವರು ತಮ್ಮ ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದರು. ಈ ನಾಯಕರ ಭಾಷಣಗಳು ಮಾದರಿ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿವೆ, ಕೋಮು ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಇಬ್ಬರನ್ನೂ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದುಹಾಕಿ, ಪ್ರಚಾರ ನಿಷೇಧಿಸಿತ್ತು. ಇಷ್ಟೆಲ್ಲಾ ಸ್ಪಷ್ಟ ಸಾಕ್ಷ್ಯಗಳು ಮತ್ತು ವೀಡಿಯೊ ಆಧಾರಗಳಿದ್ದರೂ, ದೆಹಲಿ ಪೊಲೀಸರ ತನಿಖಾ ವರದಿಯನ್ನೇ ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಸ್ವತಂತ್ರ ತಾರ್ಕಿಕತೆಯಿಲ್ಲದೆ ಅರ್ಜಿ ವಜಾಗೊಳಿಸಿದೆ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ವಾದಿಸಲಾಗಿತ್ತು.
ಈ ಹಿಂದಿನ ತೀರ್ಪನ್ನು ಹಿಂಪಡೆದು, ಎರಡೂ ಕಡೆಯ ವಾದ ಆಲಿಸಿ ಅರ್ಹತೆಯ ಆಧಾರದಲ್ಲಿ ಹೊಸ ತೀರ್ಪು ನೀಡಬೇಕೆಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಇದೀಗ ಸಂಪೂರ್ಣವಾಗಿ ತಿರಸ್ಕರಿಸಿದೆ.


