“ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ,” ಎಂದು ‘ಅಭಿಮತ ಮಂಗಳೂರು’ ಆಶಯ ವ್ಯಕ್ತಪಡಿಸಿದೆ.
ಪ್ರಭುತ್ವದ ನಿರಂಕುಶ ಧೋರಣೆ, ಸಾಂಸ್ಕೃತಿಕ ಕಾರ್ಪೊರೇಟೀಕರಣ ಹಾಗೂ ಸಮಾಜವನ್ನು ವಿಭಜಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಸಾಂಸ್ಕೃತಿಕ-ಸಾಹಿತ್ಯಿಕ ಪ್ರತಿರೋಧದ ಸಂಕೇತವಾಗಿ ರೂಪುಗೊಂಡಿದ್ದ ‘ಜನನುಡಿ’ ಮತ್ತೆ ಸದ್ದು ಮಾಡಲು ಸಜ್ಜಾಗಿದೆ. ‘ಅಭಿಮತ ಮಂಗಳೂರು’ ಆಶ್ರಯದಲ್ಲಿ 2026ರ ನವೆಂಬರ್ 28 ಮತ್ತು 29 ರಂದು ಕರಾವಳಿ ನಗರಿ ಮಂಗಳೂರಿನಲ್ಲಿ ‘ಜನನುಡಿ – 2026’ ಅನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 50ಕ್ಕೂ ಹೆಚ್ಚು ಹಿರಿಯ-ಕಿರಿಯ ಬರಹಗಾರರು, ರಂಗಕರ್ಮಿಗಳು, ಚಿಂತಕರು ಮತ್ತು ಜನಪರ ಆಕ್ಟಿವಿಸ್ಟ್ಗಳು ಭಾಗವಹಿಸಿದ್ದ ‘ಅಭಿಮತ’ದ ಪ್ರಾಥಮಿಕ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಸಕ್ತ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎದುರಿಸುತ್ತಿರುವ ತೀವ್ರ ಸವಾಲುಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಬಾರಿಯ ‘ಜನನುಡಿ’ ಗೋಷ್ಠಿಗಳನ್ನು ವಿನ್ಯಾಸಗೊಳಿಸಲು ತೀರ್ಮಾನಿಸಲಾಗಿದೆ.
‘ಜನನುಡಿ’ಯ ಹುಟ್ಟು
ಕರಾವಳಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿದ್ದ ಅದ್ದೂರಿ, ಕಾರ್ಪೊರೇಟ್ ಪ್ರಾಯೋಜಿತ ಹಾಗೂ ವಿಚಾರಶೂನ್ಯ ಉತ್ಸವಗಳಿಗೆ ಪರ್ಯಾಯವಾಗಿ 2013ರಲ್ಲಿ ‘ಅಭಿಮತ’ ಬಳಗದ ಮೂಲಕ ‘ನುಡಿಯು ಸಿರಿಯಲ್ಲ ಬದುಕು’ ಎಂಬ ಟ್ಯಾಗ್ಲೈನ್ನೊಂದಿಗೆ ಜನ್ಮತಾಳಿದ್ದು ‘ಜನನುಡಿ’
ಸಾಹಿತ್ಯಿಕ ಆಡಂಬರ, ಬ್ರಾಂಡ್ ಕಟ್ಟುವ ತಂತ್ರ ಹಾಗೂ ಅಧಿಕಾರಸ್ಥರ ಓಲೈಕೆಯ ವಿರುದ್ಧ ‘ಜನರ ಧ್ವನಿ’ಯಾಗಿ ಆರಂಭವಾದ ಈ ಸಮಾವೇಶ, ಪ್ರಭುತ್ವದ ತಪ್ಪು ನೀತಿಗಳು, ಮೌಢ್ಯ (ಉದಾಹರಣೆಗೆ ಮಡೆಸ್ನಾನ), ಕೋಮುವಾದ ಮತ್ತು ಜಾಗತೀಕರಣದ ಪರಿಣಾಮಗಳ ಕುರಿತು ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಿತ್ತು.
ಡಾ. ಯು.ಆರ್. ಅನಂತಮೂರ್ತಿ, ಜಿ. ರಾಜಶೇಖರ್, ಪ್ರೊ. ರಾಜೇಂದ್ರ ಚೆನ್ನಿ, ಕೆ.ವಿ. ನಾರಾಯಣ, ಡಾ. ಎಚ್.ಎಸ್. ಅನುಪಮಾ, ಸಾರಾ ಅಬೂಬಕರ್, ಪ್ರಕಾಶ್ ರೈ ಮುಂತಾದ ಪ್ರಗತಿಪರ ವೈಚಾರಿಕ ದೈತ್ಯರು ‘ಜನನುಡಿ’ಯ ಗೋಷ್ಠಿಗಳಲ್ಲಿ ಧ್ವನಿಯಾಗಿದ್ದರು. ಯಾವುದೇ ಸರ್ಕಾರಿ ಅನುದಾನ ಅಥವಾ ಕಾರ್ಪೊರೇಟ್ ಹಂಗಿಲ್ಲದೆ, ಪ್ರಗತಿಪರ ಮನಸ್ಸುಗಳ ಸ್ವಯಂಪ್ರೇರಿತ ವಂತಿಗೆಯಿಂದಲೇ ನಡೆದುಬಂದದ್ದು ‘ಜನನುಡಿ’ಯ ಹೆಗ್ಗಳಿಕೆ.
ಕಳೆದ ಕೆಲವು ವರ್ಷಗಳಿಂದ ಸಾಂಸ್ಥಿಕ ತೊಡಕುಗಳು, ಕೋವಿಡ್ ಸಂದರ್ಭ ಹಾಗೂ ಸಂಘಟನಾತ್ಮಕ ಹಿನ್ನಡೆಗಳಿಂದಾಗಿ ‘ಜನನುಡಿ’ ನಿರಂತರವಾಗಿ ನಡೆಯಲು ಸಾಧ್ಯವಾಗಿರಲಿಲ್ಲ. ಸಾಂಸ್ಕೃತಿಕ ಚಳವಳಿಗಳಲ್ಲಿ ಉಂಟಾದ ಈ ಶೂನ್ಯತೆಯು ಜನಪರ ಚಳವಳಿಗಳ ಮೇಲೆ ಪರಿಣಾಮ ಬೀರಿತ್ತು. ಆದರೆ, ಇಂದಿನ ಆತಂಕಕಾರಿ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ‘ಜನನುಡಿ’ಯಂತಹ ಮುಕ್ತ, ವೈಚಾರಿಕ ಹಾಗೂ ಜನಪರ ವೇದಿಕೆಯು ಕಾಲದ ಅತ್ಯಂತ ತುರ್ತು ಅಗತ್ಯ ಎಂಬ ಅಭಿಪ್ರಾಯ ನಾಡಿನಾದ್ಯಂತ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ‘ಜನನುಡಿ’ಗೆ ಮರುಜೀವ ನೀಡಲು ಮುಂದಾಗಿರುವ ‘ಅಭಿಮತ’, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸಮಾನಮನಸ್ಕ ಸಂಘಟನೆಗಳು, ಸಾಹಿತಿಗಳು ಮತ್ತು ಚಿಂತಕರನ್ನು ಒಗೂಡಿಸಲು ಯೋಜನೆ ರೂಪಿಸಿದೆ.


