ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ), ಬಿಜೆಪಿ ಶಾಸಕ ಮತ್ತು ಕುಮಾನ್ ವಿಭಾಗದ ಕಮಿಷನರ್ ಸೇರಿದಂತೆ ಹಲವರಿಗೆ ನೋಟೀಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ಕಾಗುಣಿತ ದೋಷಗಳು, ಅಪೂರ್ಣ ಹೆಸರುಗಳು ಅಥವಾ ಹಳೆಯ ವಿಳಾಸಗಳಂತಹ ಮತದಾರರ ದಾಖಲೆಗಳಲ್ಲಿನ ಸಾಮಾನ್ಯ ವ್ಯತ್ಯಾಸಗಳ ಕಾರಣಕ್ಕೆ ಹೆಚ್ಚಿನ ನೋಟಿಸ್ಗಳನ್ನು ನೀಡಲಾಗಿದೆ ಎಂದು indiatoday.in ವರದಿ ಮಾಡಿದೆ.
ನೈನಿತಾಲ್ನಲ್ಲಿ, ಬಿಜೆಪಿ ಶಾಸಕಿ ಸರಿತಾ ಆರ್ಯ ಅವರ ಮನೆಗೆ ನೀಡಲಾದ ನೋಟಿಸ್ನಲ್ಲಿ ಶಾಸಕಿ ಮತ್ತು ಅವರ ಕಿರಿಯ ಮಗ ಇಬ್ಬರಿಗೂ ಸಂಬಂಧಿಸಿದ ಮತದಾರರ ಪರಿಶೀಲನಾ ವಿವರಗಳನ್ನು ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಆಯೋಗದ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವ ಅಭಿಯಾನದ ಸಮಯದಲ್ಲಿ ಕುಮಾನ್ ಆಯುಕ್ತ ದೀಪಕ್ ರಾವತ್ ಅವರ ಮನೆಗೂ ಇದೇ ರೀತಿಯ ನೋಟಿಸ್ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಬಿ.ವಿ.ಆರ್.ಸಿ ಪುರುಷೋತ್ತಮ್ ಅವರೂ ಸಹ ತಮ್ಮ ಹೆಸರಿನಲ್ಲಿ ಉಂಟಾದ ವ್ಯತ್ಯಾಸದ ಕಾರಣಕ್ಕೆ ನೋಟಿಸ್ ಪಡೆದಿದ್ದು, ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್ಒ) ಸಲ್ಲಿಸಿದ್ದಾರೆ.
ನೋಟೀಸ್ಗಳ ಬಗ್ಗೆ ಉಂಟಾಗಿರುವ ಆತಂಕವನ್ನು ದೂರ ಮಾಡಲು ಯತ್ನಿಸಿದ ಪುರುಷೋತ್ತಮ್ ಗುರುವಾರದಂದು ಮಾತನಾಡಿ, ಮತದಾರರು ಯಾವುದೇ ಕಾರಣಕ್ಕೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದು, ಹೆಸರು, ವಿಳಾಸ ಅಥವಾ ಇತರ ವಿವರಗಳಿಗೆ ಸಂಬಂಧಿಸಿದ ವ್ಯತ್ಯಾಸಗಳನ್ನು ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್ಒ) ನಿಗದಿತ ದಾಖಲೆಗಳನ್ನು ಸಲ್ಲಿಸುವ ಮೂಲಕ ಸರಿಪಡಿಸಿಕೊಳ್ಳಬಹುದು ಎಂದಿದ್ದಾರೆ.
ಇಂತಹ ನೋಟೀಸ್ಗಳ ನೀಡುವಿಕೆಯು ಮತದಾರರ ದಾಖಲೆಗಳಲ್ಲಿರುವ ವ್ಯತ್ಯಾಸಗಳನ್ನು ಬಗೆಹರಿಸುವ ಗುರಿಯನ್ನು ಹೊಂದಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ವಿವರಿಸಿದ್ದಾರೆ.
ಮತದಾರರ ಪಟ್ಟಿಯೊಂದಿಗೆ ಮ್ಯಾಪ್ ಮಾಡಲು ಸಾಧ್ಯವಾಗದ ಪ್ರಕರಣಗಳಿಗೆ ವಿಶೇಷ ಗಮನ ನೀಡಲಾಗುವುದು ಮತ್ತು ಅವುಗಳನ್ನು ಚುನಾವಣಾ ನೋಂದಣಿ ಅಧಿಕಾರಿ (ಇಆರ್ಒ) ಹಾಗೂ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (ಎಇಆರ್ಇ) ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಅಡಿ ಜಾರಿಗೊಳಿಸಲಾದ 24.30 ಲಕ್ಷ ನೋಟೀಸ್ಗಳಲ್ಲಿ, ಈಗಾಗಲೇ ಸುಮಾರು 20.27 ಲಕ್ಷ ನೋಟೀಸ್ಗಳನ್ನು ಮತದಾರರಿಗೆ ತಲುಪಿಸಲಾಗಿದೆ ಎಂದು ಪುರುಷೋತ್ತಮ್ ತಿಳಿಸಿದ್ದಾರೆ.
ಇದೇ ವೇಳೆ, ನೈನಿತಾಲ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ನವಾಝಿಶ್ ಖಲಿಕ್ ಮಾತನಾಡಿ, ಮತದಾರರ ಪಟ್ಟಿಯು ನಿಖರವಾಗಿ, ನವೀಕರಿಸಲ್ಪಟ್ಟ ಮತ್ತು ದೋಷರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ನಿರ್ದೇಶನಗಳಂತೆ ಕಟ್ಟುನಿಟ್ಟಾಗಿ ಈ ಪರಿಶೀಲನಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ನಿಖರ ಮತ್ತು ನವೀಕರಿಸಿದ ಮತದಾರರ ಪಟ್ಟಿಗಳನ್ನು ಕಾಪಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಮತದಾರರ ವಿವರಗಳನ್ನು ಪರಿಶೀಲಿಸಲು ಮತ್ತು ಅಗತ್ಯ ಮಾಹಿತಿಯನ್ನು ಸಂಗ್ರಹಿಸಲು ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಖಲಿಕ್ ಹೇಳಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯನ್ನು ಜಿಲ್ಲೆಯಾದ್ಯಂತ ಏಕರೂಪವಾಗಿ ಜಾರಿಗೊಳಿಸಲಾಗುತ್ತಿದ್ದು, ವ್ಯಕ್ತಿಯು ಸಾಮಾನ್ಯ ನಾಗರಿಕನಾಗಿರಲಿ ಅಥವಾ ಸಾಂವಿಧಾನಿಕ, ರಾಜಕೀಯ ಅಥವಾ ಆಡಳಿತಾತ್ಮಕ ಹುದ್ದೆಯನ್ನು ಹೊಂದಿರಲಿ, ಇದು ಅರ್ಹ ಮತದಾರರೆಲ್ಲರಿಗೂ ಅನ್ವಯಿಸುತ್ತದೆ ಎಂದಿದ್ದಾರೆ.
ಅಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೆರವಾಗುವಂತೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಕರಿಸುವ ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾ ಆಡಳಿತವು ನಿವಾಸಿಗಳಿಗೆ ಮನವಿ ಮಾಡಿದೆ.


