ಬೆಂಗಳೂರು: ಭಾರತವು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವಾಗಲೇ, ದೇಶದ ಪ್ರಜೆಗಳು ತಮ್ಮ ಅತಿ ಅಮೂಲ್ಯವಾದ ‘ಮತದಾನದ ಹಕ್ಕನ್ನು’ ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಈ ದೇಶದ ಜನರಿಗೆ ಈಗ ‘SIR (ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ), EVM ಮತ್ತು ECI (ಚುನಾವಣಾ ಆಯೋಗ)’ ಗಳಿಂದಲೇ ಸ್ವಾತಂತ್ರ್ಯ ಬೇಕಿದೆ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂಘಟನೆಯ ಪ್ರಮುಖರಾದ ತಾರಾ ರಾವ್, ಜೆ.ಎಂ. ವೀರಸಂಗಯ್ಯ, ಯೂಸೂಫ್ ಕನ್ನಿ ಹಾಗೂ ವಿ.ಎಸ್. ಶ್ರೀಧರ್ ಅವರು ಜಂಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಹೆಸರುಗಳನ್ನು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಣೆಯಾಗುತ್ತಿದ್ದಾರೆ ಕೋಟ್ಯಂತರ ಮತದಾರರು!
ಈಗಾಗಲೇ ಭಾರತದಲ್ಲಿ ಬರೋಬ್ಬರಿ 6 ಕೋಟಿ ಮತದಾರರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿದ್ದಾರೆ. ಅಲ್ಲದೆ, ಇನ್ನೂ 6 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ 1 ಕೋಟಿಗೂ ಹೆಚ್ಚು ಜನ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಬೆಂಗಳೂರಿನಂತಹ ನಿರಂತರವಾಗಿ ಬೆಳೆಯುತ್ತಿರುವ ನಗರದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗುವ ಬದಲು ಅರ್ಧದಷ್ಟು ಕಡಿಮೆಯಾಗಿರುವುದು ಈ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ. SIR ಹೆಸರಿನಲ್ಲಿ ನಡೆಯುತ್ತಿರುವುದು ಮನೆಮನೆಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಕೆಲಸವಲ್ಲ, ಬದಲಾಗಿ ಮನೆಮನೆಗೆ ಹೋಗಿ ಡಿಲೀಟ್ ಮಾಡುವ ಕೆಲಸವಾಗಿದೆ ಎಂದು ಆರೋಪಿಸಲಾಗಿದೆ.
ನಾಗರಿಕ ಸಂಘಟನೆಗಳ ಹೋರಾಟದ ನಡುವೆಯೂ ಅನ್ಯಾಯ!
ಕರ್ನಾಟಕದಲ್ಲಿ SIR ಪ್ರಕ್ರಿಯೆಯನ್ನು ನಾಗರಿಕ ಸಂಘಟನೆಗಳು ಬಹಳ ಗಂಭೀರವಾಗಿ ಪರಿಗಣಿಸಿವೆ. ಪ್ರಕ್ರಿಯೆ ಆರಂಭವಾಗುವ 6 ತಿಂಗಳ ಮೊದಲಿನಿಂದಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. BLA ಗಳಿಗೆ ತರಬೇತಿ ನೀಡಿ, ಸಾವಿರಾರು ಕಾರ್ಯಕರ್ತರು ಎನ್ಯುಮರೇಷನ್ ಫಾರಂಗಳನ್ನು ತುಂಬಲು ಜನರಿಗೆ ನೆರವಾಗಿದ್ದಾರೆ. BLO ಗಳ ಜೊತೆ ಕುಳಿತು ಲಕ್ಷಾಂತರ ತಪ್ಪುಗಳನ್ನು ಸರಿಪಡಿಸಲಾಗಿದೆ. ಕೊಡಗು, ಚಾಮರಾಜನಗರದಂತಹ ಆದಿವಾಸಿ ಪ್ರದೇಶಗಳಿಗೆ ಅಧಿಕಾರಿಗಳು ವಿಶೇಷ ಗಸ್ತು ನಡೆಸಿ ಪ್ರಕ್ರಿಯೆ ನಡೆಸುವಂತೆ ಮಾಡಲಾಗಿದೆ. ಪೆಂಡಾಲ್ ಹಾಕಿ ತಿದ್ದುಪಡಿ ಅಭಿಯಾನ ಮಾಡಿಸಲಾಗಿದೆ.
ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಕರ್ನಾಟಕದಲ್ಲಿ 1 ಕೋಟಿಗಿಂತ ಹೆಚ್ಚು ಜನ ಡಿಲೀಷನ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಒಂದು ವೇಳೆ ಸಂಘಟನೆಗಳು ಈ ಕೆಲಸ ಮಾಡದೇ ಇದ್ದಿದ್ದರೆ, ಡಿಲೀಟ್ ಆಗುವವರ ಸಂಖ್ಯೆ 2 ಕೋಟಿ ದಾಟುತ್ತಿತ್ತು. ಅರ್ಹ ಪ್ರಜೆಗಳನ್ನು ಪಟ್ಟಿಯಿಂದ ಹೊರಹಾಕುವ ಷಡ್ಯಂತ್ರ ಸ್ವತಃ SIR ಪ್ರಕ್ರಿಯೆಯ ಒಳಗಡೆಯೇ ಅಡಕವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅವೈಜ್ಞಾನಿಕ ಮತ್ತು ಸರ್ವಾಧಿಕಾರಿ ಡಿಲೀಷನ್ ಪ್ರಕ್ರಿಯೆ
ಹಿಂದೆಲ್ಲಾ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಾಗ ಮನೆಮನೆಗೆ ಭೇಟಿ ನೀಡಿ ಮೃತರ ಹೆಸರನ್ನು ಮಾತ್ರ ತೆಗೆಯಲಾಗುತ್ತಿತ್ತು. ಹೊಸಬರಿಗೆ ಫಾರಂ ನಂ. 6 ಹಾಗೂ ವಿಳಾಸ ಬದಲಿಸಿದವರಿಗೆ ಫಾರಂ ನಂ. 8 ಕೊಟ್ಟು ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈಗ, ಮನೆ ಬದಲಾಯಿಸಿದ್ದರೆ ನೇರವಾಗಿ ಡಿಲೀಟ್ ಮಾಡಲಾಗುತ್ತಿದೆ. ಬೇರೆ ಮನೆಗೆ ಬಂದವರಿಗೆ ವಿಳಾಸ ಬದಲಾಯಿಸಲು ಫಾರಂ 8 ಅಥವಾ ಎನ್ಯುಮರೇಷನ್ ಫಾರಂ ನೀಡುತ್ತಿಲ್ಲ. BLO ಗಳು ಭೇಟಿ ನೀಡಿದಾಗ ಮನೆಯವರು ದುಡಿಯಲು ಹೋಗಿದ್ದರೆ ಅಥವಾ ಊರಲ್ಲಿ ಇಲ್ಲದಿದ್ದರೆ ಯಾವುದೇ ವಿಚಾರಣೆಯಿಲ್ಲದೆ ನೇರವಾಗಿ ಹೆಸರು ತೆಗೆದುಹಾಕಲಾಗುತ್ತಿದೆ.
ಇದಲ್ಲದೆ ‘ಮ್ಯಾಪಿಂಗ್ ಆಗದವರು’ ಎಂದು 30 ಲಕ್ಷ ಜನರನ್ನು ಮಾರ್ಕ್ ಮಾಡಲಾಗಿದ್ದು, ಅವರಿಗೆಲ್ಲಾ ನೋಟಿಸ್ ಬರಲಿದೆ. ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಎಂಬ ಹೆಸರಿನಲ್ಲಿ ರಹಸ್ಯ ಪಟ್ಟಿಯೊಂದು ಸಿದ್ಧವಾಗುತ್ತಿದ್ದು, ಈ ಕಾರಣ ನೀಡಿ 1 ಕೋಟಿ ಜನರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ. ನೋಟಿಸ್ ಬಂದವರು SIR ಕೇಳುವ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಮತ್ತಷ್ಟು ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ.
ಶೋಷಿತರ ಮತ ಕಸಿದುಕೊಳ್ಳುವ ಷಡ್ಯಂತ್ರ!
ಆಳುವವರ ದೃಷ್ಟಿಯಲ್ಲಿ ಜನಸಾಮಾನ್ಯರ ಬದುಕಿಗೆ, ಅವರ ಮತಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಈ ರೀತಿ ಓಟಿನ ಹಕ್ಕನ್ನು ಕಳೆದುಕೊಳ್ಳುತ್ತಿರುವವರಲ್ಲಿ ಬಹುಪಾಲು ಶೋಷಿತ ಹಾಗೂ ದುಡಿಯುವ ವರ್ಗದ ಜನರೇ ಆಗಿದ್ದಾರೆ. ತಳ ಸಮುದಾಯದ ಮತಗಳು ಕಡಿಮೆಯಾದಷ್ಟೂ ತಮಗೆ ಒಳ್ಳೆಯದು ಎಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮನುವಾದಿ ಶಕ್ತಿಗಳು ಆಲೋಚಿಸುತ್ತಿವೆ ಎಂದು ಪ್ರಕಟಣೆಯಲ್ಲಿ ನೇರವಾಗಿ ಆರೋಪಿಸಲಾಗಿದೆ.
ನಟ ಪ್ರಕಾಶ್ ರಾಜ್ ಮಾದರಿ: ಬೇಡುವ ಬದಲು ಹೋರಾಡೋಣ
ಮತದಾನದ ಹಕ್ಕು ನಮಗೆ ಸಿಕ್ಕಿರುವ ಸ್ವಾತಂತ್ರ್ಯ. “ನಮ್ಮ ಓಟನ್ನು ಉಳಿಸಿ” ಎಂದು ಬೇಡುವುದು ಸ್ವಾತಂತ್ರ್ಯಕ್ಕೆ ಮಾಡುವ ಅವಮಾನ. ನಟ ಪ್ರಕಾಶ್ ರಾಜ್ ಅವರು ತಮ್ಮ ಓಟನ್ನು ಉಳಿಸಿಕೊಳ್ಳಲು “ಫಾರಂ ನಂ 8 ಕೊಟ್ಟು ನನ್ನ ಮತವನ್ನು ವರ್ಗಾವಣೆ ಮಾಡಬೇಕೇ ಹೊರತು ಡಿಲೀಟ್ ಮಾಡಲು ಅವಕಾಶ ನೀಡುವುದಿಲ್ಲ, ಫಾರಂ ನಂ 6 ತುಂಬುವುದಿಲ್ಲ” ಎಂದು ಸವಾಲು ಹಾಕುವ ಮೂಲಕ ಸ್ವಾಭಿಮಾನದ ಹಾದಿ ಆಯ್ದುಕೊಂಡಿದ್ದಾರೆ. ASDDO ಪಟ್ಟಿಯಲ್ಲಿ ಡಿಲೀಟ್ ಆಗಿರುವ ಎಲ್ಲಾ ಅರ್ಹ ಮತದಾರರು ಇದನ್ನೊಂದು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
“ದೇಶಕ್ಕೆ ಈ ಸಂವಿಧಾನ ವಿರೋಧಿ ಶಕ್ತಿಗಳ ಕೈನಿಂದ ಸ್ವಾತಂತ್ರ್ಯ ಬೇಕಾಗಿದೆ. ಕರ್ನಾಟಕದಲ್ಲಿ ಒಂದೇ ಒಂದು ಮತವನ್ನು ಡಿಲೀಟ್ ಮಾಡಲು ಬಿಡುವುದಿಲ್ಲ. ಬೇಡುವ ಮೂಲಕವಲ್ಲ, ಹೋರಾಡುವ ಮೂಲಕ ನಮ್ಮ ಹಕ್ಕನ್ನು ಸಾಧಿಸುತ್ತೇವೆ ಎಂಬ ಸಂಕಲ್ಪವನ್ನು ಇಂದಿನ ದಿನ ಪ್ರಜ್ಞಾವಂತ ಜನರು ಮಾಡಬೇಕಿದೆ” ಎಂದು ‘ಎದ್ದೇಳು ಕರ್ನಾಟಕ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


