ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (NDRF) ಅಡಿಯಲ್ಲಿ ಮಂಜೂರಾದ ಒಟ್ಟು ಹಣದಲ್ಲಿ ಅರ್ಧದಷ್ಟನ್ನೂ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ ಎಂಬ ಕಳವಳಕಾರಿ ಸತ್ಯವನ್ನು ಭಾರತೀಯ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (CAG) ವರದಿ ಬಹಿರಂಗಪಡಿಸಿದೆ.
ಸಂಸತ್ತಿನಲ್ಲಿ ಮಂಡಿಸಲಾದ 2024-25ರ ಕೇಂದ್ರ ಸರ್ಕಾರದ ಲೆಕ್ಕಪತ್ರ ವರದಿಯನ್ನು ವಿಶ್ಲೇಷಿಸಿರುವ ಸಿಎಜಿ, ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಅನುದಾನವನ್ನು ತಡೆಹಿಡಿಯುತ್ತಿರುವ ಶೈಲಿಯನ್ನು ಸಂಪೂರ್ಣವಾಗಿ ಬಯಲಿಗೆಳೆದಿದೆ.
ಸ್ವರೂಪದ ಪ್ರಕೃತಿ ವಿಕೋಪಗಳ ಪರಿಹಾರಕ್ಕಾಗಿ ಎನ್ಡಿಆರ್ಎಫ್ ಅಡಿಯಲ್ಲಿ ಒಟ್ಟು ₹11,474 ಕೋಟಿ ಮಂಜೂರಾಗಿತ್ತು. ಆದರೆ, ರಾಜ್ಯಗಳಿಗೆ ತಲುಪಿದ್ದು ಕೇವಲ ₹5,356 ಕೋಟಿ ಮಾತ್ರ. ಅಂದರೆ, ಶೇ. 53 ಕ್ಕಿಂತಲೂ ಹೆಚ್ಚು ಅನುದಾನ (₹6,117.97 ಕೋಟಿ) ಬಳಕೆಯಾಗದೆ ಕೇಂದ್ರದ ಬೊಕ್ಕಸದಲ್ಲೇ ಉಳಿದುಕೊಂಡಿದೆ.
ರಾಷ್ಟ್ರೀಯ ವಿಪತ್ತು ಶಮನ ನಿಧಿ (NDMF) ಅಡಿಯಲ್ಲಿ ಮಂಜೂರಾಗಿದ್ದ ₹2,868 ಕೋಟಿಗಳ ಪೈಕಿ ರಾಜ್ಯಗಳಿಗೆ ವರ್ಗಾವಣೆಯಾಗಿದ್ದು ಕೇವಲ ₹719.72 ಕೋಟಿ ಮಾತ್ರ. ಶೇ. 75 ರಷ್ಟು ಅನುದಾನ ಬಳಕೆಯಾಗದೆ ಬಾಕಿ ಉಳಿದಿದೆ.
ರಾಜ್ಯಗಳಿಗೆ ನೀಡಲಾಗುವ ‘ವಿಶೇಷ ನೆರವು’ ಯೋಜನೆಗೆ ₹20,000 ಕೋಟಿ ನಿಗದಿಪಡಿಸಲಾಗಿದ್ದರೂ, ವೆಚ್ಚ ಮಾಡಿದ್ದು ಕೇವಲ ₹3,350 ಕೋಟಿ. ಉಳಿದ ಶೇ. 83 ರಷ್ಟು ಹಣ ಬಿಡುಗಡೆಯೇ ಆಗಿಲ್ಲ.ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ‘ಮುಂಗಡ ನೆರವಿನ ಸಾಲ’ವಾಗಿ ನೀಡಲು ಕಾಯ್ದಿರಿಸಲಾಗಿದ್ದ ₹100 ಕೋಟಿ ಅನುದಾನದಿಂದ ಒಂದು ಪೈಸೆಯನ್ನೂ ಬಳಸಲಾಗಿಲ್ಲ.
ಇದಷ್ಟೇ ಅಲ್ಲದೆ, 2022-23ರಲ್ಲಿ ₹67,882 ಕೋಟಿ, 2023-24ರಲ್ಲಿ ₹46,012.89 ಕೋಟಿ ಹಾಗೂ 2024-25ರಲ್ಲಿ ₹36,219 ಕೋಟಿ ಹಣವು ರಾಜ್ಯಗಳಿಗೆ ತಲುಪದೆ ಬಾಕಿ ಉಳಿದಿದೆ ಎಂದು ಸಿಎಜಿ ಕಳವಳ ವ್ಯಕ್ತಪಡಿಸಿದೆ.ಪ್ರಕೃತಿ ವಿಕೋಪಗಳ ಸಮಯದಲ್ಲಿ ಕೇಂದ್ರದಿಂದ ಸೂಕ್ತ ಪರಿಹಾರ ಸಿಗದೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳು ನಿರಂತರವಾಗಿ ಪರದಾಡುವಂತಾಗಿದೆ.
ಕರ್ನಾಟಕ: 2024ರಲ್ಲಿ ಭೀಕರ ಬರಗಾಲ ಎದುರಿಸಿದ್ದ ಕರ್ನಾಟಕ ಸರ್ಕಾರವು ₹18,000 ಕೋಟಿ ಪರಿಹಾರ ಕೋರಿತ್ತು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ ₹3,499 ಕೋಟಿ ಮಾತ್ರ. ಈ ತಾರತಮ್ಯವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು.
ತಮಿಳುನಾಡು: ಮಿಚೌಂಗ್ ಚಂಡಮಾರುತದಿಂದಾದ ಹಾನಿಗೆ ₹37,907.21 ಕೋಟಿ ಪರಿಹಾರ ಕೋರಿತ್ತು. ಆದರೆ ದೊರೆತದ್ದು ಕೇವಲ ₹276 ಕೋಟಿ.
ಕೇರಳ: ವಯನಾಡ್ ಭೀಕರ ಭೂಕುಸಿತದ ಸರಣಿ ದುರಂತಕ್ಕೆ ಕೇರಳ ₹2,221 ಕೋಟಿ ಪರಿಹಾರ ಕೋರಿತ್ತಾದರೂ, ಕೇಂದ್ರ ಅನುಮೋದಿಸಿದ್ದು ಕೇವಲ ₹260.56 ಕೋಟಿ. ಈ ಅನ್ಯಾಯವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ.
ಅಸ್ಸಾಂ: ಪ್ರವಾಹದಿಂದ ತತ್ತರಿಸಿದ್ದ ಅಸ್ಸಾಂ ರಾಜ್ಯ ಕೋರಿದ್ದ ಒಟ್ಟು ಹಣದಲ್ಲಿ ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ ಶೇ. 2.4 ರಷ್ಟು ಮಾತ್ರ.
ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ನಿಯಮಾವಳಿಗಳ ಪ್ರಕಾರ, ರಾಜ್ಯ ವಿಪತ್ತು ಸ್ಪಂದನಾ ನಿಧಿ (SDRF) ಖಾಲಿಯಾದಾಗ ಅಥವಾ ತೀವ್ರ ಸ್ವರೂಪದ ದುರಂತ ಸಂಭವಿಸಿದಾಗ ರಾಜ್ಯಗಳು ಸಲ್ಲಿಸುವ ನಷ್ಟದ ವರದಿಯನ್ನು ಆಧರಿಸಿ ಕೇಂದ್ರದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಬೇಕಾಗುತ್ತದೆ. ತದನಂತರ NDRF ಅಡಿಯಲ್ಲಿ ಹಣ ಬಿಡುಗಡೆ ಮಾಡುವುದು ಕೇಂದ್ರದ ಕರ್ತವ್ಯ.
ಆದರೆ, ಸಿಎಜಿ ವರದಿಯೇ ಸ್ಪಷ್ಟಪಡಿಸಿರುವಂತೆ, ಮಂಜೂರಾದ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡದೆ ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಕೇಂದ್ರ ಸರ್ಕಾರವು ಆಪತ್ತಿನಲ್ಲಿರುವ ರಾಜ್ಯಗಳಿಗೆ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸ್ಪಷ್ಟ ವಂಚನೆ ಎಸಗುತ್ತಿದೆ ಎಂಬುದು ಸಾಬೀತಾಗಿದೆ.


