“ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್ಎಸ್ಎಸ್ ಅಥವಾ ಮೋಹನ್ ಭಾಗವತ್ ಅವರ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದಾರೆ.
“100 ವರ್ಷಗಳಿಂದ ಈ ನೋಂದಾಯಿತವಲ್ಲದ ಸಂಸ್ಥೆಯು ಭಾರತದಲ್ಲಿ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಚಾರ ಮಾಡುತ್ತಿದೆ ಮತ್ತು ಮುಂದುವರಿಸುತ್ತಾ ಬಂದಿದೆ. ಆದರೂ, ಅಮೆರಿಕದಲ್ಲಿ ಮೋಹನ್ ಭಾಗವತ್ ಅವರು, “ಯಾರಾದರೂ ಹಿಂದೂ, ಭಾರತದಲ್ಲಿ ಯಾವುದೇ ಮುಸ್ಲಿಮರು ಇರಬಾರದು ಎಂದು ಭಾವಿಸಿದರೆ, ಅವನು ಹಿಂದೂ ಆಗಿ ಉಳಿಯುವುದಿಲ್ಲ. ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಂಡರೆ, ಎಲ್ಲಾ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಎಂದು ನೀವು ನಂಬಬೇಕು” ಎಂದು ಹೇಳುತ್ತಾರೆ. ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲಿ ಎಂತಹ ಬದಲಾವಣೆ” ಎಂದು ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.
“ಸಮಾಜದಲ್ಲಿ ಕೋಮು ವಿಷ ಬೀಜಗಳನ್ನು ಬಿತ್ತುವ ತನ್ನ ವಿಚಾರ ಪರಿವಾರಕ್ಕಾಗಿ ಭಾರತೀಯ ಅನಿವಾಸಿಗಳಿಂದ ಹಣವನ್ನು ಕ್ರೋಡೀಕರಿಸಲು ಆರ್ಎಸ್ಎಸ್ ಯಾವುದೇ ಹಂತಕ್ಕಾದರೂ ಹೋಗುವಂತೆ ತೋರುತ್ತದೆ. ಭಾಗವತ್ ಅವರ ಮೂರು ದೇಶಗಳ ಪ್ರವಾಸ ಮತ್ತು ಅವರ ‘ವಿಶ್ವ ಏಕತೆ’ ಎಂಬ ಎಚ್ಚರಿಕೆಯಿಂದ ಸಿದ್ಧಪಡಿಸಲಾದ ಸಂದೇಶವು ಕೇವಲ ಧಾರ್ಮಿಕ ಸಾಮರಸ್ಯದ ಬಗ್ಗೆ ಎಂದು ಯಾರಾದರೂ ನಂಬುವುದಾದರೆ, ಅವರು ಪರಿಸ್ಥಿತಿಯನ್ನು ಇನ್ನಷ್ಟು ಹತ್ತಿರದಿಂದ ಅಥವಾ ಆಳವಾಗಿ ಗಮನಿಸಬೇಕಾಗಿದೆ” ಎಂದು ಹೇಳಿದ್ದಾರೆ.
“ಅನಿವಾಸಿ ಭಾರತೀಯರನ್ನು ಒಟ್ಟುಗೂಡಿಸುವಲ್ಲಿ ಹಿಂದೂ ಸ್ವಯಂಸೇವಕ ಸಂಘದ (HSS – ಆರ್ಎಸ್ಎಸ್ನ ಸಾಗರೋತ್ತರ ವಿಭಾಗ) ಪಾತ್ರವನ್ನು ಒಮ್ಮೆ ನೋಡಿ. ಅದರ ಜೊತೆಗೆ, ಅಂತರಧರ್ಮೀಯ ಸಂವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಭವಿಷ್ಯದ ಪ್ರತಿಪಾದಕ ಎಂದು ತನ್ನನ್ನು ತಾನು ಪ್ರಸ್ತುತಪಡಿಸಿಕೊಳ್ಳುವ ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಅಂಡ್ ಡೈಲಾಗ್’ (AHEAD) ಸಂಸ್ಥೆಯನ್ನೂ ಗಮನಿಸಿ. ಈ ಹೊಸ ಸಂಸ್ಥೆಯು ಆರ್ಎಸ್ಎಸ್ ಪರಿಸರ ವ್ಯವಸ್ಥೆಯೊಂದಿಗೆ ತನಗಿರುವ ಸಂಬಂಧವನ್ನು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ, ಆದರೆ ಇದನ್ನು ಸ್ಥಾಪಿಸಿರುವುದು ಅದೇ ಸಂಘಟನೆಯ ಸದಸ್ಯರೇ ಆಗಿದ್ದಾರೆ” ಎಂದಿದ್ದಾರೆ.
ಮುಂದುವರಿದು, ಈ ‘ವಿಶ್ವ ಏಕತೆ’ (Universal Oneness) ಎಂಬ ಆಕರ್ಷಕ ಭಾಷೆಯ ಹಿಂದೆ, ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ಅಥವಾ ಪ್ರಶ್ನಿಸಬೇಕಾದ ಒಂದು ಪ್ರಮುಖ ಪ್ರಶ್ನೆ ಅಡಗಿದೆ. ಸ್ವದೇಶದಲ್ಲಿ ಬಳಸುವ ‘ಹಿಂದೂ ರಾಷ್ಟ್ರ’ದ ಭಾಷೆಯು ವಿದೇಶಕ್ಕೆ ಹೋದಾಗ ಒಳಗೊಳ್ಳುವಿಕೆ (ಎಲ್ಲರನ್ನೂ ಒಳಗೊಳ್ಳುವ ನೀತಿ) ಮತ್ತು ಅಂತರಧರ್ಮೀಯ ಸಾಮರಸ್ಯದ ಭಾಷೆಯಾಗಿ ಹೇಗೆ ಬದಲಾಗುತ್ತದೆ? ಅವರ ಸಂಪರ್ಕ ಜಾಲವನ್ನು ಸೂಕ್ಷ್ಮವಾಗಿ ಗಮನಿಸಿ. ನಿಧಿ ಸಂಗ್ರಹಣೆಯ ಹಾದಿಯನ್ನು ಬೆಂಬತ್ತಿ ನೋಡಿ. ಹಣದ ಮೂಲ ಮತ್ತು ಹರಿವನ್ನು ಪತ್ತೆಹಚ್ಚಿ. ಇದೇ ಕಾರಣಕ್ಕಾಗಿ ಈ ಸಂಸ್ಥೆಯು ಅಧಿಕೃತವಾಗಿ ನೋಂದಾಯಿಸಲ್ಪಡುವ ಅಗತ್ಯವಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನಲ್ಲಿ ಶನಿವಾರ (ಆ.29) ಆಯೋಜಿಸಿದ್ದ ‘ವಿಶ್ವ ಏಕತೆ’ (Universal Oneness) ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, “ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ” ಎಂಬ ಹೇಳಿಕೆಯನ್ನು ನೀಡಿದ್ದಾರೆ. ‘ವಿಶ್ವ ಏಕತೆ’ ಕಾರ್ಯಕ್ರಮವನ್ನು ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಅಂಡ್ ಡೈಲಾಗ್’ (AHEAD) ಎಂಬ ಸಂಘಟನೆ ಆಯೋಜಿಸಿತ್ತು.
ಮೋಹನ್ ಭಾಗವತ್ ಕಾರ್ಯಕ್ರಮದ ವಿರುದ್ದ ಅಮೆರಿಕದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗಿತ್ತು. ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ನಂತಹ ಪ್ರಮುಖ ಯುಎಸ್ ಮೂಲದ ಹಿಂದೂ ಸಂಘಟನೆಯು ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು. “ಆರ್ಎಸ್ಎಸ್ ಮತ್ತು ಅದರ ಹಿಂದುತ್ವ ಸಿದ್ಧಾಂತವು ನಮ್ಮನ್ನು ಪ್ರತಿನಿಧಿಸುವುದಿಲ್ಲ” ಎಂದು ಈ ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸುನಿತಾ ವಿಶ್ವನಾಥ್ ಹೇಳಿದ್ದರು.


