ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ.
‘4 ಪಿಎಮ್ ನ್ಯೂಸ್ ನೆಟ್ವರ್ಕ್’ (4 PM News Network) ಸಂಸ್ಥೆಯ ಪತ್ರಕರ್ತೆಯರಾದ ಶಾಹಿನ್ ಖಾನ್ ಮತ್ತು ನಫೀಸಾ ಅವರು, ತಾವು ಮುಸ್ಲಿಮರು ಎಂದು ತಿಳಿದ ನಂತರ ಪೊಲೀಸರು ತಮ್ಮನ್ನು ಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ದೆಹಲಿ ಸರ್ಕಾರ ಮತ್ತು ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಕುರಿತು ಪ್ರಶ್ನೆಗಳನ್ನು ಕೇಳಿದ್ದೇ ಈ ಹಲ್ಲೆಗೆ ಕಾರಣ ಎಂದು ಶಾಹಿನ್ ಹೇಳಿದ್ದಾರೆ.
“ಶಾಹಿನ್ ಅವರು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಪ್ರಶ್ನಿಸಲು ಯತ್ನಿಸುತ್ತಿದ್ದರು. ಈ ವೇಳೆ ದೆಹಲಿ ಪೊಲೀಸರು ಆಕೆಯನ್ನು ಹಿಡಿದು, ಹೊಡೆಯುತ್ತಾ ಠಾಣೆಗೆ ಎಳೆದೊಯ್ದಿದ್ದಾರೆ ಎಂದು ಶಾಹಿನ್ ಆರೋಪಿಸಿದ್ದಾರೆ” ಎಂದು ‘4 ಪಿಎಮ್ ನ್ಯೂಸ್ ನೆಟ್ವರ್ಕ್’ ಎಕ್ಸ್ನಲ್ಲಿ ಬರೆದುಕೊಂಡಿದೆ.
“ಪೊಲೀಸ್ ಅಧಿಕಾರಿಗಳು ಆಕೆಯ ಹೆಸರು ಕೇಳಿದಾಗ ‘ಖಾನ್’ ಎಂದು ತಿಳಿದು ಹಲ್ಲೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದರು ಎಂದು ಆಕೆ ಆರೋಪಿಸಿದ್ದಾರೆ” ಎಂದು ಸಂಸ್ಥೆ ತಿಳಿಸಿದೆ.
ತಮ್ಮ ವೈದ್ಯಕೀಯ ತಪಾಸಣೆ ಮತ್ತು ‘ಮೆಡಿಕೋ-ಲೀಗಲ್ ಕೇಸ್’ (ಎಂಎಲ್ಸಿ) ವರದಿ ಪಡೆಯಲು ತಾವು ಈಗ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ತೆರಳುತ್ತಿರುವುದಾಗಿ ಶಾಹಿನ್ ಮತ್ತು ನಫೀಸಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಆರೋಪಗಳ ಕುರಿತು ದೆಹಲಿ ಪೊಲೀಸರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ವೀಡಿಯೊದಲ್ಲೂ ಸಹ, ಶಾಹಿನ್ ಸಿಬ್ಬಂದಿ ವಿರುದ್ಧ ಆರೋಪ ಮಾಡುತ್ತಿದ್ದರೂ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮೇಜಿನ ಬಳಿ ಸುಮ್ಮನೆ ಕುಳಿತಿರುವುದು ಕಂಡುಬಂದಿದೆ.
ದೆಹಲಿ ಪೊಲೀಸ್ ಮತ್ತು ಸಿಎಂ ರೇಖಾ ಗುಪ್ತಾ ವಿರುದ್ಧ ಸಿಜೆಪಿ- ಆಪ್ ಕಿಡಿ
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಈ ದಾಳಿಯನ್ನು ಖಂಡಿಸಿದ್ದು, ದೆಹಲಿ ಪ್ರತಿದಿನ “ಇಂತಹ ಆತಂಕಕಾರಿ ಸುದ್ದಿಗಳೊಂದಿಗೆ” ಎಚ್ಚರಗೊಳ್ಳುತ್ತಿದೆ ಎಂದು ಹೇಳಿದೆ.
ಸಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ಮಾಡುವುದೊಂದೇ ದೆಹಲಿ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳುವ ಕೆಲಸವೇ? ದೆಹಲಿ ಪೊಲೀಸರಿಗೆ ಮಹಿಳೆಯರ ಮೇಲಿನ ಅಪರಾಧ ಎಂಬುದು ತಮಾಷೆಯ ವಿಷಯವೇ?” ಎಂದು ಪ್ರಶ್ನಿಸಿದೆ.
ಪಕ್ಷದ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ಶಾಹಿನ್ ದೆಹಲಿಯಲ್ಲಿ ನಾನು ಕಂಡ ಅತ್ಯುತ್ತಮ ಪತ್ರಕರ್ತೆಯರಲ್ಲಿ ಒಬ್ಬರು. ದೆಹಲಿ ಪೊಲೀಸರು ಮಾಡಿದ್ದು ನಾಚಿಕೆಗೇಡಿನ ಸಂಗತಿ, ಆದರೆ ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಅಲ್ಲದೆ, ಈ ನಾಟಕದ ಸಮಯ ಶೀಘ್ರದಲ್ಲೇ ಮುಗಿಯಲಿದೆ” ಎಂದು ಶಾಹಿನ್ಗೆ ಧೈರ್ಯ ತುಂಬಿದ್ದಾರೆ.
ಈ ಘಟನೆಯ ಕುರಿತು ಆಮ್ ಆದ್ಮಿ ಪಾರ್ಟಿ (ಆಪ್) ಬಿಜೆಪಿ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಆಪ್ ನಾಯಕ ಸೌರಭ್ ಭಾರದ್ವಾಜ್ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, “ಸಿಎಂ ರೇಖಾ ಗುಪ್ತಾ ಅವರನ್ನು ಪ್ರಶ್ನಿಸಿದ್ದಕ್ಕಾಗಿ ಇಬ್ಬರು ಮಹಿಳಾ ವರದಿಗಾರರನ್ನು ದೆಹಲಿ ಪೊಲೀಸರು ಅತ್ಯಂತ ಕ್ರೂರವಾಗಿ ಹೊಡೆದಿದ್ದಾರೆ. ಮಹಿಳಾ ಸಿಎಂ ರೇಖಾ ಗುಪ್ತಾ ಅವರಿಗೆ ನಾಚಿಕೆಯಾಗಬೇಕು” ಎಂದು ವೀಡಿಕೆಯಲ್ಲಿ ಬರೆದಿದ್ದಾರೆ.


