ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಗುರುಗ್ರಾಮ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 109 ರ ಅಡಿಯಲ್ಲಿ ‘ಕೊಲೆ ಯತ್ನ’ ಪ್ರಕರಣವನ್ನು ಸೇರಿಸಿದ ನಂತರ ಚಾಲಕನನ್ನು ಬಂಧಿಸಲಾಗಿದೆ. ಈ ಕಾಯ್ದೆಯಡಿ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಜಿಮ್ ಮಾಲೀಕ ಹಾಗೂ ತಾನು ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಎಂದು ಹೇಳಿಕೊಳ್ಳುವ ಬೈನ್ಸ್ಲಾ, ಸೋಮವಾರ (ಸೆಪ್ಟೆಂಬರ್ 14) ತಾವು “ಸಿಯಾ” ಎಂದೇ ಗುರುತಿಸಲ್ಪಡುವ ಶಿವಾನಿ ಚೌಹಾಣ್ ಅವರ ಬೈಕ್ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ ಎಂದು ಆರೋಪವನ್ನು ನಿರಾಕರಿಸಿದ್ದಾನೆ.
ಬೈಕ್ ಸವಾರಿ ಮಾಡುತ್ತಿದ್ದವರು ಮಹಿಳೆ ಎಂಬುದು ತನಗೆ ತಿಳಿದಿರಲಿಲ್ಲ, ಬೈಕನ್ನು ನಿಧಾನವಾಗಿ ಚಲಾಯಿಸುವಂತೆ ಮಾತ್ರ ಮನವಿ ಮಾಡಿದ್ದೆ ಎಂದು ಆರೋಪಿ ಹೇಳಿದ್ದಾನೆ. “ನಾನು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದೆ. ನಾನು ಆ ಯುವತಿಗೆ ಯಾವುದೇ ಸನ್ನೆ ಮಾಡಲಿಲ್ಲ; ಬೈಕನ್ನು ಮೆಲ್ಲಗೆ ಚಲಾಯಿಸುವಂತೆ ಮಾತ್ರ ಹೇಳಿದೆ” ಎಂದಿದ್ದಾನೆ.
ಅಪಘಾತ ಸಂಭವಿಸಿರುವುದನ್ನು ಒಪ್ಪಿಕೊಂಡ ಆತ, ಜನಸಂದಣಿ ದಾಳಿ ಮಾಡಬಹುದು ಎಂಬ ಭಯದಿಂದ ಸ್ಥಳದಿಂದ ತೆರಳಿದ್ದಾಗಿ ಹೇಳಿದ್ದಾನೆ. ಸುಮಾರು 20 ರಿಂದ 22 ಬೈಕ್ ಸವಾರರು ಅತಿ ವೇಗದಲ್ಲಿ ಸಾಗುತ್ತಿದ್ದರು. ಸಿಯಾ ಗಂಟೆಗೆ 140 ರಿಂದ 160 ಕಿ.ಮೀ ವೇಗದಲ್ಲಿದ್ದರು ಎಂದು ಬೈನ್ಸ್ಲಾ ಹೇಳಿದ್ದಾನೆ.
ಸಿಯಾ ಮಿರರ್ ನೋಡದೆ ಯು-ಟರ್ನ್ ತೆಗೆದುಕೊಳ್ಳುತ್ತಿದ್ದರು, ಆ ಸಂದರ್ಭದಲ್ಲಿ ಕಾರಿನ ಮೇಲಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು. ಅದು ನನ್ನದೇ ತಪ್ಪು, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ” ಎಂದಿದ್ದಾನೆ.
ಅಪಘಾತದ ನಂತರ, ಆರಂಭದಲ್ಲಿ ಕಾರನ್ನು ನಿಲ್ಲಿಸೋಣ ಎಂದು ತಮ್ಮ ಸಹೋದರನಿಗೆ ಹೇಳಿದ್ದರೂ, ಬೈಕ್ ಸವಾರರು ನಿಂದಿಸಲು ಪ್ರಾರಂಭಿಸಿದ ನಂತರ ಮನಸ್ಸು ಬದಲಾಯಿಸಿದ್ದಾಗಿ ಆರೋಪಿ ಹೇಳಿದ್ದಾನೆ. “ಕುಟುಂಬದವರು ಜೊತೆಯಲ್ಲಿದ್ದರಿಂದ, ಕಾರು ನಿಲ್ಲಿಸಿದರೆ ನಮ್ಮ ಮೇಲೆ ಹಲ್ಲೆ ನಡೆಸಬಹುದು ಎಂಬ ಭಯವಿತ್ತು. ನಂತರ ರೆಡ್ ಸಿಗ್ನಲ್ನಲ್ಲಿ ಕಾರು ನಿಲ್ಲಿಸಿ ಮಾತನಾಡಲು ಪ್ರಯತ್ನಿಸಿ, ಅದು ನನ್ನ ತಪ್ಪಲ್ಲ ಎಂದು ವಿವರಿಸಿದೆ. ಆದರೂ ನನ್ನ ಸಹೋದರ ಅಲ್ಲಿ ನಿಲ್ಲಿಸಲು ಒಪ್ಪಲಿಲ್ಲ” ಎಂದು ತಿಳಿಸಿದ್ದಾನೆ.
“ನನ್ನ ವಿರುದ್ಧ ಈ ಹಿಂದೆ ಒಂದೇ ಒಂದು ಪ್ರಕರಣವೂ ಇಲ್ಲ. ಈಗ ನನಗೆ ಕಿರುಕುಳ ನೀಡಲಾಗುತ್ತಿದೆ” ಎಂದು ಆತ ಅಳಲು ತೋಡಿಕೊಂಡಿದ್ದಾನೆ. ಈ ವಿವಾದದ ನಂತರ ಆತ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಸಿಯಾ, ಆರೋಪಿ ಬೈನ್ಸ್ಲಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆರೋಪಿಗೆ ಅಪಘಾತದ ಬಗ್ಗೆ ನಿಜವಾಗಿಯೂ ಪಶ್ಚಾತ್ತಾಪವಿದ್ದರೆ, ಕಾರು ಡಿಕ್ಕಿಯಾದ ತಕ್ಷಣ ಆತ ಸ್ಥಳದಲ್ಲೇಕೆ ನಿಲ್ಲಿಸಲಿಲ್ಲ ಎಂದು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ತಾನು ಮಹಿಳಾ ಬೈಕರ್ ಆಗಿರುವುದಕ್ಕೇ ತನ್ನನ್ನು ಗುರಿಯಾಗಿಸಲಾಯಿತು, ನನ್ನನ್ನು ತಡೆಯಲು ಉದ್ದೇಶಪೂರ್ವಕ ಯತ್ನ ನಡೆಸಲಾಯಿತು ಎಂದು ಸಿಯಾ ಆರೋಪಿಸಿದ್ದಾರೆ. ಈ ಅಪಘಾತದಲ್ಲಿ ನನ್ನ ಪ್ರಾಣವೇ ಹೋಗಬಹುದಿತ್ತು, ಆದರೆ ಆರೋಪಿ ತಾನು ಸುರಕ್ಷಿತವಾಗಿದ್ದೇನೆಯೇ ಎಂದು ನೋಡುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ ಎಂದಿದ್ದಾರೆ.
ತಮ್ಮ ಕಾರಿನಿಂದ ಬೈಕಿಗೆ ಡಿಕ್ಕಿ ಹೊಡೆದ ನಂತರ ಬೈನ್ಸ್ಲಾ ಒಂದು ಕ್ಷಣವೂ ನಿಲ್ಲಿಸಲಿಲ್ಲ ಎಂದು ಸಿಯಾ ಹೇಳಿದ್ದಾರೆ. “ಇಂತಹ ಜನರನ್ನು ಕಂಡು ನನಗೆ ನಾಚಿಕೆಯಾಗುತ್ತದೆ. ದೆಹಲಿ ಮತ್ತು ಗುರುಗ್ರಾಮದ ರಸ್ತೆಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಎರಡು ವಿಡಿಯೋಗಳೇ ಸೂಕ್ತ ಸಾಕ್ಷಿಯಾಗಿವೆ ಎಂದು ಅವರು ಹೇಳಿದ್ದಾರೆ. ಅಪಘಾತವು ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ಕಾರು ಬೈಕಿಗೆ ಡಿಕ್ಕಿ ಹೊಡೆಯುವುದು ಮತ್ತು ಚಾಲಕ ಪರಾರಿಯಾಗುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇಂತಹ ಜನರಿಗೆ ಚಾಲನೆ ಮಾಡುವುದು ಹೇಗೆ ಎಂಬ ಬಗ್ಗೆ ಪಾಠ ಕಲಿಸಬೇಕಿದೆ ಎಂದಿದ್ದಾರೆ.


