ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ.
“ಚುನಾವಣೆಯ ಕಾರಣದಿಂದ ಇದನ್ನು ತಡೆಹಿಡಿಯಲಾಗಿತ್ತು, ಆದರೆ ಆದೇಶವನ್ನು ಯಾವಾಗ ನವೀಕರಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಸುದ್ದಿಯಿಲ್ಲ” ಎಂದು ಅಲ್ ಜಜೀರಾ ವರದಿ ಮಾಡಿದೆ.
ಮುಷ್ತಾಕ್ ಅವರ ಕುಟುಂಬವು ವರ್ಷಗಳಿಂದ ಮಾಂಸದ ವ್ಯಾಪಾರದಲ್ಲಿದೆ. “ನನಗಿಂತ ಮುಂಚಿನ ಆರೂ ಪೀಳಿಗೆಯವರು ದನದ ಮಾಂಸವನ್ನು ಪೂರೈಸುತ್ತಿದ್ದರು, ಹಿಂದಿನ ಎಲ್ಲಾ ಸರ್ಕಾರಗಳಿಗೂ ಯಾವುದೇ ಅಭ್ಯಂತರವಿರಲಿಲ್ಲ” ಎಂದು ಅವರು ಹೇಳಿದರು.
ಸರ್ಕಾರದ ಆದೇಶದ ನಂತರ ಇತ್ತೀಚೆಗೆ ಮುಚ್ಚಲ್ಪಟ್ಟ ತಂಗ್ರಾದಲ್ಲಿರುವ ಕಸಾಯಿಖಾನೆಯ ಮುಂದೆ ಅವರು ಕುಳಿತಿದ್ದಾರೆ. ಇದು ಬಂಗಾಳದಲ್ಲಿದ್ದ ಕೊನೆಯ ಕಸಾಯಿಖಾನೆಯಾಗಿತ್ತು.
ಅವರ ಸ್ನೇಹಿತ ಮಹಮೂದ್ ಆಲಂ, ಕಸಾಯಿಖಾನೆಯ ಎದುರು ರಸ್ತೆಬದಿಯ ಉಪಹಾರ ಗೃಹವನ್ನು ಹೊಂದಿದ್ದಾರೆ. “ಈ ಸರ್ಕಾರವು ಸದ್ಯದಲ್ಲೇ ಇದನ್ನು ಮತ್ತೆ ತೆರೆಯಲು ಬಿಡುತ್ತದೆ ಎಂದು ನನಗನಿಸುವುದಿಲ್ಲ” ಎಂದು ಅವರು ಬೇಸರದ ಧ್ವನಿಯಲ್ಲಿ ಹೇಳುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ನಾಲ್ಕು ದಿನಗಳ ನಂತರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದನಗಳ ಹತ್ಯೆಯ ಕುರಿತು ನೋಟಿಸ್ ಹೊರಡಿಸಿದ್ದು, ಅದರಲ್ಲಿ ಹಸುಗಳು, ಹೋರಿಗಳು, ಎತ್ತುಗಳು, ಕರುಗಳು ಮತ್ತು ನಿರ್ದಿಷ್ಟಪಡಿಸಿದ ಎಮ್ಮೆಗಳನ್ನು ಹತ್ಯೆಗೆ ಸೂಕ್ತವೆಂದು ಪ್ರಮಾಣಪತ್ರ ನೀಡದೆ ಹತ್ಯೆ ಮಾಡುವಂತಿಲ್ಲ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ, 1950 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆ ದಾಖಲೆಯಲ್ಲಿ ಬರೆಯಲಾಗಿದೆ.
ಸರ್ಕಾರಿ ಸೂಚನೆಯ ಪ್ರಕಾರ, ಪ್ರಾಣಿಯು 14 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ಕೆಲಸ ಮತ್ತು ಸಂತಾನೋತ್ಪತ್ತಿಗೆ ಅಸಮರ್ಥವೆಂದು ಪರಿಗಣಿಸಲ್ಪಟ್ಟಿದ್ದರೆ, ಅಥವಾ ಗಾಯ, ವೈಕಲ್ಯ ಅಥವಾ ವಾಸಿಯಾಗದ ಕಾಯಿಲೆಯನ್ನು ಹೊಂದಿದ್ದರೆ ಮಾತ್ರ ಹತ್ಯೆಗೆ ಪ್ರಮಾಣಪತ್ರವನ್ನು ನೀಡಬಹುದು.
“ಪ್ರಮಾಣೀಕೃತ ಪ್ರಾಣಿಗಳನ್ನು ಪುರಸಭೆ ಅಥವಾ ಸ್ಥಳೀಯವಾಗಿ ನಿಯೋಜಿಸಲಾದ ಕಸಾಯಿಖಾನೆಯಲ್ಲಿ ಮಾತ್ರ ಹತ್ಯೆ ಮಾಡಬಹುದು. ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ಹತ್ಯೆ ಮಾಡುವುದನ್ನು ಇದು ನಿಷೇಧಿಸುತ್ತದೆ”
ಮುಸ್ಲಿಮರು ಬಕ್ರೀದ್ ಅಥವಾ ಈದ್-ಉಲ್-ಅಧಾ ಆಚರಿಸಿದ ಮೇ ತಿಂಗಳಿನಲ್ಲಿಯೇ (ಮೇ 13 ರಂದು) ಈ ಅಧಿಸೂಚನೆಯನ್ನು ಹೊರಡಿಸಲಾಯಿತು; ಅದರ ಪ್ರಭಾವ ತೀವ್ರವಾಗಿತ್ತು.
ದನಗಳ ವಧೆಗೆ ಪ್ರಮಾಣಪತ್ರ ಮಾತ್ರ ಸಾಲದು. ಈ ವರದಿಯ ಪ್ರಕಾರ, ವ್ಯಾಪಾರ ಮಾಡಲು ಪರವಾನಗಿ (ಲೈಸೆನ್ಸ್) ಕಡ್ಡಾಯವಾಗಿದೆ.
ಫಿರ್ಹಾದ್ ಹಕೀಮ್ ಅವರು ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಜೂನ್ನಲ್ಲಿ ಕೋಲ್ಕತ್ತಾ ಮಹಾನಗರ ಪಾಲಿಕೆಯನ್ನು ವಿಸರ್ಜಿಸಿರುವುದರಿಂದ ಈಗ ಪರವಾನಗಿಗಳ ನವೀಕರಣವು ಸ್ಥಗಿತಗೊಂಡಿದೆ. ಕೋಲ್ಕತ್ತಾದಲ್ಲಿ ಡಿಸೆಂಬರ್ನಲ್ಲಿ ಮುಂದಿನ ಪಾಲಿಕೆ ಚುನಾವಣೆ ನಡೆಯಲಿದೆ.
ಮಾಂಸ ಸೇವನೆಯು ಬೆಂಗಾಲಿ ಸಂಸ್ಕೃತಿ ಮತ್ತು ಅಡುಗೆ ಶೈಲಿಯ ಗುರುತಿನೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಸರ್ಕಾರಿ ದತ್ತಾಂಶದ ಪ್ರಕಾರ, ಶೇಕಡಾ 10.4 ರಷ್ಟು ಗ್ರಾಮೀಣ ಕುಟುಂಬಗಳು ಮತ್ತು ಶೇಕಡಾ 7.9 ರಷ್ಟು ನಗರ ಪ್ರದೇಶದ ಮನೆಗಳು ದನದ ಅಥವಾ ಎಮ್ಮೆ ಮಾಂಸವನ್ನು ಸೇವಿಸುತ್ತವೆ.
ಬೆಂಗಾಲಿ ಮುಸ್ಲಿಂ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗದಷ್ಟು ಜನರು ದನದ ಮಾಂಸವನ್ನು ಸೇವಿಸಿದರೆ, ಕ್ರಿಶ್ಚಿಯನ್ನರು, ದಲಿತ ಸಮುದಾಯಗಳ ಕೆಲವು ಭಾಗಗಳು ಮತ್ತು ಕೆಲವು ಬುಡಕಟ್ಟು ಸಮುದಾಯಗಳು ಸಹ ತಮ್ಮ ದೈನಂದಿನ ಆಹಾರದ ಭಾಗವಾಗಿ ದನದ ಮಾಂಸವನ್ನು ಸೇವಿಸುತ್ತವೆ ಎಂದು ದತ್ತಾಂಶವು ಉಲ್ಲೇಖಿಸುತ್ತದೆ.
ಕೇರಳ ಮತ್ತು ಅಸ್ಸಾಂ ಜೊತೆಗೆ ಪಶ್ಚಿಮ ಬಂಗಾಳವು ಅತ್ಯಧಿಕ ದನದ ಮಾಂಸ ಸೇವನೆಯನ್ನು ಹೊಂದಿದೆ.
ಈ ವರ್ಷ, ಬಿಜೆಪಿ ಪಕ್ಷವು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ನ 15 ವರ್ಷಗಳ ಆಡಳಿತವನ್ನು ಪತನಗೊಳಿಸಿತು. ಅನೇಕ ಮಾಂಸದ ವ್ಯಾಪಾರಿಗಳು ಈ ನಿಷೇಧವನ್ನು ಮುಂಚಿತವಾಗಿಯೇ ಊಹಿಸಿದ್ದರು.
ಕೋಲ್ಕತ್ತಾ ಮೂಲದ ಉದ್ಯಮಿಯಾದ ಅಲ್ಫಾಜ್ ಲೈಕ್ ಅವರು ಉಪಹಾರಕ್ಕೆ ದನದ ಮಾಂಸ ಸೇವಿಸುತ್ತಿದ್ದವರು ಈಗ ಅದನ್ನು ತರುವುದನ್ನೇ ನಿಲ್ಲಿಸಿದ್ದಾರೆ. “ಬಂಗಾಳದಲ್ಲಿ ಈಗ ದನದ ಮಾಂಸವನ್ನು ಕೊಂಡೊಯ್ಯುವುದು ಮಾದಕ ದ್ರವ್ಯಗಳನ್ನು ಕೊಂಡೊಯ್ಯುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ” ಎಂದು ಅವರು ಹೇಳುತ್ತಾರೆ.
ಅಲ್ಫಾಜ್ ಅವರು ಬರ್ಧಮಾನ್ನಲ್ಲಿ ತಮ್ಮ ಹಾಲಿನ ಉದ್ಯಮವನ್ನೇ ಮುಚ್ಚಿದ್ದು, ತಮ್ಮ ಜಾನುವಾರುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿದ್ದಾರೆ. “ಬಿಜೆಪಿ ಮತ್ತು ಹಿಂದುತ್ವ ಬೆಂಬಲಿಗರ ಕಿರುಕುಳವನ್ನು ಎದುರಿಸುವುದಕ್ಕಿಂತ ಇದು ಮೇಲು” ಎಂದು ಅವರು ಹೇಳುತ್ತಾರೆ.
ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಗೋ ರಕ್ಷಕರ ಹಿಂಸಾಚಾರ ಹೆಚ್ಚಾಗಿದ್ದು, ಭಾರತದಾದ್ಯಂತ ಮುಸ್ಲಿಮರು ಮತ್ತು ದಲಿತರ ವಿರುದ್ಧ ಗೋ ರಕ್ಷಕರ ಹಿಂಸಾಚಾರದ ಕನಿಷ್ಠ ಎರಡು ಪ್ರಕರಣಗಳು ಪ್ರತಿ ವಾರ ದಾಖಲಾಗುತ್ತಿವೆ ಅಥವಾ ವರದಿಯಾಗುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ, ಪೊಲೀಸರು ಕೊಲೆ ಮಾಡಿದ ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ದಾಳಿಯಿಂದ ಪಾರಾದವರ ಅಥವಾ ಗುಂಪು ಹಿಂಸಗೆ ಒಳಗಾದ ಸಂತ್ರಸ್ತರ ಕುಟುಂಬಗಳ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.
ಬಂಗಾಳದಲ್ಲಿ ಸರ್ಕಾರದಿಂದ ಸೂಚನೆ ಹೊರಬಂದಾಗಿನಿಂದ ಹೆಚ್ಚಿನ ಹೋಟೆಲ್ಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಭಾರಿ ನಷ್ಟ ಅನುಭವಿಸಿದ್ದಾರೆ. “ಮೊದಲ ಎರಡು ತಿಂಗಳು ಹೆಚ್ಚಿನ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಆಹಾರ ಮಾರಾಟ ಕುಸಿದಿದೆ, ಮಾಂಸದ ಗುಣಮಟ್ಟವೂ ಬದಲಾಗಿದೆ. ಉದ್ಯಮಕ್ಕೆ ಇದು ಸೂಕ್ತ ಸಮಯವಲ್ಲ” ಎಂದು ಅಂಗಡಿಯೊಂದರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕೋಲ್ಕತ್ತಾ ಮೂಲದ ಝಮ್ ಝಮ್ ರೆಸ್ಟೋರೆಂಟ್ನ ಮಾಲೀಕರಾದ ಶಾದ್ಮಾನ್ ಫೈಜ್ ಅವರು, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ತಮ್ಮ ಮೂರೂ ಶಾಖೆಗಳ ಮೆನುವಿನಿಂದ ದನದ ಮಾಂಸದ ಖಾದ್ಯಗಳನ್ನು ತೆಗೆದುಹಾಕಿದ್ದಾಗಿ ಹೇಳಿದ್ದಾರೆ. “ಹೌದು, ನಾವು ಗ್ರಾಹಕರನ್ನು ಕಳೆದುಕೊಂಡಿದ್ದೇವೆ. ಸುಮಾರು ಶೇಕಡಾ 40 ರಷ್ಟು ನಷ್ಟವನ್ನು ಅನುಭವಿಸುತ್ತಿದ್ದೇವೆ. ನಾವು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬೇಕಾಗಿ ಬಂದಿದೆ, ನಮ್ಮ ಪರಿಸ್ಥಿತಿ ಹೀಗಿದೆ” ಎಂದು ಅವರು ಹೇಳುತ್ತಾರೆ.
ಕೋಲ್ಕತ್ತಾದ ಹೊರಗೂ ಇದೆ ಸಮಸ್ಯೆ
ದಕ್ಷಿಣ 24 ಪರಗಣದ ಬರುಯಿಪುರದಲ್ಲಿ, ಬೆಳಗ್ಗೆ 11 ಗಂಟೆಯ ವೇಳೆಗೆ ದನದ ಮಾಂಸ ಖಾಲಿಯಾಗುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ. ಕೆಲವು ದಿನಗಳಲ್ಲಿ, ದನದ ಮಾಂಸವೇ ಲಭ್ಯವಿರುವುದಿಲ್ಲ. “ದನದ ಮಾಂಸವು ಅತ್ಯಂತ ಕೈಗೆಟುಕುವ ಮಾಂಸವಾಗಿತ್ತು. ಈಗ ಬೆಲೆಗಳು ಹೆಚ್ಚಿರುವುದರಿಂದ ಅದನ್ನು ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಸೀಮಿತಗೊಳಿಸಲಾಗಿದೆ” ಎಂದು ಸ್ಥಳೀಯ ಸೈಯದ್ ಸೈಫುಲ್ಲಾ ತಿಳಿಸಿದ್ದಾರೆ.
ಮೇ ತಿಂಗಳಿಗಿಂತ ಮೊದಲು ತಮ್ಮ ಕುಟುಂಬದ ವಾರಕ್ಕಾಗುವ ಆಹಾರ ವೆಚ್ಚ 5,000 ರೂ. ಇತ್ತು. ಆದರೆ ಈಗ ನಮ್ಮ ಆದಾಯ ಏರಿಕೆಯಾಗದಿದ್ದರೂ ಆಹಾರ ವರಚ್ಚ 7,000 ರೂ.ಗೆ ಏರಿದೆ ಎಂದು ಅವರು ಹೇಳಿದರು.
ಶೇಕಡಾ ಅರ್ಧಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಾಲ್ಡಾದಲ್ಲಿ, ಕೆಲ ನಿವಾಸಿಗಳು ಈಗ ದನದ ಮಾಂಸವನ್ನು ಅನಧಿಕೃತ ಮತ್ತು ಗುಪ್ತ ಜಾಲಗಳ ಮೂಲಕ ಪಡೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.


