ಕೊಪ್ಪಳದ ಆನೆಗೊಂದಿ ಉತ್ಸವದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದಕ್ಕಾಗಿ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಹಾಗೂ ಕನ್ನಡ ನೆಟ್ ಸಂಪಾದಕರಾದ ರಾಜಭಕ್ಷಿಯವರನ್ನು ಗಂಗಾವತಿ ಪೊಲೀಸರು ಇಂದು ಕಸ್ಟಡಿಗೆ ಪಡೆದಿದ್ದಾರೆ. ಆ ಮೂಲಕ ಕವಿತೆಗೆ ಜೈಲುವಾಸವಾಗಿದೆ.
ಇಂದು ಗಂಗಾವತಿ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಪೊಲೀಸರು ಕವಿತೆ ಓದಿದ ಮತ್ತು ಪ್ರಸಾರ ಮಾಡಿದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ ಕೋರ್ಟ್ ಆರೋಪಿಗಳ ಜಾಮೀನು ವಿಚಾರಣೆಯನ್ನು ನಾಳೆ ಸಂಜೆಗೆ ಮೂಂದೂಡಿದ್ದಾರೆ.
ಕವಿತೆಯ ಆರೋಪಿಗಳ ಪರ ವಕೀಲರಾದ ಆರ್ ಜಗನ್ನಾಥ್ ಮಾತನಾಡಿ, ಕವಿತೆ, ಕಾದಂಬರಿ ಥರದ ಸೃಜನಶೀಲ ಸಾಹಿತ್ಯವನ್ನು ಅಭಿವ್ಯಕ್ತಪಡಿಸುವುದು ಸಾಂವಿಧಾನಿಕವಾಗಿ ದಕ್ಕಿರುವ ಹಕ್ಕಾಗಿದೆ. ಅದು ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಹಾಗಾಗಿ ಕವಿತೆ ಓದಿದ್ದಕ್ಕೆ ಕ್ರಿಮಿನಲ್ ಕೇಸು ಹಾಕಿದ್ದಲ್ಲದೇ ಪೊಲೀಸರು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ನಾಳೆ ಜಾಮೀನು ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದರು. ಇದನ್ನೇ ದೇಶದ್ರೋಹವೆಂದು ಕರೆದು ಬಿಜೆಪಿಯು ದೂರು ನೀಡಿದ್ದರು. ಅದರ ಆಧಾರದಲ್ಲಿ ಖೈ.ನಂ. 23/2020 ರಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 5045052 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಕವಿತೆ ನೋಡಿ
ಈ ಕವನಕ್ಕೆ BJP ದೂರು ನೀಡಿದೆ. ಪೊಲೀಸರು FIR ಹಾಕಿದ್ದಾರೆ.ಸಿರಾಜ್ ಬಿಸ್ರಳ್ಳಿಯವರು ಅನೆಗೊಂದಿ ಉತ್ಸವದಲ್ಲಿ ವಾಚಿಸಿದ ವೈರಲ್ ಆದ ಕವನ ಏಳೆಂಟು ಭಾಷೆಗಳಿಗೆ ಅನುವಾದಗೊಂಡಿದೆ. ನೀವೂ ಕೇಳಿ
Posted by Naanu Gauri on Monday, January 27, 2020
ತದನಂತರ ಪೊಲೀಸರು ವಿಚಾರಣೆ ನೆಪದಲ್ಲಿ ಸಿರಾಜ್ ಮತ್ತು ರಾಜಭಕ್ಷಿಯವರ ಮನೆಯವರಿಗೆ ಕಿರುಕುಳ ನೀಡಿದ್ದರು. ನಂತರ ಸಿರಾಜ್ ಮತ್ತು ರಾಜಭಕ್ಷಿಯವರನ್ನು ಬಂಧಿಸಲು ಪೊಲೀಸರು ಎಲ್ಲಾ ಕಡೆ ಶೋಧ ನಡೆಸಿದ್ದರು. ಇಂದು ವಿಚಾರಣೆಗೆ ಹಾಜರಾದಾಗ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಹಲವು ವಕೀಲರು ಗಂಗಾವತಿ ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ. ಕವಿತೆಗೆ ಜೈಲು ಸರಿಯಲ್ಲ, ನಮ್ಮ ಮೇಲೆಯೂ ಕೇಸು ಹಾಕಿ ಎಂದು ನೂರಾರು ಜನ ಆ ಕವಿತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಆ ಕವಿತೆ ಸುಮಾರು 12 ಭಾಷೆಗಳಿಗೆ ಅನುವಾದಗೊಂಡಿತ್ತು.
ಅಖಿಲ ಭಾರತ ವಕೀಲ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕುಮಾರ್ ಮಾತನಾಡಿ, ಸಿರಾಜ್ ಬಿಸರಳ್ಳಿ ಹಾಗೂ ರಾಜಬಕ್ಷಿ ಅವರ ಪ್ರಕರಣದಲ್ಲಿ ಮೇಲ್ನೋಟಕ್ಕೆ ರಾಜಕೀಯ ಒತ್ತಡ ಹೇರಲಾಗುತ್ತಿದೆ. ಪೊಲೀಸರು ರಾಜಕೀಯ ಪಕ್ಷದ ಪ್ರತಿನಿಧಿಗಳಂತೆ ವರ್ತಿಸಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂವಿಧಾನ ಹಾಗೂ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.


