ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 5 ರಷ್ಟು ಮೀಸಲಾತಿ ನೀಡುವ ಹೊಸ ಮಸೂದೆಯನ್ನು ಶೀಘ್ರದಲ್ಲೇ ರಾಜ್ಯ ವಿಧಾನಸಭೆಯಲ್ಲಿ ಪರಿಚಯಿಸಲಾಗುವುದು ಎಂದು ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಸಚಿವರು ಹೇಳಿದ ಎರಡು ದಿನಗಳ ನಂತರ, ಮೈತ್ರಿಕೂಟದ ಮತ್ತೊಬ್ಬ ಸದಸ್ಯ ಪಕ್ಷವಾದ ಶಿವಸೇನೆ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದೆ.
ಬಲಪಂಥೀಯ ಗುಂಪು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಈ ಮೀಸಲಾತಿ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗುತ್ತಿದ್ದಂತೆಯೇ ಶಿವಸೇನೆ ಅಂತಹ ಪ್ರಸ್ತಾಪವನ್ನು ತಳ್ಳಿ ಹಾಕಿದೆ.
“ಮುಸ್ಲಿಮರಿಗೆ ಧರ್ಮ ಆಧಾರಿತ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಸುದ್ದಿ ಆತಂಕಕಾರಿಯಾಗಿದೆ. ಶಿವಸೇನೆ ನೇತೃತ್ವದ ಸರ್ಕಾರವು ಮುಸ್ಲಿಮರನ್ನು ಸಮಾಧಾನಪಡಿಸಬಾರದು. ಇದು ಹಿಂದೂ ಸಮಾಜದ ನಿರೀಕ್ಷೆಯಾಗಿದೆ” ಎಂದು ವಿಎಚ್ಪಿ ಶನಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿತ್ತು.
ಭಾನುವಾರ ಬೆಳಿಗ್ಗೆ ಶಿವಸೇನೆಯ ಐಟಿಸೆಲ್ ವಿಎಚ್ಪಿ ಟ್ವೀಟ್ ಮಾಡಿರುವುದಕ್ಕೆ ಉತ್ತರಿಸಿ “ಅಂತಹ ಯಾವುದೇ ವಿಷಯ ಚರ್ಚೆಯಿಲ್ಲ” ಎಂದು ಸ್ಪಷ್ಟನೆ ನೀಡಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 5 ರಷ್ಟು ಮೀಸಲಾತಿ ನೀಡುವ ಹೊಸ ಮಸೂದೆಯನ್ನು ಶೀಘ್ರದಲ್ಲೇ ರಾಜ್ಯ ವಿಧಾನಸಭೆಯಲ್ಲಿ ಪರಿಚಯಿಸಲಾಗುವುದು ಎಂದು ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಶುಕ್ರವಾರ ಹೇಳಿದ್ದರು.
ಉದ್ಯೋಗಗಳಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಲು ಸರ್ಕಾರ ಕೂಡ ಯೋಜಿಸುತ್ತಿದೆ ಮತ್ತು ಅದಕ್ಕಾಗಿ ಸರ್ಕಾರ ಕಾನೂನು ಸಲಹೆ ಪಡೆಯುತ್ತಿದೆ ಎಂದು ಸಹ ಎನ್ಸಿಪಿಯ ಸಚಿವರು ಹೇಳಿದ್ದರು.
ಸೇನಾ ಮತ್ತು ಬಿಜೆಪಿ ನಡುವಿನ ಹಿಂದಿನ ಸರ್ಕಾರವು ನ್ಯಾಯಾಲಯದ ಆದೇಶದ ಹೊರತಾಗಿಯೂ ಮುಸ್ಲಿಮರಿಗೆ ಮೀಸಲಾತಿ ನೀಡಿಲ್ಲ ಎಂದು ಮಲಿಕ್ ಆರೋಪಿಸಿದ್ದರು.
“ಈ ವಿಧಾನಸಭೆ ಅಧಿವೇಶನದ ಅಂತ್ಯದ ವೇಳೆಗೆ ನಾವು ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ 5 ರಷ್ಟು ಮೀಸಲಾತಿ ನೀಡಲು ಪ್ರಯತ್ನಿಸುತ್ತೇವೆ” ಎಂದು ಸಚಿವರು ಹೇಳಿದ್ದರು.
ಇದನ್ನೂ ಓದಿ: ಮುಸ್ಲಿಮರಿಗೆ ಶಿಕ್ಷಣದಲ್ಲಿ 5% ಮೀಸಲಾತಿ: ಮಹಾರಾಷ್ಟ್ರ ಸರ್ಕಾರದ ಘೋಷಣೆ