ಕೊರೊನಾ ಕಾರಣಕ್ಕೆ ಇಡೀ ದೇಶಾದ್ಯಂತ 21 ದಿನಗಳ ಲಾಕ್ಡೌನ್ ವಿಧಿಸಲಾಗಿದೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ಕ್ರಮ ಅಗತ್ಯವಾದುದ್ದಾಗಿದೆ. ಆದರೆ ಈ ಸಮಯದಲ್ಲಿ ಅಗತ್ಯ ವಸ್ತಗಳ ಖರೀದಿಗೆ ಬರುವ ಜನಸಾಮಾನ್ಯರ ಮೇಲಿನ ಪೊಲೀಸ್ ದಬ್ಬಾಳಿಕೆ, ದೌರ್ಜನ್ಯಗಳು ಎಗ್ಗಿಲ್ಲದೇ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ರೈತನೊಬ್ಬ ಮೃತಪಟ್ಟಿರುವ ಘಟನೆ ವರದಿಯಾದರೆ, ಬೆಳಗಾವಿಯಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯ ಇಲಾಖೆಯ ನೌಕರನ ಮೇಲೆಯೇ ಪೊಲೀಸರು ಯದ್ವಾತದ್ವಾ ಲಾಠಿ ಬೀಸಿ ಟೀಕೆಗೊಳಗಾಗಿದ್ದಾರೆ.
ಇದೇ ರೀತಿಯ ಪೊಲೀಸ್ ದೌರ್ಜನ್ಯ ದಾವಣಗೆರೆ ಜಿಲ್ಲೆಯಲ್ಲಿಯೂ ವರದಿಯಾಗಿದೆ. ಕೊರೊನಾ ವಾರಿಯರ್ ಪಾಸ್ ಸಹ ಹೊಂದಿದ್ದ ಮೊಹಮ್ಮದ್ ಅವೇಜ್ ಎಂಬ ಸ್ವಯಂ ಸೇವಕನೊಬ್ಬ ಅಕ್ಕಿ ಖರೀದಿಸಲು ಬೀದಿಗೆ ಬಂದ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬ ಏಕಾಏಕಿ ಹಲ್ಲೆ ಮಾಡಿದ ಕಾರಣಕ್ಕೆ ಕೈ ಮುರಿದುಹೋಗಿರುವ ದುರ್ಘಟನೆ ನಿನ್ನೆ ಜರುಗಿದೆ.
ನಿನ್ನೆ ಬೆಳಿಗ್ಗೆ 9:30ರ ಸಮಯದಲ್ಲಿ ಅಕ್ಕಿ ಚೀಲ ತರಲು ಬೈಕ್ನಲ್ಲಿ ಮೊಹಮ್ಮದ್ ಅವೇಜ್ ಹೊರಟಿದ್ದಾರೆ. ಅಷ್ಟರಲ್ಲಿ ವಿನೋಬಾನಗರದ ಎರಡನೇ ಮೈನ್ನಲ್ಲಿ ಪೊಲೀಸ್ ಪೇದೆಯೊಬ್ಬರು ಲಾಠಿಯಿಂದ ಅವೇಜ್ ಮೇಲೆ ಮನಸೋಇಚ್ಛೆ ಹೊಡೆದಿದ್ದಾರೆ. ನಾನೊಬ್ಬ ಕೊರೊನಾ ವಾರಿಯರ್ ವಾಲಂಟಿಯರ್. ಅಕ್ಕಿ ತರಲಷ್ಟೇ ಹೊರಟಿದ್ದೀನಿ ಹೊಡೆಯಬೇಡಿ ಎಂದು ಮನವಿ ಮಾಡಿದರೂ ಕೇಳದೆ ಪೇದೆ ಹೊಡೆದಿದ್ದರಿಂದ ಅವೇಜ್ನ ಎಡಗೈ ಮೂಳೆಯೇ ಮುರಿದುಹೋಗಿದೆ ಎಂದು ಆಸ್ಪತ್ರೆಯ ಎಕ್ಸ್ರೇ ವರದಿಗಳು ಹೇಳುತ್ತಿವೆ.
ದಾವಣಗೆರೆ ಜಿಲ್ಲಾಧಿಕಾರಿಗಳು ಬೆಳಿಗ್ಗೆ 7 ರಿಂದ 11 ಗಂಟೆಯೊಳಗೆ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದೆಂದು ಸೂಚಿಸಿದ್ದರು. ಅದರನುಗುಣವಾಗಿಯೇ ನಾನು 9:30 ರ ಸಮಯದಲ್ಲಿ ಅಕ್ಕಿ ತರಲು ಹೋಗಿದ್ದೆ. ಆದರೆ ಪೊಲೀಸ್ ಪೇದೆ ನನ್ನನ್ನು ಕ್ರಿಮಿನಲ್ ರೀತಿ ನಡೆಸಿಕೊಂಡರು. ನಾನು ರೆಡ್ಕ್ರಾಸ್ ಸಂಸ್ಥೆಯಿಂದ ಕೊರೊನಾ ವಾರಿಯರ್ ವಾಲಂಟೀಯರ್ ಆಗಿ ತರಭೇತಿ ಪಡೆದಿದ್ದೇನೆ, ಪಾಸ್ ಇದೆ ಎಂದರೂ ಸಹ ಬಿಡದೇ ಹೊಡೆದರು. ಪೊಲೀಸರೇಕೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ? ನಾವು ಮನುಷ್ಯರಲ್ಲವೇ ಎನ್ನುತ್ತಾರೆ ಪೆಟ್ಟು ತಿಂದ ಮೊಹಮ್ಮದ್ ಅವೇಜ್.
ವಿಡಿಯೋ ನೋಡಿ:
ಮಿತಿ ಮೀರುತ್ತಿರುವ ಪೊಲೀಸರ ವರ್ತನೆ. ಕೊರೊನಾ ವಾರಿಯರ್ ಸ್ವಯಂಸೇವಕನ ಕೈ ಮುರಿದ ದಾವಣಗೆರೆ ಪೊಲೀಸ್..
Posted by Naanu Gauri on Monday, March 30, 2020
ಈ ಕುರಿತು ಎಕ್ಸ್ಟೆನ್ಸನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಆದರೆ ಪೊಲೀಸರು ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವುದರ ಬದಲು ರಾಜೀ ಮಾಡಿಕೊಳ್ಳಿ ಎಂದು ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಇನ್ನೊಂದೆಡೆ ನನ್ನ ಮೇಲೆ ಹಲ್ಲೆ ಮಾಡಿದ ಪೇದೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ನನ್ನ ಮೇಲೆಯೇ ದೂರು ನೀಡಲು ಮುಂದಾಗಿದ್ದಾರೆ. ಇದ್ಯಾವ ನ್ಯಾಯ ಎಂದು ಅವೇಜ್ ಅಳಲು ತೋಡಿಕೊಂಡಿದ್ದಾರೆ.
ನಮಗೆ ಪೊಲೀಸರ ಮೇಲೆ ನಂಬಿಕೆಯಿಲ್ಲ. ಅವರು ಮನುಷ್ಯರಂತೆ ವರ್ತಿಸುತ್ತಿಲ್ಲ. ಹಾಗಾಗಿ ದಾವಣಗೆರೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ದೂರು ನೀಡುತ್ತೇವೆ. ಕೂಡಲೇ ಆ ಪೊಲೀಸ್ ಪೇದೆಯನ್ನು ಅಮಾನತು ಮಾಡಬೇಕು. ಪೊಲೀಸರು ಜನರೊಂದಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ಅವೇಜ್ ಹೇಳಿದ್ದಾರೆ.
ಒಟ್ಟಿನಲ್ಲಿ ಲಾಕ್ಡೌನ್ ಸರಿಯಾದ ಕ್ರಮವೇ ಆದರೂ ಅದನ್ನು ನಿಭಾಯಿಸುವಲ್ಲಿ ಸರ್ಕಾರ ಮತ್ತು ಪೊಲೀಸರ ವೈಫಲ್ಯ ಎದ್ದುಕಾಣುತ್ತಿದೆ. ಪೊಲೀಸರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕ ಜನರ ಮೇಲೆ ಲಾಠಿ ಬೀಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಹೀಗೆ ಮುಂದುವರಿದಲ್ಲಿ ಜನರು ಪೊಲೀಸ್ ವ್ಯವಸ್ಥೆಯ ಬಗ್ಗೆಯೇ ನಂಬಿಕೆ ಕಳೆದುಕೊಳ್ಳುವ ಅಪಾಯವಿದೆ. ಕೆಲ ಪೊಲೀಸರ ಈ ಅಮಾನವೀಯ ವರ್ತನೆಯಿಂದಾಗಿ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಆಗಬಾರದು. ಹಾಗಾಗಿ ಈಗಲಾದರೂ ಪೊಲೀಸರು ಎಚ್ಚೆತ್ತುಕೊಳ್ಳಲಿದ್ದಾರೆಯೇ ಕಾದು ನೋಡಬೇಕಿದೆ.
Mohamad avez….. ದೈರ್ಯವಾಗಿ ಇರಿ…., ಈ ಪೊಲೀಸ್ ರಿಗೆ ಏನ್ ಆಗಿದೆಯೋ…….. ದೇವರೇ ಕಾಪಾಡಬೇಕು ಇಂತವರಿಂದ……..