Homeಮುಖಪುಟ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ - ರಾಜಾರಾಂ ತಲ್ಲೂರು

’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ – ರಾಜಾರಾಂ ತಲ್ಲೂರು

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ.

- Advertisement -
- Advertisement -

ಸಾಂಪ್ರದಾಯಿಕವಾಗಿ ಮೇಲು ಜಾತಿಗಳದೇ ಬಿಗಿಮುಷ್ಟಿಯಲ್ಲಿ ಬಹುತೇಕ ‘ಗುರುಶಿಷ್ಯ ಪರಂಪರೆ’ ಆಗಿಯೇ ಉಳಿದಿದ್ದ ಸುದ್ದಿಕೋಣೆಗಳಲ್ಲಿ ಸುದ್ದಿಗಾರರ ಸಂಚಲನದ ಮ್ಯಾಪಿಂಗ್ ಬಹಳ ಕುತೂಹಲಕರ ಸಂಗತಿಗಳನ್ನು ಹೊರಹಾಕಬಹುದು. ಇಲ್ಲಿ ನಾನು ಮಾಡಿರುವುದು ಕಣ್ಣಳತೆಯ ಮ್ಯಾಪಿಂಗೇ ಹೊರತು ಫೀಲ್ಡಿಗಿಳಿದು ಅಂಕಿಸಂಖ್ಯೆಗಳ ಆಧಾರದಲ್ಲಿ ಮಾಡಿದ್ದಲ್ಲ. ಆದರೆ ಮಾಧ್ಯಮ ಪರಿಣತರಿಗೆ ಇಲ್ಲೊಂದು ಚೆಂದದ ಸಂಶೋಧನಾವಕಾಶ ಇದೆ ಎಂದು ಧಾರಾಳವಾಗಿ ಹೇಳಬಲ್ಲೆ.

ಅಂದಾಜು 2000-2010 ಕನ್ನಡದ ಮುದ್ರಣ ಮಾಧ್ಯಮಗಳಲ್ಲಿ ಸ್ಥಿತ್ಯಂತರದ ಕಾಲ. ಈ ಅವಧಿಯಲ್ಲೇ (2000) ನಾನು ಉದ್ದೇಶಪೂರ್ವಕವಾಗಿ ನನ್ನ ಅನುಭವ ಇದ್ದ ಮುದ್ರಣ ಮಾಧ್ಯಮದ ಬದಲು ವೆಬ್ ಮಾಧ್ಯಮದ ಕಡೆ ಹೊರಳಿಕೊಂಡಿದ್ದರಿಂದ ನನಗೆ ಆದ ಲಾಭವೆಂದರೆ, ಒಳಗಿನವನಾಗಿದ್ದೂ ಹೊರಗಿನಿಂದ ಮುದ್ರಣ ಮಾಧ್ಯಮದ ಸುದ್ದಿಮನೆಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಈ ಅವಧಿಯಲ್ಲೇ ಕನ್ನಡ ಮುದ್ರಣ ಮಾಧ್ಯಮಗಳು ಮಾಲಕೀಯ ನಿಗಾದಿಂದ ‘ಕಾರ್ಪೋರೇಟ್ ನಿಗಾ ವ್ಯವಸ್ಥೆ’ಗೆ ಹೊರಳಿಕೊಂಡದ್ದು. ಅರ್ಥಾತ್ ಪತ್ರಿಕೆಯೊಂದರ ‘ಹೃದಯ’ದ ಜವಾಬ್ದಾರಿಯನ್ನು ‘ಕಿಡ್ನಿ’ ವಹಿಸಿಕೊಂಡದ್ದು. ಪುನರರ್ಥಾತ್, ಸುದ್ದಿಮನೆಗೆ ಸುದ್ದಿಗಾರರ ನೇಮಕ ಮಾಡುವ ಸುದ್ದಿಮನೆಯ ಹಿರಿಯರ ಜವಾಬ್ದಾರಿಯನ್ನು ಸಂಸ್ಥೆಯ ‘ಮಾನವ ಸಂಪನ್ಮೂಲ’ ವಿಭಾಗಗಳು ವಹಿಸಿಕೊಂಡದ್ದು!

ಈ ಸ್ಥಿತ್ಯಂತರದ ಮೊದಲ ಪರಿಣಾಮ -ಸುದ್ದಿಮನೆಯಲ್ಲಿರುವ ‘ಹಿರಿತಲೆ’ಗಳ ತಲೆದಂಡ. ಅದಕ್ಕೆ ಕೊಡಲಾದ ಕಾರ್ಪೋರೇಟ್ ಕಾರಣ ‘ಕನ್ನಡದ ಸುದ್ದಿಮನೆಯ ಸರಾಸರಿ ಪ್ರಾಯ 50+ ಇದೆ. ಉದಾರೀಕರಣದ-ನವಮಾರುಕಟ್ಟೆಗಳ ಪರ ಇದ್ದು ಆದಾಯ ಗಳಿಸಬೇಕಾಗಿರುವ ಪತ್ರಿಕೆಗಳು ಈ ನವ ಮಾರುಕಟ್ಟೆಯ ನಾಡಿಮಿಡಿತ ಅರಿಯಬೇಕಾದರೆ, ಸುದ್ದಿಮನೆಗಳ ಸರಾಸರಿ ಪ್ರಾಯ 30-35ರ ಆಸುಪಾಸು ಇರಬೇಕು ಎಂಬ ಕಾರ್ಪೋರೇಟ್ ತುಡಿತ. ಹೊಸದಾಗಿ ಬಂದಿದ್ದ ಈ ಕಾರ್ಪೋರೇಟೀಕರಣದ ವೃತ್ತಿಪರತೆಯ ವರಸೆಗಳು ಎಷ್ಟು ಬಲವಾಗಿದ್ದವೆಂದರೆ, ಅವರ ಅಂಕಿ-ಸಂಖ್ಯೆಗಳು, ಚಾರ್ಟುಗಳು, ಪಿಪಿಟಿ ಪ್ರೆಸಂಟೇಷನ್‍ಗಳು, ಉಳಿದವರನ್ನು ಬಿಡಿ – ಮಾಲಕ ವರ್ಗದ ಬಾಯಿಯನ್ನೇ ಕಟ್ಟಿಸಿಬಿಡುತ್ತಿದ್ದವು/ತ್ತಿವೆ.

ಈ ಸ್ಥಿತ್ಯಂತರದ ಆರಂಭದ ಹೊತ್ತಿಗೆ ಸುದ್ದಿಮನೆಗಳ ಪರಿಸ್ಥಿತಿ ಹೇಗಿತ್ತೆಂದರೆ ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಅನುಭವೀ, ಇಗೊ ಧಿಮಾಕಿನ ಮುದುಕರೇ ತುಂಬಿದ್ದರು. ಸುದ್ದಿಮನೆಗಳಿಗೆ ಜಂಪಿಂಗ್ ಬೋರ್ಡ್‍ಗಳೆಂದೇ ಪ್ರಸಿದ್ಧವಾಗಿದ್ದ ಎರಡು ಪತ್ರಿಕೆಗಳು – ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’ ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಸುದ್ದಿಮನೆಯ ಸರಾಸರಿ ಪ್ರಾಯದಲ್ಲಿ ಬಹಳ ತಗ್ಗಿನಲ್ಲಿದ್ದವು. ಅಂದರೆ, ಬೇರೆ ಸುದ್ದಿಮನೆಗಳಿಗೆ ಹೋಲಿಸಿದರೆ ಅಲ್ಲಿ ಎಳೆಯರ ಸಂಖ್ಯೆ ಜಾಸ್ತಿ ಇತ್ತು.

ಈಗ ನಾನು ಲೇಖನದ ಆರಂಭದಲ್ಲಿ ಹೇಳಿದ ಸುದ್ದಿಮನೆಯಲ್ಲಿ ಸಂಚಲನದ ಮ್ಯಾಪಿಂಗ್ ಮಾಡಿದರೆ, ನಿಮಗೆ ಕಾಣಬಹುದಾದ ಎರಡು ಹಾಟ್‍ಸ್ಪಾಟ್‍ಗಳೆಂದರೆ ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’. ಬಹುತೇಕ ಎಲ್ಲ ಸುದ್ದಿಮನೆಗಳಿಗೂ ಈ ಎರಡು ಪತ್ರಿಕೆಗಳಿಂದ ಅನುಭವೀ ಎಳೆಯರು ಹರಡಿ ಹೋದರು. ಈ ಹರಡುವಿಕೆ 1999ರಲ್ಲಿ ‘ವಿಜಯ ಕರ್ನಾಟಕ’ದ ಆರಂಭದೊಂದಿಗೆ ಟ್ರಿಗರ್ ಆಯಿತು. ಸುದ್ದಿಮನೆಯ ಮಂದಿ ಪತ್ರಿಕೆಯಿಂದ ಪತ್ರಿಕೆಗೆ ಹಿಂಡು ಕಟ್ಟಿಕೊಂಡು ತಿರುಗುವ ಸಂಪ್ರದಾಯಕ್ಕೂ ಇಲ್ಲೇ ನಾಂದಿ ಆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ಕನ್ನಡ ಮುದ್ರಣ ಮಾಧ್ಯಮದ ಪರಿಸ್ಥಿತಿಗೆ ಈ ಬೆಳವಣಿಗೆ ಬೀಜ ಬಿತ್ತಿತು.

ಮೂಲದಲ್ಲೇ ಕಲುಷಿತ

‘ಸುದ್ದಿ ಸಂಸ್ಕರಣೆ’ ಎಂಬುದು ಕನ್ನಡದ ಮಟ್ಟಿಗೆ ‘ಗುರುಶಿಷ್ಯ’ ಪರಂಪರೆಯದೇ ಕೊಡುಗೆ. ಹಠಾತ್ ಆಗಿ ಹಿರಿಯ ತಲೆಮಾರಿನ ಪತ್ರಕರ್ತರ ಒಂದು ದೊಡ್ಡ ಬಳಗ ಕನ್ನಡ ಪತ್ರಿಕೆಗಳ ಸುದ್ದಿಮನೆಯಿಂದ ಹತ್ತು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ, ವಿವಿಧ ಕಾರಣಗಳ ಹೆಳೆಯಲ್ಲಿ ‘ಒಂದೇ ಉದ್ದೇಶ ಸಾಧನೆಗಾಗಿ (ಮಾರುಕಟ್ಟೆಯಲ್ಲಿ ಗೆಲ್ಲುವ ಉದ್ದೇಶ ಅದು!)’ ಹೊರದಬ್ಬಿಸಿಕೊಂಡಾಗ, ಸುದ್ದಿಮನೆಯಲ್ಲಿ ಏಕಾಏಕಿ ಸುದ್ದಿ ಸಂಸ್ಕರಣೆ ಕೌಶಲದ ಕೊರತೆ ಉಂಟಾಗತೊಡಗಿತು. ಅದರ ಫಲವಾಗಿ ನಿಧಾನಕ್ಕೆ ಸುದ್ದಿಗಳು ತಮ್ಮ ಸೂಕ್ಷ್ಮಜ್ಞತೆಯನ್ನು ಕಳೆದುಕೊಳ್ಳತೊಡಗಿದವು. ಭಾಷೆ, ವ್ಯಾಕರಣದಂತಹ ಒಣ ಪಾಂಡಿತ್ಯದಿಂದ ಆರಂಭಿಸಿ ಸುದ್ದಿ ವಿಶ್ಲೇಷಣೆ, ಸುದ್ದಿಯ ದರ್ಜೆ ನಿರ್ಧಾರಣೆಯಂತಹ ಎಲ್ಲ ಸುದ್ದಿ ಕೌಶಲಗಳೂ ಏಕಾಏಕಿ ಮೊಂಡಾಗಿ, ಮಾರ್ಕೇಟು ಮಂಗಾಟಗಳು ಮುನ್ನೆಲೆಗೆ ಬರತೊಡಗಿದವು. ಓದುಗರ ಕಜ್ಜಿ ಕೆರೆಯುವ ಮತ್ತು ಆ ಕೆರೆತದ ಆನಂದಕ್ಕೆ ಉಪ್ಪು ಸವರಿ ಮತ್ತಷ್ಟು ಹಾರ ಕೊಡುವ ಕೆಲಸಗಳು ಆರಂಭಗೊಂಡವು.

2010ರ ಹೊತ್ತಿಗೆ, ದೇಶದಾದ್ಯಂತ ಹೆಚ್ಚಿನಂಶ ಇಂತಹದೊಂದು ಟ್ರೆಂಡ್ ವಿವಿಧ ಸ್ಥಳೀಯ ಕಾರಣಗಳಿಗಾಗಿ ಹುಟ್ಟಿಕೊಂಡಿರಬೇಕು. ಅಂತೂ ಎಲ್ಲೆಡೆ ಇದೇಸ್ಥಿತಿ ಇರುವಾಗ ‘ಸುದ್ದಿಮೂಲ ಸಂಸ್ಥೆ’ಗಳು ಹಿಂದುಳಿಯಲಾದೀತೇ? ANI, PTI, UNI ಮತ್ತಿತರ ಸುದ್ದಿಮೂಲ ಸಂಸ್ಥೆಗಳೂ ಇಂತಹದೇ ಸ್ಥಿತ್ಯಂತರಕ್ಕೆ ಒಳಪಟ್ಟು ತಮ್ಮ ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ಹಂಚಲಾರಂಭಿಸಿದವು. ಈ ರೀತಿ ಮೂಲದಿಂದ ಬಂದ ಸುದ್ದಿಗಳ ‘ಸಂಸ್ಕರಣೆ’ ಕೌಶಲ ಇಲ್ಲದ ಸುದ್ದಿಮನೆಗಳು (ಕನಿಷ್ಟ ಕನ್ನಡದ ಮಟ್ಟಿಗೆ) ಇದೇ ಸುದ್ದಿಗಳನ್ನು ತಮ್ಮ ಓದುಗರಿಗೆ ಬಡಿಸತೊಡಗಿದವು.

ಈ ವೇಳೆಗೆ, ದೇಶದ ರಾಜಕೀಯ ಸ್ಥಿತ್ಯಂತರಗಳು (1996 – 2004) ಮೊದಲ ಬಾರಿಗೆ ಕಾಂಗ್ರೆಸ್ಸೇತರ ಆಡಳಿತಕ್ಕೆ ಹಾದಿಮಾಡಿಕೊಡುವ ಹೊತ್ತಿಗೇ, ತನ್ನ ಯೋಜಿತ ಬದಲಾವಣೆಗಳನ್ನು ಮಾಧ್ಯಮ ರಂಗದಲ್ಲೂ ತಂದವು. ನಾನು ಗಮನಿಸಿದಂತೆ, ಸುದ್ದಿಮೂಲ ಸಂಸ್ಥೆಗಳು ಕಲುಷಿತಗೊಳ್ಳಲು ಆರಂಭವಾದದ್ದು ಈ ಹಂತದಲ್ಲಿ. ಇದರರ್ಥ, ಅದಕ್ಕಿಂತ ಮೊದಲು ಸುದ್ದಿಮೂಲ ಸಂಸ್ಥೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿರಲಿಲ್ಲ ಎಂದಲ್ಲ. ಅಲ್ಲಿಯ ತನಕ ಇದ್ದಂತಹ ಏಕಸ್ವಾಮ್ಯದ ಕಾಲ ಮುಗಿಯಿತು, ಅಷ್ಟೇ. ಆದರೆ, 2010ರ ಹೊತ್ತಿಗೆ ಸುದ್ದಿಮೂಲ ಸಂಸ್ಥೆಗಳ ಕಲುಷಿತಗೊಳ್ಳುವಿಕೆ ಎಷ್ಟು ತೀವ್ರಗೊಂಡಿತೆಂದರೆ ಸುದ್ದಿಗಳು ಸುದ್ದಿಮೂಲದಲ್ಲೇ ‘ಸೂಕ್ತ ಸಂಸ್ಕರಣೆಗೆ ಒಳಪಟ್ಟು’ ಸುದ್ದಿಮನೆಗಳಿಗೆ ತಲುಪತೊಡಗಿದವು.

2014 ಮತ್ತು 2019ರ ಮಹಾಚುನಾವಣೆಗಳಲ್ಲಿ ಮೈನ್ ಸ್ಟ್ರೀಮ್ ಮಾಧ್ಯಮಗಳಲ್ಲೇ ಯಾವ ಪ್ರಮಾಣದಲ್ಲಿ ಪರೋಕ್ಷ ಪ್ರಚಾರದ, ಸತ್ಯದ ಅಂಚಿನಲ್ಲಿರುವ ಅಥವಾ ಸುಳ್ಳು ಸುದ್ದಿಗಳು ಹೇಗೆ ಕೆಲಸ ಮಾಡಿದವು ಎಂಬುದು ಈಗ ಇತಿಹಾಸ. ಇದರಲ್ಲಿ ಎಲ್ಲ ತಪ್ಪೂ ಸುದ್ದಿಮನೆಗಳದಲ್ಲ. ಸುದ್ದಿಮನೆ ಪ್ರಕಟಿಸುವ ನೂರಕ್ಕೆ 60 ಸುದ್ದಿಗಳು (ಅಂದರೆ ಸ್ಥಳೀಯ ಸುದ್ದಿ ಹೊರತುಪಡಿಸಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮತ್ತು ರಾಜ್ಯ ಸುದ್ದಿಗಳು) ಸುದ್ದಿಮೂಲ ಸಂಸ್ಥೆಗಳನ್ನು ಆಧರಿಸಿದ ಸುದ್ದಿಗಳು. ಹಾಗಾಗಿ, ಮೂಲದಲ್ಲೇ ಅಂದರೆ ಸುದ್ದಿಮೂಲ ಸಂಸ್ಥೆಗಳಲ್ಲಿ ಸುದ್ದಿಯನ್ನು ತಮ್ಮ ಅನುಕೂಲಕ್ಕೆ ತಿರುಚಿಕೊಳ್ಳುವುದು ಸಾಧ್ಯವಾದರೆ, ಉಳಿದೆಡೆ ಅದು ತನ್ನಿಂತಾನೆ ಹರಿದುಬರುತ್ತದೆ ಎಂಬ ರಾಜಕೀಯ ಅರಿವು ಮೂಡಿದ್ದು ಈ ಹಂತದಲ್ಲಿ.

ಸುದ್ದಿಯು ಮೂಲದಲ್ಲೇ ಕಲುಷಿತಗೊಂಡಮೇಲೆ, ಸುದ್ದಿಮನೆಗಳಲ್ಲಿ ಅದು ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬಂತಾಯಿತು. ತಿರುಚಲಾದ, ರಾಜಕೀಯ ಪ್ರೇರಿತವಾದ ಸುದ್ದಿಗಳು ಪೂರಕ ಸಂಸ್ಕರಣೆಯ ಜೊತೆ ಆಡಂಬರ, ಅಲಂಕಾರಗಳೊಂದಿಗೆ ಪ್ರಕಟಗೊಳ್ಳುವುದು ಈಗ ಎಗ್ಗಿಲ್ಲದೇ ನಡೆದಿದೆ. ಕನ್ನಡದ ಮಟ್ಟಿಗೆ ಯಾವುದೇ ದಿನದ ಯಾವುದೇ ಪತ್ರಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಕನಿಷ್ಠ ಒಂದು ಸುದ್ದಿಯನ್ನು ಗುರುತಿಸಲು ಇಂದು ಸಾಧ್ಯವಿದೆ.

ಸೋಷಿಯಲ್ ಮೀಡಿಯಾ ಟಾಪ್‍ಅಪ್

ಮೀಡಿಯಾ ಬಂದ ಆರಂಭದಲ್ಲಿ ಅದನ್ನು ಸಮಾನಾವಕಾಶಗಳನ್ನು ಒದಗಿಸುವ ಟೂಲ್ ಎಂದು ಪರಿಗಣಿಸಲಾಗಿತ್ತು. ಆದರೆ, ಅದು ಮೈಕ್ರೊಬ್ಲಾಗಿಂಗ್ ಬದಲು ಮ್ಯಾಕ್ರೊಫ್ಲಾಗಿಂಗ್ ಆರಂಭಿಸಿತು. ನವ ರಾಜಕಾರಣದ ತಂತ್ರಗಾರಿಕೆಯು ಕುತಂತ್ರಗಾರಿಕೆ ಆಗಿ ಬದಲಾಗುವಲ್ಲಿ ಸೋಷಿಯಲ್ ಮೀಡಿಯಾಗಳ ಕೊಡುಗೆ ಅಪಾರ.

ಕಲುಷಿತ ಸುದ್ದಿಯ ‘ಮಡ್ಡಿ’ ರೂಪ ಪ್ರಕಟಗೊಳ್ಳುವುದು ಸೋಷಿಯಲ್ ಮೀಡಿಯಾಗಳಲ್ಲಿ. ವಾಟ್ಸಾಪ್‍ನಂತಹ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕಬಲ್ಲ ‘ಎಂಡೆ-ಪ್ಯಾಂಡಮಿಕ್ (ಅರ್ಥಾತ್ ಎಂಡೆಮಿಕಲಿ ಪ್ಯಾಂಡಮಿಕ್)’ ಕ್ರಿಮಿನಲ್ ಮೀಡಿಯಾಗಳು ರಿಯಲ್‍ಟೈಮ್‍ನಲ್ಲೇ ಅದರ ಓದುಗರನ್ನು ತಲುಪಿ, ಅದಾಗಿ ಕೆಲವು ಗಂಟೆಗಳ ಬಳಿಕ ಟೆಲಿವಿಷನ್ ಚಾನೆಲ್ ಅಥವಾ ಮರುದಿನ ಪ್ರಿಂಟ್ ಮೀಡಿಯಾ ಮೂಲಕ ಅದೇ ಕಲುಷಿತ ಸುದ್ದಿ ತಲುಪಿದಾಗ, ಸಹಜವಾಗಿಯೇ ಓದುಗರು ಹಲವು ಮೂಲಗಳಿಂದ ದೊರೆತಿರುವ ಸುದ್ದಿ ನಿಜವಿರಬಹುದೆಂಬ ಅಭಿಪ್ರಾಯ ತಳೆಯುತ್ತಾರೆ. ಇದು ಇಂದು ಆಟದ ನಿಯಮವಾಗಿಬಿಟ್ಟಿದೆ. ಮೊದಲಿಗೇ ವಿಷಕಾರಿ ಸುಳ್ಳು (ಸೋಷಿಯಲ್ ಮೀಡಿಯಾ), ಬಳಿಕ ಅಬ್ಬರದ ಸುಳ್ಳು (ಟೆಲಿವಿಷನ್) ಮತ್ತು ಕೊನೆಗೆ ಸತ್ಯದಂಚಿನ ಸುಳ್ಳು (ಮುದ್ರಿತ ಮಾಧ್ಯಮ) ಸಿಗುವ ಕ್ರೊನಾಲಜಿ ಈವತ್ತು ಓದುಗರಿಗೆ ಸುದ್ದಿಯನ್ನು ಅರ್ಥೈಸಿಕೊಳ್ಳುವ ಕ್ರೊನಾಲಜಿಯೂ ಆಗಿಬಿಟ್ಟಿರುವುದು ನಮ್ಮ ಕಾಲದ ದುರಂತ.

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ. ಈ ನಾನ್‍ಸ್ಟಾಪ್ ಕಾರ್ಪೆಟ್ ಬಾಂಬಿಂಗ್ ಇವತ್ತಿನ ವಿಷ ಸನ್ನಿವೇಶಕ್ಕೆ ಮೂಲ ಕಾರಣ. ಇದಕ್ಕೆ ವಿಷಹರ ಚಿಕಿತ್ಸೆ ಎಂದರೆ ಒಂದಿಷ್ಟು ಕಾಲ ಅವುಗಳಿಂದ ದೂರ ಉಳಿದುಬಿಡುವುದು. ನಿರಂತರ ಸುದ್ದಿಯನ್ನು ಕಳೆದುಕೊಂಡರೆ ಬದುಕಿನಲ್ಲಿ ಕಳೆದುಕೊಳ್ಳುವಂತಹದೇನೂ ಇಲ್ಲ ಎಂಬ ಸತ್ಯದ ಅರಿವು ಮೂಡಿಸಿಕೊಳ್ಳುವುದು.

(ಲೇಖಕರು ಮಾಜೀ ಪತ್ರಕರ್ತರು ಮತ್ತು ಹಾಲೀ ಭಾಷೋದ್ಯಮಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Rajaram talureravarige shubharathri nimmaa mahiti nodi bahala anubhava ayitu hagu egina midiyagalu odugara mattu nodugarannu mosa hagu dikku tappisutive sarvajanikaru echhara vagabeku idu nanna manavi

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...