ಬೆವರು ಹಾಗೂ ರಕ್ತ ಹರಿಸಿ ನಾಡು ಕಟ್ಟಿರುವ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ತನ್ನ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಬಿಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
“ರಾಜ್ಯದಲ್ಲಿ ಲಕ್ಷಾಂತರ ಸ೦ಖ್ಯೆಯಲ್ಲಿರುವ ವಲಸಿಗ ಕಾರ್ಮಿಕರು ಸ್ವ೦ತ ಊರುಗಳಿಗೆ ಹೋಗಲು ಪರದಾಡುತ್ತಿರುವ ದೃಶ್ಯವನ್ನು ನಿತ್ಯ ನೋಡುತ್ತಿದ್ದೇವೆ. ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಕಾರ್ಮಿಕರೂ ಇಲ್ಲಿಗೆ ಬರಲು ಕಷ್ಟಪಡುತ್ತಿದ್ದಾರೆ. ಸ್ವಂತ ಊರುಗಳನ್ನು ತಲುಪಲು ಸರ್ಕಾರ ಎಲ್ಲ ಕಾರ್ಮಿಕರಿಗೆ ಕೂಡಲೇ ವ್ಯವಸ್ಥೆ ಮಾಡಬೇಕು” ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರದಲ್ಲಿ, ಬೆ೦ಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಲಾಕ್ಡೌನ್ ಜಾರಿಯಾದ ಬಳಿಕ ತಮ್ಮ ಊರುಗಳಿಗೆ ಹೋಗಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಅವರನ್ನು ಮಾನವೀಯವಾಗಿ ನಡೆಸಿಕೊಳ್ಳುತ್ತಿಲ್ಲ ಎಂದಿರುವ ಅವರು, “ಊರುಗಳಿಗೆ ಹೋಗಲು ಆಗದೆ, ಅನ್ನ, ಆಹಾರ ಇಲ್ಲದೆ ಅವರು ಹೆಣಗಾಡುತ್ತಾ, ನಡೆದು ಹೋಗುವ ಮಾರ್ಗದಲ್ಲಿ ನಡೆದು ಸುಸ್ತಾಗಿ ರೈಲು ಹಳಿಗಳ ಮೇಲೆ ಮಲಗಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವೆಡೆ ಹಸಿವಿನಿ೦ದ ಸತ್ತಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ” ಎಂದು ಹೇಳಿದ್ದಾರೆ.
ಸಿದ್ದಾರಾಮಯ್ಯ ಪತ್ರದಲ್ಲಿ “ಇಷ್ಟೆಲ್ಲವಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನಸ್ಸು ಕರಗಿದ೦ತೆ ಕಾಣುತ್ತಿಲ್ಲ. ಕೂಡಲೇ ರಾಜ್ಯದಲ್ಲಿರುವ, ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಡಲು ಹಾಗೂ ಹೊರ ರಾಜ್ಯಗಳಲ್ಲಿರುವವರನ್ನು ಇಲ್ಲಿಗೆ ಕರೆತರಲು ರೈಲು ವ್ಯವಸ್ಥೆ ಮಾಡಬೇಕು. ಪ್ರಯಾಣ ವೆಚ್ಚದಲ್ಲಿ ಶೇ. 85 ರಷ್ಟನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವ ಮೂಲಕ ಕಾರ್ಮಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು.” ಎಂದು ಆಗ್ರಹಿಸಿದ್ದಾರೆ.
“ಬೆಂಗಳೂರಿನಿಂದ ಹೋಗುವ ಕಾರ್ಮಿಕರಿಗೆ ಅಕ್ಕಪಕ್ಕದ ಜಿಲ್ಲೆಗಳ ರೈಲ್ವೆ ನಿಲ್ದಾಣಕ್ಕೆ ಹೋಗುವಂತೆ ಸೂಚಿಸಲಾಗುತ್ತಿದೆ. ಆದರೆ ಅಲ್ಲಿಗೆ ಹೋಗಲು ಯಾವುದೇ ಸೌಕರ್ಯ ಇಲ್ಲದ ಕಾರಣ ಅವರಿಗೆ ಬಸ್ ವ್ಯವಸ್ಥೆ ಮಾಡಬೇಕು. ಕಾರ್ಮಿಕರು ಸುರಕ್ಷಿತವಾಗಿ ಊರು ತಲುಪುವವರೆಗೆ ಊಟದ ಸೌಲಭ್ಯವನ್ನು ಒದಗಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ರಾಜ್ಯದಿ೦ದ ಹೊರ ಹೋಗುವವರಿಗೆ ಮತ್ತು ಒಳಗೆ ಬರುವವರಿಗೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಿಸಲಿ. ಕಾರ್ಮಿಕರನ್ನು ಸೇವಾಸಿಂಧುಗೆ ಎನ್ರೋಲ್ ಮಾಡಿಸಲು ಪಾಲಿಕೆಯ ವಾರ್ಡ್ ಕಚೇರಿ, ಪೊಲೀಸ್ ಠಾಣೆಗಳಲ್ಲಿ ಕೌಂಟರ್ಗಳನ್ನು ತೆರೆಯಲಿ. ಯಾವ ರಾಜ್ಯಕ್ಕೆ ಹೋಗಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆಯಾಗಲಿ” ಎಂದು ಹೇಳಿದ್ದಾರೆ.
“ಈ ಎಲ್ಲವನ್ನೂ ಸಾಧ್ಯವಾಗಿಸಲು ಉಸ್ತುವಾರಿಗಳು, ಯಂತ್ರಾ೦ಗ ಮತ್ತು ಮಾರ್ಗಸೂಚಿಯನ್ನು ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಬೇಕು. ಇನ್ನು ಮುಂದೆ ಒಬ್ಬ ಕಾರ್ಮಿಕನೂ ಸಾವು ನೋವಿಗೆ ತುತ್ತಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಬೆವರು, ರಕ್ತ ಹರಿಸಿ ನಾಡು ಕಟ್ಟಿರುವ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ತನ್ನ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಬಿಡಬೇಕು. ಪರಿಸ್ಥಿತಿಯನ್ನು ಎಚ್ಚರಿಕೆ ಹಾಗೂ ಮಾನವೀಯತೆಯಿಂದ ನಿಭಾಯಿಸಬೇಕು” ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಉಪವಾಸ ಧರಣಿ ಆರಂಭಿಸಿದ ಕರ್ನಾಟಕದ ವಲಸೆ ಕಾರ್ಮಿಕರು
ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ



ಕಾರ್ಮಿಕರ ಬಗ್ಗೆ ಸಿದ್ದರಾಮಯ್ಯನವರಿಗೆ ಇರುವಶ್ಟು ಕಾಳಜಿ ಆಡಳಿತಾರೂಢರಿಗೆ ಇಲ್ಲ. ಇದು ನಮ್ಮ ದುರಂತ.