ಕೇರಳ ಗರ್ಭಿಣಿ ಆನೆ ಹತ್ಯೆ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಕ್ಕಾಗಿ ’ನ್ಯೂಸ್ ನೇಷನ್’ನ ಸಲಹಾ ಸಂಪಾದಕ ದೀಪಕ್ ಚೌರಸಿಯಾ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಡಾ.ಫರುಖ್ ಖಾನ್ ಎಂಬುವವರು ಲೀಗಲ್ ನೋಟಿಸ್ ನೀಡಿದ್ದು, ಚೌರಾಸಿಯ ಅವರ ಈ ಕೃತ್ಯವು ಉದ್ದೇಶಪೂರ್ವಕವಾಗಿದ್ದು ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಭಾವನೆ ಮೂಡಿಸುವ ಪಿತೂರಿಯಾಗಿದೆ ಎಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ.
“ಕೇರಳದ ಗರ್ಭಿಣಿ ಆನೆಯ ಕೊಲೆ ಪ್ರಕರಣದಲ್ಲಿ ಅಮ್ಜತ್ ಅಲಿ ಮತ್ತು ತಮೀಮ್ ಸೈಖ್ ಎಂಬುವವರನ್ನು ಬಂಧಿಸಲಾಗಿದೆ. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.” ಎಂದು ದೀಪಕ್ ಚೌರಾಸಿಯ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಟ್ವಿಟ್ಟರ್ನಲ್ಲಿ 50 ಲಕ್ಷ ಫಾಲೋವರ್ಗಳನ್ನು ಹೊಂದಿರುವ ಅವರ ಈ ಟ್ವೀಟ್ ಅನ್ನು ಸಾವಿರಾರು ಸಂಖ್ಯೆಯಲ್ಲಿ ಜನ ಹಂಚಿಕೊಂಡಿದ್ದರು. ಕೆಲವು ಗಂಟೆಗಳ ಬಳಿಕ ಅವರು ಆ ಟ್ವೀಟ್ ಅನ್ನು ಅಳಿಸಿದ್ದಾರೆ.
ಈಗಾಗಲೇ ಮುಸ್ಲಿಂ ಸಮುದಾಯದ ಬಗ್ಗೆ ಕೆಟ್ಟ ಅಭಿಯಾನ ನಡೆಯುತ್ತಿರುವ ಸಂದರ್ಭದಲ್ಲಿ ಚೌರಾಸಿಯ ಅವರ ಈ ಟ್ವೀಟ್ ಹೇಗೆ ಕೋಮುಬಣ್ಣವನ್ನು ಪಡೆದುಕೊಂಡಿದೆ ಎಂದು ಡಾ.ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ “ಗರ್ಭಿಣಿ ಆನೆಯನ್ನು ಮುಸ್ಲಿಂಮರು ಹತ್ಯೆ ಮಾಡಿದ್ದಾರೆಂದು ಹಲವು ಜನ ನಂಬಿದ್ದಾರೆ. ಇದು ಇಡೀ ಮುಸ್ಲಿಂ ಸಮುದಾಯವನ್ನು ದ್ವೇಷಿಸಲು ಕಾರಣವಾಗುತ್ತದೆ ಎಂದು ಡಾ.ಖಾನ್ ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ.
ದೀಪಕ್ ಚೌರಾಸಿಯಾ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಡಾ.ಖಾನ್ ಆರೋಪಿಸಿದ್ದಾರೆ. ಅವರು ಮುಸ್ಲಿಂ ಸಮುದಾಯವನ್ನು ಕೆಣಕಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಅವರ ಹಲವಾರು ಟ್ವೀಟ್ಗಳು ಈ ದೇಶದ ಎಲ್ಲಾ ಸಮಸ್ಯೆಗಳಿಗೂ ಮುಸ್ಲಿಂಮರೆ ಕಾರಣ ಎಂದು ಬಿಂಬಿಸುತ್ತವೆ ಎಂದು ಆರೋಪಿಸಿದ್ದಾರೆ.
ಕೇರಳದಲ್ಲಿ ಗರ್ಭಿಣಿ ಆನೆಯ ಸಾವಿಗೆ ಸಂಬಂಧಿಸಿದಂತೆ ವಿಲ್ಸನ್ ಎಂದು ಗುರುತಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ಜೂನ್ 5 ಶುಕ್ರವಾರದಂದು ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್ ಹೊರತುಪಡಿಸಿ, ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ ಅಥವಾ ಬಂಧಿಸಲಾಗಿಲ್ಲ ಎಂದು ಪಾಲಕ್ಕಾಡ್ ಎಸ್ಪಿ ಜಿ ಶಿವ ವಿಕ್ರಮ್ ಹೇಳಿದ್ದಾರೆ. ಮೊಹಮ್ಮದ್ ಅಮ್ಜತ್ ಅಲಿ ಮತ್ತು ತಮೀಮ್ ಶೇಖ್ ಎಂಬ ಇಬ್ಬರು ವ್ಯಕ್ತಿಗಳ ಬಂಧನದ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಪ್ರತಿಕ್ರಿಯಿಸಿದ ವಿಕ್ರಮ್ ಇದನ್ನು “ನಕಲಿ ಸುದ್ದಿ” ಎಂದು ಕರೆದಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಕೇರಳದಲ್ಲಿ ಗರ್ಭಿಣಿ ಆನೆ ಸಾವು – ಎಲ್ಲೆಡೆ ಹರಡಿದ ಎರಡು ದೊಡ್ಡ ಸುಳ್ಳುಗಳು