ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಕಳೆದ 12 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತರ ಬೇಡಿಕೆಗೆ ಸರ್ಕಾರ ತಕ್ಷಣವೇ ಸ್ಪಂದಿಸದಿದ್ದರೆ ಪ್ರತಿಭಟನಾಗಾರರ ಜೊತೆಗೂಡಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರನ್ನು ಇಂದು ಭೇಟಿ ಮಾಡಿದ ಶಿವಕುಮಾರ್ ಅವರೊಂದಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಇದ್ದರು. ಈ ವೇಳೆ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಹನ್ನೆರಡು ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದರೂ ಸರಕಾರದ ಯಾರೊಬ್ಬರೂ ಅವರ ಅಹವಾಲು ಆಲಿಸಿಲ್ಲ. ಸರಕಾರ ಈಗಲೂ ಸ್ಪಂದಿಸದಿದ್ದರೆ ಕಾಂಗ್ರೆಸ್ ಪರವಾಗಿ ನಾನು ಅವರ ಬೆಂಬಲಕ್ಕೆ ನಿಂತು ಬೆಂಗಳೂರು ಚಲೋ ಚಳವಳಿ ಮಾಡಿ, ಸಿಎಂ ಮನೆಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ.
“ಕೋವಿಡ್ ಸಂದರ್ಭದಲ್ಲಿ ಈ ಹೆಣ್ಣು ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು, ಎರಡೆರಡು ಬಾರಿ ಪ್ರತಿ ಮನೆಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದಾರೆ.
ಇವರು ಕೂಡ ನಿಮ್ಮ ಅಕ್ಕ- ತಂಗಿಯರು ಮುಖ್ಯಮಂತ್ರಿಗಳೇ. ಕೂಡಲೇ ನಿಮ್ಮ ಸಚಿವರನ್ನು ಕರೆದು ಚರ್ಚಿಸಿ ಇವರ ಬೇಡಿಕೆ ಈಡೇರಿಸಿ” ಎಂದು ಅವರು ಹೇಳಿದರು.
ಕಳೆದ 12 ವರ್ಷಗಳಿಂದ ಇವರು ದುಡಿಯುತ್ತಿದ್ದು, ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸೇರಿ 6 ಸಾವಿರ ರುಪಾಯಿ ಗೌರವಧನ ನಿಗದಿ ಮಾಡಿವೆ. ಎರಡೂ ಸರಕಾರಗಳು ಸೇರಿ ಒಟ್ಟಿಗೆ 12 ಸಾವಿರ ರುಪಾಯಿ ವೇತನ ಕೊಡಬೇಕು ಎಂದು ಇವರು ಕೇಳುತ್ತಿದ್ದಾರೆ. ಇವರು ಕೇಳುತ್ತಿರುವುದು ನ್ಯಾಯಸಮ್ಮತವಾಗಿದೆ ಎಂದರು.
ಓದಿ: ಕೊರೊನಾದಿಂದ ದೇವರೆ ಕಾಪಾಡುವುದಾದರೆ ನೀವು ಯಾಕೆ ? ರಾಜಿನಾಮೆ ಕೊಟ್ಟು ಹೋಗಿ: ಡಿ. ಕೆ. ಶಿವಕುಮಾರ್


