Homeಕರ್ನಾಟಕಮುಗಿಯಿತೆ ಬಿಎಸ್‌ವೈ ಅವಧಿ?: ಹೊಸ ಸಿಎಂ ಎಂಬುದು ಎಷ್ಟು ನಿಜ?

ಮುಗಿಯಿತೆ ಬಿಎಸ್‌ವೈ ಅವಧಿ?: ಹೊಸ ಸಿಎಂ ಎಂಬುದು ಎಷ್ಟು ನಿಜ?

ಯಡಿಯೂರಪ್ಪನವರ ಅವಧಿ ಮುಗಿದಿದೆ; ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ನನ್ನನ್ನು ಬೆಂಬಲಿಸಬೇಕು. ಒಂದು ವೇಳೆ ಲಿಂಗಾಯಿತರೇ ಆಗಬೇಕೆಂದಾದರೆ ನೀವು ಶೆಟ್ಟರ್‌ರನ್ನು ಬೆಂಬಲಿಸಬೇಕು ಎಂದು ಜೋಷಿ ಮನವಿ ಮಾಡಿದರೆಂದು ಹೇಳಲಾಗುತ್ತಿದೆ.

- Advertisement -
- Advertisement -

ಶನಿವಾರ ಸಂಜೆಯಿಂದ ಸೋಮವಾರದ ಬೆಳಗಿನವರೆಗೆ ಬಿಜೆಪಿಯ ಉನ್ನತ ವಲಯಗಳಲ್ಲಿ ನಡೆದ ಬೆಳವಣಿಗೆಗಳು ಯಡಿಯೂರಪ್ಪನವರ ಅವಧಿ ಮುಗಿದುಹೋಯಿತು ಎಂಬ ವದಂತಿ-ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಸದ್ಯಕ್ಕೆ ಅಂತಹ ನಾಟಕೀಯ ಬದಲಾವಣೆಗಳೇನೂ ಸಂಭವಿಸಿಲ್ಲವಾದರೂ, ಬಿಜೆಪಿಯ ಪಡಸಾಲೆಗಳಲ್ಲಿ ನಡೆಯುತ್ತಿರುವ ಚರ್ಚೆಗಳಂತೂ ಇಳಿದಿಲ್ಲ.

ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಆಗೊಮ್ಮೆ, ಈಗೊಮ್ಮೆ ಸರ್ಕಾರ ಬಿತ್ತು ಎಂಬ ಸುದ್ದಿ ಮಾಡುವುದು ಟಿವಿ ಚಾನೆಲ್‌ಗಳಿಗೆ ಖಯಾಲಿಯಾಗಿತ್ತು. ಹೈಕಮ್ಯಾಂಡ್ ಬದಲಿ-ಸಿಎಂ ಆಯ್ಕೆಗೆ ಮುಂದಾಗಿದೆ ಎಂಬ ಸ್ಟೋರಿಗಳು ಆಗಾಗ್ಗೆ ಬಿತ್ತರವಾಗುತ್ತಿದ್ದವು. ಅಂತಿಮವಾಗಿ ಸಿದ್ದರಾಮಯ್ಯನವರು 5 ವರ್ಷ ಯಶಸ್ವಿಯಾಗಿ ಮುಗಿಸಿದರಷ್ಟೇ ಅಲ್ಲದೇ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬಂದಿದ್ದರೆ ಅವರೇ ನಂತರದ ಸಿಎಂ ಸಹಾ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೂ ಪದೇ ಪದೇ ಅಂತಹ ಸುದ್ದಿ ಬರುತ್ತಿರಲು ಕಾರಣವೇನೆಂದರೆ, ಚಾನೆಲ್‌ಗಳಲ್ಲಿ ಕುಳಿತವರಿಗೆ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯುವುದು ಇಷ್ಟವಿಲ್ಲದಿದ್ದುದೇ ಆಗಿತ್ತು.

ಈಗ ಅಂತಹದ್ದೇನಿದೆ? ಬಿಎಸ್‌ವೈ ಮುಂದುವರೆಯುವುದು ಬಿಜೆಪಿಯೊಳಗೇ ಇಷ್ಟವಿಲ್ಲವಾ? ಬಿಜೆಪಿಯೊಳಗೆ ಎಲ್ಲವೂ ಸರಿಯಿರುವುದು ಇಷ್ಟವಿಲ್ಲದವರು ಬಿಎಸ್‌ವೈ ಅತಂತ್ರ ಎಂಬ ಸುದ್ದಿಯನ್ನು ಹುಟ್ಟಿಸುತ್ತಿದ್ದಾರಾ? ಯಾವ ಪೂರ್ವನಿರ್ಧಾರಿತ ಅಭಿಪ್ರಾಯ/ಮನೋಬಯಕೆಗೆ ಒಳಗಾಗದೇ ನಡೆದ ಸಂಗತಿಗಳನ್ನು ಯಥಾವತ್ತಾಗಿ ಮುಂದಿಟ್ಟು ತಾರ್ಕಿಕ ವಿಶ್ಲೇಷಣೆಯನ್ನು ಮಾಡುವುದು ಮಾತ್ರ ಈ ವರದಿಯ ಉದ್ದೇಶವಾಗಿದೆ.

ಮೊದಲಿಗೆ ಶನಿವಾರದಿಂದ ಮಂಗಳವಾರ ಬೆಳಿಗ್ಗೆಯವರೆಗೆ ನಡೆದ ಬೆಳವಣಿಗೆಗಳ ಯಾದಿ ನೋಡಬೇಕು. ಶನಿವಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ರಾಜ್ಯಪಾಲರನ್ನು ಭೇಟಿಯಾದರು. ನಿರ್ದಿಷ್ಟವಾದ ಬುಲಾವ್ ಇಲ್ಲದೇ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಉಳಿದ ಮಂತ್ರಿಗಳು ರಾಜ್ಯಪಾಲರನ್ನು ಭೇಟಿಯಾಗುವುದು ಮುಖ್ಯಮಂತ್ರಿಗಳೇ ಕಳಿಸಿದಾಗ ಮಾತ್ರ. ಬಿಎಸ್‌ವೈ ಅಂತೂ ಸವದಿಯವರನ್ನು ಕಳಿಸಲು ಕಾರಣವೇನೂ ಇದ್ದಂತಿಲ್ಲ.

ಆ ನಂತರ ವಿಸ್ತಾರಾ ವಿಮಾನದಲ್ಲಿ ಸವದಿಯವರು ಸೀದಾ ದೆಹಲಿಗೆ ಹೋದರು. ಹೋದವರು ಯಾರಾದರೂ ಬಿಜೆಪಿ ನಾಯಕರನ್ನು ಭೇಟಿಯಾಗಿ ವಾಪಸ್ ಬಂದಿದ್ದರೂ ಸ್ವಲ್ಪ ಗುಲ್ಲು ಏಳುತ್ತಿತ್ತು. ಆದರೆ ಇನ್ನೂ ಹೆಚ್ಚಿನ ಗುಲ್ಲಿಗೆ ಕಾರಣವಾಗಿದ್ದು ಅವರು ಕೇಂದ್ರ ಮಂತ್ರಿ ಜಾವಡೇಕರ್‌ರನ್ನು ಭೇಟಿಯಾಗಿ ಅಧಿಕೃತವಾದ ಮನವಿ ಪತ್ರ ಕೊಟ್ಟರು ಎಂದಾಗ. ಏಕೆಂದರೆ ಉಪಮುಖ್ಯಮಂತ್ರಿ ಸವದಿಯವರ ಜೊತೆಗೆ ಅವರ ಇಲಾಖೆಯ ಕಾರ್ಯದರ್ಶಿ ಅಥವಾ ಆಪ್ತ ಕಾರ್ಯದರ್ಶಿ ಹೋಗಲಿ, ಪಿಎ ಸಹಾ ಹೋಗಿರಲಿಲ್ಲ. ಯಾವ ಅಧಿಕೃತ ಭೇಟಿಯೂ ಹಾಗೆ ನಡೆಯುವುದಿಲ್ಲ. ಅಲ್ಲಿಂದಾಚೆಗೆ ಸವದಿಯವರು ಯಾರನ್ನು ಭೇಟಿಯಾದರು? ಇಷ್ಟು ಕಾಲ ಅಲ್ಲೇ ಏಕೆ ಉಳಿದರು ಎನ್ನುವುದಕ್ಕೆ ನಂಬುವಂತಹ ಅಧಿಕೃತ ಕಾರಣಗಳಿಲ್ಲ. ಆದರೆ ಸವದಿಯವರು ಈ ಪ್ರಯಾಣ ಬೆಳೆಸಿದ್ದು ನಂತರ ಎಲ್ಲರ ಗಮನಕ್ಕೆ ಬಂದಿದೆ.

ಇದು ನಡೆಯುತ್ತಿದ್ದ ಹೊತ್ತಿಗೇ ವಿವಿಧ ಶಾಸಕರ ಮೊಬೈಲ್‌ಗಳಿಗೆ ಪ್ರಹ್ಲಾದ್‌ಜೋಷಿಯವರ ಫೋನ್ ಕರೆಗಳು ಹೋದವೆಂಬ ಸುದ್ದಿ ಕೆಲವರಿಗೆ ಮಾತ್ರ ಗೊತ್ತಾಯಿತು. ಸರಿಯಾಗಿ ಎಷ್ಟು ಜನರಿಗೆ ಕಾಲ್ ಮಾಡಿದರು ಎಂಬ ಕುರಿತು ಕರಾರುವಾಕ್ಕಾದ ಸಂಖ್ಯೆ ಹೇಳಲಾಗುತ್ತದೆಯಾದರೂ, ಅದಕ್ಕಿಂತ ಸ್ವಾರಸ್ಯಕರವಾದದ್ದು ಏನು ಹೇಳಿದರು ಎಂಬುದಾಗಿದೆ. ಯಡಿಯೂರಪ್ಪನವರ ಅವಧಿ ಮುಗಿದಿದೆ; ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ನನ್ನನ್ನು ಬೆಂಬಲಿಸಬೇಕು. ಒಂದು ವೇಳೆ ಲಿಂಗಾಯಿತರೇ ಆಗಬೇಕೆಂದಾದರೆ ನೀವು ಶೆಟ್ಟರ್‌ರನ್ನು ಬೆಂಬಲಿಸಬೇಕು ಎಂದು ಜೋಷಿ ಮನವಿ ಮಾಡಿದರೆಂದೂ, ಹಾಗೆ ನಡೆದ ಫೋನ್ ಸಂಭಾಷಣೆಗಳಲ್ಲಿ ಕೆಲವದ್ದರಲ್ಲಿ ಶೆಟ್ಟರ್ ಸಹಾ ಪಾಲ್ಗೊಂಡಿದ್ದರೆಂದು ಹೇಳಲಾಗುತ್ತಿದೆ.

ಪ್ರಹ್ಲಾದ್ ಜೋಷಿ ಇನ್ನೂ ಮುಖ್ಯಮಂತ್ರಿಯಾಗದ, ಆದರೆ ಆ ಮಹತ್ವಾಕಾಂಕ್ಷೆ ಹೊಂದಿರುವ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಲ್ಲೊಬ್ಬರು. ಅದರಲ್ಲೂ ಈಗಿನ ಕೇಂದ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಮಹತ್ವದ ಖಾತೆಯನ್ನು ಹೊಂದಿದ್ದು ಮೋದಿ-ಅಮಿತ್‌ಶಾ ಜೊತೆಯಲ್ಲಿ ನಿರಂತರ ಸಾಮೀಪ್ಯ ಹೊಂದಿರುವವರಾಗಿದ್ದಾರೆ. ಜೊತೆಗೆ ಅವರಲ್ಲಿ ಇನ್ನೂ ಕೆಲವು ಅರ್ಹತೆಗಳೂ ಇವೆ. ಅದು ಜಾತಿ; ಜನನಾಯಕನಲ್ಲದೇ ಇರುವುದು ಮತ್ತು ಆ ಕಾರಣದಿಂದ ಬೆನ್ನು ಮೂಳೆಯೂ ಇಲ್ಲದಿರುವುದು. ಸದ್ಯಕ್ಕೆ ದೊಡ್ಡ ಸಂಖ್ಯೆಯಲ್ಲಿಲ್ಲದ ಆದರೆ ಮೇಲ್ಜಾತಿಯವನಾಗಿರುವುದು ಹಾಗೂ ಜನನಾಯಕನಲ್ಲದೇ ಇರುವುದು ಬಿಜೆಪಿಯಲ್ಲಿ ಸಿಎಂ ಆಗಲು ಇರುವ ದೊಡ್ಡ ಅರ್ಹತೆಯಾಗಿದೆ. ಹಾಗಾಗಿ ಪ್ರಹ್ಲಾದ್ ಜೋಷಿ ರೇಸ್‌ನಲ್ಲಿರುವುದು ಸಾಧ್ಯ.

ಮೇಲಿನ – ಫೋನ್ ಕರೆಗಳ ವರ್ತಮಾನವನ್ನು ಯಾರೆಷ್ಟೇ ಖಚಿತವಾಗಿ ಹೇಳಿದ್ದರೂ ನಂಬುವುದು ಕಷ್ಟವೇ. ಆದರೆ, ಇರಬಹುದು ಎನ್ನಿಸಿದ್ದು ಯಡಿಯೂರಪ್ಪನವರು ಸೋಮವಾರ ಇದ್ದಕ್ಕಿದ್ದಂತೆ 24 ಜನ ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರೆಂದು ಘೋಷಿಸಿದಾಗ. ಅದೂ ಸಹಾ ಎಷ್ಟು ದಿಢೀರ್ ಆಗಿ ನಡೆಯಿತೆಂದರೆ, ಸ್ವತಃ ಮುಖ್ಯಮಂತ್ರಿಯವರು ಅದರಲ್ಲಿ ನಾಲ್ಕು ಹೆಸರುಗಳನ್ನು ಅದೇ ದಿನ ಹಿಂಪಡೆದರು. ಇನ್ನೂ ಕೆಲವರು ಈ ನೇಮಕಾತಿಯನ್ನು ತಾವು ಒಪ್ಪಿಲ್ಲವೆಂದು ಹೇಳಿದರೆ; ಮತ್ತೂ ಕೆಲವರು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ತಿಳಿಸುವುದಾಗಿ ಹೇಳುತ್ತಿದ್ದಾರೆ.

ಇದರ ಅರ್ಥ ಇಷ್ಟೇ. ಈ ನೇಮಕಾತಿಗಳಲ್ಲಿ ಯಾವೊಂದನ್ನೂ ಬಿಎಸ್‌ವೈ ಸದರಿ ಶಾಸಕರ ಜೊತೆಗೇ ಚರ್ಚಿಸಿಲ್ಲ. ಅಷ್ಟೇ ಅಲ್ಲದೇ ಸ್ವತಃ ಬಿಜೆಪಿಯ ಹೈಕಮ್ಯಾಂಡ್ ಜೊತೆಗೂ ಚರ್ಚಿಸಿಲ್ಲ. ಈ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಆಪರೇಷನ್ ಕಮಲದಲ್ಲಿ ಈ ಕಡೆಗೆ ಬಂದು ಈಗ ಎಂಎಲ್‌ಸಿಗಳಾಗಿರುವವರ ಹೆಸರುಗಳೂ ಇಲ್ಲ. ಅಂದರೆ, ಸಚಿವ ಸಂಪುಟ ವಿಸ್ತರಣೆಯ ಕುರಿತೂ ಬಿಎಸ್‌ವೈ ಸೂಚನೆ ಕೊಟ್ಟಿದ್ದಾರೆ. ಇವೆರಡು ಸೂಚನೆಗಳನ್ನು ಯಾರಿಗೆ, ಏಕೆ ಕೊಟ್ಟಿದ್ದಾರೆ? ನೀವು ಏನೋ ಮಾಡಲು ಹೋದರೆ, ತಾನು ಇನ್ನೇನೋ ಮಾಡುತ್ತೇನೆ ಎಂಬುದಾ ಆ ಸೂಚನೆ? ಹಾಗಿದ್ದರೆ ಆ ಸೂಚನೆ ಹೈಕಮ್ಯಾಂಡಿಗೇ ಆಗಿದೆ. ಜೊತೆಗೆ ನಿಮ್ಮನ್ನು ನಾನೀಗ ಮಂತ್ರಿ ಮಾಡುವ ಸ್ಥಿತಿಯಲ್ಲಿಲ್ಲ; ಹಾಗಾಗಿ ನಿಗಮ-ಮಂಡಳಿಗಳನ್ನು ಒಪ್ಪಿಕೊಳ್ಳಿ ಎಂದು ತನಗೆ ನಿಷ್ಠರಾಗಿರುವ ಶಾಸಕರಿಗೆ ಹೇಳುತ್ತಿದ್ದಂತಿದೆ.

ಈ ಕಡೆಯ ವಿದ್ಯಮಾನದ ರೀತಿ ಮತ್ತು ನೀತಿಗಳು ಶನಿವಾರದ ಹಾಗೂ ಭಾನುವಾರದ ಸವದಿ ಮತ್ತು ಪ್ರಹ್ಲಾದ್ ಜೋಷಿ ಬೆಳವಣಿಗೆಗಳು ನಡೆದಿರಬಹುದಾದ ಸಾಧ್ಯತೆಗಳನ್ನು ಖಚಿತಪಡಿಸುತ್ತಿವೆ. ಶಾಸಕನೂ ಆಗಿರದ ತನ್ನನ್ನು ಉಪಮುಖ್ಯಮಂತ್ರಿ ಮಾಡಿದ ಬಿ.ಎಲ್.ಸಂತೋಷ್‌ರ ಸೂಚನೆ ಇಲ್ಲದೇ ಲಕ್ಷ್ಮಣ ಸವದಿಯವರು ದೆಹಲಿಯತನಕ ಹೋಗಿರಲಾರರು ಮತ್ತು ಪಕ್ಷ ಹಾಗೂ ಸಂಘನಿಷ್ಠರಾದ ಪ್ರಹ್ಲಾದ್ ಜೋಷಿಯವರೂ ಅಂತಹ ಸಾಧ್ಯತೆಯಿಲ್ಲದೇ ಫೋನ್ ಮಾಡಿರಲಾರರು.

ಇವುಗಳ ಸಾರಾಂಶ, ಈ ವಾರದಲ್ಲಿ ಯಡಿಯೂರಪ್ಪನವರು ಬದಲಾಗುತ್ತಾರೆಂದಲ್ಲವೇ ಅಲ್ಲ. ಯಾರನ್ನು ಬೇಕಾದರೂ ಸಿಎಂ ಸ್ಥಾನದಲ್ಲಿ ಕೂರಿಸಬಹುದಾದ ಪ್ರಮಾಣದ ಬಹುಮತ ಕರ್ನಾಟಕದಲ್ಲಿ ಇಲ್ಲವೆಂಬುದಷ್ಟೇ ಹೈಕಮ್ಯಾಂಡ್‌ನ ಸಮಸ್ಯೆಯಲ್ಲ; ಯಡಿಯೂರಪ್ಪನವರನ್ನೂ ಒಪ್ಪಿಸದೇ ಅಂತಹ ಬದಲಾವಣೆಯು ಸಾಧ್ಯವಿಲ್ಲ. ಅದನ್ನು ಬಿಟ್ಟರೆ ಬಿಎಸ್‌ವೈ ಮತ್ತು ಪುತ್ರನನ್ನು ಕೇಸಿನಲ್ಲಿ ಸಿಕ್ಕಿಸಿ ಹೆದರಿಸುವ ಕೆಲಸ ಮಾಡಬೇಕು ಅಷ್ಟೇ. ಚೆಕ್‌ನಲ್ಲಿ ಲಂಚ ತೆಗೆದುಕೊಂಡು ಸಿಕ್ಕಿ ಹಾಕಿಕೊಂಡ ರೀತಿಯ ತಪ್ಪನ್ನು ಈ ಸಾರಿ ಬಿಎಸ್‌ವೈ ಕುಟುಂಬ ಮಾಡಲಾರದಾದರೂ, ಸಿಕ್ಕಿಸಿ ಹಾಕಲೇಬೇಕೆಂದರೆ ಏನೋ ಒಂದು ಸಿಗುತ್ತದೆ. ಆದರೆ ಅಂತಹ ನೈತಿಕ ಬ್ಲ್ಯಾಕ್‌ಮೇಲ್ ಮಾಡಿ, ಸಂಪೂರ್ಣ ಅನೈತಿಕ ಹಣದಿಂದಲೇ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಕ್ಕೆ ಬೇರೊಬ್ಬ ನಾಯಕನನ್ನು ತರಲು ಬಿಜೆಪಿ ಹೈಕಮ್ಯಾಂಡ್ ಪ್ರಯತ್ನಿಸುತ್ತದೆಯೇ? ಇದು ಅಷ್ಟು ಸುಲಭವಲ್ಲವಾದ್ದರಿಂದಲೇ ಯಡಿಯೂರಪ್ಪನವರು ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಹೈಕಮ್ಯಾಂಡ್ ಮರ್ಜಿ ಕಾಯದೇ 24 ನೇಮಕಗಳಿಗೆ ಮುಂದಾದರು. ಆ ಪಟ್ಟಿಯನ್ನು ಸೋಮವಾರ ರಾತ್ರಿ ತಯಾರಿಸಿದ್ದು ವಿಜಯೇಂದ್ರ ಜೊತೆ ಕೂತು ಎಂದೂ ಹೇಳಲಾಗುತ್ತಿದೆ.


ಇದನ್ನೂ ಓದಿ: ನಿಗಮ ಮಂಡಳಿಗಳ ಸ್ಥಾನ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ


ಬಿಜೆಪಿಯ ತ್ರೈಕಮ್ಯಾಂಡ್ ಮತ್ತು ಬಿಎಸ್‌ವೈ ನಡುವಿನ ಈ ಸ್ಟೇಲ್‌ಮೇಟ್ ಬಹಳ ದಿನಗಳಿಂದ ಇದೆ ಮತ್ತು ಇನ್ನೂ ಮುಂದುವರೆಯಲಿದೆ. ಯಾವಾಗ ಈ ಸ್ಟೇಲ್‌ಮೇಟ್ ಮುರಿಯುತ್ತದೆ, ಯಾರ ಕೈ ಮೇಲಾಗುವ ಮೂಲಕ ಮುರಿಯುತ್ತದೆ ಎನ್ನುವುದು ಬಹುಶಃ ಯಾರಿಗೂ ಗೊತ್ತಿಲ್ಲ. ಏಕೆಂದರೆ ಇದನ್ನು ಸುಲಭದಲ್ಲಿ ಮುರಿಯಲಾಗದ ಪರಿಸ್ಥಿತಿಯಲ್ಲಿ ಎರಡೂ ಬಣಗಳಿವೆ. ಹಾಗಾಗಿ ಆ ಕಾಲ ಬಂದಾಗಲೇ ಗೊತ್ತಾಗುತ್ತದೆಂದು ಭಾವಿಸಿ ಸುಮ್ಮನಿರುವುದೇ ಲೇಸು. ಆದರೂ ಸವದಿ, ಜೋಷಿಯಂತಹ ಬೆಳವಣಿಗೆಗಳು ನಡೆದಾಗ ವದಂತಿಗಳಿಗೆ ರೆಕ್ಕೆಪುಕ್ಕಗಳು ಬರುವುದನ್ನಂತೂ ತಡೆಯಲಾಗದು.

ಕಾಂಗ್ರೆಸ್‌ನಲ್ಲಾಗಲೇ ಶುರು ಒಳೇಟಿನ ಗುದ್ದು?

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಎಲ್ಲಿಲ್ಲದ ಒಗ್ಗಟ್ಟು ಮೇಲ್ನೋಟಕ್ಕೆ ಕಾಣುತ್ತಿದೆ. ಸಿದ್ದು ಮತ್ತು ಡಿಕೆಶಿ ಮಧ್ಯೆ ಏನೋ ಒಂದು ಅಂಡರ್‌ಸ್ಟಾಂಡಿಂಗ್ ಆಗಿದೆ ಎಂಬ ಗುಸುಗುಸು ಸಹಾ ಇದೆ. ಹಾಗಾಗಿಯೇ ಪತ್ರಿಕೆಯು ಇಬ್ಬರನ್ನೂ ನಡೆಸಿದ ಸಂದರ್ಶನದಲ್ಲಿ ಅದೇ ಪ್ರಶ್ನೆಯನ್ನು ಕೇಳಿತ್ತು. ಇಬ್ಬರ ಉತ್ತರವೂ ಶಾಸಕರು, ಹೈಕಮ್ಯಾಂಡ್ ತೀರ್ಮಾನಿಸುವ ವಿಷಯ ಅದು ಎಂಬುದೇ ಆಗಿದೆ. ಬಹುಶಃ ಈ ಸದ್ಯ ಬಿಜೆಪಿಯನ್ನು ಸೋಲಿಸುವುದಷ್ಟೇ ಗುರಿಯಾಗಿರುವಾಗ ಇನ್ನೂ ಪರಸ್ಪರ ಗುದ್ದಾಡುವ ಸಂದರ್ಭ ಬಂದಿಲ್ಲ ಎಂದೇ ಕಾಣುತ್ತಿತ್ತು.

ಆಯಾ ನಾಯಕರ ಮನದಿಂಗಿತ ಏನಿದೆಯೋ ಏನೋ ಗೊತ್ತಿಲ್ಲವಾದರೂ, ಅವರವರ ಹಿಂಬಾಲಕರುಗಳು ವಿರೋಧಿ ಬಣದ ಕಾಲೆಳೆಯಲು ಶುರು ಮಾಡಿರುವುದಂತೂ ವಾಸ್ತವ. ಡಿಕೆಶಿ ಬಣ ಎಂಬುದೊಂದರಲ್ಲಿ ಹಿರಿಯ ನಾಯಕರುಗಳು ಇಲ್ಲವಾದ್ದರಿಂದ, ಸಿದ್ದರಾಮಯ್ಯ ವಿರೋಧಿ ಬಣದ ದೊಡ್ಡ ನಾಯಕರುಗಳು ಅಂಥದ್ದೇನನ್ನೋ ಮಾಡಿರುವ ವರ್ತಮಾನವಿಲ್ಲ. ಡಿಕೆಶಿ ಹಿಂಬಾಲಕ ಕಿರಿ-ಮರಿ ನಾಯಕರುಗಳೂ ಸಹಾ ಹೇಗೋ ತಮ್ಮ ಬಾಸ್ ಸಿಎಂ ಆದರೆ ಸಾಕೆಂದು ಬೆವರು ಸುರಿಸುತ್ತಿದ್ದಾರೆ ಅಷ್ಟೇ. ಆದರೆ ಸಿದ್ದರಾಮಯ್ಯನವರ ಆಪ್ತರು ಎಂಬ ಹಣೆಪಟ್ಟಿ ಹೊತ್ತಿರುವ ಕೆಲವರು ಡಿಕೆಶಿಗೆ ಕಡಿವಾಣ ಹಾಕಬೇಕೆಂದು ಹೊರಟಿರುವ ವರ್ತಮಾನಗಳು ಒಂದಕ್ಕಿಂತ ಹೆಚ್ಚು ಕಡೆಯಿಂದ ಕೇಳಿಬರುತ್ತಿದೆ. ಈಗಲೇ ಹೀಗಾದರೆ ಚುನಾವಣೆ ಹತ್ತಿರ ಬಂದ ಹಾಗೆ ಇನ್ನೇನೋ ಎಂದು ಆತಂಕಗೊಂಡಿರುವುದು ವಿಷಯ ಗೊತ್ತಿರುವ ನಿಷ್ಠ ಕಾಂಗ್ರೆಸ್ಸಿಗರು ಮಾತ್ರವೇ.

– ನೀಲಗಾರ.


ಇದನ್ನೂ ಓದಿ: ಮೋದಿ-ಶಾ-ಸಂತೋಷ್ `ತ್ರೈ’ಕಮಾಂಡ್ ಯಡ್ಯೂರಪ್ಪರನ್ನು ಮಾಡ್ತಿದೆಯಾ ಡಮ್ಮಿ ಸಿಎಂ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...

ಪಶ್ಚಿಮ ಬಂಗಾಳ| ಟಿಎಂಸಿ ನಾಯಕರ ಭದ್ರತೆಗೆ ಭಾರೀ ಪೊಲೀಸ್ ನಿಯೋಜನೆ; ಇಸಿಐ ಆಕ್ಷೇಪ

ರಾಜ್ಯದ ವಿವಿಧ ಹಂತಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ವೈಯಕ್ತಿಕ ಭದ್ರತೆ ಒದಗಿಸಲು ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೋಲ್ಕತ್ತಾ ಪೊಲೀಸರು ನಿಯೋಜಿಸಿರುವ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಗಂಭೀರವಾಗಿ...

ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ : ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣ

ಅಲ್ಪಾವಧಿಯ ಕದನ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಏಪ್ರಿಲ್ 1, 2026ರ ಬುಧವಾರದಂದು ಅಮೆರಿಕವು ಅನಾಮಧೇಯ ಮಧ್ಯಸ್ಥಿಕೆ ರಾಷ್ಟ್ರದ ಮೂಲಕ ಇರಾನ್‌ಗೆ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮದ ಆಫರ್...

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...