Homeಕರ್ನಾಟಕಮುಗಿಯಿತೆ ಬಿಎಸ್‌ವೈ ಅವಧಿ?: ಹೊಸ ಸಿಎಂ ಎಂಬುದು ಎಷ್ಟು ನಿಜ?

ಮುಗಿಯಿತೆ ಬಿಎಸ್‌ವೈ ಅವಧಿ?: ಹೊಸ ಸಿಎಂ ಎಂಬುದು ಎಷ್ಟು ನಿಜ?

ಯಡಿಯೂರಪ್ಪನವರ ಅವಧಿ ಮುಗಿದಿದೆ; ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ನನ್ನನ್ನು ಬೆಂಬಲಿಸಬೇಕು. ಒಂದು ವೇಳೆ ಲಿಂಗಾಯಿತರೇ ಆಗಬೇಕೆಂದಾದರೆ ನೀವು ಶೆಟ್ಟರ್‌ರನ್ನು ಬೆಂಬಲಿಸಬೇಕು ಎಂದು ಜೋಷಿ ಮನವಿ ಮಾಡಿದರೆಂದು ಹೇಳಲಾಗುತ್ತಿದೆ.

- Advertisement -
- Advertisement -

ಶನಿವಾರ ಸಂಜೆಯಿಂದ ಸೋಮವಾರದ ಬೆಳಗಿನವರೆಗೆ ಬಿಜೆಪಿಯ ಉನ್ನತ ವಲಯಗಳಲ್ಲಿ ನಡೆದ ಬೆಳವಣಿಗೆಗಳು ಯಡಿಯೂರಪ್ಪನವರ ಅವಧಿ ಮುಗಿದುಹೋಯಿತು ಎಂಬ ವದಂತಿ-ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಸದ್ಯಕ್ಕೆ ಅಂತಹ ನಾಟಕೀಯ ಬದಲಾವಣೆಗಳೇನೂ ಸಂಭವಿಸಿಲ್ಲವಾದರೂ, ಬಿಜೆಪಿಯ ಪಡಸಾಲೆಗಳಲ್ಲಿ ನಡೆಯುತ್ತಿರುವ ಚರ್ಚೆಗಳಂತೂ ಇಳಿದಿಲ್ಲ.

ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಆಗೊಮ್ಮೆ, ಈಗೊಮ್ಮೆ ಸರ್ಕಾರ ಬಿತ್ತು ಎಂಬ ಸುದ್ದಿ ಮಾಡುವುದು ಟಿವಿ ಚಾನೆಲ್‌ಗಳಿಗೆ ಖಯಾಲಿಯಾಗಿತ್ತು. ಹೈಕಮ್ಯಾಂಡ್ ಬದಲಿ-ಸಿಎಂ ಆಯ್ಕೆಗೆ ಮುಂದಾಗಿದೆ ಎಂಬ ಸ್ಟೋರಿಗಳು ಆಗಾಗ್ಗೆ ಬಿತ್ತರವಾಗುತ್ತಿದ್ದವು. ಅಂತಿಮವಾಗಿ ಸಿದ್ದರಾಮಯ್ಯನವರು 5 ವರ್ಷ ಯಶಸ್ವಿಯಾಗಿ ಮುಗಿಸಿದರಷ್ಟೇ ಅಲ್ಲದೇ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬಂದಿದ್ದರೆ ಅವರೇ ನಂತರದ ಸಿಎಂ ಸಹಾ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೂ ಪದೇ ಪದೇ ಅಂತಹ ಸುದ್ದಿ ಬರುತ್ತಿರಲು ಕಾರಣವೇನೆಂದರೆ, ಚಾನೆಲ್‌ಗಳಲ್ಲಿ ಕುಳಿತವರಿಗೆ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯುವುದು ಇಷ್ಟವಿಲ್ಲದಿದ್ದುದೇ ಆಗಿತ್ತು.

ಈಗ ಅಂತಹದ್ದೇನಿದೆ? ಬಿಎಸ್‌ವೈ ಮುಂದುವರೆಯುವುದು ಬಿಜೆಪಿಯೊಳಗೇ ಇಷ್ಟವಿಲ್ಲವಾ? ಬಿಜೆಪಿಯೊಳಗೆ ಎಲ್ಲವೂ ಸರಿಯಿರುವುದು ಇಷ್ಟವಿಲ್ಲದವರು ಬಿಎಸ್‌ವೈ ಅತಂತ್ರ ಎಂಬ ಸುದ್ದಿಯನ್ನು ಹುಟ್ಟಿಸುತ್ತಿದ್ದಾರಾ? ಯಾವ ಪೂರ್ವನಿರ್ಧಾರಿತ ಅಭಿಪ್ರಾಯ/ಮನೋಬಯಕೆಗೆ ಒಳಗಾಗದೇ ನಡೆದ ಸಂಗತಿಗಳನ್ನು ಯಥಾವತ್ತಾಗಿ ಮುಂದಿಟ್ಟು ತಾರ್ಕಿಕ ವಿಶ್ಲೇಷಣೆಯನ್ನು ಮಾಡುವುದು ಮಾತ್ರ ಈ ವರದಿಯ ಉದ್ದೇಶವಾಗಿದೆ.

ಮೊದಲಿಗೆ ಶನಿವಾರದಿಂದ ಮಂಗಳವಾರ ಬೆಳಿಗ್ಗೆಯವರೆಗೆ ನಡೆದ ಬೆಳವಣಿಗೆಗಳ ಯಾದಿ ನೋಡಬೇಕು. ಶನಿವಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ರಾಜ್ಯಪಾಲರನ್ನು ಭೇಟಿಯಾದರು. ನಿರ್ದಿಷ್ಟವಾದ ಬುಲಾವ್ ಇಲ್ಲದೇ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಉಳಿದ ಮಂತ್ರಿಗಳು ರಾಜ್ಯಪಾಲರನ್ನು ಭೇಟಿಯಾಗುವುದು ಮುಖ್ಯಮಂತ್ರಿಗಳೇ ಕಳಿಸಿದಾಗ ಮಾತ್ರ. ಬಿಎಸ್‌ವೈ ಅಂತೂ ಸವದಿಯವರನ್ನು ಕಳಿಸಲು ಕಾರಣವೇನೂ ಇದ್ದಂತಿಲ್ಲ.

ಆ ನಂತರ ವಿಸ್ತಾರಾ ವಿಮಾನದಲ್ಲಿ ಸವದಿಯವರು ಸೀದಾ ದೆಹಲಿಗೆ ಹೋದರು. ಹೋದವರು ಯಾರಾದರೂ ಬಿಜೆಪಿ ನಾಯಕರನ್ನು ಭೇಟಿಯಾಗಿ ವಾಪಸ್ ಬಂದಿದ್ದರೂ ಸ್ವಲ್ಪ ಗುಲ್ಲು ಏಳುತ್ತಿತ್ತು. ಆದರೆ ಇನ್ನೂ ಹೆಚ್ಚಿನ ಗುಲ್ಲಿಗೆ ಕಾರಣವಾಗಿದ್ದು ಅವರು ಕೇಂದ್ರ ಮಂತ್ರಿ ಜಾವಡೇಕರ್‌ರನ್ನು ಭೇಟಿಯಾಗಿ ಅಧಿಕೃತವಾದ ಮನವಿ ಪತ್ರ ಕೊಟ್ಟರು ಎಂದಾಗ. ಏಕೆಂದರೆ ಉಪಮುಖ್ಯಮಂತ್ರಿ ಸವದಿಯವರ ಜೊತೆಗೆ ಅವರ ಇಲಾಖೆಯ ಕಾರ್ಯದರ್ಶಿ ಅಥವಾ ಆಪ್ತ ಕಾರ್ಯದರ್ಶಿ ಹೋಗಲಿ, ಪಿಎ ಸಹಾ ಹೋಗಿರಲಿಲ್ಲ. ಯಾವ ಅಧಿಕೃತ ಭೇಟಿಯೂ ಹಾಗೆ ನಡೆಯುವುದಿಲ್ಲ. ಅಲ್ಲಿಂದಾಚೆಗೆ ಸವದಿಯವರು ಯಾರನ್ನು ಭೇಟಿಯಾದರು? ಇಷ್ಟು ಕಾಲ ಅಲ್ಲೇ ಏಕೆ ಉಳಿದರು ಎನ್ನುವುದಕ್ಕೆ ನಂಬುವಂತಹ ಅಧಿಕೃತ ಕಾರಣಗಳಿಲ್ಲ. ಆದರೆ ಸವದಿಯವರು ಈ ಪ್ರಯಾಣ ಬೆಳೆಸಿದ್ದು ನಂತರ ಎಲ್ಲರ ಗಮನಕ್ಕೆ ಬಂದಿದೆ.

ಇದು ನಡೆಯುತ್ತಿದ್ದ ಹೊತ್ತಿಗೇ ವಿವಿಧ ಶಾಸಕರ ಮೊಬೈಲ್‌ಗಳಿಗೆ ಪ್ರಹ್ಲಾದ್‌ಜೋಷಿಯವರ ಫೋನ್ ಕರೆಗಳು ಹೋದವೆಂಬ ಸುದ್ದಿ ಕೆಲವರಿಗೆ ಮಾತ್ರ ಗೊತ್ತಾಯಿತು. ಸರಿಯಾಗಿ ಎಷ್ಟು ಜನರಿಗೆ ಕಾಲ್ ಮಾಡಿದರು ಎಂಬ ಕುರಿತು ಕರಾರುವಾಕ್ಕಾದ ಸಂಖ್ಯೆ ಹೇಳಲಾಗುತ್ತದೆಯಾದರೂ, ಅದಕ್ಕಿಂತ ಸ್ವಾರಸ್ಯಕರವಾದದ್ದು ಏನು ಹೇಳಿದರು ಎಂಬುದಾಗಿದೆ. ಯಡಿಯೂರಪ್ಪನವರ ಅವಧಿ ಮುಗಿದಿದೆ; ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ನನ್ನನ್ನು ಬೆಂಬಲಿಸಬೇಕು. ಒಂದು ವೇಳೆ ಲಿಂಗಾಯಿತರೇ ಆಗಬೇಕೆಂದಾದರೆ ನೀವು ಶೆಟ್ಟರ್‌ರನ್ನು ಬೆಂಬಲಿಸಬೇಕು ಎಂದು ಜೋಷಿ ಮನವಿ ಮಾಡಿದರೆಂದೂ, ಹಾಗೆ ನಡೆದ ಫೋನ್ ಸಂಭಾಷಣೆಗಳಲ್ಲಿ ಕೆಲವದ್ದರಲ್ಲಿ ಶೆಟ್ಟರ್ ಸಹಾ ಪಾಲ್ಗೊಂಡಿದ್ದರೆಂದು ಹೇಳಲಾಗುತ್ತಿದೆ.

ಪ್ರಹ್ಲಾದ್ ಜೋಷಿ ಇನ್ನೂ ಮುಖ್ಯಮಂತ್ರಿಯಾಗದ, ಆದರೆ ಆ ಮಹತ್ವಾಕಾಂಕ್ಷೆ ಹೊಂದಿರುವ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಲ್ಲೊಬ್ಬರು. ಅದರಲ್ಲೂ ಈಗಿನ ಕೇಂದ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಮಹತ್ವದ ಖಾತೆಯನ್ನು ಹೊಂದಿದ್ದು ಮೋದಿ-ಅಮಿತ್‌ಶಾ ಜೊತೆಯಲ್ಲಿ ನಿರಂತರ ಸಾಮೀಪ್ಯ ಹೊಂದಿರುವವರಾಗಿದ್ದಾರೆ. ಜೊತೆಗೆ ಅವರಲ್ಲಿ ಇನ್ನೂ ಕೆಲವು ಅರ್ಹತೆಗಳೂ ಇವೆ. ಅದು ಜಾತಿ; ಜನನಾಯಕನಲ್ಲದೇ ಇರುವುದು ಮತ್ತು ಆ ಕಾರಣದಿಂದ ಬೆನ್ನು ಮೂಳೆಯೂ ಇಲ್ಲದಿರುವುದು. ಸದ್ಯಕ್ಕೆ ದೊಡ್ಡ ಸಂಖ್ಯೆಯಲ್ಲಿಲ್ಲದ ಆದರೆ ಮೇಲ್ಜಾತಿಯವನಾಗಿರುವುದು ಹಾಗೂ ಜನನಾಯಕನಲ್ಲದೇ ಇರುವುದು ಬಿಜೆಪಿಯಲ್ಲಿ ಸಿಎಂ ಆಗಲು ಇರುವ ದೊಡ್ಡ ಅರ್ಹತೆಯಾಗಿದೆ. ಹಾಗಾಗಿ ಪ್ರಹ್ಲಾದ್ ಜೋಷಿ ರೇಸ್‌ನಲ್ಲಿರುವುದು ಸಾಧ್ಯ.

ಮೇಲಿನ – ಫೋನ್ ಕರೆಗಳ ವರ್ತಮಾನವನ್ನು ಯಾರೆಷ್ಟೇ ಖಚಿತವಾಗಿ ಹೇಳಿದ್ದರೂ ನಂಬುವುದು ಕಷ್ಟವೇ. ಆದರೆ, ಇರಬಹುದು ಎನ್ನಿಸಿದ್ದು ಯಡಿಯೂರಪ್ಪನವರು ಸೋಮವಾರ ಇದ್ದಕ್ಕಿದ್ದಂತೆ 24 ಜನ ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರೆಂದು ಘೋಷಿಸಿದಾಗ. ಅದೂ ಸಹಾ ಎಷ್ಟು ದಿಢೀರ್ ಆಗಿ ನಡೆಯಿತೆಂದರೆ, ಸ್ವತಃ ಮುಖ್ಯಮಂತ್ರಿಯವರು ಅದರಲ್ಲಿ ನಾಲ್ಕು ಹೆಸರುಗಳನ್ನು ಅದೇ ದಿನ ಹಿಂಪಡೆದರು. ಇನ್ನೂ ಕೆಲವರು ಈ ನೇಮಕಾತಿಯನ್ನು ತಾವು ಒಪ್ಪಿಲ್ಲವೆಂದು ಹೇಳಿದರೆ; ಮತ್ತೂ ಕೆಲವರು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ತಿಳಿಸುವುದಾಗಿ ಹೇಳುತ್ತಿದ್ದಾರೆ.

ಇದರ ಅರ್ಥ ಇಷ್ಟೇ. ಈ ನೇಮಕಾತಿಗಳಲ್ಲಿ ಯಾವೊಂದನ್ನೂ ಬಿಎಸ್‌ವೈ ಸದರಿ ಶಾಸಕರ ಜೊತೆಗೇ ಚರ್ಚಿಸಿಲ್ಲ. ಅಷ್ಟೇ ಅಲ್ಲದೇ ಸ್ವತಃ ಬಿಜೆಪಿಯ ಹೈಕಮ್ಯಾಂಡ್ ಜೊತೆಗೂ ಚರ್ಚಿಸಿಲ್ಲ. ಈ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಆಪರೇಷನ್ ಕಮಲದಲ್ಲಿ ಈ ಕಡೆಗೆ ಬಂದು ಈಗ ಎಂಎಲ್‌ಸಿಗಳಾಗಿರುವವರ ಹೆಸರುಗಳೂ ಇಲ್ಲ. ಅಂದರೆ, ಸಚಿವ ಸಂಪುಟ ವಿಸ್ತರಣೆಯ ಕುರಿತೂ ಬಿಎಸ್‌ವೈ ಸೂಚನೆ ಕೊಟ್ಟಿದ್ದಾರೆ. ಇವೆರಡು ಸೂಚನೆಗಳನ್ನು ಯಾರಿಗೆ, ಏಕೆ ಕೊಟ್ಟಿದ್ದಾರೆ? ನೀವು ಏನೋ ಮಾಡಲು ಹೋದರೆ, ತಾನು ಇನ್ನೇನೋ ಮಾಡುತ್ತೇನೆ ಎಂಬುದಾ ಆ ಸೂಚನೆ? ಹಾಗಿದ್ದರೆ ಆ ಸೂಚನೆ ಹೈಕಮ್ಯಾಂಡಿಗೇ ಆಗಿದೆ. ಜೊತೆಗೆ ನಿಮ್ಮನ್ನು ನಾನೀಗ ಮಂತ್ರಿ ಮಾಡುವ ಸ್ಥಿತಿಯಲ್ಲಿಲ್ಲ; ಹಾಗಾಗಿ ನಿಗಮ-ಮಂಡಳಿಗಳನ್ನು ಒಪ್ಪಿಕೊಳ್ಳಿ ಎಂದು ತನಗೆ ನಿಷ್ಠರಾಗಿರುವ ಶಾಸಕರಿಗೆ ಹೇಳುತ್ತಿದ್ದಂತಿದೆ.

ಈ ಕಡೆಯ ವಿದ್ಯಮಾನದ ರೀತಿ ಮತ್ತು ನೀತಿಗಳು ಶನಿವಾರದ ಹಾಗೂ ಭಾನುವಾರದ ಸವದಿ ಮತ್ತು ಪ್ರಹ್ಲಾದ್ ಜೋಷಿ ಬೆಳವಣಿಗೆಗಳು ನಡೆದಿರಬಹುದಾದ ಸಾಧ್ಯತೆಗಳನ್ನು ಖಚಿತಪಡಿಸುತ್ತಿವೆ. ಶಾಸಕನೂ ಆಗಿರದ ತನ್ನನ್ನು ಉಪಮುಖ್ಯಮಂತ್ರಿ ಮಾಡಿದ ಬಿ.ಎಲ್.ಸಂತೋಷ್‌ರ ಸೂಚನೆ ಇಲ್ಲದೇ ಲಕ್ಷ್ಮಣ ಸವದಿಯವರು ದೆಹಲಿಯತನಕ ಹೋಗಿರಲಾರರು ಮತ್ತು ಪಕ್ಷ ಹಾಗೂ ಸಂಘನಿಷ್ಠರಾದ ಪ್ರಹ್ಲಾದ್ ಜೋಷಿಯವರೂ ಅಂತಹ ಸಾಧ್ಯತೆಯಿಲ್ಲದೇ ಫೋನ್ ಮಾಡಿರಲಾರರು.

ಇವುಗಳ ಸಾರಾಂಶ, ಈ ವಾರದಲ್ಲಿ ಯಡಿಯೂರಪ್ಪನವರು ಬದಲಾಗುತ್ತಾರೆಂದಲ್ಲವೇ ಅಲ್ಲ. ಯಾರನ್ನು ಬೇಕಾದರೂ ಸಿಎಂ ಸ್ಥಾನದಲ್ಲಿ ಕೂರಿಸಬಹುದಾದ ಪ್ರಮಾಣದ ಬಹುಮತ ಕರ್ನಾಟಕದಲ್ಲಿ ಇಲ್ಲವೆಂಬುದಷ್ಟೇ ಹೈಕಮ್ಯಾಂಡ್‌ನ ಸಮಸ್ಯೆಯಲ್ಲ; ಯಡಿಯೂರಪ್ಪನವರನ್ನೂ ಒಪ್ಪಿಸದೇ ಅಂತಹ ಬದಲಾವಣೆಯು ಸಾಧ್ಯವಿಲ್ಲ. ಅದನ್ನು ಬಿಟ್ಟರೆ ಬಿಎಸ್‌ವೈ ಮತ್ತು ಪುತ್ರನನ್ನು ಕೇಸಿನಲ್ಲಿ ಸಿಕ್ಕಿಸಿ ಹೆದರಿಸುವ ಕೆಲಸ ಮಾಡಬೇಕು ಅಷ್ಟೇ. ಚೆಕ್‌ನಲ್ಲಿ ಲಂಚ ತೆಗೆದುಕೊಂಡು ಸಿಕ್ಕಿ ಹಾಕಿಕೊಂಡ ರೀತಿಯ ತಪ್ಪನ್ನು ಈ ಸಾರಿ ಬಿಎಸ್‌ವೈ ಕುಟುಂಬ ಮಾಡಲಾರದಾದರೂ, ಸಿಕ್ಕಿಸಿ ಹಾಕಲೇಬೇಕೆಂದರೆ ಏನೋ ಒಂದು ಸಿಗುತ್ತದೆ. ಆದರೆ ಅಂತಹ ನೈತಿಕ ಬ್ಲ್ಯಾಕ್‌ಮೇಲ್ ಮಾಡಿ, ಸಂಪೂರ್ಣ ಅನೈತಿಕ ಹಣದಿಂದಲೇ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಕ್ಕೆ ಬೇರೊಬ್ಬ ನಾಯಕನನ್ನು ತರಲು ಬಿಜೆಪಿ ಹೈಕಮ್ಯಾಂಡ್ ಪ್ರಯತ್ನಿಸುತ್ತದೆಯೇ? ಇದು ಅಷ್ಟು ಸುಲಭವಲ್ಲವಾದ್ದರಿಂದಲೇ ಯಡಿಯೂರಪ್ಪನವರು ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಹೈಕಮ್ಯಾಂಡ್ ಮರ್ಜಿ ಕಾಯದೇ 24 ನೇಮಕಗಳಿಗೆ ಮುಂದಾದರು. ಆ ಪಟ್ಟಿಯನ್ನು ಸೋಮವಾರ ರಾತ್ರಿ ತಯಾರಿಸಿದ್ದು ವಿಜಯೇಂದ್ರ ಜೊತೆ ಕೂತು ಎಂದೂ ಹೇಳಲಾಗುತ್ತಿದೆ.


ಇದನ್ನೂ ಓದಿ: ನಿಗಮ ಮಂಡಳಿಗಳ ಸ್ಥಾನ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ


ಬಿಜೆಪಿಯ ತ್ರೈಕಮ್ಯಾಂಡ್ ಮತ್ತು ಬಿಎಸ್‌ವೈ ನಡುವಿನ ಈ ಸ್ಟೇಲ್‌ಮೇಟ್ ಬಹಳ ದಿನಗಳಿಂದ ಇದೆ ಮತ್ತು ಇನ್ನೂ ಮುಂದುವರೆಯಲಿದೆ. ಯಾವಾಗ ಈ ಸ್ಟೇಲ್‌ಮೇಟ್ ಮುರಿಯುತ್ತದೆ, ಯಾರ ಕೈ ಮೇಲಾಗುವ ಮೂಲಕ ಮುರಿಯುತ್ತದೆ ಎನ್ನುವುದು ಬಹುಶಃ ಯಾರಿಗೂ ಗೊತ್ತಿಲ್ಲ. ಏಕೆಂದರೆ ಇದನ್ನು ಸುಲಭದಲ್ಲಿ ಮುರಿಯಲಾಗದ ಪರಿಸ್ಥಿತಿಯಲ್ಲಿ ಎರಡೂ ಬಣಗಳಿವೆ. ಹಾಗಾಗಿ ಆ ಕಾಲ ಬಂದಾಗಲೇ ಗೊತ್ತಾಗುತ್ತದೆಂದು ಭಾವಿಸಿ ಸುಮ್ಮನಿರುವುದೇ ಲೇಸು. ಆದರೂ ಸವದಿ, ಜೋಷಿಯಂತಹ ಬೆಳವಣಿಗೆಗಳು ನಡೆದಾಗ ವದಂತಿಗಳಿಗೆ ರೆಕ್ಕೆಪುಕ್ಕಗಳು ಬರುವುದನ್ನಂತೂ ತಡೆಯಲಾಗದು.

ಕಾಂಗ್ರೆಸ್‌ನಲ್ಲಾಗಲೇ ಶುರು ಒಳೇಟಿನ ಗುದ್ದು?

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಎಲ್ಲಿಲ್ಲದ ಒಗ್ಗಟ್ಟು ಮೇಲ್ನೋಟಕ್ಕೆ ಕಾಣುತ್ತಿದೆ. ಸಿದ್ದು ಮತ್ತು ಡಿಕೆಶಿ ಮಧ್ಯೆ ಏನೋ ಒಂದು ಅಂಡರ್‌ಸ್ಟಾಂಡಿಂಗ್ ಆಗಿದೆ ಎಂಬ ಗುಸುಗುಸು ಸಹಾ ಇದೆ. ಹಾಗಾಗಿಯೇ ಪತ್ರಿಕೆಯು ಇಬ್ಬರನ್ನೂ ನಡೆಸಿದ ಸಂದರ್ಶನದಲ್ಲಿ ಅದೇ ಪ್ರಶ್ನೆಯನ್ನು ಕೇಳಿತ್ತು. ಇಬ್ಬರ ಉತ್ತರವೂ ಶಾಸಕರು, ಹೈಕಮ್ಯಾಂಡ್ ತೀರ್ಮಾನಿಸುವ ವಿಷಯ ಅದು ಎಂಬುದೇ ಆಗಿದೆ. ಬಹುಶಃ ಈ ಸದ್ಯ ಬಿಜೆಪಿಯನ್ನು ಸೋಲಿಸುವುದಷ್ಟೇ ಗುರಿಯಾಗಿರುವಾಗ ಇನ್ನೂ ಪರಸ್ಪರ ಗುದ್ದಾಡುವ ಸಂದರ್ಭ ಬಂದಿಲ್ಲ ಎಂದೇ ಕಾಣುತ್ತಿತ್ತು.

ಆಯಾ ನಾಯಕರ ಮನದಿಂಗಿತ ಏನಿದೆಯೋ ಏನೋ ಗೊತ್ತಿಲ್ಲವಾದರೂ, ಅವರವರ ಹಿಂಬಾಲಕರುಗಳು ವಿರೋಧಿ ಬಣದ ಕಾಲೆಳೆಯಲು ಶುರು ಮಾಡಿರುವುದಂತೂ ವಾಸ್ತವ. ಡಿಕೆಶಿ ಬಣ ಎಂಬುದೊಂದರಲ್ಲಿ ಹಿರಿಯ ನಾಯಕರುಗಳು ಇಲ್ಲವಾದ್ದರಿಂದ, ಸಿದ್ದರಾಮಯ್ಯ ವಿರೋಧಿ ಬಣದ ದೊಡ್ಡ ನಾಯಕರುಗಳು ಅಂಥದ್ದೇನನ್ನೋ ಮಾಡಿರುವ ವರ್ತಮಾನವಿಲ್ಲ. ಡಿಕೆಶಿ ಹಿಂಬಾಲಕ ಕಿರಿ-ಮರಿ ನಾಯಕರುಗಳೂ ಸಹಾ ಹೇಗೋ ತಮ್ಮ ಬಾಸ್ ಸಿಎಂ ಆದರೆ ಸಾಕೆಂದು ಬೆವರು ಸುರಿಸುತ್ತಿದ್ದಾರೆ ಅಷ್ಟೇ. ಆದರೆ ಸಿದ್ದರಾಮಯ್ಯನವರ ಆಪ್ತರು ಎಂಬ ಹಣೆಪಟ್ಟಿ ಹೊತ್ತಿರುವ ಕೆಲವರು ಡಿಕೆಶಿಗೆ ಕಡಿವಾಣ ಹಾಕಬೇಕೆಂದು ಹೊರಟಿರುವ ವರ್ತಮಾನಗಳು ಒಂದಕ್ಕಿಂತ ಹೆಚ್ಚು ಕಡೆಯಿಂದ ಕೇಳಿಬರುತ್ತಿದೆ. ಈಗಲೇ ಹೀಗಾದರೆ ಚುನಾವಣೆ ಹತ್ತಿರ ಬಂದ ಹಾಗೆ ಇನ್ನೇನೋ ಎಂದು ಆತಂಕಗೊಂಡಿರುವುದು ವಿಷಯ ಗೊತ್ತಿರುವ ನಿಷ್ಠ ಕಾಂಗ್ರೆಸ್ಸಿಗರು ಮಾತ್ರವೇ.

– ನೀಲಗಾರ.


ಇದನ್ನೂ ಓದಿ: ಮೋದಿ-ಶಾ-ಸಂತೋಷ್ `ತ್ರೈ’ಕಮಾಂಡ್ ಯಡ್ಯೂರಪ್ಪರನ್ನು ಮಾಡ್ತಿದೆಯಾ ಡಮ್ಮಿ ಸಿಎಂ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...