ಕೊರೊನ ಸೋಂಕಿನಿಂದ ಜನರು ನರಳುತ್ತಿದ್ದು ಸಾವಿರಾರು ಮಂದಿ ಮೃತಪಟ್ಟರೂ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ, ಹಣ ಲೂಟಿ ಮಾಡುತ್ತ ಹಬ್ಬವ ಆಚರಿಸುತ್ತಿದೆ. ಕೋಟ್ಯಂತರ ರೂಪಾಯಿ ಹಗರಣದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಮುಖಂಡ ರಿಜ್ವಾನ್ ಹರ್ಷದ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾ ಸಾವಿನ ಸಂಖ್ಯೆ ಮತ್ತು ಸೋಂಕಿನ ಸಂಖ್ಯೆ ಹೆಚ್ಚಾಗಿ ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಎಲ್ಲವೂ ದೇವರೆ ನೋಡಿಕೊಳ್ಳಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಮ್ಮ ಕೈಮೀರಿದೆ ಎಂದು ಕೈಚೆಲ್ಲಿದರು. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡೂವರೆ ತಿಂಗಳು ಲಾಕ್ ಡೌನ್ ಘೋಷಿಸಿದರು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮುಂದಿನ ಕ್ರಮಗಳ ಕುರಿತು ಯಾವುದೇ ಸಿದ್ದತೆ ಮಾಡಿಕೊಳ್ಳಲಿಲ್ಲ. ಖಾಸಗಿ ನರ್ಸಿಂಗ್ ಹೋಂಗಳ ಜೊತೆ ಒಂದು ಸಭೆಯನ್ನು ಮಾಡಲಿಲ್ಲ. ಸೋಂಕು ಹೆಚ್ಚಾದಾಗ ಮೊನ್ನೆಯಷ್ಟೇ ಖಾಸಗಿ ವೈದ್ಯರ ಜೊತೆ ಮಾತುಕತೆ ಮಾಡುತ್ತಾರೆ. ಇದು ಸರ್ಕಾರದ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ ಎಂದು ಕಿಡಿಕಾರಿದರು.
ಕೋವಿಡ್-19 ಮತ್ತು ನಾನ್ ಕೋವಿಡ್ಗೆ ಮೃತರಾದವರ ಸಂಖ್ಯೆ ಏರುತ್ತಿದೆ. ಆಂಬುಲೆನ್ಸ್ ಸಿಗದೆ ಕೂಡ ಸೋಂಕಿತರು ಮೃತಪಟ್ಟ ನಿದರ್ಶನಗಳೂ ನಮ್ಮ ಮುಂದಿವೆ. ಪೂರ್ವ ಸಿದ್ದತೆ ಮಾಡಿಕೊಳ್ಳದ ಪರಿಣಾಮ ಇಂತಹ ಸಾವುಗಳು ಸಂಭವಿಸಲು ಕಾರಣ. ಸೋಂಕಿತರು ಆಸ್ಪತ್ರೆಗೆ ದಾಖಲಿಸಲು ಖಾಸಗಿಯವರ ಬಳಿ ಬೆಡ್ಗಳನ್ನು ಸರ್ಕಾರ ನಿಗದಿಪಡಿಸಲಿಲ್ಲ. ಯಾರು ಹೆಚ್ಚು ಕಮೀಷನ್ ಕೊಡುತ್ತಾರೋ ಎಂಬುದಕ್ಕೆ ಸರ್ಕಾರ ಕಾದುಕುಳಿತು ಕಮಿಷನ್ ಲೂಟಿ ಮಾಡಿತು ಎಂದಿದ್ದಾರೆ.
ಪಿಪಿಇ ಕಿಟ್ ಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಒಂದು ಪಿಪಿಇ ಕಿಟ್ ಬೆಲೆ ಛತ್ತೀಸ್ಘಡದಲ್ಲಿ 550 ರೂ. ಮಹಾರಾಷ್ಟ್ರದಲ್ಲಿ 520, ಗುಜರಾತ್ ನಲ್ಲಿ 480 ರೂ ಇದ್ದರೆ ಕರ್ನಾಟಕ ಸರ್ಕಾರ 1180 ರೂಪಾಯಿಗೆ ಖರೀದಿ ಮಾಡಿದೆ. ಇದ್ಯಾಕೆ ಇಷ್ಟೊಂದು ಬೆಲೆ ನೀಡಬೇಕಾಗಿ ಬಂತು? ನಾವು ಬೇರೆ ದೇಶದಲ್ಲಿದ್ದೇವೆಯೇ? ದುಪ್ಪಟ್ಟು ಬೆಲೆ ನೀಡುವಂತಹ ಪರಿಸ್ಥಿತಿ ಏಕೆ ಬಂದು ಎಂದು ಪ್ರಶ್ನಿಸಿದ್ದಾರೆ.
ರ್ಯಾಪಿಡ್ ಆಂಟಿಜನ್ ಕಿಟ್ ಬೆಲೆ ಛತ್ತೀಸ್ಘಡದಲ್ಲಿ 120, ಮಹಾರಾಷ್ಟ್ರದಲ್ಲೂ 150 ರೂ, ಗುಜರಾತ್ ನಲ್ಲಿ 120 ರೂಪಾಯಿ ಆದರೆ ಕರ್ನಾಟಕದಲ್ಲಿ 1200 ರೂಪಾಯಿಗೆ ಖರೀದಿ ಮಾಡಲಾಗಿದೆ. ಅಂದರೆ ಹತ್ತು ಪಟ್ಟು ಹೆಚ್ಚು ಬೆಲೆ ನೀಡಿದ್ದು ಇದರಲ್ಲಿ ಭಾರೀ ಪ್ರಮಾಣದ ಅವ್ಯಹಾರ ನಡೆದಿದೆ ಎಂದು ದೂರಿದ್ದಾರೆ.
ನಾವು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದೇವೆ. ಆದರೂ ಬಿಜೆಪಿ ಸರ್ಕಾರ ಚಕಾರ ಎತ್ತುತ್ತಿಲ್ಲ. ಈ ಸರ್ಕಾರಕ್ಕೆ ನೈತಿಕತೆ ಇಲ್ಲ. ಕೋವಿಡ್-19 ನಿಯಂತ್ರಣಕ್ಕೆ ಏನು ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡಿ. ಜೆ.ಸಿ.ಮಾಧುಸ್ವಾಮಿ ಅವರು ಎಷ್ಟು ಮೀಟಿಂಗ್ ಮಾಡಿದ್ದಾರೆ? ಎಷ್ಟಯ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲಿ ಎಂದು ಸವಾಲು ಹಾಕಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಟಿ. ಬಿ. ಜಯಚಂದ್ರ, ಮುಖಂಡರಾದ ಶಿವಶಂಕರ ರೆಡ್ಡಿ, ಮುರಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಅಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ರಫೀಕ್ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.
ಓದಿ: ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲಾದ ಗೃಹಸಚಿವ ಅಮಿತ್ ಷಾ