ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗದಿದ್ದರೂ ಸ್ಪರ್ಧಿ ಅಭ್ಯರ್ಥಿಗಳ ಕುರಿತು ಕ್ಷೇತ್ರದ ಮತದಾರರಲ್ಲಿ ಕುತೂಹಲ ಹೆಚ್ಚುತ್ತಲೇ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದ್ದು ಬಿಜೆಪಿ ಅಭ್ಯರ್ಥಿ ಯಾರೆಂಬುದು ಅಂತಿಮಗೊಂಡಿಲ್ಲ.
ಸ್ಥಳೀಯ ಅಭ್ಯರ್ಥಿಯಾದರೆ ಸುಲಭವಾಗಿ ‘ಬುಕ್’ ಆಗಿ ಬಿಡುತ್ತಾರೆ. ‘ಮೇಲಿನ’ ಅಭ್ಯರ್ಥಿಯಾದರೆ ಒಗ್ಗಟ್ಟಿನ ಮಂತ್ರ ಜಪಿಸುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಶಿರಾ ಕ್ಷೇತ್ರದ ಅಚ್ಚರಿ ಅಭ್ಯರ್ಥಿಯಾಗಿದ್ದಾರೆ ಎಂಬ ಮಾತುಗಳು ಕ್ಷೇತ್ರಾದ್ಯಂತ ಈಗ ಜೋರುದನಿಯಲ್ಲಿ ಕೇಳಿಬರತೊಡಗಿವೆ.
ಹೌದು, ಇದು ಅಚ್ಚರಿಯಾದರೂ ಕ್ಷೇತ್ರದ ಜನರಲ್ಲಿ ಬಿಜೆಪಿ ಹರಿಯಬಿಟ್ಟಿರುವ ಹೆಸರು. ಬಿ.ಸುರೇಶ್ ಗೌಡ ಈಗ ಬಿಜೆಪಿ ಜಿಲ್ಲಾಧ್ಯಕ್ಷ. ಮಾಜಿ ಶಾಸಕ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ದ ಸೋಲನ್ನು ಕಂಡವರು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಇನ್ನೂ ಎರಡೂವರೆ ವರ್ಷ ಕಾಯಬೇಕು. ಅಲ್ಲಿವರೆಗೂ ಏನು ಮಾಡುವುದು? ಹಾಗಾಗಿ ಶಿರಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿಕೊಳ್ಳುವುದು. ಆ ಮೂಲಕ ಒಂದು ಸ್ಥಾನ ಹೆಚ್ಚಿಸಿಕೊಳ್ಳುವುದು ಬಿಜೆಪಿಯ ಚಿಂತನೆಯಾಗಿದೆ ಎನ್ನಲಾಗುತ್ತಿದೆ.
ಬಿಜೆಪಿಗೆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳು ಯಾರೂ ಇಲ್ಲ. ಹಣವನ್ನು ಖರ್ಚು ಮಾಡುವವರು ಬೇಕು. ಅಂಥ ಕುಳಗಳು ಇಲ್ಲವೆಂಬುದು ಬಿಜೆಪಿಗೆ ಗೊತ್ತು. ಕಳೆದ ಚುನಾವಣೆಯಲ್ಲಿ ಬೇವಿನಹಳ್ಳಿ ಕೆ.ಮಂಜುನಾಥ್ ಅವರಿಗೆ ಬಿ.ಫಾರಂ ನೀಡಿದರೂ ತಾನು ನಿಲ್ಲುವುದಿಲ್ಲ ಎಂದು ಹೇಳಿದರು. ಹಾಗಾಗಿ ಎಸ್.ಆರ್. ಗೌಡ ಅವರಿಗೆ ಟಿಕೆಟ್ ನೀಡಲಾಯಿತು.
ಚುನಾವಣೆಯಲ್ಲಿ ಸೋತರೂ ಕೂಡ. ಬಿ.ಕೆ.ಮಂಜುನಾಥ್ ಸಮರ್ಥ ಅಭ್ಯರ್ಥಿಯಲ್ಲ. ಎಸ್. ಆರ್. ಗೌಡರಿಗೆ ಟಿಕೆಟ್ ನೀಡಿದರೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅವರಿಬ್ಬರ ಪರವಾಗಿ ಕೆಸಲ ಮಾಡಲ್ಲ. ಇದು ಈಗ ಬಿಜೆಪಿ ರಾಜ್ಯ ವರಿಷ್ಠರಿಗೆ ತಲೆನೋವಾಗಿ ಪರಿಣಿಸಿದೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಜಯಚಂದ್ರ ಅವರಿಗೆ ‘ಒಳೇಟು’ ನೀಡುವರೇ ಕೆಎನ್ಆರ್?
ಇದೇ ಕಾರಣಕ್ಕಾಗಿಯೇ ಹೊಸ ಮತ್ತು ಅಚ್ಚರಿಯ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಬಿಜೆಪಿ ಸುರೇಗೌಡ ಟ್ರಂಪ್ ಕಾರ್ಟ್ ಮುಂದಿಟ್ಟಿದೆ. ಹೇಗೋ ಬಿಜೆಪಿ ಅಧ್ಯಕ್ಷರು. ಕ್ಷೇತ್ರದ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ಸುರೇಶ್ ಗೌಡ ಗೆಲುವಿಗೆ ಶ್ರಮಿಸುತ್ತಾರೆ. ಸುರೇಶ್ ಗೌಡ ಮುಖ್ಯಮಂತ್ರಿಗೂ ಆಪ್ತ. ಹಣವನ್ನೂ ಖರ್ಚು ಮಾಡಬಲ್ಲರು. ಚುನಾವಣೆಯಲ್ಲಿ ಸ್ಪರ್ಧಿಸಿ ತಂತ್ರಗಳನ್ನು ರಾಜಕೀಯ ಪಟ್ಟುಗಳನ್ನು ಹಾಕಿದ ಅನುಭವವೂ ಇದೆ. ಇದು ಬಿಜೆಪಿ ಕ್ಷೇತ್ರದಲ್ಲಿ ಅಡಿಪಾಯ ಹಾಕಲಿಕ್ಕೆ ಅವಕಾಶ ಕೊಡುತ್ತದೆ ಎನ್ನುತ್ತದೆ ಬಿಜೆಪಿ ಆಪ್ತ ವಲಯ.
ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಬಿಜೆಪಿ ಮುಖಂಡರು ದೇವಾಲಯಗಳಿಗೆ ಲಕ್ಷಲಕ್ಷ ರೂಪಾಯಿ ನೀಡುತ್ತಿದ್ದಾರೆ. ಎಲ್ಲಾ ದೇವಾಲಯಗಳಿಗೂ ಹಣ ಕೊಡಲಾಗುತ್ತಿದೆ. ಜನರಿಗೆ ಆಮಿಷವೊಡ್ಡುತ್ತಿದೆ. ಮತದಾರರನ್ನು ಸೆಳೆಯಲು ಬಿಜೆಪಿ ತಂತ್ರ ಹೆಣೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಇಂತಹ ಆರೋಪಗಳ ನಡುವೆಯೇ ಮಾಜಿ ಸಚಿವ ಟಿ.ಬಿ.ಜಯಚಂದ್ರ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮೊದಲ ಬಾರಿಗೆ ಫೇಸ್ ಬುಕ್ ಲೈವ್ ನಲ್ಲಿ ಬಿಜೆಪಿ ನಾಯಕರು ಮತದಾರರಿಗೆ ಆಮಿಷವೊಡ್ಡುತ್ತಿರುವ ಬಗ್ಗೆ ಖಂಡಿಸಿದ್ದಾರೆ. ”ನಾನು ಕೂಡ ದೇವಾಲಯಗಳಿಗೆ 20 ಕೋಟಿ ರೂಪಾಯಿ ನೀಡಿದ್ದೇನೆ. ಸಮುದಾಯ ಭವನ ಗಳನ್ನು ನಿರ್ಮಿಸಿದ್ದೇನೆ. ಶಿರಾಕ್ಕೆ ಹೇಮಾವತಿ ನೀರನ್ನು ತಂದಿದ್ದೇನೆ. ಅಭಿವೃದ್ಧಿ ಅಂದರೆ ಕ್ಷೇತ್ರದ ಜನರಿಗೆ ಗೊತ್ತು. ಬಿಜೆಪಿ ಮುಖಂಡರು ಇಲ್ಲಿಯವರೆಗೆ ಎಲ್ಲಿ ಹೋಗಿದ್ದರು” ಎಂದು ಹರಿಹಾಯ್ದಿದ್ದಾರೆ.
“ಬಿಜೆಪಿ ದೇವಾಲಯಗಳಿಗೆ ಹಣ ಹಂಚುವ ಮೂಲಕ ಚುನಾವಣೆ ಗಿಮಿಕ್ ಮಾಡುತ್ತಿದೆ. ಚುನಾವಣೆಯಲ್ಲಿ ವಾಮ ಮಾರ್ಗದಲ್ಲಿ ಗೆಲ್ಲಲು ಕೋಟಿಕೋಟಿ ಹಣ ಸುರಿಯುತ್ತಿದೆ. ಈ ದುಡ್ಡು ಎಲ್ಲಿಂದ ಬರುತ್ತಿದೆ. ಕಳೆದ 9 ತಿಂಗಳಿಂದ ಪಿಂಚಣಿ ಬಂದಿಲ್ಲ. ವಿಧವೆಯರು, ವೃದ್ಧರು, ವಿಶೇಷಚೇತನರು ಹೀಗೆ ಯಾರಿಗೂ ಕೂಡ ಸರ್ಕಾರ ಸಹಾಯಧನ ನೀಡಿಲ್ಲ. ಆದರೆ ಉಪಚುನಾವಣೆ ಕಾರಣಕ್ಕೆ ಬಿಜೆಪಿ ದೇವಾಲಯಗಳಿಗೆ ಹಣ ಸುರಿಯುತ್ತಿದೆ” ಎಂದು ಕೆಂಡಾಮಂಡಲವಾಗಿದ್ದಾರೆ.
ಸ್ಥಳೀಯ ಅಭ್ಯರ್ಥಿ ಬಗ್ಗೆ ನಂಬಿಕೆ ಇಲ್ಲದ ಬಿಜೆಪಿ ಹೊರಗಿನಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದೆ. ಕ್ಷೇತ್ರದ ಮತದಾರರಿಗೂ ಅವಮಾನ ಮಾಡುತ್ತಿದೆ ಎಂಬ ಟೀಕೆಗಳು ಕ್ಷೇತ್ರದ ಜನರಿಂದ ವ್ಯಕ್ತವಾಗುತ್ತಿವೆ.
ಸುರೇಶ್ ಗೌಡ ಅಭ್ಯರ್ಥಿ ಆಗುವುದರಿಂದ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಜಿದ್ದಾಜಿದ್ದಿ ಕಣವಾಗಿ ಮಾರ್ಪಡಲಿದೆ. ಆರೋಪ-ಪ್ರತ್ಯಾರೋಪಕ್ಕೆ ಕ್ಷೇತ್ರ ವೇದಿಕೆಯಾಗಲಿದೆ. ಉಪ ಚುನಾವಣೆ ಎಂಥೆಂಥ ಒಳಪೆಟ್ಟುಗಳಿಗೆ ಸಾಕ್ಷಿಯಾಗಲಿದೆ ನೋಡಬೇಕು.
ಇದನ್ನೂ ಓದಿ: ಟಿಕೆಟ್ ಯಾರಿಗೆ?: ಶಿರಾ ಉಪಚುನಾವಣೆ ಘೋಷಣೆಯಾಗದಿದ್ದರೂ ಚರ್ಚೆ ಜೋರು