ಕುಸಿದು ಬಿದ್ದಿರುವ ಆರ್ಥಿಕತೆಗೆ ಪುಷ್ಠಿ ನೀಡಲು, ವಹಿವಾಟು ಹೆಚ್ಚಿಸಲು ಸರ್ಕಾರಿ ಸಿಬ್ಬಂದಿಗಳಿಗೆ ರಜೆಯ ಪ್ರಯಾಣದ ರಿಯಾಯಿತಿ ವೋಚರ್ಗಳು ಮತ್ತು ಹಬ್ಬದ ಮುಂಗಡವನ್ನು ನೀಡುವ ಹೊಸ ಯೋಜನೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಲು ಈ ಯೋಜನೆಗಳನ್ನು ತಂದಿದ್ದು, ಮಾರ್ಚ್ 31, 2021 ರ ವೇಳೆಗೆ 36 ಸಾವಿರ ಕೋಟಿ ರೂಗಳ ಹೆಚ್ಚುವರಿ ಬೇಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರು ಹಾಗೂ ಸಾರ್ವಜನಿಕ ವಲಯದ ಕಂಪೆನಿಗಳ ನೌಕರರು ಮಾರ್ಚ್ 31, 2021 ರವರೆಗೆ ತಮ್ಮ ಆಯ್ಕೆಯ ಹಬ್ಬಗಳಿಗೆ ಈ ಯೋಜನೆ ಹಣವನ್ನು ಬಳಸಬಹುದಾಗಿದೆ.
ಇದನ್ನೂ ಓದಿ: ನಾನು ವೆಜ್, ನನಗೇಕೆ ಈರುಳ್ಳಿ ಬೆಲೆ ಏರಿಕೆ ಗೊತ್ತಾಗಬೇಕು? ಸೀತಾರಾಮನ್ ನಂತರ ಮತ್ತೊಬ್ಬ ಸಚಿವನ ಉವಾಚ
“ಸರ್ಕಾರಿ ಮತ್ತು ಸಂಘಟಿತ ವಲಯದ ಉದ್ಯೋಗಿಗಳ ಉಳಿತಾಯ ಹೆಚ್ಚಾಗಿದೆ ಎಂಬ ಸೂಚನೆಗಳು ಇರುವುದರಿಂದ, ಅವರ ಬೇಡಿಕೆ ಹೆಚ್ಚಾಗಲು ಇಂತಹ ಜನರಿಗೆ ಉತ್ತೇಜನ ನೀಡುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಪ್ರಯಾಣ ಕೈಗೊಳ್ಳುವುದು ಕಷ್ಟವಾದ್ದರಿಂದ, ಸರ್ಕಾರವು 2021 ರ ಮಾರ್ಚ್ 31 ರೊಳಗೆ ಖರ್ಚು ಮಾಡಬೇಕಾದ ಹಣವನ್ನು ನಗದು ವೋಚರ್ಗಳಾಗಿ ಪಾವತಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಸೌಲಭ್ಯ ನೀಡಲು ಸರ್ಕಾರಕ್ಕೆ ಸುಮಾರು, 5,675 ಕೋಟಿ ರೂ. ವೆಚ್ಚವಾಗಲಿದೆ. ಈ ಸೌಲಭ್ಯವನ್ನು ಪಡೆಯಲು ಸರ್ಕಾರಿ ಬ್ಯಾಂಕುಗಳಂತಹ ಸಾರ್ವಜನಿಕ ವಲಯದ ಕಂಪನಿಗಳಿಗೆ ಕೂಡಾ ಅವಕಾಶ ನೀಡಿದೆ.
ಇದನ್ನೂ ಓದಿ: ಮುಂದಿನ ಮಾರ್ಚ್ ವೇಳೆಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್
ವಿಶೇಷ ಉತ್ಸವ ಮುಂಗಡ ಯೋಜನೆಯ ಮೂಲಕ ಮಾರ್ಚ್ 31 ರವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವನ್ನು ಪುನಃ ಪರಿಚಯಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಈ ಮುಂಗಡವನ್ನು ರದ್ದುಪಡಿಸಲಾಗಿದೆ.
ಒಂದು ಬಾರಿಗೆ ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಬಡ್ಡಿರಹಿತ ಮುಂಗಡ ನೀಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಈ ಯೋಜನೆಯಡಿ, ಮೊದಲೇ ಲೋಡ್ ಮಾಡಲಾದ ರುಪೇ ಡೆಬಿಟ್ ಕಾರ್ಡ್ ಮೂಲಕ ಸರ್ಕಾರಿ ನೌಕರರಿಗೆ 10,000 ರೂ. ಗಳನ್ನು ಬಡ್ಡಿರಹಿತ ಮುಂಗಡವನ್ನು ನೀಡಲಾಗುವುದು. ಮಾರ್ಚ್ 31 ರವರೆಗೆ ಈ ಹಣವನ್ನು 10 ಕಂತುಗಳಲ್ಲಿ ವಸೂಲಿ ಮಾಡಲಾಗುವುದು.
ಇದನ್ನೂ ಓದಿ: ಕಾರ್ಪೊರೇಟ್ ತೆರಿಗೆ ಕಡಿತ ಘೋಷಿಸಿದ ನಿರ್ಮಲಾ ಸೀತಾರಾಮನ್