ದೆಹಲಿಯ ಗಡಿಗಳಲ್ಲಿ ಕಳೆದ 25 ದಿನದಿಂದ ಕೇಂದ್ರದ ನೂತನ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರಾರಂಭಿಸಿದ್ದ ’ಕಿಸಾನ್ ಏಕತಾ ಮೋರ್ಚಾ’ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಫೇಸ್ಬುಕ್ನ ಈ ಕೃತ್ಯಕ್ಕೆ ದೇಶದಾದ್ಯಂತ ಆಕ್ರೋಶವೆದ್ದಿದ್ದು, ಸ್ವಲ್ಪ ಸಮಯದ ನಂತರ ಖಾತೆಗಳ ಮೇಲಿನ ನಿಷೇಧ ವಾಪಾಸ್ ಪಡೆದುಕೊಂಡಿದೆ.
ಹಿಂದಿನಿಂದಲೂ ಈ ಆರೋಪಗಳನ್ನು ಪ್ರತಿಭಟನಾಕಾರರು ಮಾಡುತ್ತಿದ್ದು, ಭಾನುವಾರ ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ಲೈವ್ ನೀಡಿದ ನಂತರ ನಿರ್ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಇದನ್ನೂ ಓದಿ: ಮೋದಿ ಮನ್ ಕಿ ಬಾತ್ ಸಮಯದಲ್ಲಿ ತಟ್ಟೆ ಬಾರಿಸಿ: ಹೋರಾಟನಿರತ ರೈತರ ಕರೆ
ಚಳವಳಿಗೆ ಬಳಸಲಾಗುತ್ತಿರುವ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳಿರುವ ಅತಿದೊಡ್ಡ ಪೇಜ್ಗಳಲ್ಲಿ ಒಂದಾದ “ಕಿಸಾನ್ ಏಕ್ತಾ ಮೋರ್ಚಾ”ದ ವ್ಯವಸ್ಥಾಪಕರು, ”ಸಮುದಾಯದ ಮಾನದಂಡಗಳಿಗೆ ವಿರುದ್ದವಾಗಿದೆ”(against its community standards on spam) ಎಂದು ಫೇಸ್ಬುಕ್ನಿಂದ ತಮ್ಮ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಫೇಸ್ಬುಕ್ನ ಒಡೆತನದಲ್ಲಿರುವ ಇನ್ಸ್ಟಾಗ್ರಾಮ್ನಲ್ಲಿ ಕೂಡಾ ತಮ್ಮ ಪೇಜ್ನಲ್ಲಿ ಇದೇ ರೀತಿಯಾಗಿ ನಿರ್ಬಧಿಸಲಾಗಿದೆ ಮತ್ತು ಹೊಸ ಪೋಸ್ಟ್ಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ವಿಶ್ವದಾದ್ಯಂತ ಭಾರಿ ಜನಬೆಂಬಲ ಗಳಿಸಿದ್ದ ಹೋರಾಟವನ್ನು ಕೆಲ ಮಾಧ್ಯಮಗಳು ತೋರಿಸುತ್ತಿಲ್ಲ ಎಂದು ಅವನ್ನು ಗೋದಿ ಮೀಡಿಯಾ ಆರೋಪಿಸಿರುವ ರೈತರು ಅವುಗಳಿಗೆ ಸೆಡ್ಡು ಹೊಡೆದು ಸ್ವಂತ ಚಾನೆಲ್ ಆರಂಭಿಸಿದ್ದಾರೆ. ಫೇಸ್ಬುಕ್, ಟ್ವಿಟ್ಟರ್ ಅಕೌಂಟ್ಗಳನ್ನು ಸಹ ತೆರೆಯಲಾಗಿದ್ದು ತಲಾ 70 ಸಾವಿರ ಫಾಲೋವರ್ಸ್ ಪಡೆದಿವೆ. ಹೋರಾಟದ ಎಲ್ಲಾ ವಿವರಗಳನ್ನು ಈ ಚಾನೆಲ್ಗಳ ಮೂಲಕ ನೀಡಲಾಗುತ್ತಿದೆ.
ಇದನ್ನೂ ಓದಿ: ಇಂದು ನೀವು ಮಿಸ್ ಮಾಡಿರುವ ’ನಾನುಗೌರಿ.ಕಾಮ್’ನ ಟಾಪ್ 5 ಸುದ್ದಿಗಳು!