ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿರುವ ರೈತರು, ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿದ್ದಾರೆ. ಇದು ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಗಳಿಸಿ ಜಿಯೋ ಕಂಪನಿಗೆ ಹೊಡೆತ ಕೊಟ್ಟಿತ್ತು.
ಈಗ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಆಂದೋಲನ ಆರಂಭವಾಗಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸಾಮೂಹಿಕವಾಗಿ ಜಿಯೋ ಸಿಮ್ನಿಂದ ಏರ್ಟೆಲ್ ಸಿಮ್ಗೆ ಪೋರ್ಟ್ ಆಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ನೇಮಿಸಿದ ಕುಲಪತಿ ಅಮರ್ಥ್ಯ ಸೇನ್ರನ್ನು ಗುರಿಯಾಗಿಸಿಕೊಂಡಿದ್ದಾರೆ – ಗಾಯಕ ಕಬೀರ್ ಸುಮನ್
ಡಿಸೆಂಬರ್ 28 ರಂದು ಶಿವಮೊಗ್ಗದ ಶಿವಮೂರ್ತಿ ಸರ್ಕಲ್ನಲ್ಲಿರುವ ಏರ್ಟೆಲ್ ಕಚೇರಿ ಮುಂದೆ ಜಮಾವಣೆಗೊಂಡಿರುವ ನೂರಾರು ಕಾರ್ಯಕರ್ತರು ಎಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ತಮ್ಮ ಜಿಯೋ ನಂಬರ್ನಿಂದ ಹೊರಬಂದು ಏರ್ಟೆಲ್ ಚಂದಾದಾರರಾಗಿದ್ದಾರೆ. ಈ ಮೂಲಕ ರೈತ ಚಳವಳಿಯನ್ನು ಗಟ್ಟಿಗೊಳಿಸಲು, ಕಾರ್ಪೊರೇಟ್ ಕಂಪನಿಗಳನ್ನು ವಿರೋಧಿಸಲು ಸಜ್ಜಾಗಿದ್ದಾರೆ.

ಈ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಬಸರಾಜಪ್ಪನವರು “ಇವತ್ತು ಜಿಯೋ ಕಂಪನಿಯನ್ನು ಅಂಬಾನಿ ಕಂಪನಿಯೆಂದು ಹೇಳುವ ಬದಲು ಮೋದಿ ಕಂಪನಿಯೆಂದು ಹೇಳಬಹುದು. ಈ ಮೋದಿ ಇಂದು ಹೋರಾಟ ನಿರತ ರೈತರ ಹಕ್ಕೊತ್ತಾಯಗಳನ್ನು ಉದಾಸೀನ ಮಾಡುತ್ತಿದ್ದಾರೆ. ಅಲ್ಲದೇ ರೈತರನ್ನು ದೇಶದ್ರೋಹಿಗಳೆಂದು ಹಣೆಪಟ್ಟೆ ಕಟ್ಟಲಾಗುತ್ತಿದೆ. ಆದರೆ ದೇಶಕ್ಕೆ ಅನ್ನ ಕೊಡುವ ರೈತರು ದೇಶದ್ರೋಹಿಗಳಲ್ಲ. ರೈತರನ್ನು ಲೂಟಿ ಹೊಡೆಯುತ್ತಿರುವ ಅಂಬಾನಿ-ಅದಾನಿಗಳೇ ನಿಜವಾದ ದೇಶದ್ರೋಹಿಗಳು. ಹಾಗಾಗಿ ನಾವೆಲ್ಲರೂ ಜಿಯೋದಿಂದ ಏರ್ಟೆಲ್ಗೆ ಪೋರ್ಟ್ ಆಗುತ್ತಿದ್ದೇವೆ. ಏರ್ಟೆಲ್ನವರೇನು ನಮ್ಮನ್ನು ಕರೆದಿಲ್ಲ. ನಾವೇ ರೈತರ ಶಕ್ತಿ ತೋರಿಸಲು ಈ ನಿರ್ಧಾರ ಕೈಗೊಂಡಿದ್ದೇವೆ. ಹಾಗಾಗಿ ನಾಡಿನ ರೈತರು ಮತ್ತು ಯುವಜನರು ರಿಲೆಯನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ಛೇಡಿಸಿದ ಸುರೇಶ್ ಕುಮಾರ್: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು!
ಈಗಾಗಲೇ ಕಳೆದೊಂದು ತಿಂಗಳಿನಿಂದ ಬಾಯ್ಕಾಟ್ ಜಿಯೋ ಅಭಿಯಾನ ನಡೆಯುತ್ತಿದ್ದು ಲಕ್ಷಾಂತರ ರೈತರು-ಯುವಜನರು ಜಿಯೋದಿಂದ ಹೊರಬಂದಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಬರೋಬ್ಬರಿ 26 ಲಕ್ಷ ಜನ ಜಿಯೋ ಸಿಮ್ನಿಂದ ಪೋರ್ಟ್ ಆಗಿದ್ದರು. ಹಾಗಾಗಿ ಜಿಯೋ ಕಂಪನಿ ಏರ್ಟೆಲ್ ಮತ್ತು ವೋಡೋಪೋನ್ ಐಡಿಯಾ ವಿರುದ್ಧ ಟ್ರಾಯ್ (Telecom Regulator Authority of India) ಬಳಿ ದೂರು ನೀಡಿ, ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಕರೆ ನೀಡಿರುವ ‘ಬಾಯ್ಕಾಟ್ ಜಿಯೋ’ ಹಿಂದೆ ಈ ಕಂಪನಿಗಳ ಪಿತೂರಿಯಿದೆ ಎಂದು ಆರೋಪಿಸಿತ್ತು.
ಈಗ ಹೊರಬಿದ್ದಿರುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿನ ಸಕ್ರಿಯ ಬಳಕೆದಾರರ ವಿಭಾಗದಲ್ಲಿ ಏರ್ಟೆಲ್ ಜಿಯೋವನ್ನು ಹಿಂದಿಕ್ಕಿದೆ. ಏರ್ಟೆಲ್ಗೆ ಒಟ್ಟು 33.3% ಸಕ್ರಿಯ ಬಳಕೆದಾರರಿದ್ದರೆ ಜಿಯೋಗೆ 33.2% ಸಕ್ರಿಯ ಬಳಕೆದಾರರಿದ್ದಾರೆ. ಅಲ್ಲದೇ ನಿರಂತರವಾಗಿ ಜಿಯೋದಿಂದ ಏರ್ಟೆಲ್ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಜಿಯೋವನ್ನು ಆತಂಕಕ್ಕೆ ದೂಡಿದೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಜನರು ಜಿಯೋದಿಂದ ಪೋರ್ಟ್ ಆಗಲು ಸಿದ್ದರಾಗಿದ್ದಾರೆ.
ಇದನ್ನೂ ಓದಿ: ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಡೆದವರ ಹೆಸರು ಹೇಳಲಿ: ದೇವೇಗೌಡರಿಗೆ ಸಿದ್ದು ತಿರುಗೇಟು


