Homeಅಂಕಣಗಳು'ಅವರ ಅರಿವಿನ ಪಾದಕ್ಕೆ ಶರಣು'

‘ಅವರ ಅರಿವಿನ ಪಾದಕ್ಕೆ ಶರಣು’

- Advertisement -
- Advertisement -

 

ಅಂಕಿ ಅಂಶಗಳು ಯಾವಾಗಲೂ ಬೋರ್‍ಹೊಡೆಸುತ್ತವೆ. ಕ್ಷಮಿಸಿ, ಈ ಅಂಕಿಅಂಶಗಳನ್ನು ಹೇಳಲೇಬೇಕಾಗಿದೆ.

2017ರ ಫೆಬ್ರವರಿ ಮೊದಲ ವಾರದಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹಖಾತೆಯ ರಾಜ್ಯಸಚಿವ ಕಿರಣ್ ರಿಜಿಜು ಈ ಅಂಕಿ-ಅಂಶಗಳನ್ನು ನೀಡಿದರು. ಆ ಪ್ರಕಾರ ಉತ್ತರಪ್ರದೇಶದ ಕೋಮುಗಲಭೆಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. 2015ರಲ್ಲಿ ನಡೆದ 155 ಗಲಭೆಗಳಲ್ಲಿ 22 ಜನರು ಬಲಿಯಾಗಿ, 419 ಮಂದಿ ಗಾಯಗೊಂಡಿದ್ದರು. 2016ರಲ್ಲಿ ಒಟ್ಟು 162 ಗಲಭೆಗಳು ನಡೆದು 29 ಮಂದಿ ಸತ್ತು, 488 ಮಂದಿ ಗಾಯಗೊಂಡಿದ್ದರು. 2017ರ ಅಧಿಕೃತ ಅಂಕಿಅಂಶಗಳ ಪ್ರಕಾರ 195 ಕೋಮುಗಲಭೆಗಳು ನಡೆದಿದ್ದು 44 ಮಂದಿ ಕೊಲೆಯಾಗಿ 452 ಮಂದಿ ಗಾಯಗೊಂಡಿದ್ದರು. ದೇಶದಾದ್ಯಂತ ಕೋಮುಗಲಭೆಗಳಲ್ಲಾದ ಸಾವುಗಳಲ್ಲಿ ಶೇ.40ರಷ್ಟು ಸಾವುಗಳು ಉತ್ತರಪ್ರದೇಶದಲ್ಲೇ ನಡೆದಿದ್ದವು.

ಈ ಸರಣಿ ಗಲಭೆಗಳನ್ನು ಅನುಸರಿಸುತ್ತಾ 2017ರ ಫೆಬ್ರವರಿ 11ರಿಂದ ಮಾರ್ಚ್ 8ರವರೆಗೆ ಅಲ್ಲಿ ಚುನಾವಣೆ ನಡೆಯಿತು. ಫಲಿತಾಂಶ ಹೊರಬಿದ್ದಾಗ ಒಟ್ಟು 403 ಸೀಟುಗಳ ವಿಧಾನಸಭೆಯಲ್ಲಿ 312 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಇದು ಕೇವಲ ಉತ್ತರಪ್ರದೇಶದ ಕತೆ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳ ಹೊಸ್ತಿಲಲ್ಲಿ ಕೋಮುಗಲಭೆಗಳು ನಡೆಯುವುದು ಒಂದು ವಾಡಿಕೆಯಂತಾಗಿ ಹೋಗಿದೆ.

ಆದರೆ ಕರ್ನಾಟಕದ ನೆಲದಲ್ಲಿ ಈ ಸ್ಟ್ರಾಟೆಜಿ ಫಲಿಸಲಿಲ್ಲ. ಮಾತ್ರವಲ್ಲ, ಕಳೆದ ಕೆಲವು ತಿಂಗಳ ವಿದ್ಯಮಾನಗಳನ್ನು ಅವಲೋಕಿಸಿದರೆ ಈ ಷಡ್ಯಂತ್ರ ಮತೀಯ ಶಕ್ತಿಗೆ ತಿರುಗುಬಾಣವಾಗಿ ಪರಿಣಮಿಸಿದೆ ಎಂಬುದು ವೇದ್ಯವಾಗುತ್ತದೆ.

ಹೆಣ ರಾಜಕಾರಣ..

ಚುನಾವಣೆಯ ಪೂರ್ವತಯಾರಿಯೆಂಬಂತೆ ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆಯ ಕಾರ್ಮೋಡಗಳು ಕವಿದುಕೊಂಡಿದ್ದು, ನಾಡಿನ ಸೌಹಾರ್ದಪ್ರಿಯ ಜನತೆಯಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿತ್ತು. ಹೆಣಗಳನ್ನು ಮುಂದಿಟ್ಟುಕೊಂಡು ಕೋಮು ದಳ್ಳುರಿ ಎಬ್ಬಿಸಲು ಸ್ವತಃ ಶಾಸಕರು, ಸಂಸದರು, ಅಷ್ಟೇ ಏಕೆ? ಕೇಂದ್ರದ ಮಂತ್ರಿ ಅನಂತಕುಮಾರ್ ಹೆಗಡೆಯವರೇ ಅಖಾಡಕ್ಕಿಳಿದರು. ಜನರಿಂದ ಬಂದ ಸ್ಪಂದನೆ ಅವರ ಲೆಕ್ಕಾಚಾರಕ್ಕೆ ವಿರುದ್ಧವಾಗಿತ್ತು.

ಮಂಗಳೂರಿನಲ್ಲಿ ಕೊಲೆಯಾದ ನತದೃಷ್ಟ ಯುವಕ ದೀಪಕ್ ರಾವ್ ಕೆಲಸ ಮಾಡುತ್ತಿದ್ದ ಮೊಬೈಲ್ ಅಂಗಡಿಯ ಮಾಲಿಕ ಒಬ್ಬ ಮುಸ್ಲಿಂ. ಆತ ದೀಪಕ್‍ನ ಕುಟುಂಬದವರಂತೆಯೇ ದುಃಖಿತನಾಗಿದ್ದ. ಆ ಮಾಲಿಕನ ಹೆಂಡತಿ ದೀಪಕ್‍ನ ತಾಯಿಯನ್ನು ತಬ್ಬಿ ಸಂತೈಸಿದ್ದು, ತನ್ನ ಸ್ವಂತ ಮಗನೇ ಸತ್ತಂತೆ ಆ ತಾಯಿ ಹೃದಯ ರೋದಿಸಿದ್ದು ಬಹುಜನರ ಅಂತಃಕರಣವನ್ನು ಕಲಕಿತ್ತು. ಕೊಲೆಯಾದ ಶರತ್ ಮಡಿವಾಳ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ಆತನ ನೆರವಿಗೆ ಧಾವಿಸಿ, ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದವನು ಒಬ್ಬ ಮಸಲ್ಮಾನ ಆಟೋ ಚಾಲಕನಾಗಿದ್ದ. ಈ ಘಟನೆಗಳು ಒಟ್ಟಾರೆ ನಾಡಿನ ಜನಸ್ಪಂದನೆಯ ಕೆಲ ಬಿಡಿ ಚಿತ್ರಗಳಷ್ಟೆ.

ಚುನಾವಣೆಗೆ ತಯಾರಿಯೆಂಬಂತೆ ಅನಾವರಣಗೊಳ್ಳಲಿದ್ದ ಮತೀಯ ಜ್ವಾಲೆಯ ಅಪಾಯದ ವಿರುದ್ದ ಹಲವಾರು ಸಂಘಟನೆಗಳು, ಸಾಹಿತಿ, ಕಲಾವಿದರು, ಚಿಂತಕರು ದನಿಯೆತ್ತಿದರು. ಜನಸಾಮಾನ್ಯರು ಕೂಡ ಈ ಷಡ್ಯಂತ್ರವನ್ನು ಮನಗಂಡು ಈ ಕೋಮುವ್ಯಾಧಿಗಳನ್ನು ಪ್ರಶ್ನಿಸಿದರು, ಅವರ ಮತೀಯ ಕರೆಗಳನ್ನು ತಿರಸ್ಕರಿಸಿದರು. ಬಹುಶಃ ಇದು ನಮ್ಮ ಮಣ್ಣಿನ ಗುಣ ಅನಿಸುತ್ತೆ.

ಅತ್ತ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಇಂಥದೇ ಅಜೆಂಡಾ ಜಾರಿ ಮಾಡಲು ಹೊರಟಿದ್ದು, ಮೈಮೇಲೆ ದೆವ್ವ ಬಂದವನಂತೆ ಕೂಗಾಡಿ ಪೊಲೀಸರ ಬ್ಯಾರಿಕೇಡ್ ಮೇಲೆಯೇ ಕಾರು ಚಲಾಯಿಸಿ, ಪೊಲೀಸರನ್ನು ಗಾಯಗೊಳಿಸಿದ್ದೂ ಆಯ್ತು. ಈತನ ಈ ಗೂಂಡಾ ವರ್ತನೆಗೆ ಸ್ಪಷ್ಟೀಕರಣ ಎಂಬಂತೆ ತದನಂತರ ಒಂದು ವಾಟ್ಸಪ್ ವಿಡಿಯೋ ವೈರಲ್ ಆಗಿತ್ತು. ಅದು ಬಿಜೆಪಿಯ ಹುನ್ನಾರವನ್ನು ಬಟಾಬಯಲಾಗಿಸಿತ್ತು. ಕರ್ನಾಟಕದ ಬಿಜೆಪಿ ಕಾರ್ಯಕರ್ತರ ‘ದುರ್ಬಲ’ ಚಟುವಟಿಕೆಗಳನ್ನು ವಿಮರ್ಶಿಸಿದ ಅಮಿತ್ ಶಾ ‘ನೀವು ಎಷ್ಟು ಲಾಠಿ ಚಾರ್ಜ್ ಮಾಡಿಸಿದ್ದೀರಿ? ಎಷ್ಟು ಟಿಯರ್ ಗ್ಯಾಸ್ ಹೋರಾಟ ಮಾಡಿದ್ದೀರಿ? ಎಷ್ಟು ಕಫ್ರ್ಯೂ ಬೀಳುವ ಹೋರಾಟ ಮಾಡಿದ್ದೀರಿ?’ ಅಂತ ಪ್ರಶ್ನೆ ಮಾಡಿ, ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವಂತೆ ಬೋಧಿಸಿದ್ದರೆಂದೂ, ಅದರ ಪ್ರಕಾರವೇ ನಾವು ಇಂತಹ ಹೋರಾಟ ನಡೆಸುತ್ತಿದ್ದೇವೆಂದೂ ಸ್ವತಃ ಪ್ರತಾಪ ಸಿಂಹ ವಿವರಣೆ ಕೊಟ್ಟಿದ್ದ! ಈ ವಿಡಿಯೋ ಬಹಿರಂಗವಾದ ನಂತರ ಈ ಸಿಮ್ಮ ತಲೆತಪ್ಪಿಸಿಕೊಂಡು ತಿರುಗಾಡಬೇಕಾಯ್ತು.

ಹೀಗೆ ಬೆಂಕಿ ಹಚ್ಚಿ ಮತಗಳನ್ನು ದೃವೀಕರಣ ಮಾಡುವ ಅಮಿತ್ ಶಾನ ಈ ‘ಮಾಸ್ಟರ್ ಸ್ಟ್ರಾಟೆಜಿ’ಗಳು ಕರ್ನಾಟಕದಲ್ಲಿ ಮಕಾಡೆ ಬಿದ್ದಿವೆ. ಇವರು ಹೆಚ್ಚೆಚ್ಚು ಆಕ್ರಮಣಶಾಲಿಯಾಗಿ ವರ್ತಿಸಿದಷ್ಟೂ ಜನರು ಇವರಿಂದ ದೂರ ಸರಿದಿದ್ದು ಮಾತ್ರ ನಿಜ. ಹೀಗಾಗಿ ವಿಧಿಯಿಲ್ಲದೆ ಇವರು ಪ್ಲೇಟು ಬದಲಿಸಬೇಕಾಯ್ತು. ನಂತರ ಜನಪ್ರಿಯ ಯೋಜನೆಗಳಾದ ಅನ್ನ ಭಾಗ್ಯದ ಯಶಸ್ಸು ಮೋದಿಯದು ಎಂದರು. ನುಡಿದಂತೆ ನಡೆದಿದ್ದೇವೆ ಎಂಬ ಕಾಂಗ್ರೆಸ್ ಘೋಷಣೆಯನ್ನೇ ಹೈಜಾಕ್ ಮಾಡುವ ಹತಾಶ ಪ್ರಯತ್ನ ಮಾಡಿದರು. ಊಹೂಂ, ಯಾವುದೂ ವರ್ಕ್‍ಔಟ್ ಆಗುತ್ತಿಲ್ಲ.

ಗತಿಯಿಲ್ಲದೆ ಈಗ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ವರ್ಕ್‍ಔಟ್ ಮಾಡುತ್ತಿದ್ದಾರೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಯಾವ ಸ್ಥಿತಿಗೆ ದೂಡಲ್ಪಟ್ಟಿದ್ದಾರೆಂದರೆ ತಮ್ಮ ಉಡುಪಿಯ ಸಮಾವೇಶದಲ್ಲಿ ಸ್ವತಃ ಪ್ರಧಾನಿ ಮೋದಿಯೇ ದೇವೇಗೌಡರನ್ನು ಯದ್ವಾತದ್ವಾ ಹೊಗಳಿದ್ದಾರೆ. ‘ದೇವೇಗೌಡರು ವೃದ್ಧಾಶ್ರಮ ಸೇರಿಕೊಳ್ಳಲಿ’ ಎಂದು ಹೀಯಾಳಿಸಿ ಇದೇ ಮೋದಿ ಮಾತಾಡಿದ್ದರೆಂಬುದನ್ನು ಮರೆಮಾಚಿದ ದೊಡ್ಡಗೌಡರು ಮೋದಿಯ ‘ಮುತ್ಸದ್ದಿತನ’ ಮೆಚ್ಚಿ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ವಿರುದ್ಧ ಎಂದು ತೋರಿಸಿಕೊಳ್ಳಲು ಅವರು ನಡೆಸುತ್ತಿರುವ ಹತಾಶ ಕಸರತ್ತುಗಳು ಜನರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿವೆಯಷ್ಟೆ. ಒಂದೆಡೆ ಅಕ್ರಮ ಗಣಿದಣಿ ‘ಜನಾರ್ಧನರೆಡ್ಡಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ವೆಂದು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹೇಳುತ್ತಿದ್ದರೆ, ಅದರ ಬೆನ್ನಿಗೇ ಯಡ್ಯೂರಪ್ಪನವರು ‘ರೆಡ್ಡಿ ನಮ್ಮ ಪಕ್ಷದ ದೊಡ್ಡ ಶಕ್ತಿ, ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಅಮಿತ್‍ಶಾ ಅವರೇ ಹೇಳಿದ್ದಾರೆ’ ಅಂದುಬಿಡೋದೇ? ಇವರ ಇಂಥಾ ಗೋಸುಂಬೆ ಬಣ್ಣ ಆಡಿಕೊಳ್ಳುವವರಿಗೆ ಸರಕಾಗಿದೆ.

ಫೆಬ್ರವರಿ 19ರಂದು ಶ್ರವಣಬೆಳಗೊಳದಲ್ಲಿ ಮಾತಾಡಿದ ಮೋದಿ ‘ಸಮಾಜದಲ್ಲಿ ಅನಾಚಾರ ವ್ಯಾಪಿಸಿದಾಗ ಸಂತರು, ಮುನಿಗಳು ಜನ್ಮತಾಳಿ ಸಮಾಜವನ್ನು ಸರಿದಾರಿಗೆ ತಂದಿದ್ದಾರೆ. ಅನಾಗರಿಕತೆಯಿಂದ ನಾಗರಿಕತೆಯ ಕಡೆ ಬದುಕಲು ಪ್ರೇರಣೆ ನೀಡಿದ್ದಾರೆ’ ಎಂದು ಭರ್ಜರಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದರು. ಮೊನ್ನೆಯ ದಿನ ಸಚಿವ ಅನಂತಕುಮಾರ್ ಹೆಗಡೆ, ರಾಹುಲ್‍ಗಾಂಧಿಯನ್ನು ಟೀಕಿಸುವ ಭರದಲ್ಲಿ ಶ್ರವಣಬೆಳಗೊಳದ ಬಾಹುಬಲಿಯನ್ನು ಅಪಹಾಸ್ಯ ಮಾಡಿ ತನ್ನ ನಿಜ ಬಣ್ಣ ತೋರಿಸಿಯೇಬಿಟ್ಟರು. ಇದರಿಂದ ಆಕ್ರೋಶಗೊಂಡ ಜೈನರು ಈ ಹರಕುಬಾಯಿ ಸಚಿವನ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದ್ದಾರೆ.

ಹಾಗೆಯೇ ಕನ್ನಡ ಸೆಂಟಿಮೆಂಟನ್ನು ಎನ್‍ಕ್ಯಾಷ್ ಮಾಡಿಕೊಳ್ಳಲು ಹೋದ ಮೋದಿ ಮಹಾಶಯ ‘ನಾನೊಬ್ಬ ಕನ್ನಡಿಗ’ ಎಂದು ಹೇಳಿದ್ದು ಇನ್ನಷ್ಟು ಪೀಕಲಾಟಕ್ಕೆ ಇಟ್ಟುಕೊಂಡಿದೆ. ‘ನೀವು ನಿಜವಾದ ಕನ್ನಡಿಗನೇ ಆಗಿದ್ದರೆ ಕನ್ನಡ ನಾಡ ದ್ವಜಕ್ಕೆ ಮಾನ್ಯತೆ ಕೊಡಿ’ ಎಂದರೆ ಅವರಲ್ಲಿ ಉತ್ತರವಿಲ್ಲ. ಹೀಗೆ ಅವರ ಪ್ರತಿಯೊಂದು ತಂತ್ರವೂ ಬೂಮರಾಂಗ್ ಆಗುತ್ತಿದೆ; ಉಗ್ರ ಆಟಾಟೋಪ ದಿನೇದಿನೇ ಕ್ಷೀಣವಾಗುತ್ತಿದೆ. ಸ್ವತಃ ಮೋದಿಯ ಮಾತುಗಳೇ ಆಕರ್ಷಣೆ ಕಳೆದುಕೊಂಡಿವೆ.

ಹೀಗೆ ಕರ್ನಾಟಕದಲ್ಲಿ ಸೋ ಕಾಲ್ಡ್ ಚಾಣಕ್ಯ ಅಮಿತ್ ಶಾ ಹೆಣೆಯುತ್ತಿರುವ ತಂತ್ರಗಳು ಒಂದೊಂದಾಗಿ ಫ್ಲಾಪ್ ಆಗಿದ್ದು ನಾಡಿನ ಶಾಂತಿ, ಸೌಹಾರ್ದ ಪರಂಪರೆ ಸದ್ಯಕ್ಕೆ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಇದು ಬಸವಣ್ಣನ ನಾಡು, ಶರೀಫಜ್ಜ, ಕುವೆಂಪು ಅವರ ನಾಡು. ಇಲ್ಲಿ ಸೌಹಾರ್ದ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ನಮ್ಮ ಸೌಹಾರ್ದ ಪರಂಪರೆಯನ್ನು ಉಳಿಸಿ, ಬೆಳೆಸಲಿಕ್ಕಾಗಿ ಅನೇಕ ಚೇತನಗಳು ದುಡಿಯುತ್ತಿವೆ. ಅವರೆಲ್ಲರ ಅರಿವಿನ ಪಾದಕ್ಕೆ ಶರಣು ಎನ್ನೋಣ.

  • ಸಂಪಾದಕೀಯ ತಂಡದ ಪರವಾಗಿ
    ದೊಡ್ಡಿಪಾಳ್ಯ ನರಸಿಂಹಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...