ಮಾಧ್ಯಮ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳ ವಿರುದ್ದ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಟ್ವಿಟರ್ ಹೇಳಿದೆ. ಅವರ ವಿರುದ್ದ ಕ್ರಮ ಕೈಗೊಂಡರೆ ಭಾರತೀಯ ಕಾನೂನಿನಡಿಯಲ್ಲಿ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅದು ಹೇಳಿದೆ.
ರೈತರ ಪ್ರತಿಭಟನೆ ಮತ್ತು ಪ್ರಚೋದನಕಾರಿ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ ಎಂಬ ಆರೋಪದ ಮೇಲೆ 1,178 ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ನೀಡಿದ್ದ ಆದೇಶವನ್ನು ಟ್ವಿಟರ್ ಭಾಗಶಃ ಪಾಲಿಸಿದೆ. ಅದು ಬುಧವಾರ (ಇಂದು) 500 ಖಾತೆಗಳನ್ನು ತಡೆಹಿಡಿದಿದ್ದು, ಈ ತಡೆಯು ಕೇವಲ ಭಾರತದೊಳಗೆ ಮಾತ್ರ ಎಂದು ಹೇಳಿದೆ.
An update on our work to protect the public conversation in recent weeks in India. https://t.co/DNKjCup2j6
— Twitter India (@TwitterIndia) February 10, 2021
ಇದನ್ನೂ ಓದಿ: ಅಫ್ಘಾನಿಸ್ಥಾನದಲ್ಲಿ ನಿರ್ದೋಷಿ ನಾಗರಿಕರು, ಪತ್ರಕರ್ತರನ್ನು ಗುರಿಯಾಗಿಸಲಾಗುತ್ತಿದೆ: ಪ್ರಧಾನಿ ಕಳವಳ
ಜಗತ್ತಿನಾದ್ಯಂತ ಮುಕ್ತ ಇಂಟರ್ನೆಟ್ ಮತ್ತು ಮುಕ್ತ ಅಭಿವ್ಯಕ್ತಿಗೆ ಬೆಂಬಲ ನೀಡುವ ಮೌಲ್ಯಗಳು ಹೆಚ್ಚು ಅಪಾಯದಲ್ಲಿದೆ ಎಂದು ಟ್ವಿಟರ್ ಹೇಳಿದೆ. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ, “ಭಾರತದಲ್ಲಿ ನಮ್ಮ ತತ್ವಗಳನ್ನು ರಕ್ಷಿಸುವ ಹಾಗೂ ನಿಯಮಗಳನ್ನು ಜಾರಿಗೊಳಿಸುವ ಪೂರ್ವಭಾವಿ ಪ್ರಯತ್ನವಾಗಿ ಸಣ್ಣ ಅಪ್ಡೇಟ್ ಒಂದನ್ನು ಹಂಚಿಕೊಳ್ಳಲು ಬಯಸಿದ್ದೇವೆ” ಎಂದು ಟ್ವಿಟರ್ ಹೇಳಿದೆ.
ಪಾಕಿಸ್ತಾನ ಮತ್ತು ಖಲಿಸ್ತಾನಿಗಳಿಗೆ ಸಂಬಂಧಿಸಿದ 1,178 ಹ್ಯಾಂಡಲ್ಗಳು ನವೆಂಬರ್ನಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿ ಅವುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್ಗೆ ಸೂಚಿಸಿತ್ತು. ಈ ಬಗ್ಗೆ ತಾನು ಕೈಗೊಳ್ಳುವ ಕ್ರಮಗಳ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಟ್ವಿಟರ್ ತಿಳಿಸಿದೆ.
ತಡೆಹಿಡಿಯುವಂತೆ ಆದೇಶಿಸಲಾದ ಭಾಗಶಃ ಖಾತೆಗಳನ್ನು ಭಾರತದೊಳಗೆ ಮಾತ್ರ ತಡೆಹಿಡಿದಿದ್ದೇವೆ. ಈ ಖಾತೆಗಳು ಭಾರತದ ಹೊರಗೆ ಲಭ್ಯವಾಗುತ್ತವೆ ಎಂದು ಹೇಳಿರುವ ಟ್ವಿಟರ್, “ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಮ್ಮ ತತ್ವಗಳಿಗೆ ಅನುಗುಣವಾಗಿ, ನಮಗೆ ನಿರ್ದೇಶಿಸಲಾದ ಕ್ರಮಗಳು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಎಂದು ನಾವು ನಂಬುವುದಿಲ್ಲ, ಆದ್ದರಿಂದ ಸುದ್ದಿ ಮಾಧ್ಯಮ ಘಟಕವನ್ನು ಒಳಗೊಂಡಂತೆ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳು ಖಾತೆಗಳ ಮೇಲೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೆ ಮಾಡಿದರೆ, ಭಾರತೀಯ ಕಾನೂನಿನಡಿಯಲ್ಲಿ ಅವರ ಮುಕ್ತ ಅಭಿವ್ಯಕ್ತಿಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ಹೇಳಿದೆ.
ಇದನ್ನೂ ಓದಿ: ಮೋದಿ-ಆದಿತ್ಯನಾಥ್ ವಿರುದ್ದ ಟೀಕೆ: 293 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!