ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್ಪಿ ಖಾತ್ರಿಗೊಳಿಸುವ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ದೆಹಲಿ ಗಡಿಗಳ ಜೊತೆಗೆ ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್ಗಳಲ್ಲಿ ರೈತರ ಬೃಹತ್ ಮಹಾಪಂಚಾಯತ್ಗಳು ನಡೆಯುತ್ತಿದ್ದು ಕೇಂದ್ರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿವೆ. ಈಗ ಅದೇ ಮಾದರಿಯಲ್ಲಿ ರಾಜ್ಯದ ಸಮಾಜವಾದಿ ಹೋರಾಟದ ಜಿಲ್ಲೆ, ಮುಖ್ಯಮಂತ್ರಿಗಳ ತವರೂರು ಶಿವಮೊಗ್ಗದಲ್ಲಿ ಮೊದಲ ಬೃಹತ್ ‘ರೈತ ಮಹಾಪಂಚಾಯತ್’ ನಡೆಸಲು ವೇದಿಕೆ ಸಜ್ಜಾಗಿದೆ. ಎಲ್ಲಾ ರೈತ, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸುವ ನಿರ್ಣಯ ಕೈಗೊಂಡಿದ್ದಾರೆ.
ಈ ಕುರಿತು ಮಂಗಳವಾರ ಶಿವಮೊಗ್ಗದಲ್ಲಿ ರೈತ ಸಂಘಟನೆಗಳ ಮತ್ತು ಪ್ರಗತಿಪರ ಸಂಘಟನೆಗಳ ಮಹಾಸಭೆ ನಡೆದಿದ್ದು, ಮಾರ್ಚ್ 15 ರಂದು ಶಿವಮೊಗ್ಗದಲ್ಲಿ ಬೃಹತ್ ರೈತ ಮಹಾ ಪಂಚಾಯತ್ ನಡೆಸಲು ತೀರ್ಮಾನಿಸಲಾಗಿದೆ. ಇದು ಕರ್ನಾಟಕದ ಪಾಲಿಗೆ ಮೊದಲ ಮಹಾಪಂಚಾಯತ್ ಆಗಲಿದ್ದು, ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಮಹಾಪಂಚಾಯತ್ಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ದೆಹಲಿಯಲ್ಲಿ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾದ ಡಾ.ದರ್ಶನ್ ಪಾಲ್, ಬಲ್ಬೀರ್ ಸಿಂಗ್ ರಾಜೇವಾಲ್ ಮತ್ತು ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರನ್ನು ಮಹಾಪಂಚಾಯತ್ಗೆ ಆಹ್ವಾನಿಸಲಾಗುತ್ತದೆ.
ಶಿವಮೊಗ್ಗದಲ್ಲಿ ನಡೆದ ಮಹಾಸಭೆಯ ವಿಡಿಯೋ ನೋಡಿ.
ಕರ್ನಾಟಕದ ರಾಜ್ಯ ರೈತ ಸಂಘದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರರವರು ಸೇರಿದಂತೆ ಎಲ್ಲಾ ರೈತ ಮುಖಂಡರು, ದಲಿತ ಮುಖಂಡರು, ಎಡಪಕ್ಷಗಳ ಮುಖಂಡರು, ಕಾರ್ಮಿಕ ಮುಖಂಡರು, ಮಹಿಳಾ ಮುಖಂಡರು ಮಹಾಪಂಚಾಯತ್ನಲ್ಲಿ ಮಾತನಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ ಗಂಗಾಧರ್, ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಎಂ ಶ್ರೀಕಾಂತ್, ಸೂಡಾದ ಮಾಜಿ ಅಧ್ಯಕ್ಷರಾದ ಎನ್ ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುಂದ್ರೇಶ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಚ್ ಹಾಲೇಶಪ್ಪ, ದಸಸಂ ರಾಜ್ಯ ಸಂಘಟನಾ ಸಂಚಾಲಕರಾದ ಎಂ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಂಜುನಾಥ್ಗೌಡ್ರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಹನುಮಕ್ಕ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಗಳಾದ ಕೆ.ಎಲ್ ಅಶೋಕ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ರವಿಕುಮಾರ್, ಮಹಿಳಾ ಮುಖಂಡರಾದ ಶಾಂತಮ್ಮ, ಮಹಾನಗರ ಪಾಲಿಗೆ ವಿರೋಧ ಪಕ್ಷದ ನಾಯಕರಾದ ಯೋಗೀಶ್, ಜಯಕರ್ನಾಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು, ಹಿರಿಯ ಮುಖಂಡರಾದ ರವಿ ಕುಗ್ವೆ, ಪ್ರಗತಿಪರ ಸಂಘಟನೆಯ ಸಂಚಾಲಕರಾದ ಉಜ್ಜಯಿನಿ ರಾಜು, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ, ಕಾಂಗ್ರೆಸ್ ನಗರ ಅಧ್ಯಕ್ಷರರಾದ ವಿಶ್ವನಾಥ್ ಕಾಶಿ, ವಕೀಲರಾದ ಕೆ.ಪಿ ಶ್ರೀಪಾಲ್, ಸುದ್ದಿ ಸಾಗರ ಪತ್ರಿಕೆಯ ರಾಘವೇಂದ್ರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಮುಖಂಡರಾದ ಪರಮೇಶ್ವರ್ ದೂಗೂರು, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿಗಳಾದ ಅನನ್ಯ ಶಿವಕುಮಾರ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪ ಮೇಯರ್ ಪಾಲಾಕ್ಷಿ ಸೇರಿದಂತೆ 36 ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ರೈತ ಮಹಾಪಂಚಾಯತ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
“ಸಮಾಜವಾದಿ ತವರೂರಾದ ಶಿವಮೊಗ್ಗ ಜಿಲ್ಲೆಯು ಅನೇಕ ಚಳವಳಿಗಳ ಉಗಮ ಸ್ಥಾನವಾಗಿದೆ. ಈಗ ಶಿವಮೊಗ್ಗದಲ್ಲಿ ಜನರ ಚಳವಳಿವೊಂದು ಮರುಜನ್ಮ ಪಡೆಯುವ ಅವಕಾಶ ಬಂದೊದಗಿದೆ. ದೇಶದ ವರ್ತಮಾನದ ಜನವಿರೋಧಿ ಪ್ರಭುತ್ವದ ರೈತ ವಿರೋಧಿ ನಿರ್ಧಾರಗಳನ್ನು ಧಿಕ್ಕರಿಸುವುದು ಈ ಕಾಲದ ತುರ್ತು ಮತ್ತು ಈ ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಚಳವಳಿ ಅನ್ನ ತಿನ್ನುವವರ ಚಳಚವಳಿಯಾಗಿದೆ. ಭಾರತದಾದ್ಯಂತ ನಡೆಯುತ್ತಿರುವ ರೈತ ಚಳವಳಿಯನ್ನು ಬಲಗೊಳಿಸಲು ಶಿವಮೊಗ್ಗದ ಹೋರಾಟದ ಭೂಮಿಯಲ್ಲಿ ಮಾರ್ಚ್ 15 ರಂದು ರೈತರ ಮಹಾಪಂಚಾಯತ್ ನಡೆಸಲು ಮಹಾಸಭೆ ನಿರ್ಣಯಿಸುತ್ತದೆ” ಎಂಬ ಸಂಕಲ್ಪವನ್ನು ಸಭೆಯಲ್ಲಿ ಎಚ್.ಆರ್ ಬಸವರಾಜಪ್ಪ ಮತ್ತು ಕೆ.ಟಿ ಗಂಗಾಧರ್ ಬೋಧಿಸಿದರು.
ಇದನ್ನೂ ಓದಿ; ಹತ್ರಾಸ್, ಬಿಜ್ನೋರ್ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು