Homeಮುಖಪುಟರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು | ದೇವನೂರ ಮಹಾದೇವ

ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು | ದೇವನೂರ ಮಹಾದೇವ

ಕಾಯ್ದೆಗಳಲ್ಲಿ ಬಳಸಿರುವ ಒಕ್ಕಣೆಗಳೊ ಮೋಹಕವಾಗಿವೆ, ’ಪ್ರಚಾರ ಮತ್ತು ಸೌಲಭ್ಯ’ ಅಂತೆ ಹಾಗೂ ’ಸಬಲೀಕರಣ ಮತ್ತು ಸಂರಕ್ಷಣೆಯಂತೆ!’ ಬಣ್ಣಬಣ್ಣದ ಮಾತುಗಳು ಜನ ಸಾಮಾನ್ಯರಿಗೆ; ಬಂಡವಾಳ ಮಾತ್ರ ಬಂಡವಾಳಷಾಹಿಗಳಿಗೆ.

- Advertisement -
- Advertisement -

ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರು ಅವರು ಬದುಕಿದ್ದರೆ ಅವರಿಗೆ 84 ತುಂಬಿ 85 ನಡೆಯುತ್ತಿತ್ತು. ಮುವ್ವತ್ತು ವರ್ಷಗಳ ಹಿಂದೆ, ವಿಶ್ವ ವಾಣಿಜ್ಯ ಸಂಸ್ಥೆ (WTO), ಕಾರ್ಪೊರೇಟ್ ಕಂಪನಿಗಳ ಬಗ್ಗೆ ನಂಜುಂಡಸ್ವಾಮಿಯವರು ಆಡುತ್ತಿದ್ದ ಮಾತುಗಳನ್ನು ಇಂದು ಇಡೀ ದೇಶ ಮಾತಾಡುತ್ತಿದೆ, ಹಳ್ಳಿಗಾಡಿನ ಅನಕ್ಷರಸ್ಥರೂ ಕೂಡ ಮಾತಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಬದುಕಿರಲಿ ಅಥವಾ ಕಾಲವಶನಾಗಿರಲಿ ಇದಕ್ಕಿಂತ ದೊಡ್ಡಗೌರವ, ಇದಕ್ಕಿಂತ ಸ್ಮರಣೆ ಬಹುಶಃ ಬೇರೊಂದಿಲ್ಲವೇನೊ.

ನನಗೆ ಸುಮ್ಮನೆ ಒಂದು ಕುತೂಹಲ ಅಷ್ಟೆ – ಪ್ರೊ. ನಂಜುಂಡಸ್ವಾಮಿಯವರು ಬದುಕಿದ್ದರೆ ಈಗ ಎಲ್ಲಿರುತ್ತಿದ್ದರು? ಅಮೃತ ‌ಭೂಮಿ? ಡೆಲ್ಲಿ ಗಡಿಗಳಲ್ಲಿ ರೈತರೊಡನೆ? ಎಲ್ಲಿ ಇರುತ್ತಿದ್ದರು? ನನಗನ್ನಿಸುತ್ತದೆ, ಬಹುಶಃ ಅವರಿಗೆ ಈ ಅವಕಾಶವೇ ಸಿಗುತ್ತಿರಲಿಲ್ಲ. ನನಗೆ ಗ್ಯಾರಂಟಿ ಇದೆ, UAPA ಅಂದರೆ – Unlawful Activities (Prevantion) Act, ಅಂದರೆ ‘ಕಾನೂನು ಬಾಹಿರ (ತಡೆ) ಕಾಯ್ದೆ’ ಅಂತಾರಲ್ಲ, ಈ ಕಾಯ್ದೆ ಅನ್ವಯ ವಿಚಾರಣೆಯೂ ಇಲ್ಲದೆ ಬಂಧನದಲ್ಲಿರುತ್ತಿದ್ದರು. ಜೊತೆಗೆ ’ದೇಶದ್ರೋಹಿ’ ಅಂತಲೂ ಅನ್ನಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಇಂದು ಎಂ. ಡಿ. ನಂಜುಂಡಸ್ವಾಮಿ ಅವರಂತಹ ಪ್ರಖರ ಚಿಂತಕರು, ಹೋರಾಟಗಾರರು ‘ದೇಶದ್ರೋಹಿ’ಗಳು ಎಂದು ಕರೆಸಿಕೊಳ್ಳುತ್ತಾ ‘ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ’ ಅನ್ವಯ ವಿಚಾರಣೆ ಇಲ್ಲದೆ ಬಂಧನದಲ್ಲಿರುವುದನ್ನು ನೋಡಿದಾಗ ಇದನ್ನಿಸುತ್ತದೆ. ಇಂದು ಗಾಂಧಿ, ಅಂಬೇಡ್ಕರ್, ಜೆ.ಪಿ. ಬದುಕಿದ್ದರೂ ಕೂಡ ಅವರ ಗತಿಯೂ ಇದಕ್ಕಿಂತ ಭಿನ್ನವಾಗಿರುತ್ತಿತ್ತು ಎಂದು ಹೇಳುವ ಧೈರ್ಯ ನನಗಿಲ್ಲ.
ಆಗ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಒಂದು ಕಂಪನಿ ಸರ್ಕಾರದ ಆಳ್ವಿಕೆ ಇತ್ತು. ಇಂದು ಅಂಬಾನಿ ಅದಾನಿ ಮತ್ತಿತರ ಹತ್ತಾರು ಕಂಪನಿ ಸರ್ಕಾರಗಳ ಆಳ್ವಿಕೆ ನಡೆಯುತ್ತಿದೆಯೇನೊ ಅನ್ನಿಸುತ್ತಿದೆ.

ಜನರಿಂದ ಆಯ್ಕೆಯಾದ ಯಾವ ಲಕ್ಷಣವೂ ಮೋದಿಶಾರ ಆಳ್ವಿಕೆಯಲ್ಲಿ ಕಾಣುತ್ತಿಲ್ಲ. ಯಾಕೆಂದರೆ, ಕಳೆದ ಎರಡುವರೆ ತಿಂಗಳಿಂದಲೂ ಲಕ್ಷಾಂತರ ಜನರು ರಾಜಧಾನಿ ದೆಹಲಿ ಗಡಿಯ ಸುತ್ತಲೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರಾಣವನ್ನು ಪಣಕ್ಕಿಟ್ಟು ಕುಳಿತಿದ್ದರೂ, ಆ ಧರಣಿ ಸ್ಥಳದಲ್ಲೆ ನೂರಾರು ಜನರು ಸತ್ತಿದ್ದರೂ ಇಡೀ ದೇಶವೇ ಒಕ್ಕೊರಳಿನಿಂದ ಅದೇ ಬೇಡಿಕೆಗಳನ್ನು ಕೂಗಿ ಕೂಗಿ ಹೇಳುತ್ತಿದ್ದರೂ ಮೋದಿಶಾರು ಕಲ್ಲುಹೃದಯವರಾಗಿದ್ದಾರೆ. ಅವರ ನಡೆನುಡಿಗಳಲ್ಲಿ ಜನರಿಂದ ಆಯ್ಕೆಯಾದ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಅಂಬಾನಿ ಅದಾನಿ ಬಂಡವಾಳಶಾಹಿ ಕಂಪನಿ ಸರ್ಕಾರಗಳಿಂದ ನೇಮಕಗೊಂಡವರಂತೆ ಮೋದಿಶಾರವರು ವರ್ತಿಸುತ್ತಿದ್ದಾರೆ.

ಜೊತೆಗೆ, ಇದೆಂಥ ವಂಚಕ ರಾಜಕಾರಣವೆಂದರೆ, ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಮೋದೀಜಿಯವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತಾಡುತ್ತಾ – ’ಎಂಎಸ್‌ಪಿ ಥಾ, ಹೈ, ರಹೇಗಾ’ ಅನ್ನುತ್ತಾರೆ. ಅಂದರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ ಮುಂದೆಯೂ ಇರುತ್ತೆ ಅಂತ, ಭೂತ ವರ್ತಮಾನ ಭವಿಷತ್ ಕಾಲ ನುಡಿಯುವ ಪ್ರವಾದಿಯಂತೆ ಗಂಭೀರವಾದ ಧ್ವನಿಯಲ್ಲಿ ಹೇಳುತ್ತಾರೆ.

ಇದನ್ನೂ ಓದಿ: ’ನಮ್ಮ ಮೇಲಿನ ಕೇಸುಗಳು ನಾವು ಹೋರಾಟ ನಡೆಸದಂತೆ ತಡೆಯಲು ಸಾಧ್ಯವಿಲ್ಲ’- ರೈತ ಮುಖಂಡರು

ಆಯ್ತು, ಹಾಗಾದರೆ ಡೆಲ್ಲಿ ಸುತ್ತಲೂ ಲಕ್ಷಾಂತರ ಜನರು ಮನೆ ಮಠ ಕೆಲಸಕಾರ್‍ಯ ತೊರೆದು, ನೂರಾರು ಜನರು ಅಲ್ಲೆ ಸತ್ತರೂ ಅದನ್ನು ನುಂಗಿಕೊಂಡು, ಸರ್ಕಾರ + ಪೊಲೀಸ್ + ಬಿಜೆಪಿ ಸದಸ್ಯರು ಜೊತೆಗೂಡಿ ಕೊಡುತ್ತಿರುವ ಕಷ್ಟ ಕೋಟಲೆಗಳನ್ನು ಸಹಿಸಿಕೊಂಡು ಜೀವನ್ಮರಣದ ಪ್ರಶ್ನೆ ಎಂಬಂತೆ ಕೂತಿರುವುದಾದರೂ ಯಾಕೆ? ಆ ಮೂರು ಕೃಷಿ ಕಾಯ್ದೆಗಳು ಕರಾಳ ಶಾಸನಗಳೆಂದು ಇಡೀ ದೇಶ ಒಕ್ಕೊರಲಿನಿಂದ ಕೂಗುತ್ತಿರುವುದಾದರೂ ಯಾಕೆ? ಅವರೇನೂ ಮೂಢಾತ್ಮರೆ? ಖಂಡಿತಾ ಅಲ್ಲ. ಅವರು ಕೇಳುತ್ತಿರುವುದು ಇಷ್ಟೆ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಶಾಸನ ಮಾಡಿ ಎಂದಷ್ಟೆ. ಇದನ್ನು ಮಾಡದಿದ್ದರೆ ಅದು ಇದ್ದರೂ ಇಲ್ಲದಂತೆ ಅಂತ ರೈತಾಪಿ ಜನರ ಅಹವಾಲು. ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು. ಅವರು ಬೇಕಂತಲೇ ಕೇಳಿಸಿಕೊಳ್ಳುತ್ತಿಲ್ಲ. ಮತ್ತೆ ಇದು ಅವರಿಗೆ ಗೊತ್ತಿಲ್ಲ ಅಂತಲೂ ಅಲ್ಲ.

ನಂಜುಂಡಸ್ವಾಮಿ
PC: enacademic.com

ಹಾಗಾಗಿ ಪ್ರಧಾನಿ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುತ್ತೇನೆ – ನೀವು ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ. ಒಂದು ಮಾತು, ಅದು ನಿಮ್ಮದೇ ಮಾತು, ಅದನ್ನಾದರೂ ಕೇಳಿಸಿಕೊಳ್ಳುತ್ತೀರಾ? ಇಸವಿ 2011. ನೀವು ಆಗ ಗುಜರಾತ್ ಮುಖ್ಯಮಂತ್ರಿಗಳು. ಅಂದಿನ ಕಾಂಗ್ರೆಸ್ ಸರ್ಕಾರವು ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಗೆ ನಿಮ್ಮನ್ನೆ ಅಧ್ಯಕ್ಷರನ್ನಾಗಿ ಮಾಡಿರುತ್ತದೆ. ಆಗ ನೀವು ವರದಿ ಕೊಡುತ್ತೀರಿ – ಏನಂತ? ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು – ಅಂತ’. ಇನ್ನೂ ಮುಂದುವರಿದು ನೀವು, ನಿಮ್ಮ ವರದಿಯಲ್ಲಿ ’ರೈತ ಮತ್ತು ವ್ಯಾಪಾರಿಯ ನಡುವಣ ಯಾವುದೇ ಬೆಲೆಗಳಿಗೆ ಸಂಬಂಧಿಸಿದ ವ್ಯಾಪಾರಿ ಒಪ್ಪಂದವು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇರಬಾರದೆಂಬ ಕಾನೂನು ಮಾಡಬೇಕೆಂದು’ ಹೇಳಿರುತ್ತೀರಿ.

ಇವೆಲ್ಲಾ ನಿಮ್ಮದೇ ವರದಿಯ ಅಧಿಕೃತ ಮಾತುಗಳು. ಈಗ ಎಲ್ಲರೂ ಕೇಳುತ್ತಿರುವುದು ಇದನ್ನೆ. ಅಂದರೆ ನೀವು ವರದಿ ಕೊಟ್ಟಿದ್ದೀರಲ್ಲ ಅದನ್ನೆ. ನೀವು ಹೇಳಿದ್ದನ್ನೇ ಈಗ ರೈತರು ಒತ್ತಾಯಿಸುತ್ತಿದ್ದರೂ ನೀವು ಪಿಟೀಲು ಬಾರಿಸುತ್ತಿದ್ದೀರಿ. ಇದಕ್ಕೆ ಏನನ್ನ ಬೇಕು? ಪದಗಳು ಸಿಕ್ಕುತ್ತಿಲ್ಲ.

ಇದನ್ನೂ ಓದಿ: ಹತ್ರಾಸ್, ಬಿಜ್ನೋರ್‌ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು

ಇನ್ನೊಂದು – ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಗೆ ತಂದಿರುವ ತಿದ್ದುಪಡಿಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು ಎಂದಿದೆ. ಇದು ಖಾಸಗಿಗೆ ದಿಡ್ಡಿ ಬಾಗಿಲು ತೆರೆದಂತೆ. ನಮ್ಮದೇ ಒಂದು ಉದಾಹರಣೆ: ಮುವತ್ತು ವರ್ಷಗಳ ಹಿಂದೆ – ಕಾಫಿ ಮಾರಾಟ ಮಂಡಲಿಗೇ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಿತ್ತು. ಕಾಫಿ ಮಾರಾಟ ಮಂಡಲಿಯಲ್ಲಿ ಭ್ರಷ್ಠಾಚಾರ ತಲೆದೋರಿ ಪ್ರತಿಭಟಿಸಿದಾಗ ಇದಕ್ಕೆ ಪರಿಹಾರ ಎಂಬಂತೆ ಖಾಸಗಿ ವ್ಯಾಪಾರಸ್ಥರು ರೈತರಿಂದ ನೇರವಾಗಿ ಕೊಂಡುಕೊಳ್ಳುವ ನಿಯಮ ಜಾರಿಗೆ ಬಂತು. ಈಗ? ಕಾಫಿ ಮಾರಾಟ ಮಂಡಲಿ ಖಾಸಗಿ ಹೊಡೆತಕ್ಕೆ ಅವಶೇಷವಾಗಿದೆ.

ಆಮೇಲೆ ಈಗ 2000 ರಿಂದ 2005 ರ ಅವಧಿಯಲ್ಲಿ ಕಾಫಿಗೆ ಏನು ಬೆಲೆ ಸಿಗುತ್ತಿತ್ತೊ 2020 ರಲ್ಲಿ ಅದಕ್ಕಿಂತ ಕಡಿಮೆಯಾಗಿದೆ. ಕಾಫಿ ಬೆಳೆಗಾರ ಕಣ್ಣುಬಾಯಿ ಬಿಡುತ್ತಿದ್ದಾನೆ. ಇನ್ನು ಮುಂದೆ ಎಲ್ಲ ಕೃಷಿ ಉತ್ಪನ್ನಗಳಿಗೂ ಆಗುವುದು ಇದೇನೆ. ಲಾಭವಿಲ್ಲದೆ, ಕೆಲವೊಮ್ಮೆ ನಷ್ಟಕ್ಕೆ ಕೂಡ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತ ಜೀವಿಸುವ ಜೀವ ಈ ಭೂಮಿ ಮೇಲೆ ರೈತ ಮಾತ್ರ ಎಂದು ಕಾಣುತ್ತದೆ! ತೆರಿಗೆ ಕಟ್ಟುತ್ತೇವೆ ಎಂದು ಅಂದುಕೊಳ್ಳುವವರು, ಲಾಭವಿಲ್ಲದೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಮಾಜಕ್ಕೆ ರೈತಾಪಿ ಕೊಟ್ಟಿದ್ದೆಷ್ಟು ಎಂದೂ ನೋಡಿದರೆ ಒಳ್ಳೆಯದು.

ಇರಲಿ, ಹೀಗೆಯೇ ಖಾಸಗಿ ಎದರು ಸರ್ಕಾರಿ ಶಾಲೆ / ಕಾಲೇಜುಗಳ ಸ್ಥಿತಿಗತಿ ಏನಾಗಿದೆ? ಖಾಸಗಿ ಜಿಯೋ ಎದುರು ಸಾರ್ವಜನಿಕ ಸಹಭಾಗಿತ್ವದ ಬಿಎಸ್‌ಎನ್‌ಎಲ್ ತೆವಳುತ್ತಿಲ್ಲವೆ? ಸರ್ಕಾರವೇ ತನ್ನದೇ ಬಿಎಸ್‌ಎನ್‌ಎಲ್‌ನ ಕತ್ತು ಹಿಸುಕುತ್ತಿಲ್ಲವೆ? ಕಣ್ಣುಬಿಟ್ಟು ನೋಡಿದ ಕಡೆಗೆಲ್ಲಾ ಇಂಥವೇ ಇಂಥವೇ ಕಾಣುತ್ತವೆ. ಈಗ ವ್ಯವಸಾಯ ಉತ್ಪನ್ನಗಳಿಗೆ ಮಾರಾಟಕ್ಕೆ ಖಾಸಗಿಗೆ ಅವಕಾಶ ಕೊಟ್ಟಲ್ಲಿ ಕಾಫಿ ಬೆಳೆಗಾರರಂತೆಯೇ ಎಲ್ಲ ರೈತರೂ ಕಣ್ಣುಬಾಯಿ ಬಿಡಬೇಕಾಗುತ್ತದೆ. ಅಥವಾ? ಇಂಥಹ ಕೃಷಿ ಕಾಯ್ದೆಗಳು ಕೊನೆಗೆ ರೈತಾಪಿಯನ್ನು ಆತನ ಭೂಮಿಯಿಂದ ಕಿತ್ತು ದೂರದ ಊರಿಗೆ ಎಸೆಯುತ್ತವೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಮಹಾತ್ಮಾ ಗಾಂಧಿ ಮೊಮ್ಮಗಳ ಬೆಂಬಲ: ಅವರು ಹೇಳಿದ್ದೇನು?

ಹಾಗೆಯೇ ಇನ್ನೊಂದು. ರೈತ ಮತ್ತು ಕಂಪನಿಗಳ ನಡುವೆ ಏರ್ಪಡುವ ಕೃಷಿ ಒಪ್ಪಂದಕ್ಕೆ ಅನುಗುಣವಾಗಿ ಈ ಭೂಮಿ ಮೇಲೆ ಎಲ್ಲೂ ಕಂಪನಿಗಳು ನುಡಿದಂತೆ ನಡೆದುಕೊಂಡ ಉದಾಹರಣೆಗಳು ವಿರಳ. ಇಲ್ಲಿಯದೇ ಒಂದು ಉದಾಹರಣೆ: ಹಾರೋಹಳ್ಳಿ ರೈತರೊಬ್ಬರು (ನಿವೃತ್ತ ಮಿಲಿಟರಿಯವರು) ಬಿಡದಿ ಹತ್ತಿರ ಒಂದು ಬೀಜದ ಕಂಪನಿಯೊಂದಿಗೆ ಕಂಟ್ರಾಕ್ಟ್ ಮಾಡಿಕೊಂಡು 7 ಲಕ್ಷ ಖರ್ಚು ಮಾಡಿ ಅಮೆರಿಕನ್ ಸೌತೆ ಬೆಳೆದು ಕುಯ್ಲು ಮಾಡಿ ತೆಗೆದುಕೊಂಡು ಹೋದಾಗ, ಕಂಪನಿಯವರು – ಕುಯ್ಲು ಒಂದು ವಾರ ಲೇಟಾಗಿದ್ದು ಈ ಸೌತೆಯಲ್ಲಿ ನೀರಿನಂಶ ಕಡಿಮೆ ಆಗಿದೆ, ಹಾಗಾಗಿ ಖರೀದಿ ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದಾರೆ. ಆ ರೈತ ಏನು ಮಾಡಬೇಕು. ತನ್ನ ಕೃಷಿ ಭೂಮಿಯನ್ನೇ ಮಾರಿ ಕೈತೊಳೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇದೆಯೇ? ಪರಿಣಾಮದಲ್ಲಿ ಈ ಗುತ್ತಿಗೆ ಕೃಷಿಯೂ ಕೃಷಿಕರನ್ನು ಕೃಷಿ ಭೂಮಿಯಿಂದಲೇ ಒಕ್ಕಲೆಬ್ಬಿಸುತ್ತದೆ.

ಈ ಮೂರು ಕೃಷಿ ಕಾಯ್ದೆಗಳನ್ನು ಒಪ್ಪಿಕೊಂಡರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ. ಲಂಗುಲಗಾಮು ಇಲ್ಲದ ಈ ಕಾನೂನುಗಳು ಜಾರಿಯಾದರೆ ಉದಾಹರಣೆಗೆ, ಈರುಳ್ಳಿ, ಬೇಳೆ ಬೆಲೆಗಳನ್ನು ಸುಗ್ಗಿಯಲ್ಲಿ ಇಳಿಸಿ ಗೋಡಾನ್‌ನಲ್ಲಿ ತುಂಬಿಟ್ಟು ಕೃತಕ ಅಭಾವ ಸೃಷ್ಟಿಸಿ ಬೆಲೆ ಗಗನಕ್ಕೇರಿಸುತ್ತಿರುವಂತೆ ಎಲ್ಲಾ ದವಸ ಧಾನ್ಯಗಳಿಗೂ ಆಗುತ್ತದೆ. ಆಗ ಏನಾಗುತ್ತದೆ? ಇಂದಿನ ಮಧ್ಯಮವರ್ಗವು ಮುಂದೆ ಬಡತನದತ್ತ ದೂಕಲ್ಪಡುತ್ತದೆ. ಇಂದಿನ ಬಡವರು ಮುಂದೆ ಹಸಿವಿನ ದವಡೆಗೆ ಸಿಲುಕುತ್ತಾರೆ. ಜನಸಾಮಾನ್ಯರ ದಿನನಿತ್ಯದ ಜೀವನ ತತ್ತರಿಸುತ್ತದೆ. ಹೇಳಿ – ಈ ಕಾನೂನುಗಳು ಯಾರಿಗೆ ಸಂಬಂಧಿಸಿದ್ದಲ್ಲ? ಬದುಕುತ್ತಿರುವ ಎಲ್ಲರದೂ ಅಲ್ಲವೆ? ರೈತರ ಈ ಹೋರಾಟದಲ್ಲಿ ಜನಸಾಮಾನ್ಯರ ಹಿತವೂ ಅಡಗಿರುವುದನ್ನು ಗಮನಿಸಬೇಕಾಗಿದೆ.

ಈ ಕಾಯ್ದೆಗಳಲ್ಲಿ ಬಳಸಿರುವ ಒಕ್ಕಣೆಗಳೊ ಮೋಹಕವಾಗಿವೆ. ನೋಡಿ – ’ಪ್ರಚಾರ ಮತ್ತು ಸೌಲಭ್ಯ’ ಅಂತೆ. ’ಸಬಲೀಕರಣ ಮತ್ತು ಸಂರಕ್ಷಣೆಯಂತೆ!’ ಬಣ್ಣಬಣ್ಣದ ಮಾತುಗಳು ಜನ ಸಾಮಾನ್ಯರಿಗೆ; ಬಂಡವಾಳ ಮಾತ್ರ ಬಂಡವಾಳಷಾಹಿಗಳಿಗೆ. ಈ ಮಾತುಗಳು ನಿಜವಲ್ಲದಿದ್ದರೆ, ಕೋವಿಡ್ ಹಾವಳಿಯ ಜರ್ಜರಿತವಾದ ಕಾಲಮಾನದಲ್ಲೆ ಕೇವಲ ನೂರು ಜನ ಶತಕೋಟ್ಯಾದೀಶರು 12½ ಲಕ್ಷ ಕೋಟಿ ಲಾಭಗಳಿಸಲು ಹೇಗೆ ಸಾಧ್ಯ? ಹೀಗಿದ್ದೂ ಈ ಕಾಯ್ದೆಗಳು ರೈತರ ಬದುಕಿಗೆ ಮುಕ್ತಿ ನೀಡುವ ಕಾಯ್ದೆಗಳು ಎಂಬಂತೆ ಮೋದಿಶಾರು ಬಿಂಬಿಸುತ್ತಿದ್ದಾರೆ. ಹೌದು, ಸಾಯಿಸುವುದಕ್ಕೂ ’ಮುಕ್ತಿ ನೀಡುವುದು’ ಎಂಬ ಅರ್ಥವೂ ಇದೆ! ಮೈಯೆಲ್ಲ ಕಣ್ಣಾಗಿರಬೇಕಾದ ಕಾಲ ಇದು.

ಇದನ್ನೂ ಓದಿ: 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...