| ಇಸ್ಮತ್ ಪಜೀರ್ |
ಮೇ 04, 1799 ರಂದು ಕನ್ನಡ ನಾಡಿನ ಅಪ್ರತಿಮ ವೀರ, ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹುತಾತ್ಮನಾದ ದಿನ.
ಟಿಪ್ಪು ಸುಲ್ತಾನನ ಕೊನೆಯ ಯುದ್ಧ ಅರ್ಥಾತ್ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಇಂಚಿಂಚೂ ಬಿಡದೆ ಬ್ರಿಟಿಷ್ ಮತ್ತು ಫ್ರೆಂಚ್ ಇತಿಹಾಸಕಾರರು ಪ್ರತಿಯೊಂದನ್ನೂ ದಾಖಲಿಸಿದ್ದಾರೆ. ಟಿಪ್ಪುವಿನ ಬಗ್ಗೆ ಅತ್ಯಂತ ಮಹತ್ವದ ಚಾರಿತ್ರಿಕ ಕಾದಂಬರಿ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಬರೆದ ಭಗವಾನ್ ಶ್ಯಾಮದಾಸ್ ಗಿದ್ವಾನಿ ಅದಕ್ಕಾಗಿ ಅತೀ ಹೆಚ್ಚು ಅಧ್ಯಯನ ನಡೆಸಿದ್ದು ಫ್ರೆಂಚ್ ಮತ್ತು ಬ್ರಿಟಿಷ್ ಇತಿಹಾಸ ಗ್ರಂಥಗಳನ್ನಾಗಿದೆ. ಗಿದ್ವಾನಿ ಬರೆದಿದ್ದು ಒಂದು ಚಾರಿತ್ರಿಕ ಕಾದಂಬರಿಯಾದರೂ ಅವರು ಅದಕ್ಕೆ ಮಸಾಲೆ ತುಂಬಿಸುವ ಕೆಲಸ ಮಾಡಿಲ್ಲ ಎಂಬುವುದಕ್ಕೆ ಅವರು ಬಳಸಿದ ದಾಖಲೆಗಳೇ ಸಾಕ್ಷ್ಯ ಒದಗಿಸುತ್ತವೆ.
ನಮ್ಮಲ್ಲಿ ಒಂದೋ ಟಿಪ್ಪುವನ್ನು ಅತಿಯಾಗಿ ವೈಭವೀಕರಿಸಲಾಗುತ್ತದೆ ಅಥವಾ ಅತಿಯಾಗಿ ದೂಷಿಸಲಾಗುತ್ತದೆ. ಇವೆರಡರ ಮಧ್ಯೆ ಹುದುಗಿರುವ ಸತ್ಯಗಳು ಅನೇಕ ಸಂದರ್ಭಗಳಲ್ಲಿ ಮಸುಕಾಗಿಬಿಡುವ ಸಾಧ್ಯತೆಗಳಿವೆ. ನಾವು ಟಿಪ್ಪುವಿಗೆ ದ್ರೋಹ ಬಗೆದ ಪೂರ್ಣಯ್ಯ ಮತ್ತು ಮೀರ್ ಸಾದಿಖರನ್ನು ಋಣಾತ್ಮಕ ಕಾರಣಗಳಿಗಾಗಿಯಾದರೂ ಆಗಾಗ ನೆನಪಿಸಿಕೊಳ್ಳುತ್ತೇವೆ ಆದರೆ ಟಿಪ್ಪುವಿಗಾಗಿ ಮತ್ತು ನಾಡಿಗಾಗಿ ಹೋರಾಡಿ ವೀರಮರಣವನ್ನಪ್ಪಿದ ಅದೆಷ್ಟೋ ಮಂದಿಗಳ ಹೆಸರು ಇತಿಹಾಸ ಗರ್ಭದಲ್ಲಿ ಹೂತು ಹೋಗಿವೆ. ಹಾಗೆ ಹುತಾತ್ಮರಾದ ಇಬ್ಬರು ವೀರಯೋಧರ ಕೊನೆಯ ಕ್ಷಣದ ಹೋರಾಟದ ಝಲಕ್ ಗಳನ್ನು ಇಲ್ಲಿ ದಾಖಲಿಸುತ್ತೇನೆ.
ಮೀರ್ ಸಾದಿಖ್ ಮತ್ತು ಆತನ ರಾಜದ್ರೋಹಿ ಬಂಟರು ಮೈಸೂರಿನ ಸೈನಿಕರಿಗೆ ” ಸುಲ್ತಾನರು ಬ್ರಿಟಿಷರೊಂದಿಗೆ ಸಂಧಾನ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ” ಎಂದು ಸುಳ್ಳು ಹೇಳಿ ಅವರನ್ನು ಯುದ್ಧದಿಂದ ಹಿಂದೆ ಸರಿಸಿದರು.
ಅದಾಗಲೇ ಟಿಪ್ಪುವಿಗೆ ಮೀರ್ ಸಾದಿಖನ ರಾಜದ್ರೋಹದ ವರ್ತಮಾನ ಸಿಕ್ಕಿತ್ತು. ಮೀರ್ ಸಾದಿಖ ಬ್ರಿಟೀಷರು ಟಿಪ್ಪುವಿನ ಕೋಟೆಯೊಳಗಡೆ ಸುಲಭವಾಗಿ ನುಸುಳಿ ಬರಲು ಅನುವಾಗುವಂತೆ ಮಾಡಿಕೊಟ್ಟಿದ್ದ.(ಕೋಟೆಯೆಂದರೆ ಒಂದು ಚಿಕ್ಕ ಆವರಣ ಗೋಡೆಯಲ್ಲ, ಅದು ಬೃಹತ್ ವಿಸ್ತೀರ್ಣದ ಆವರಣ ಕೋಟೆ) ಬ್ರಿಟೀಷರು ಕೋಟೆಯೊಳಗೆ ನುಗ್ಗಿ ಬರುವ ಹೊತ್ತಿಗೆ ಟಿಪ್ಪುವಿನ ಸನಿಹ ಇದ್ದದ್ದು ಆತನ ವೈದ್ಯ ರಾಜಾ ಖಾನ್ ಮತ್ತು ಓರ್ವ ಯುವ ಯೋಧ ಮಾತ್ರ. ಇದ್ದಕ್ಕಿದ್ದಂತೆ ಟಿಪ್ಪುವಿನ ಸನಿಹಕ್ಕೆ ತಲಪಿದ ಕೆಲವು ಬ್ರಿಟಿಷ್ ಯೋಧರು ಟಿಪ್ಪುವನ್ನು ನೇರವಾಗಿ ಕೊಚ್ಚಿ ಕೊಲ್ಲಬಯಸಿದ್ದರು. ಅವರು ಇನ್ನೇನು ಟಿಪ್ಪುವಿನ ಮೇಲೆರಗಬೇಕು ಎನ್ನುವಷ್ಟರಲ್ಲಿ ಮೈಸೂರಿನ ಆ ವೀರ ಯುವ ಯೋಧ ಮಿಂಚಿನ ವೇಗದಲ್ಲಿ ತಲವಾರು ಬೀಸಿ ಇಬ್ಬರು ಬ್ರಿಟಿಷ್ ಸೈನಿಕರ ರುಂಡ ಚೆಂಡಾಡಿಯೇ ಬಿಟ್ಟ. ಅಲ್ಲಿಗೆ ಬಂದಿದ್ದ ಉಳಿದ ಬ್ರಿಟಿಷ್ ಸೈನಿಕರು ಆ ಇಬ್ಬರನ್ನು ಅಲ್ಲೇ ಬಿಟ್ಟು ಓಟಕಿತ್ತರು. ಶಹಭಾಸ್ ಮಗನೇ, ಇಂದು ನನ್ನ ಇಡೀ ಸೈನ್ಯವೆಂದರೆ ನೀನೇ.. ನಿನ್ನ ಹೆಸರೇನು ಮಗನೇ ಎಂದು ಟಿಪ್ಪು ಪ್ರಶ್ನಿಸಿದ. ಅಷ್ಟರಲ್ಲಿ ದೂರದಿಂದ ಹಾರಿ ಬಂದ ಗುಂಡೊಂದು ಆ ವೀರಯೋಧನ ಎದೆ ಸೀಳಿತು. ಟಿಪ್ಪು ಉರುಳಿ ಬಿದ್ದ ಯೋಧನನ್ನು ತಬ್ಬಿಕೊಂಡ. ಆತ ಟಿಪ್ಪುವಿನ ಬಾಹುಗಳಲ್ಲೇ ಹುತಾತ್ಮನಾದ. ಆ ವೀರಯೋಧ ಟಿಪ್ಪುವಿಗೆ ದ್ರೋಹ ಬಗೆದಿದ್ದ ಅಂಚೆಮಂತ್ರಿ ಶ್ಯಾಮಯ್ಯನ ಮಗ.
ಮೀರ್ ಸಾದಿಖನ ಕೊರಳ್ ಕೊಯ್ದ ವೀರಯೋಧ ಶೇಖರ:
ಕೋಟೆಯ ತುಂಬಾ ಹಾಲಾಹಲವೆದ್ದಿತ್ತು. ಒಂದೆಡೆ ಯುದ್ಧದಲ್ಲಿ ಗಾಯಗೊಂಡ ವೀರಯೋಧ ಶೇಖರ ಮರಣಶಯ್ಯೆಯಲ್ಲಿದ್ದ. ಅಲ್ಲಿಗೆ ದ್ರೋಹಿ ಮೀರ್ ಸಾದಿಖ ದ್ರೋಹಿಗಳು ಮತ್ತು ಬ್ರಿಟಿಷ್ ಸೈನಿಕರೊಂದಿಗೆ ಬಂದ. ಯೋಧ ಶೇಖರನ್ನುದ್ದೇಶಿಸಿ ಮೀರ್ ಸಾದಿಖ ಪ್ರಶ್ನಿಸಿದ “ಸುಲ್ತಾನರೆಲ್ಲಿ”?
ಆತ ನೆಲದಲ್ಲಿ ಬಿದ್ದಲ್ಲಿಂದಲೇ ಕೈ ಸನ್ನೆಮಾಡಿ ಮೀರ್ ಸಾದಿಕನನ್ನು ಬಳಿ ಕರೆದ. ಶೇಖರ್ ಸುಲ್ತಾನರ ಸಂದೇಶ ನನ್ನ ಜೇಬಲ್ಲಿದೆ ತೆಗೆಯಿರಿ ಎಂದ. ಮೀರ್ ಸಾಧಿಕ್ ಶೇಖರನ ಜೇಬಿಗೆ ಕೈ ಹಾಕಲು ಬಾಗಿದ. ಆತ ತಡಮಾಡದೇ ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಖಡ್ಗದಿಂದ ದ್ರೋಹಿ ಮೀರ್ ಸಾದಿಖನ ಕೊರಳು ಕೊಯ್ದೇ ಬಿಟ್ಟ. ಮೀರ್ ಸಾದಿಕ್ ನಾಯಿಯಂತೆ ಸತ್ತು ಬಿದ್ದರೆ ವೀರಯೋಧ ಶೇಖರ್ ನೆಮ್ಮದಿಯಿಂದ ಕೊನೆಯುಸಿರೆಳೆದ.
ಇಂತಹ ಇನ್ನೂ ಅನೇಕ ಹಿಂದೂ ಯೋಧರು ಕೊನೆಯುಸಿರಿನವರೆಗೂ ಹೋರಾಡಿ ರಣರಂಗದಲ್ಲಿ ವೀರಮರಣವನ್ನಪ್ಪಿದ್ದಾರೆ. ಸಂಘ ಪರಿವಾರ ಅಪಪ್ರಚಾರ ಮಾಡುತ್ತಿರುವಂತೆ ಆತ ‘ಹಿಂದೂ ವಿರೋಧಿ, ಮತಾಂಧ, ದೇವಾಲಯ ಭಂಜಕ, ಮತಾಂತರಿ ಟಿಪ್ಪು’ವೇ ಆಗಿದ್ದರೆ, ಅದು ಸಾಧ್ಯವಿರುತ್ತಿರಲಿಲ್ಲ. ಇಂತಹ ವೀರಯೋಧರ ಸಾಹಸಗಳು ಇತಿಹಾಸದ ಪುಟಗಳಿಂದ ಮಾಸಿಹೋಗಿರುವುದು ಇತಿಹಾಸದ ಕ್ರೂರ ವ್ಯಂಗ್ಯವೇ ಸರಿ.
ಆಧಾರ : ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್