ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಬೆಂಬಲಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೋದಲ್ಲೆಲ್ಲಾ ರೈತರು ಪ್ರತಿಭಟನೆ ನಡೆಸುವ ಮೂಲಕ, ಘೇರಾವ್ ಮಾಡುವ ಮೂಲಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ನಡುವೆ ವಿಶ್ವ ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕಾಗಿ ಕರ್ನಲ್ಗೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಬೇಕಿದ್ದ ಖಟ್ಟರ್ ಅವರು, ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ಮುಂಚಿತವಾಗಿಯೇ (ಬೆಳಗ್ಗೆ 8:30) ಸ್ಥಳಕ್ಕೆ ಆಗಮಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ರಸ್ತೆಗಳಿಗೆ ಬ್ಯಾರಿಕೇಡ್ಗಳನ್ನು ಹಾಕಿದ್ದು ಓಡಾಟ ನಿಬಂರ್ಧಿಸಲಾಗಿದೆ.
ರೈತರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕುತ್ತಾರೆ ಎಂಬ ಭಯದಿಂದ ಸಿಎಂ ನಿಗಧಿತ ಸಮಯಕ್ಕಿಂತ ಮೊದಲೇ ಕಾರ್ಯಕ್ರಮ ಆರಂಭಿಸಿ ಮುಗಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಖಟ್ಟರ್ ಅವರ ಆಗಮನದ ಬಗ್ಗೆ ಜಿಲ್ಲಾಡಳಿತ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಖಟ್ಟರ್ ಮುಂಚಿತವಾಗಿಯೇ ಬರುತ್ತಿರುವ ಮಾಹಿತಿ ಸೋರಿಕೆಯಾಗಿದ್ದು, ರೈತ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನೆಗಾಗಿ ಕರ್ನಲ್-ಬಸ್ತರ್ ಟೋಲ್ ಪ್ಲಾಜಾದಲ್ಲಿ ಒಗ್ಗೂಡಬೇಕೆಂದು ಕೇಳಿಕೊಂಡಿದ್ದರು.
ಈ ಕುರಿತು ಮಾತನಾಡಿರುವ ಖಟ್ಟರ್, ’ರೈತರು ಶಾಂತಿಯುತವಾಗಿ ಪ್ರತಿಭಟನೆಗಳನ್ನು ನಡೆಸಬಹುದು. ಆದರೆ, ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ. ಭದ್ರತೆಯ ದೃಷ್ಟಿಯಿಂದ ಕರ್ನಲ್ಗೆ ಭೇಟಿ ನೀಡುವ ಮುನ್ನ ಜಿಲ್ಲಾಡಳಿತ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದು, ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ.
ಮಳೆ ಮುನ್ಸೂಚನೆಯಿಂದಾಗಿ ಖಟ್ಟರ್ ಅವರು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಕರ್ನಾಲ್ ಉಪ ಆಯುಕ್ತ ನಿಶಾಂತ್ ಕುಮಾರ್ ಯಾದವ್ ತಿಳಿಸಿದರು.
ಖಟ್ಟರ್ ಅವರು ಶನಿವಾರ ಕರ್ನಲ್ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದ್ದು, ಇದನ್ನು ವಿರೋಧಿಸಿ, ಪ್ರತಿಭಟನೆ ನಡೆಸು ವಂತೆ ರೈತರನ್ನು ಕೋರಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ನ ಸ್ಥಳೀಯ ಮುಖಂಡರಾದ ಜಗದೀಪ್ ಸಿಂಗ್ ಔಲಾಖ್ ತಿಳಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಈ ಹಿಂದೆ ಹಲವು ಬಾರಿ ರೈತರಿಂದ ಪ್ರತಿಭಟನೆಯನ್ನು ಎದುರಿಸಿರುವ ಖಟ್ಟರ್ ಅವರು, ಕರ್ನಲ್ನಲ್ಲಿ ರೈತರೊಂದಿಗೆ ಯಾವುದೇ ಮುಖಾಮುಖಿಯನ್ನು ಬಯಸುವುದಿಲ್ಲ. ಆದ್ದರಿಂದ ಯೋಜಿತ ಸಮಯಕ್ಕಿಂತ ಮುಂಚಿತವಾಗಿ ಭೇಟಿ ನೀಡಿದ್ಧಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ರೈತ ಸಂಘಟನೆಗಳು ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ರೈತರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಡುವ ಮೂಲಕ ಸಂಪೂರ್ಣ ಕ್ರಾಂತಿ ದಿವಸ್ ಆಚರಿಸುತ್ತಿದ್ದಾರೆ.
ಪಂಚಕುಲದಲ್ಲಿ ರೈತರ ಮೇಲೆ ಲಾಠೀಚಾರ್ಜ್
ಇನ್ನೊಂದೆಡೆ ಸಂಪೂರ್ಣ ಕ್ರಾಂತಿ ದಿವಸ್ ಅಂಗವಾಗಿ ಹರಿಯಾಣ ಸ್ಪೀಕರ್ ಗೈನ್ ಚಂದ್ ಗುಪ್ತಾ ನಿವಾಸದ ಮುಂದೆ ಪ್ರತಿಭಟನೆ ಮಾಡಲು ತೆರಳುತ್ತಿದ್ದ ರೈತರ ಮೇಲೆ ಪಂಚಕುಲದಲ್ಲಿ ಪೊಲೀಸರು ಲಾಠೀಚಾರ್ಜ್ ನಡೆಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು