ತಮಟೆ ತೊಗಲ ತೀಡಿ ತೀಡಿ
ತಮಟೆ ದನಿಯ ಹೊಸತು ಮಾಡಿ
ಜಗದ ಜಡವ ಸಾರಿದೆ
ಬೆವರ ತಾಪ ಸೋಕಿದೆ
ಮೋಡ ತಾರೆ ಗ್ರಹಗಳಲ್ಲಿ
ಮುತ್ತು ರತ್ನ ಉದುರುತಿರಲು
ರೆಟ್ಟೆ ಹೊಟ್ಟೆ ಬೆವರ ಜೊತೆಗೆ
ಕುಳಿತುಕೊಂಡೆ ಮಾತಿಗೆ
ಒಡಲತುಂಬ ಕಾವ್ಯ ಕಟ್ಟೆ
ನದಿಗಳಲ್ಲಿ ಹರಿಯಬಿಟ್ಟೆ
ಕನಸು ತೇಲಿ ಮೂಟೆಗಟ್ಟೆ
ಬಾಯಿ ಬಿಚ್ಚಿ ಹಾರಿಬಿಟ್ಟೆ
ಹರಿತವಾದ ಹಲ್ಲು ಮೂಡಿ
ಹಸಿ ಹಸಿವು ಹೊಟ್ಟೆಯೊಳಗೆ
ಗೋಳಾಡುವ ಬಾಯಿ ಮುಚ್ಚಿ
ಕೆಂಡ ಸುರಿವ ನಾಲಿಗೆ
ಗಾಳಿ ಮಳೆ ಬಿಸಿಲಿನಲ್ಲಿ
ಬದುಕುವವರ ರೆಕ್ಕೆಗಳು
ಸಿಟ್ಟಿನಿಂದ ನಕ್ಕಾಗ
ಬಾನೆತ್ತರ ಬಿರುಗಾಳಿ
ಆಡು ಭಾಷೆ ಹಾಡುವವರ
ಕ್ರಾಂತಿಪದದ ದನಿಯಾದೆ
ಒಲವಾದೆ ಬಲವಾದೆ
ತಲೆಯೆತ್ತಿ ನಡೆವ ಛಲವಾದೆ
ಓ ಬಂಡಾಯಗಾರ
ಇರುವೆ ಸಾಲಿನೊಡೆಯ
ಕನ್ನಡವ್ವನ ಕರಿಯ
ತಬರ-ಬೆಲ್ಚಿ ಕಾಡಿದಂತೆ
ಖೈರ್ಲಾಂಜಿ- ವೇಮುಲ ಕಾಡಲಿಲ್ಲವೇ
ಇನ್ನೂ ಅಲ್ಲೇ ಕುಂತವರ ಕೂಗು
ಮೊನ್ನೆಯವರೆಗೂ ಕೇಳಿತಲ್ಲವೇ
ಮುಳ್ಳಿನ ಆಲಿಂಗನಕ್ಕೆ
ತೋಳ್ದೆರದ ಚಳಿಯಾದೆಯಲ್ಲ
ನೋವನೇಕೆ ಹೇಳಲಿಲ್ಲ
ತಬ್ಬಿದ್ದು ನಲವತ್ತೇಳರ ಸ್ವಾತಂತ್ರ್ಯವೇ
ಹೋಗಿ ಬಾ ಹೋಗಿ ಬಾ
ಕನ್ನಡದ ಕ್ರಾಂತಿಕವಿಯೆ
ನಿನ್ನ ಹೆಜ್ಜೆ ಗುರುತುಗಳು
ಕಬ್ಬಂಡೆ ಮೇಲೆ ಮೂಡಿವೆ