ಮಧ್ಯಪ್ರದೇಶದ ಭೋಪಾಲ್ ಸೈಬರ್ ಸೆಲ್ ಮಂಗಳವಾರ, ಜೂನ್ 29 ರಂದು, ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 505 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಭಾರತದ ತಪ್ಪಾದ ನಕ್ಷೆಯನ್ನು ಟ್ವಿಟರ್ ಪ್ರಕಟಿಸಿದೆ (ಸೋಮವಾರ ಇದನ್ನು ಹಿಂದೆಗೆದುಕೊಳ್ಳಲಾಗಿದೆ) ಎಂಬ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಈ ಮೊದಲೇ ಒಂದು ಎಫ್ಐಆರ್ ದಾಖಲಾಗಿದೆ. ಹಿಂದಿನ ವಾರ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಕುರಿತಾದ ಪೋಸ್ಟ್ಗಳಿಗೆ ಸಂಬಂಧಿಸಿ ಕೂಡ ಒಂದು ಪ್ರಕರಣವನ್ನು ಉತ್ತರಪ್ರದೇಶದಲ್ಲಿ ಟ್ವಿಟರ್ ಮುಖ್ಯಸ್ಥರ ವಿರುದ್ಧ ದಾಖಲಿಸಲಾಗಿದೆ.
ಇದನ್ನೂ ಓದಿ: ಕೇರಳದ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟನೆ
ಭಾರತದ ತಪ್ಪು ನಕ್ಷೆಯನ್ನು ತೋರಿಸಿದ್ದಕ್ಕಾಗಿ ಮಹೇಶ್ವರಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾದ ಹೇಳಿಕೆಗಳು) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008 ರ ಸೆಕ್ಷನ್ 74 (ಮೋಸದ ಉದ್ದೇಶಕ್ಕಾಗಿ ಪ್ರಕಟಣೆ) ಅಡಿ ಯುಪಿಯ ಬುಲಂದ್ಶಹರ್ನಲ್ಲಿ ಭಜರಂಗದಳದ ಮುಖಂಡರ ದೂರಿನ ಮೇರೆಗೆ ದೂರು ದಾಖಲಾದ ನಂತರ ಈಗ ಮಧ್ಯಪ್ರದೇಶದ ಭೋಪಾಲ್ನಲ್ಲಿ ಈಗ ಈ ದೂರು ದಾಖಲಾಗಿದೆ.
ಆಗಿದ್ದಾದರೂ ಏನು?
ಟ್ವಿಟರ್ ತನ್ನ ವೆಬ್ಸೈಟಿನಲ್ಲಿ ಪ್ರಕಟಿಸಿದ ಭಾರತದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಭಾರತದಿಂದ ಬೇರ್ಪಟ್ಟ ಪ್ರದೇಶ ಎಂಬಂತೆ ತೋರಿಸಿತ್ತು ಎನ್ನುವುದು ಆರೋಪ.
ಟ್ವಿಟರ್ನ ವೆಬ್ಸೈಟ್ನ ಕರಿಯರ್ ವಿಭಾಗದಲ್ಲಿ ‘ಟ್ವೀಪ್ ಲೈಫ್’ ಶೀರ್ಷಿಕೆಯಡಿಯಲ್ಲಿ ವಿಶ್ವ ನಕ್ಷೆಯ ಭಾಗವಾಗಿ ಭಾರತದ ಈ ನಕ್ಷೆ ಕಾಣಿಸಿಕೊಂಡಿತು. ಟ್ವಿಟರ್ ನಂತರ ವಿಶ್ವ ನಕ್ಷೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಇದಕ್ಕೂ ಮುನ್ನ, ಸೋಮವಾರ, ಬಿಜೆಪಿ ಮುಖಂಡ ಪಿ ಮುರಳೀಧರ್ ರಾವ್ ಅವರು, “ಟ್ವಿಟರ್ ತನ್ನ ಕಾರ್ಯಗಳಿಂದ ಭಾರತ ವಿರೋಧಿ ನಿಲುವನ್ನು ದೃಢಪಡಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತದ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳ ಬಗೆಗಿನ ಪಕ್ಷಪಾತವನ್ನು ಟ್ವಿಟರ್ ಪ್ರದರ್ಶಿಸಿದೆ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ!
ಹೊಸ ಐಟಿ ನಿಯಮಗಳ ಬಗ್ಗೆ ಕಂಪನಿಯು ಭಾರತ ಸರ್ಕಾರದೊಂದಿಗೆ ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲಿ ಈ ಎಫ್ಐಆರ್ಗಳು ದಾಖಲಾಗುತ್ತಿವೆ ಎಂಬುದನ್ನು ಗಮನಿಸಬೇಕು. ಜೂನ್ನಲ್ಲಿ ಉತ್ತರ ಪ್ರದೇಶದ ಲೋನಿ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಪೋಸ್ಟ್ಗಳನ್ನು ಒಳಗೊಂಡ ಪ್ರಕರಣದಲ್ಲಿ ಯುಪಿ ಪೊಲೀಸರು ಟ್ವಿಟರ್ ಇಂಡಿಯಾ ನಿರ್ದೇಶಕ ಮನೀಷ್ ಮಹೇಶ್ವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು.
ಆದರೆ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದ್ರ ಅವರು ಕಳೆದ ವಾರ ಸಿಆರ್ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ಮಧ್ಯಂತರ ಪರಿಹಾರ ನೀಡಿದ್ದರು ಮತ್ತು ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಗಾಜಿಯಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಕರ್ನಾಟಕ ಹೈಕೋರ್ಟ್ ನೀಡಿದ ರಕ್ಷಣೆಯ ಆದೇಶದ ವಿರುದ್ಧ ಯುಪಿ ಸರ್ಕಾರ ಜೂನ್ 29 ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಟ್ವಿಟರ್ ನಿರ್ದೇಶಕ ಸುಪ್ರೀಂಕೋರ್ಟ್ನಲ್ಲಿ ದೂರು ಸಲ್ಲಿಸಿದ್ದು, ಯುಪಿ ಸರ್ಕಾರದ ಮೇಲ್ಮನವಿಯ ವಿಚಾರಣೆ ಬಂದಾಗ ಈ ವಿಷಯದ ಚರ್ಚೆ ನಡೆಯಲಿದೆ.
ಐಟಿ ನಿಯಮಗಳ ಜಗ್ಗಾಟ
ಇದಕ್ಕೂ ಮುನ್ನ ಭಾನುವಾರ, ಟ್ವಿಟರ್ ಇಂಡಿಯಾದ ಹಂಗಾಮಿ ಕುಂದುಕೊರತೆ ಅಧಿಕಾರಿ ಧರ್ಮೇಂದ್ರ ಚತುರ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು. ಹೊಸ ನಿಯಮಗಳ ಪ್ರಕಾರ ಅಗತ್ಯವಿರುವಂತೆ ಚತುರ್ ಅವರ ಹೆಸರನ್ನು ಈ ಹಿಂದೆ ಕಂಪನಿಯ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುತ್ತಿತ್ತು, ಆದರೆ ಅದು ಈಗ ಇಲ್ಲ.
ಇದನ್ನೂ ಓದಿ: ಉದ್ಯೋಗ ಕೇಳಿದ ಯುವಜನರ ಮೇಲೆ ಲಾಠಿ ಪ್ರಯೋಗಿಸಿದ ಬಿಹಾರ ಸರ್ಕಾರ
ಚತುರ್ ಅವರ ರಾಜೀನಾಮೆಯ ನಂತರ ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್ ಅವರನ್ನು ಭಾರತದ ಹೊಸ ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ಟ್ವಿಟರ್ ನೇಮಿಸಿತು.
ಮೇ 25 ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ, ಬಳಕೆದಾರರ ದೂರುಗಳನ್ನು ಪರಿಹರಿಸಲು ಕುಂದುಕೊರತೆ ಅಧಿಕಾರಿಯನ್ನು ಹೊಂದಿರುವುದು ಕಂಪನಿಗೆ ಕಡ್ಡಾಯವಾಗಿದೆ. ಹೊಸ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ.
ನಿಯಮಗಳನ್ನು ಧಿಕ್ಕರಿಸುತ್ತಿದೆ ಎಂದು ಒಕ್ಕೂಟ ಸರ್ಕಾರವು ಟ್ವಿಟರ್ ಮೇಲೆ ವಾಗ್ದಾಳಿ ನಡೆಸುತ್ತಿದೆ. ನಿಯಮಗಳನ್ನು ಅನುಸರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಟ್ವಿಟರ್ ಇಂಡಿಯಾ ಹೇಳುತ್ತಲೇ ಬಂದಿದೆ.
ಇದನ್ನೂ ಓದಿ: ಚಾಮರಾಜನಗರ ದುರಂತ: ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ ಡಿ.ಕೆ.ಶಿವಕುಮಾರ್