ಪೆಗಾಸಸ್ ಕಣ್ಗಾವಲು ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಉಂಟಾದ ಬಿಕ್ಕಟ್ಟಿನ ನಡುವೆ, ವಿವಿಧ ವಿರೋಧ ಪಕ್ಷಗಳ ಮುಖಂಡರು ಬುಧವಾರ ಸಭೆ ನಡೆಸಿದ್ದು, ಸಭೆಯಲ್ಲಿ ಪೆಗಾಸಸ್ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಸಂಸತ್ತಿನಲ್ಲಿ ಏಕರೂಪದ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿದ್ದಾರೆ.
ಸಭೆಯು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ನಡೆದಿದ್ದು, ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು. ಪೆಗಾಸಸ್ ವಿಷಯದ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಹಾಗೂ ಜಂಟಿ ವಿರೋಧಿ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಯಿತು.
ಇದನ್ನೂ ಓದಿ: ಮಾನ್ಸೂನ್ ಅಧಿವೇಶನ: ಪ್ರಧಾನಿ ಮಾತನಾಡುತ್ತಿದ್ದಂತೆ ವಿಪಕ್ಷದಿಂದ ಘೋಷಣೆ, ಗದ್ದಲ
“ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಲೋಕಸಭೆಯಲ್ಲಿ ಪೆಗಾಸಸ್ ವಿಷಯವನ್ನು ಚರ್ಚೆಗೆ ತಂದು, ಸರ್ಕಾರದವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ” ಎಂದು ಹಿರಿಯ ನಾಯಕರೊಬ್ಬರು ಸಭೆಯ ನಂತರ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಚರ್ಚಿಸಿದ್ದೇವೆ. ಪೆಗಾಸಸ್, ಬೆಲೆ ಏರಿಕೆ ಮತ್ತು ರೈತರ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವೆ ಇಲ್ಲ” ಎಂದು ಹೇಳಿದ್ದಾರೆ.
ಜನರು, ರೈತರು ಮತ್ತು ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರ ಪ್ರತಿಪಕ್ಷಗಳು ಎತ್ತುತ್ತವೆ ಹಾಗೂ ಅದನ್ನು ಮುಂದುವರಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎನ್ಸಿಪಿ, ಶಿವಸೇನೆ, ಆರ್ಜೆಡಿ, ಎಸ್ಪಿ, ಸಿಪಿಐಎಂ, ಸಿಪಿಐ, ಎನ್ಸಿ, ಎಎಪಿ, ಐಯುಎಂಎಲ್, ಆರ್ಎಸ್ಪಿ, ಕೆಸಿಎಂ ಮತ್ತು ವಿಸಿಕೆ ಸೇರಿದಂತೆ ಒಟ್ಟು 14 ವಿರೋಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ವಿರೋಧ ಪಕ್ಷಗಳ ಐಕ್ಯತೆ ಮತ್ತು ವಿರೋಧ ಪಕ್ಷಗಳ ನಡುವೆ ಉತ್ತಮ ಹೊಂದಾಣಿಕೆಯನ್ನು ಸಭೆಯಲ್ಲಿ ಒತ್ತಿಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಸೈಕಲ್ನಲ್ಲಿ ಸಂಸತ್ ಅಧಿವೇಶನಕ್ಕೆ ಬಂದ ಟಿಎಂಸಿ ಸಂಸದರು