ವರದಕ್ಷಿಣೆ ಕಿರುಕುಳ ಮತ್ತು ಆಡಂಬರದ ಮದುವೆಗಳನ್ನು ಪರಿಶೀಲಿಸಲು ಕೇರಳ ಮಹಿಳಾ ಆಯೋಗವು ಕರಡು ಮಸೂದೆಯನ್ನು ರಾಜ್ಯ ಸರ್ಕಾರದ ಮುಂದೆ ಸಲ್ಲಿಸಿದೆ. ಕರಡನ್ನು “ದುಂದುವೆಚ್ಚದ ತಡೆಗಟ್ಟುವಿಕೆ ಮತ್ತು ಕೇರಳದಲ್ಲಿ ಮದುವೆಗಳ ಮೇಲೆ ಅನಿಯಮಿತ ಖರ್ಚು-2021” ಎಂದು ಹೆಸರಿಸಲಾಗಿದೆ.
ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ವರದಕ್ಷಿಣೆ ಕಿರುಕುಳ ಮತ್ತು ಸಾವುಗಳನ್ನು ವರದಿಯಾಗುತ್ತಿದ್ದು, ಇದೇ ಸಮಯದಲ್ಲಿ ಕರಡು ಮಸೂದೆ ಸರ್ಕಾರದ ಮುಂದೆ ಸಲ್ಲಿಕೆಯಾಗಿದೆ. ಸರ್ಕಾರಿ ನೌಕರಿಯಲ್ಲಿರುವ ಕಿರಣ್ ಎಂಬಾತನ ವರದಕ್ಷಿಣೆ ಕಿರುಕುಳಕ್ಕೊಳಗಾಗಿ 22 ವರ್ಷದ ವಿಸ್ಮಯ ಎಂಬ ಯುವತಿಯ ಸಾವಿನ ನಂತರ ರಾಜ್ಯದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: 1930 ಕ್ಕೆ ಹೋಲಿಸಿದರೆ ಈಗ ವರದಕ್ಷಿಣೆ 90% ಹೆಚ್ಚಳವಾಗಿದೆ: ಕಾರಣವೇನು?
ವಿಸ್ಮಯ ಅವರ ಸಾವಿನ ನಂತರ ಮಾಧ್ಯಮಗಳು ಕೂಡಾ ವರದಕ್ಷಿಣೆ ಕಿರುಕುಳಕ್ಕೊಳಗಾಗಿ ಸಾವಿಗೀಡಾದ ಘಟನೆಗಳ ಬಗ್ಗೆ ಸರಣಿ ವರದಿಗಳನ್ನು ಮಾಡಿತ್ತು. ಆರೋಪಿ ಕಿರಣ್ ಕುಮಾರ್ನನ್ನು 1960 ರ ಕೇರಳ ನಾಗರಿಕ ಸೇವಾ ನಿಯಮಗಳ ಪ್ರಕಾರ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.
ಪ್ರಸ್ತುತ ಸರ್ಕಾರ ಮುಂದೆ ಸಲ್ಲಿಕೆಯಾಗಿರುವ ಮಸೂದೆಯು, ವಧುವಿನ ಕುಟುಂಬಕ್ಕೆ ಭಾರಿ ಆರ್ಥಿಕ ಹೊಣೆಗಾರಿಕೆಯನ್ನು ವಿಧಿಸುವ ಆಡಂಬರದ ಮದುವೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎಂದು ಮಹಿಳಾ ಆಯೋಗ ಹೇಳಿದೆ. ಇಂತಹ ಮದುವೆಗಳು ಗಂಭೀರವಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಸಹ ಹೊಂದಿವೆ ಎಂದು ಅದು ತಿಳಿಸಿದೆ.
ಸಮಾಜದಲ್ಲಿ ವರದಕ್ಷಿಣೆ ಪದ್ಧತಿ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಹಿಳಾ ಆಯೋಗ ಅಭಿಯಾನ ಆರಂಭಿಸಿತ್ತು. ಮದುವೆ ಸಮಯದಲ್ಲಿ ಸಂಗಾತಿಗಳಿಗೆ ಹಣ, ಚಿನ್ನ ಅಥವಾ ಬಟ್ಟೆಯ ರೂಪದಲ್ಲಿ ಉಡುಗೊರೆಗಳನ್ನು ಪ್ರಸ್ತುತ ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸಮಿತಿಯು ಹೇಳಿದೆ. ವರದಕ್ಷಿಣೆ ನಿಷೇಧ ಕಾಯ್ದೆ-1961 ರಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಬೇಕು ಎಂದು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್