ರಾಜ್ಯದಲ್ಲಿ ಬಾಲ್ಯವಿವಾಹಗಳ ನೋಂದಣಿಗೆ ಅವಕಾಶ ನೀಡಲಾಗುವ ಮಸೂದೆಯನ್ನು ಶುಕ್ರವಾರದಂದು ರಾಜಸ್ಥಾನ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಬಗ್ಗೆ ಸದನದಲ್ಲಿ ಬಿರುಸಿನ ಚರ್ಚೆ ನಡೆದರೂ, ಅಂತಿಮವಾಗಿ, ‘ರಾಜಸ್ಥಾನ ವಿವಾಹಗಳ ಕಡ್ಡಾಯ ನೋಂದಣಿ ತಿದ್ದುಪಡಿ ಮಸೂದೆ’ಯನ್ನು ಅಂಗೀಕರಿಸಲಾಯಿತು.
ಈ ಹೊಸ ಮಸೂದೆಯ ಪ್ರಕಾರ, ಬಾಲ್ಯ ವಿವಾಹದ ಮಾಹಿತಿಯನ್ನು ಮದುವೆಯಾದ 30 ದಿನಗಳ ಒಳಗೆ ನೀಡಬೇಕು. ಚರ್ಚೆಯಲ್ಲಿ, ಸಂಸತ್ತಿನ ವ್ಯವಹಾರಗಳ ಸಚಿವೆ ಶಾಂತಿ ಧಾರಿವಾಲ್ ಅವರು ಬಾಲ್ಯವಿವಾಹಗಳನ್ನು ನೋಂದಾಯಿಸುವುದರಿಂದ ಅವುಗಳನ್ನು ಮಾನ್ಯವೆಂದು ಪರಿಗಣಿಸಲಾಗುವುದು ಎಂದಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್; ಹೆಚ್ಚುತ್ತಿರುವ ಬಡತನ ಮತ್ತು ಬಾಲ್ಯವಿವಾಹದ ರಣನರ್ತನ
ಹೊಸ ಕಾನೂನಿನ ಪ್ರಕಾರ, ವಿವಾಹ ನೋಂದಣಿ ಅಧಿಕಾರಿಯು ಬ್ಲಾಕ್ ಹಂತದವರೆಗೆ ನೋಂದಣಿಯನ್ನು ಮಾಡುತ್ತಾರೆ. ಮದುವೆಯ ಸಮಯದಲ್ಲಿ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ಹುಡುಗನ ವಯಸ್ಸು 21 ಕ್ಕಿಂತ ಕಡಿಮೆಯಿದ್ದರೆ, ಅವರ ಪೋಷಕರು ನೋಂದಣಿ ಅಧಿಕಾರಿಗೆ 30 ದಿನಗಳಲ್ಲಿ ತಿಳಿಸಬೇಕೆಂದು ಮಸೂದೆಯು ತಿಳಿಸುತ್ತದೆ.
ಬಾಲ್ಯವಿವಾಹಗಳ ಸಂದರ್ಭದಲ್ಲಿ ಹುಡುಗ ಮತ್ತು ಹುಡುಗಿಯ ಪೋಷಕರು ನಿಗದಿತ ನಮೂನೆಯಲ್ಲಿ ಜ್ಞಾಪನಾ ಪತ್ರವನ್ನು ನೀಡಿ ನೋಂದಣಿ ಅಧಿಕಾರಿಗೆ ತಿಳಿಸಬೇಕಾಗುತ್ತದೆ. ಇದರ ಆಧಾರದ ಮೇಲೆ, ನೋಂದಣಿ ಅಧಿಕಾರಿ ಆ ಬಾಲ್ಯ ವಿವಾಹವನ್ನು ನೋಂದಾಯಿಸಿಕೊಳ್ಳುತ್ತಾರೆ. ಈ ನಿಬಂಧನೆಯನ್ನು ವಿವಾಹಗಳ ಕಡ್ಡಾಯ ನೋಂದಣಿ ಕಾಯಿದೆಯ ಸೆಕ್ಷನ್ 8 ರಲ್ಲಿ ಮಾಡಲಾಗಿದೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಹೆಚ್ಚಾದ ಬಾಲ್ಯವಿವಾಹ: ವರದಿ ಮುಚ್ಚಿಡಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ
ಈ ಹಿಂದೆ ರಾಜ್ಯದಲ್ಲಿ, ಜಿಲ್ಲಾ ಮಟ್ಟದಲ್ಲಿ ವಿವಾಹ ನೋಂದಣಿ ಅಧಿಕಾರಿಗಳು ಇದ್ದರು ಆದರೆ ಈಗ ಬ್ಲಾಕ್ ಹಂತದವರೆಗೆ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
ಬಾಲ್ಯ ವಿವಾಹ ಕಾನೂನುಬಾಹಿರವಾಗಿರುವಾಗ ನೋಂದಣಿಯ ಅಗತ್ಯತೆ ಮತ್ತು ವಿಧೇಯಕದ ಉದ್ದೇಶವನ್ನು ಪ್ರಶ್ನಿಸಿ ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಆಧಾರದಲ್ಲಿ ಮಸೂದೆಯನ್ನು ತರಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಪ್ರತಿಪಕ್ಷಗಳು ಬಾಲ್ಯವಿವಾಹಗಳ ನೋಂದಣಿಯ ಅಗತ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿ, ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಧಾರಿವಾಲ್, “ಬಾಲ್ಯ ವಿವಾಹವನ್ನು ನೋಂದಾಯಿಸುವುದು ಎಂದರೆ ಬಾಲ್ಯವಿವಾಹಕ್ಕೆ ಸಿಂಧುತ್ವವನ್ನು ನೀಡುವುದು ಎಂದಲ್ಲ ಮತ್ತು ಅವರಿಗೆ ನ್ಯಾಯಬದ್ಧತೆಯನ್ನು ನೀಡುವುದು ಎಂದಲ್ಲ” ಎಂದು ಪ್ರತಿಪಾದಿಸಿದ್ದಾರೆ. ನೋಂದಾಯಿಸಿದ ನಂತರವೂ ಬಾಲ್ಯ ವಿವಾಹಗಳನ್ನು ಆಯೋಜಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು


