ಹಿರಿಯ ವಕೀಲ ಮೆಹಮೂದ್ ಪ್ರಾಚಾ ಅವರ ಕಚೇರಿ ಮೇಲೆ ದೆಹಲಿ ಪೊಲೀಸರು ನಡೆಸಿದ್ದ ದಾಳಿಯನ್ನು ಖಂಡಿಸಿರುವ ದಾವಣೆಗೆರೆಯ ವಕೀಲರಾದ ಅನೀಸ್ ಪಾಶಾ, ಕರ್ನಾಟಕ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘಕ್ಕೆ ಪತ್ರ ಬರೆದಿದ್ದಾರೆ. ಸಂಘವು ಕಾನೂನು ಬಾಹಿರವಾಗಿ ದಾಳಿ ನಡೆಸಿರುವ ಪೊಲೀಸರ ವಿರುದ್ದ ಕ್ರಮಕೈಗೊಂಡು, ಕರ್ತವ್ಯ ನಿರತ ವಕೀಲರಿಗೆ ರಕ್ಷಣೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
“ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಅತ್ಯುನ್ನತ ಸ್ಥಾನದಲ್ಲಿದೆ. ಆ ನ್ಯಾಯಾಂಗ ವ್ಯವಸ್ಥೆಯ ಗೌರವ ಮತ್ತು ಘನತೆಯನ್ನು ಕಾಪಾಡುವಲ್ಲಿ ವಕೀಲರ ಪಾಲು ತುಂಬಾ ಮಹತ್ವದ್ದಾಗಿದೆ. ಕಕ್ಷಿದಾರರ ಹಿತ ಕಾಪಾಡುವುದು, ಅವರಿಗೆ ನ್ಯಾಯ ಒದಗಿಸುವುದು, ಕಕ್ಷಿದಾರನು ನೀಡಿದ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದು ಕೂಡ ವಕೀಲರ ಆಧ್ಯ ಕರ್ತವ್ಯವಾಗಿದೆ. ಆದರೆ ದೆಹಲಿ ಪೊಲೀಸರು ನಿಯಮ ಮೀರಿ ಮೆಹಮೂದ್ ಅವರ ಕಚೇರಿಗೆ ದಾಳಿ ನಡೆಸಿದ್ದಾರೆ” ಎಂದು ಅನೀಸ್ ಪಾಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿರಿಯ ವಕೀಲ ಮೆಹಮೂದ್ ಪ್ರಾಚಾ ಕಚೇರಿ ಮೇಲೆ ದೆಹಲಿ ಪೊಲೀಸರ ದಾಳಿ: AILU ಖಂಡನೆ
“ಆದ್ದರಿಂದ ವಕೀಲರ ಹಿತರಕ್ಷಣೆ ಮಾಡುತ್ತಿರುವ ವಕೀಲರ ಪರಿಷತ್ ಮತ್ತು ವಕೀಲರ ಸಂಘಗಳು, ಇಂತಹ ಘಟನೆಗಳನ್ನು ಪರಿಶೀಲನೆ ಮಾಡಿ ವಕೀಲರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಮತ್ತು ಸಮಾಜದಲ್ಲಿ ಅನ್ಯಾಯವಾದವರ ಪರವಾಗಿ ನಿಲ್ಲಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಭುಗಿಲೆದ್ದ ಗಲಭೆಯ ಕಾರಣ ಜೈಲು ಪಾಲಾಗಿರುವ ಆರೋಪಿಗಳ ಪರ ಹಿರಿಯ ವಕೀಲ ಮೆಹಮೂದ್ ಪ್ರಾಚಾ ವಾದಿಸುತ್ತಿದ್ದರು. ಡಿಸೆಂಬರ್ 24 ರಂದು ಅವರ ಕಚೇರಿ ಮೇಲೆ ದಾಳಿ ನಡೆಸಿದ್ದ ದೆಹಲಿ ಪೊಲೀಸರು, ಅವರ ಕಚೇರಿಯ ಲ್ಯಾಪ್ಟಾಪ್ ಸೇರಿದಂತೆ ಇತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಬಾಬಾಸಾಹೇಬ್ ಅಂಬೇಡ್ಕರ್: ಜೀವನಚರಿತ್ರೆಗಳ ಕತೆ