ಸಂತ್ರಸ್ತ ಕುಟುಂಬ ತಿಂಗಳುಗಳ ಕಾಲ ಅಲೆದಾಟ ನಡೆಸಿ, ಹಲವಾರು ಸಲ ಪೊಲೀಸರಿಗೆ ದೂರು ನೀಡಿದರೂ ಕ್ರಮ ಜರುಗಿಸಲಿಲ್ಲ. ಆದರೆ ದೇಶದ ಉನ್ನತ ಮಾನವ ಹಕ್ಕುಗಳ ಸಮಿತಿಯು ಮಧ್ಯಪ್ರವೇಶಿಸಿದ ನಂತರ ಅಂತಿಮವಾಗಿ ಮೂವರು ಧರ್ಮಗುರುಗಳ ವಿರುದ್ಧ ಪುಣೆಯಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ 15 ವರ್ಷದ ಬಾಲಕನ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪವನ್ನು ಮಾಡಲಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಮುಖ ಆರೋಪಿ ಫಾದರ್ ವಿನ್ಸೆಂಟ್ ಪಿರೇರಾ (56) ಲೈಂಗಿಕ ದುರುಪಯೋಗದ ಮತ್ತೊಂದು ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದರು. 2018ರಲ್ಲಿ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯ ಪ್ರಾಂಶುಪಾಲರಾಗಿದ್ದ ಪಿರೇರಾ, 8ನೇ ತರಗತಿಯ ವಿದ್ಯಾರ್ಥಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಯಿತು. ಆ ಪೋಕ್ಸೋ ಪ್ರಕರಣದಲ್ಲಿ ಸುಮಾರು 18 ತಿಂಗಳು ಕಾಲ ಯೆರವಾಡ ಜೈಲಿನಲ್ಲಿ ಕಳೆದಿದ್ದರು.
ಸಂತ್ರಸ್ತ ಕುಟುಂಬವು ಘಟನೆಯ ಬಗ್ಗೆ ತಿಳಿಸಿದ್ದರೂ ಪುಣೆ ಡಯಾಸಿಸ್ನ ಬಿಷಪ್ ಥಾಮಸ್ ದಬ್ರೆ (77) ಮತ್ತು ಬಾಂಬೆಯ ಆರ್ಚ್ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಾಸ್ (70) ಅವರು ಪಿರೇರಾ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ.
ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಸತತವಾಗಿ ಐದು ಪೊಲೀಸ್ ಠಾಣೆಗೆ ಭೇಟಿ ನೀಡಿದರೂ ಸಂತ್ರಸ್ತ ಕುಟುಂಬದ ಮನವಿಗೆ ಸ್ಪಂದಿಸಲಿಲ್ಲ. ಆದರೆ ಕುಟುಂಬವು ಪುಣೆ ಮೂಲದ ಇಬ್ಬರು ಹೋರಾಟಗಾರರನ್ನು ಸಂಪರ್ಕಿಸಿದ ನಂತರವೇ ಆಗಸ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೋರಾಟಗಾರರಾದ ಮಾರುತಿ ಭಾಪ್ಕರ್ ಮತ್ತು ಡೊಮಿನಿಕ್ ಲೋಬೋ ಪ್ರತಿಕ್ರಿಯಿಸಿ, “ನಾವು ಕೂಡ ತ್ವರಿತ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ” ಎಂದು ಆರೋಪಿಸಿದ್ದಾರೆ. ಅವರು ಮೊದಲು ಆಗಸ್ಟ್ 17 ರಂದು ಪುಣೆ ಪೊಲೀಸ್ ಕಮಿಷನರ್ಗೆ ಪತ್ರ ಬರೆದರು. ಆದರೆ ಉತ್ತರವನ್ನು ಪಡೆಯಲು ವಿಫಲವಾದ ನಂತರ ಸೆಪ್ಟೆಂಬರ್ನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್ಎಚ್ಆರ್ಸಿ) ಸಂಪರ್ಕಿಸಲು ನಿರ್ಧರಿಸಿದರು.
ಇದನ್ನೂ ಓದಿರಿ: ಟೋಲ್ಗೇಟ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಬಿಲ್ಲವ ನಾಯಕಿಗೆ ಅಶ್ಲೀಲ ನಿಂದನೆ
15 ವರ್ಷ ಬಾಲಕನ ಕುಟುಂಬದ ಹೇಳಿಕೆಯನ್ನು ಎನ್ಎಚ್ಆರ್ಸಿ ದಾಖಲಿಸಿಕೊಂಡಿದ್ದು, ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಸೆಪ್ಟೆಂಬರ್ 30ರಂದು ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ಭಾಪ್ಕರ್ ಅವರ ದೂರಿನ ಮೇಲೆ ಎಫ್ಐಆರ್ ದಾಖಲಿಸಲಾಯಿತು ಮತ್ತು ನಂತರ ಕೊಂಧ್ವಾಗೆ ವರ್ಗಾಯಿಸಲಾಯಿತು.
ಎಫ್ಐಆರ್ ದಾಖಲು ವಿಳಂಬದ ಬಗ್ಗೆ ಕೇಳಿದಾಗ, ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ನ್ಯೂಸ್ಲಾಂಡ್ರಿ ಪ್ರತಿಕ್ರಿಯಿಸಿ, “ದಯವಿಟ್ಟು ಅದರ ಬಗ್ಗೆ ಪೊಲೀಸ್ ಉಪ ಆಯುಕ್ತರೊಂದಿಗೆ ಮಾತನಾಡಿ” ಎಂದು ಹೇಳಿದ್ದಾರೆ.
ಕೊಂಡ್ವಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸರ್ದಾರ್ ಪಾಟೀಲ್ ಮಾತನಾಡಿ, “ಪಿರೇರಾ ತಲೆಮರೆಸಿಕೊಂಡಿದ್ದಾರೆ, ಆದರೆ ನಾವು ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಬಿಷಪ್ ಮತ್ತು ಕಾರ್ಡಿನಲ್ ಅವರು ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ತೋರುವ ಕಾರಣ ನಾವು ಅವರನ್ನು ಬಂಧಿಸಿಲ್ಲ. ಆದರೆ ನಾವು ಅವರಿಗೆ ಯಾವುದೇ ಕ್ಲೀನ್ ಚಿಟ್ ನೀಡಿಲ್ಲ. ಅಪರಾಧದ ಬಗ್ಗೆ ತಿಳಿದಿದ್ದರೂ ವರದಿ ಮಾಡದಿದ್ದಕ್ಕಾಗಿ ನಾವು ಅವರನ್ನು ಪ್ರಕರಣದಲ್ಲಿ ಸೇರಿಸಿದ್ದೇವೆ” ಎಂದಿದ್ದಾರೆ.