ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಶಾಲಾ-ಕಾಲೇಜುಗಳಲ್ಲಿ ಪ್ರಚಾರ ಮಾಡುವ ಬಿಜೆಪಿಯ ಅಭಿಯಾನವನ್ನು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.
ದೇಶಾದ್ಯಂತ ಪ್ರತಿಭಟನೆಗೆ ನಾಂದಿ ಹಾಡಿರುವ ಕಾಯ್ದೆ ಕುರಿತು ಅರಿವು ಮೂಡಿಸಲು ಮತ್ತು ತಪ್ಪು ಮಾಹಿತಿಗಳಿಗೆ ವಿರುದ್ಧವಾಗಿ ಸರಿಯಾಗಿ ಮಾಹಿತಿ ನೀಡುವುದಕ್ಕಾಗಿ ಎಂದು ಘೋಷಿಸಿ ಬಿಜೆಪಿಯ ಹಲವು ಮುಖಂಡರು ಮುಂಬಯಿಯ ಮಾಟುಂಗಾ ಪ್ರದೇಶದ ಶಾಲೆಗೆ ಭೇಟಿ ನೀಡಿದ ಒಂದು ದಿನದ ನಂತರ ಈ ಕುರಿತು ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.
8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬಿಜೆಪಿ ಶುಕ್ರವಾರ ಬೆಳಿಗ್ಗೆ 10 ರಿಂದ 11 ರವರೆಗೆ ಭೀಮಣಿ ಬೀದಿಯಲ್ಲಿರುವ ದಯಾನಂದ ಬಾಲಕ್ ವಿದ್ಯಾಲಯದಲ್ಲಿ ಸಿಎಎ ಕುರಿತು ಭಾಷಣ ಆಯೋಜಿಸಿತ್ತು.
To campaign abt an Act in schools is ridiculous. What is the need for such political campaigning justification, if there is no ill intent? Politicisation of schools mustn’t be tolerated. If politicians want to speak in schools, speak on gender equality, helmets, cleanliness!
— Aaditya Thackeray (@AUThackeray) January 11, 2020
ಶಾಲೆಗಳಲ್ಲಿ ಒಂದು ಕಾಯ್ದೆಯನ್ನು ಪ್ರಚಾರ ಮಾಡುವುದು ಹಾಸ್ಯಾಸ್ಪದವಾಗಿದೆ. ಆ ಕಾಯ್ದೆಯ್ಲಿ ಯಾವುದೇ ಕೆಟ್ಟ ಉದ್ದೇಶವಿಲ್ಲದಿದ್ದರೆ, ಅಂತಹ ರಾಜಕೀಯ ಪ್ರಚಾರದ ಸಮರ್ಥನೆಯ ಅಗತ್ಯವೇನು? ಶಾಲೆಗಳ ರಾಜಕೀಕರಣವನ್ನು ಸಹಿಸಬಾರದು. ರಾಜಕಾರಣಿಗಳು ಶಾಲೆಗಳಲ್ಲಿ ಮಾತನಾಡಲು ಬಯಸಿದರೆ, ಲಿಂಗ ಸಮಾನತೆ, ಹೆಲ್ಮೆಟ್, ಸ್ವಚ್ಛತೆಯ ಬಗ್ಗೆ ಮಾತನಾಡಿ! ಎಂದು ಆದಿತ್ಯಾ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಆದಿತ್ಯಾ ಠಾಕ್ರೆಯವರ ಶಿವಸೇನೆ ಪಕ್ಷವು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿತ್ತು ಆದರೆ ರಾಜ್ಯಸಭೆಯಲ್ಲಿ ಮಂಡಿಸಿದಾಗ ಸದನವನ್ನು ತ್ಯಜಿಸುವ ಮೂಲಕ ರಾಜ್ಯಸಭೆಯಲ್ಲಿ ಉಲ್ಟಾ ಹೊಡೆದಿತ್ತು.