ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಸಬಾಂಗ್ ಪ್ರದೇಶದಲ್ಲಿ ಆಹಾರದ ಪೊಟ್ಟಣ ಕಳ್ಳತನದ ಶಂಕೆಯಲ್ಲಿ 12 ವರ್ಷದ ಬುಡಕಟ್ಟು ಸಮುದಾಯದ ಬಾಲಕನನ್ನು ಥಳಿಸಿ ಹತ್ಯೆ ಮಾಡಲಾಗಿದೆ.
ಸಬಾಂಗ್ನ ಬೋರೋಚರಾ ಗ್ರಾಮದ ನಿವಾಸಿ, ಲೋಧಾ ಶಬರ್ ಸಮುದಾಯದ ಬಾಲಕ ಸುಭಾ ನಾಯಕ್ ಆಹಾರವನ್ನು ಕಳ್ಳತನ ಮಾಡಿದ್ದಾನೆಂದು ಮರಕ್ಕೆ ಕಟ್ಟಿಹಾಕಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ.
ಈ ಘಟನೆಯು ಸೆ.27ರಂದು ಬುಧವಾರ ನಡೆದಿದೆ. ಸ್ಥಳೀಯ ಆಹಾರ ಮಳಿಗೆಯ ಮಾಲೀಕನೋರ್ವ ಅಂಗಡಿಯಿಂದ ಹೊರಗೆ ಹೋಗಿದ್ದ. ಈ ವೇಳೆ ಅಂಗಡಿಯಿಂದ ಆಹಾರದ ಪೊಟ್ಟಣಗಳು ಕಾಣೆಯಾಗಿದ್ದವು. ಅಂಗಡಿ ಮಾಲಕ ಬಂದು ಇದನ್ನು ನೆರೆಹೊರೆಯವರಿಗೆ ತಿಳಿಸಿದ್ದಾರೆ. ಈ ವೇಳೆ ದನಕರುಗಳಿಗೆ ಆಹಾರಕ್ಕಾಗಿ ಬಳಸುತ್ತಿದ್ದ ಅಲ್ಯೂಮಿನಿಯಂ ಪಾತ್ರೆಯೂ ನಾಪತ್ತೆಯಾಗಿದೆ ಎಂದು ಕೆಲವರು ಹೇಳಿದ್ದಾರೆ.
ಈ ವೇಳೆ ಅಂಗಡಿಯ ಎದುರಿನ ಗುಡಿಸಲಿನ ಬಳಿ ಸುಭಾ ನಾಯಕ್ ಕುಳಿತಿದ್ದರು. ಜನರ ಗುಂಪು ಸುಭಾ ನಾಯಕ್ ಅವರ ಮನೆಗೆ ನುಗ್ಗಿ ಹುಡುಕಾಟ ನಡೆಸಿದ್ದಾರೆ. ಆದರೆ ಏನೂ ಸಿಕ್ಕಿರಲಿಲ್ಲ. ಆದರೆ ಆ ಬಳಿಕ ಆತನ ಮೇಲೆ ಶಂಕೆಯ ಆಧಾರದಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ನ ಪಂಚಾಯತ್ ಸದಸ್ಯ ಮೊನೊರಂಜನ್ ಮಾಲ್ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆದರೆ ಪ್ರಾಥಮಿಕ ತನಿಖೆಯ ಪ್ರಕಾರ ನಾವು ಕೊಲೆ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪಶ್ಚಿಮ ಮೇದಿನಿಪುರ ಎಸ್ಪಿ ಧೃತಿಮಾನ್ ಸರ್ಕಾರ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಭಾರೀ ಪೊಲೀಸ್ ಭದ್ರತೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಸಂತ್ರಸ್ತನ ಸೋದರ ಸಂಬಂಧಿ, ನನ್ನ ಮನೆಯಿಂದ ಘಟನೆ ನಡೆದ ಸ್ಥಳಕ್ಕೆ 10 ನಿಮಿಷಗಳ ಕಾಲ್ನಡಿಗೆಯ ದೂರ ಇರುವುದು. ಕೆಲವು ಸ್ಥಳೀಯರು ಆತನನ್ನು ಥಳಿಸುತ್ತಿರುವುದನ್ನು ನಾನು ನೋಡಿದೆ. ನಾನು ಇದಕ್ಕೆ ವಿರೋಧಿಸಿದೆ ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ. ಅವರು ಅವನನ್ನು ಸ್ಥಳೀಯ ಕ್ಷೌರಿಕನ ಅಂಗಡಿಗೆ ಕರೆದೊಯ್ದು ತಲೆ ಬೋಳಿಸಿದರು. ನಂತರ ಬಸ್ ನಿಲ್ದಾಣಕ್ಕೆ ಕರೆದೊಯ್ದರು. ಅಲ್ಲಿ ಪಂಚಾಯಿತಿ ಸದಸ್ಯರ ಸೂಚನೆ ಮೇರೆಗೆ ಮತ್ತೆ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಕರೆ ಮಾಡುವಂತೆ ನಾನು ಅವರಿಗೆ ಮನವಿ ಮಾಡುತ್ತಲೇ ಇದ್ದೆ ಆದರೆ ಅವರು ನನ್ನ ಮಾತನ್ನು ನಿರ್ಲಕ್ಷಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಗಣಪತಿ ಮೂರ್ತಿ ಬಳಿ ಇಟ್ಟಿದ್ದ ಬಾಳೆಹಣ್ಣು ಕೊಂಡೊಯ್ದ ಶಂಕೆ: ಮುಸ್ಲಿಂ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿ ಹತ್ಯೆ