ಬಿಹಾರ ಸರ್ಕಾರದ ಶಿಕ್ಷಕರ ನೇಮಕಾತಿ ನೀತಿ ವಿರೋಧಿಸಿ ಗುರುವಾರ ಬಿಜೆಪಿ ಪಕ್ಷವು ಪಾಟ್ನಾದಲ್ಲಿ ನಡೆಸಿದ ವಿಧಾನಸಭಾ ಮುತ್ತಿಗೆಯ ಬೃಹತ್ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಮಾಡಿದ ಲಾಠೀ ಚಾರ್ಜ್ನಲ್ಲಿ ಬಿಜೆಪಿ ಮುಖಂಡ ವಿಜಯ್ ಕುಮಾರ್ ಸಿಂಗ್ ಸಾವನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಬಿಹಾರ ಪೊಲೀಸರು ಬಿಜೆಪಿ ಮುಖಂಡ ಲಾಠಿ ಚಾರ್ಜ್ ಸಮಯದಲ್ಲಿ ಪ್ರತಿಭಟನಾ ಸ್ಥಳದಲ್ಲಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪೊಲೀಸ್ ಲಾಠಿ ಚಾರ್ಜ್ನಲ್ಲಿ ಬಿಜೆಪಿ ಪಕ್ಷದ ಜೆಹಾನಾಬಾದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಸಿಂಗ್ ಅವರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ ಪೊಲೀಸರು ಹೇಳಿಕೆ ನೀಡಿದ್ದು, “ಪ್ರಾಥಮಿಕ ತನಿಖೆ ಮತ್ತು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಜೆಹಾನಾಬಾದ್ ಮೂಲದ ವಿಜಯ್ ಕುಮಾರ್ ಸಿಂಗ್ ಲಾಠಿ ಚಾರ್ಜ್ ನಡೆದ ಡಾಕ್ ಬಂಗಲೆ ವೃತ್ತವನ್ನು ತಲುಪಿರಲಿಲ್ಲ” ಎಂದು ಪಾಟ್ನಾದ ಹಿರಿಯ ಅಧೀಕ್ಷರಾದ ರಾಜೀವ್ ಮಿಶ್ರಾ ತಿಳಿಸಿದ್ದಾರೆ.
“ಒಂದು ಸಿಸಿಟಿವಿಯ ವಿಡಿಯೋ ತುಣುಕಿನಲ್ಲಿ ವಿಜಯ್ ಕುಮಾರ್ ಸಿಂಗ್ ಮತ್ತು ಅವರೊಂದಿಗೆ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 1 ಗಂಟೆ 22 ನಿಮಿಷದ ಸಂದರ್ಭದಲ್ಲಿ ಗಾಂಧಿ ಮೈದಾನ-ಚಜ್ಜು ಬಾಗ್ ರಸ್ತೆಯ ಮೂಲಕ ಚಜ್ಜು ಬಾಗ್ ಪ್ರದೇಶದಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಆ ಮೂವರೂ ಪರಸ್ಪರ ಮಾತನಾಡುತ್ತಿದ್ದರು ಮತ್ತು ಅವರು ಆರೋಗ್ಯವಾಗಿದ್ದರು. ಆನಂತರ 1 ಗಂಟೆ 27ನೇ ನಿಮಿಷದ ಸಂದರ್ಭದಲ್ಲಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದದ್ದು ಕೂಡ ಅದೇ ವಿಡಿಯೋದಲ್ಲಿ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾದಿಂದ ಸುಮಾರು 50 ಮೀಟರ್ ದೂರದಲ್ಲಿ ಎಲೆಕ್ಟ್ರಿಕ್ ಟ್ರಾನ್ಸ್ಫಾರ್ಮರ್ ಬಳಿ ಸಿಂಗ್ ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ರಾಜೀವ್ ಮಿಶ್ರಾ ಹೇಳಿದ್ದಾರೆ.
ಆ ಪ್ರದೇಶದಲ್ಲಿ ಯಾವುದೇ ಲಾಠಿ ಚಾರ್ಜ್ ನಡೆದಿಲ್ಲ, ಸಿಂಗ್ ಅವರ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
“ಮೃತ ಸಿಂಗ್ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ತಾವು ಡಾಕ್ ಬಂಗಲೆ ವೃತ್ತಕ್ಕೆ ಹೋಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆ ವೃತ್ತವನ್ನು ಬ್ಯಾರಿಕೇಡ್ ಹಾಕಿ ಮುಚ್ಚಿದ್ದರಿಂದ ಅವರು ಆ ಕಡೆ ಹೋಗದಿರಲು ನಿರ್ಧರಿಸಿದರು. ನಂತರ ಸಿಂಗ್ ಅವರ ಸ್ನೇಹಿತರು ಅವರನ್ನು ರಿಕ್ಷಾದ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ರಿಕ್ಷಾವು ಹತ್ತಿರದ ಆಸ್ಪತ್ರೆಯನ್ನು ತಲುಪಲು ಐದರಿಂದ ಆರು ನಿಮಿಷಗಳನ್ನು ತೆಗೆದುಕೊಂಡಿರಬಹುದು ಎಂದು ನಾವು ನಂಬುತ್ತೇವೆ. ಅವರು ಮೂರ್ಛೆ ಹೋದ ಘಟನೆ ಮಧ್ಯಾಹ್ನ 1.23 ರಿಂದ 1.27 ರ ನಡುವೆ ನಡೆದಿರಬಹುದು. ಸಿಂಗ್ ಸುತ್ತಲೂ ಅಥವಾ ರಿಕ್ಷಾದ ಸುತ್ತಲೂ ಯಾವುದೇ ಪೊಲೀಸರು ಕಂಡುಬಂದಿಲ್ಲ ಎಂದು ದೃಶ್ಯಗಳು ಬಹಿರಂಗಪಡಿಸಿವೆ”ಎಂದು ಅವರು ಹೇಳಿದ್ದಾರೆ.
“ಅಲ್ಲದೇ ಚಜ್ಜು ಬಾಗ್ ಪ್ರದೇಶದಲ್ಲಿನ ಸಿಸಿಟಿವಿಯ ದೃಶ್ಯಗಳಲ್ಲಿ ಯಾವುದೇ ರೀತಿಯ ಕಾಲ್ತುಳಿತದ ದೃಶ್ಯ ಕಂಡುಬಂದಿಲ್ಲ. ಆ ಪ್ರದೇಶದಲ್ಲಿ ಸಂಪೂರ್ಣ ಸಾಮಾನ್ಯ ಸಂಚಾರ ದಟ್ಟಣೆ ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಅವರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಬಹುದು” ಎಸ್ಎಸ್ಪಿ ಹೇಳಿದ್ದಾರೆ.
ಬಿಜೆಪಿಯ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದಂತೆ ಒಟ್ಟು 59 ಜನರನ್ನು ಬಂಧಿಸಲಾಯಿತು ಆದರೆ ಅವರೆಲ್ಲರನ್ನೂ ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.
“ಮೃತರ ಮರಣೋತ್ತರ ಪರೀಕ್ಷೆಯನ್ನು ನಡೆಸುವಾಗ ಜಿಲ್ಲಾಡಳಿತವು ಸಂಪೂರ್ಣ ಪಾರದರ್ಶಕತೆಯನ್ನು ಅನುಸರಿಸಿದೆ. ಮ್ಯಾಜಿಸ್ಟ್ರೇಟ್ ಮತ್ತು ಮರಣೋತ್ತರ ಪರೀಕ್ಷೆಯನ್ನು ವೈದ್ಯಕೀಯ ಮಂಡಳಿಯು ವೀಡಿಯೊಗ್ರಫಿ ಅಡಿಯಲ್ಲಿ ನಡೆಸಿತು” ಎಂದು ಎಸ್ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ; ಬಿಜೆಪಿ ಸರ್ಕಾರ RSS ಅಂಗಸಂಸ್ಥೆಗೆ ಭೂಮಿ ನೀಡಿದ್ದ ಆದೇಶಕ್ಕೆ ತಡೆ: ಸಚಿವ ಕೃಷ್ಣಭೈರೇಗೌಡ