ಮಿಜೋರಾಂನಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ನಡುವೆ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಆರ್ ವನ್ರಾಮ್ಚುವಾಂಗಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದಾರೆ.
ಮಣಿಪುರದಲ್ಲಿ ನಡೆದ ಹಿಂಸಾಚಾರದ ನಡುವೆ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಕೇಂದ್ರ ಸರ್ಕಾರವು ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿ ಮಿಜೋರಾಂನ ಬಿಜೆಪಿ ಉಪಾಧ್ಯಕ್ಷ ಆರ್ ವನ್ರಾಮ್ಚುವಾಂಗಾ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ವನ್ರಾಮ್ಚುವಾಂಗಾ ಅವರು ಮಿಜೋರಾಂ ಬಿಜೆಪಿ ಮುಖ್ಯಸ್ಥ ವನ್ಲಾಲ್ಮುವಾಕಾ ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ನೆರೆಯ ರಾಜ್ಯ ಮಣಿಪುರದಲ್ಲಿ ”ಕ್ರಿಶ್ಚಿಯನ್ ವಿರೋಧಿ ಚಟುವಟಿಕೆಗಳಿಂದ” ತೀವ್ರವಾಗಿ ನೋವಾಗಿದೆ ಎಂದು ಹೇಳಿದ್ದಾರೆ. ”ಮೈತಿ ಉಗ್ರಗಾಮಿಗಳು 357 ಕ್ರಿಶ್ಚಿಯನ್ ಚರ್ಚ್ಗಳನ್ನು, ಪಾದ್ರಿ ಕ್ವಾರ್ಟರ್ಗಳನ್ನು ಮತ್ತು ವಿವಿಧ ಚರ್ಚ್ಗಳಿಗೆ ಸೇರಿದ ಕಚೇರಿ ಕಟ್ಟಡಗಳನ್ನು ಸುಟ್ಟುಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಮುದಾಯವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಬಿಜೆಪಿ ನಾಯಕ ಆರೋಪಿಸಿದ್ದಾರೆ.
”ಶಾ ಅವರು ಸ್ವತಃ [ಮಣಿಪುರ ರಾಜಧಾನಿ] ಇಂಫಾಲ್ಗೆ ಹೋಗಿದ್ದರು ಮತ್ತು ಮೂರು ಹಗಲು ಮತ್ತು ಎರಡು ರಾತ್ರಿ ಇದ್ದರು, ಆದರೆ ಅವರ ಆಗಮನದ ಸಮಯದಲ್ಲಿ ಮತ್ತು ಅವರು ಹೋದ ನಂತರವೂ ಹಿಂಸಾಚಾರ ಮುಂದುವರೆದಿದೆ” ಎಂದು ಅವರು ಹೇಳಿದರು.
”ಮಣಿಪುರದ ಬೆಳವಣಿಗೆಗಳು ಬಿಜೆಪಿ ಕ್ರಿಶ್ಚಿಯನ್ ವಿರೋಧಿ ಪಕ್ಷ ಎಂಬ ಆರೋಪಗಳಿಗೆ ಪುಷ್ಠಿ ನೀಡಿವೆ” ಎಂದು ವನ್ರಾಮ್ಚುವಾಂಗಾ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ತಮ್ಮ ಮುಂದಿನ ನಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ”ಗುರುವಾರ ಇತರ ಕೆಲವು ಪಕ್ಷಗಳ ನಾಯಕರು ತಮ್ಮನ್ನು ಭೇಟಿ ಮಾಡಿದ್ದಾರೆ ಆದರೆ ಮುಂದಿನ ಕ್ರಮಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ” ಎಂದು ಹೇಳಿದರು.
ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ
ಮಣಿಪುರವು ಮೇ 3 ರಿಂದ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಲಿದೆ. ಈ ಹಿಂಸಾಚಾರದಿಂದಾಗಿ 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60,000 ಜನರು ತಮ್ಮ ಮನೆಗಳನ್ನು ತೊರೆದು ಹೋಗಬೇಕಾಯಿತು.
ರಾಜ್ಯದಲ್ಲಿ ಬಹುಪಾಲು ಮೈತಿಗಳು ಹಿಂದೂಗಳಾಗಿದ್ದರೆ, ಹೆಚ್ಚಿನ ಕುಕಿಗಳು ಮತ್ತು ನಾಗಾಗಳು ಕ್ರಿಶ್ಚಿಯನ್ನರು. ಮಿಜೋರಾಂನಲ್ಲಿರುವ ಮಿಜೋ ಸಮುದಾಯವು ಮಣಿಪುರದ ಕುಕಿ-ಜೋಮಿ ಸಮುದಾಯದೊಂದಿಗೆ ಜನಾಂಗೀಯ ಸಂಬಂಧಗಳನ್ನು ಹಂಚಿಕೊಂಡಿದೆ.
ಮೈತಿ ಲೀಪುನ್ ಮುಖ್ಯಸ್ಥನ ವಿರುದ್ಧ ದ್ವೇಷವನ್ನು ಉತ್ತೇಜಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ
ಮಣಿಪುರ ಪೊಲೀಸರು ಮೈತೆ ಲೀಪುನ್ನ ಮುಖ್ಯಸ್ಥ ಪ್ರಮೋತ್ ಸಿಂಗ್ ವಿರುದ್ಧ ದ್ವೇಷ ಮತ್ತು ಕ್ರಿಮಿನಲ್ ಪಿತೂರಿಯನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಹಿಂದೂ ಬುಧವಾರ ವರದಿ ಮಾಡಿದೆ.
ಮಣಿಪುರದಲ್ಲಿ ಕುಕಿಗಳ ವಿರುದ್ಧದ ಹಿಂಸಾಚಾರದಲ್ಲಿ ಮೈತಿ ಲೀಪುನ್, ಅರಾಂಬೈ ಟೆಂಗೋ ಎಂಬ ಇನ್ನೊಂದು ಮೈತಿ ಗುಂಪಿನೊಂದಿಗೆ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲಿನ ಅಸಹಿಷ್ಣುತೆಯೇ ಮಣಿಪುರ ಹಿಂಸಾಚಾರಕ್ಕೆ ಕಾರಣ: ಯುರೋಪಿಯನ್ ಪಾರ್ಲಿಮೆಂಟ್ ನಿರ್ಣಯ