ಪ್ರತಿಪಕ್ಷದ ಅಕಾಲಿ ದಳದ ಆರೋಪದ ನಂತರ ಪಂಜಾಬ್ ಸರ್ಕಾರವು ಶುಕ್ರವಾರ ಸಂಜೆ, “ಖಾಸಗಿ ಆಸ್ಪತ್ರೆಗಳ ಮೂಲಕ 18-44 ವಯೋಮಾನದವರಿಗೆ ಒಂದು ಬಾರಿ ಸೀಮಿತ ಲಸಿಕೆ ಪ್ರಮಾಣವನ್ನು” ನೀಡುವ ಆದೇಶವನ್ನು ಹಿಂತೆಗೆದುಕೊಂಡಿದೆ. ಕೊವಾಕ್ಸಿನ್ ಅನ್ನು ಖಾಸಗಿ ಆಸ್ಪತ್ರೆಗಳು ದುಬಾರಿ ದರಕ್ಕೆ ಮಾರಿಕೊಳ್ಳುವ ನಡೆ ಎಂದು ಅಕಾಲಿ ದಳ ಟೀಕಿಸಿತ್ತು.
ರಾಜ್ಯ ಲಸಿಕಾ ಅಭಿಯಾನದ ಉಸ್ತುವಾರಿ ವಿಕಾಸ್ ಗರ್ಗ್ ಅವರು ಸಹಿ ಮಾಡಿದ ಸಂಕ್ಷಿಪ್ತ ಪತ್ರದಲ್ಲಿ, ‘ಈ ಆದೇಶವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಾಗಿಲ್ಲ ಮತ್ತು ಇದನ್ನು ಹಿಂಪಡೆಯಲಾಗಿದೆ” ಎಂದು ಹೇಳಿದ್ದಾರೆ.
“ಇದಲ್ಲದೆ, ಖಾಸಗಿ ಆಸ್ಪತ್ರೆಗಳು ತಮ್ಮೊಂದಿಗೆ ಲಭ್ಯವಿರುವ ಎಲ್ಲಾ ಲಸಿಕೆಗಳನ್ನು ಕೂಡಲೇ ಮರಳಿಸಬೇಕು ಎಂದು ಸೂಚಿಸಲಾಗಿದೆ. ಈವರೆಗೆ ಬಳಸಿದ ಲಸಿಕಾ ಡೋಸ್ಗಳ ಪ್ರಮಾಣವನ್ನು ತಯಾರಕರಿಂದ ಖರೀದಿಸಿ ವಾಪಸ್ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಲಸಿಕೆ ನಿಧಿಯಲ್ಲಿ ಆಸ್ಪತ್ರೆಗಳು ಠೇವಣಿ ಇಟ್ಟ ಹಣವನ್ನು ಹಿಂದಿರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶವನ್ನು ಹಿಂಪಡೆಯುವ ಸ್ವಲ್ಪ ಸಮಯದ ಮೊದಲು, ಕೇಂದ್ರವು ರಾಜ್ಯಕ್ಕೆ ಪತ್ರ ಬರೆದಿದ್ದು, “ಈ ವಿಷಯದಲ್ಲಿ ತಕ್ಷಣವೇ ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟೀಕರಣ ನೀಡುವಂತೆ ಕೇಳಿತ್ತು.
ಲಸಿಕೆಗಳ ಮೇಲೆ ನನಗೆ ನಿಯಂತ್ರಣವಿಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಬಿ.ಎಸ್.. ಸಿಧು ಶುಕ್ರವಾರ ಮುಂಜಾನೆ ತಿಳಿಸಿದ್ದರು. “ನಾನು ಚಿಕಿತ್ಸೆ, ಪರೀಕ್ಷೆ, ಕೋವಿಡ್ ಮಾದರಿ ಮತ್ತು ಲಸಿಕಾ ಶಿಬಿರಗಳನ್ನು ನೋಡಿಕೊಳ್ಳುತ್ತಿದ್ದೇನೆ. ನಾವು ಖಂಡಿತವಾಗಿಯೂ ವಿಚಾರಣೆಯನ್ನು ನಡೆಸುತ್ತೇವೆ. ನಾನೇ ವಿಚಾರಿಸಬಹುದು” ಎಂದು ಸಿಧು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಸಂಭವನೀಯ ಭಿನ್ನಮತವನ್ನು ಅಮರಿಂದರ್ ಸಿಂಗ್ ಸರ್ಕಾರ ಎದುರಿಸುತ್ತಿದೆ. ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಬಾದಲ್ ಅವರು, 40,000 ಡೋಸ್ ಕೋವಾಕ್ಸಿನ್ ಅನ್ನು ಹೆಚ್ಚಿನ ದರದಲ್ಲಿ ಮರು ಮಾರಾಟ ಮಾಡಲಾಗಿದೆ ಎಂದು ಗುರುವಾರ ಹೇಳಿದ ನಂತರ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
ಡೋಸೇಜ್ಗೆ 400 ರೂ. ದರದಲ್ಲಿ ಖರೀದಿಸಲಾಗಿದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ಗೆ 1,060 ರೂ,ಗೆ ಮಾರಾಟ ಮಾಡಲಾಗಿದೆ. ಆಸ್ಪತ್ರೆಗಳು ಅದನ್ನು ಅರ್ಹ ಫಲಾನುಭವಿಗಳಿಗೆ ಪ್ರತಿ ಡೋಸ್ಗೆ 1,560 ರೂ.ಗೆ ನೀಡಿವೆ ಎಂದು ಬಾದಲ್ ಹೇಳಿದ್ದಾರೆ.
ರಾಷ್ಟ್ರೀಯ ಲಸಿಕಾ ನೀತಿಯ ಬಗ್ಗೆ ತೀವ್ರವಾಗಿ ಟೀಕಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್ ಅವರು ಇಂದು ಮಧ್ಯಾಹ್ನ ಪಂಜಾಬ್ ವಿಷಯ ಉಲ್ಲೇಖಿಸಿ ಟೀಕೆ ಮಾಡಿದ್ದಾರೆ.
ಗುರುವಾರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಕೂಡ ಪಂಜಾಬ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಎಎನ್ಐ ಪ್ರಕಾರ ಅವರು, “ಜನರ ಬಗ್ಗೆ ಪಂಜಾಬ್ ಸರ್ಕಾರ ಕಠಿಣ ಮನೋಭಾವ” ತೋರಿಸುತ್ತಿದೆ’ ಎಂದು ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಲಸಿಕೆಯ ಕಡಿಮೆ ದಾಸ್ತಾನು ಹೊಂದಿರುವ ಹಲವಾರು ರಾಜ್ಯಗಳಲ್ಲಿ ಪಂಜಾಬ್ ಕೂಡ ಸೇರಿದೆ.
ಲಸಿಕೆ ಸರಬರಾಜು ವಿಷಯವು ಕೇಂದ್ರ ಮತ್ತು ಹಲವಾರು ರಾಜ್ಯಗಳ ನಡುವೆ ವಿವಾದದ ವಿಷಯವಾಗಿ ಮಾರ್ಪಟ್ಟಿದೆ.. ಕಳೆದ ಕೆಲವು ತಿಂಗಳುಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಲಸಿಕೆ ಕೊರತೆಯಿಂದ ಪದೇ ಪದೇ ಲಸಿಕಾ ಅಭಿಯಾನವನ್ನು ಸ್ಥಗಿತಗೊಳಿಸಿದ್ದವು. ಅದರಲ್ಲೂ ವಿಶೇಷವಾಗಿ 18-44 ವಯೋಮಾನದವರಿಗೆ, 45 ವರ್ಷಕ್ಕಿಂತ ಮೇಲ್ಪಟ್ಟವರಂತೆ ನೀಡಿದಂತೆ ಉಚಿತವಾಗಿ ನೀಡಲಾಗಿಲ್ಲ, ಕೇಂದ್ರವು ಅಗತ್ಯವಿರುವ ಶೇಕಡಾ 50 ರಷ್ಟು ಪ್ರಮಾಣವನ್ನು ಮಾತ್ರ ಒದಗಿಸುತ್ತದೆ. ಅದರ ಹೊಸ ನೀತಿಯಡಿಯಲ್ಲಿ ಉಳಿದವುಗಳನ್ನು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಉತ್ಪಾದಕರಿಂದ ಖರೀದಿಸಬೇಕು.
ಕೇಂದ್ರವು ಪ್ರತಿ ಡೋಸ್ಗೆ 150 ರೂ. ಪಾವತಿಸಿದರೆ, ಕೊವಾಕ್ಸಿನ್ ಅನ್ನು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗೆ ನೀಡಲಾಗುತ್ತಿದೆ. ಈ ದರ ವ್ಯತ್ಯಾಸವನ್ನು ಸುಪ್ರೀಂಕೋರ್ಟ್ ಕೂಡ ಪ್ರಶ್ನಿಸಿದೆ.
ಕಾಂಗ್ರೆಸ್, ಏಪ್ರಿಲ್ನಲ್ಲಿ ಇದನ್ನು ಕೇಂದ್ರದ “ಲಸಿಕೆ ವ್ಯಾಪಾರ” ಎಂದು ದೂಷಿಸಿತ್ತು.
ಡಿಸೆಂಬರ್ ಅಂತ್ಯದ ವೇಳೆಗೆ ಇಡೀ ದೇಶಕ್ಕೆ ಲಸಿಕೆ ನೀಡುವುದಾಗಿ ಕೇಂದ್ರ ಹೇಳಿತ್ತು. ಆದರೆ ಈ ವಾರ ಸುಪ್ರೀಂಕೋರ್ಟ್ ಆ ಗುರಿಯನ್ನು ಹೇಗೆ ಸಾಧಿಸಲು ಯೋಜಿಸಿದೆ ಎಂಬುದರ ಕುರಿತು ಹಲವಾರು ಕಠಿಣ ಪ್ರಶ್ನೆಗಳನ್ನು ಕೇಳಿದೆ.
ಇದನ್ನೂ ಓದಿ: ದೊಡ್ಡ ಅನಾಹುತ ಸಂಭವಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು – ಎಚ್.ಡಿ.ಕುಮಾರಸ್ವಾಮಿ