Homeಅಂಕಣಗಳುಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

ಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

- Advertisement -
- Advertisement -

ಜಗತ್ತಿನ ಅತಿ ಬಡರಾಷ್ಟ್ರಗಳಲ್ಲಿ ಸೋಮಾಲಿಯಾ ಒಂದು. ಆಫ್ರಿಕಾ ಖಂಡದ ಪೂರ್ವಭಾಗದಲ್ಲಿ ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಸೋಮಾಲಿಯಾ ಬಡತನ, ಅನಕ್ಷರತೆ, ಅಂತರ್ಯುದ್ಧ ಮತ್ತು ದಂಗೆಗಳಿಂದ ತತ್ತರಿಸಿರುವ ದೇಶ.

ಸೋಮಾಲಿಯಾ ಜನರನ್ನು ಒಗ್ಗೂಡಿಸುವುದು ಅವರ ಧರ್ಮ (ಇಸ್ಲಾಂ) ಮತ್ತು ಭಾಷೆ. ಆದರೆ ತಮ್ಮ ಸಾಂಸ್ಕೃತಿಕ ಒಗ್ಗಟ್ಟಿನ ಬಗ್ಗೆ ಹೆಮ್ಮೆ ಪಡುವ ಸೋಮಾಲಿಗಳು ಅವಕಾಶ ಸಿಕ್ಕಾಗಲೆಲ್ಲಾ ತಮ್ಮವರೇ ಆದ ನೆರೆಯ ಬುಡಕಟ್ಟಿನವರೊಂದಿಗೆ ಕಾಳಗಕ್ಕೆ ಇಳಿಯುವುದೇ ಒಂದು ವೈಚಿತ್ರ್ಯ.

ಶೇ.76ರಷ್ಟು ಸೋಮಾಲಿಗಳು ಇವತ್ತಿಗೂ ಅಲೆಮಾರಿ ಗೊಲ್ಲರು. ತಮ್ಮ ಕುರಿ, ಮೇಕೆ, ಒಂಟೆ ಮತ್ತು ಜಾನುವಾರುಗಳೊಂದಿಗೆ ಅಲೆಮಾರಿ ಜೀವನ ಸಾಗಿಸುವ ಸೋಮಾಲಿಗಳು ಇವತ್ತಿಗೂ ಅವಲಂಬಿಸಿರುವುದು ತಮ್ಮ ಸಾಕುಪ್ರಾಣಿಗಳನ್ನೇ. ಅಷ್ಟೇ ಏಕೆ, ಸೋಮಾಲಿಯಾ ದೇಶದ ಆರ್ಥಿಕತೆ ಕೂಡ ಅವಲಂಬಿತವಾಗಿರುವುದು ತನ್ನ ಅಲೆಮಾರಿ ಜನರ ಜೀವನಾಧಾರಗಳನ್ನೇ. ತನ್ನ ಗೊಲ್ಲರ ಸಾಕುಪ್ರಾಣಿಗಳ ಮಾಂಸ, ಚರ್ಮ ಇತ್ಯಾದಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಲ್ಲಿಯೇ ಸೋಮಾಲಿಯಾ ದೇಶ ತನ್ನ ವಿದೇಶ ವಿನಿಮಯದ ಶೇ.90ರಷ್ಟನ್ನು ಗಳಿಸುತ್ತದೆ. ಸೋಮಾಲಿಯಾದ ಜೀವನೋತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿದ್ದದ್ದು ತನ್ನ ನೆರೆಯಲ್ಲಿರುವ ಸೌದಿ ಅರೇಬಿಯಾಕ್ಕೆ.

ಅಲೆಮಾರಿ ಗೊಲ್ಲರ ಸರಳ ಜೀವನ ಮತ್ತು ಅವರ ಉತ್ಪನ್ನವನ್ನೇ ನಂಬಿದ್ದ ಸೋಮಾಲಿಯಾ ದೇಶ ಸಂಕಷ್ಟದ ದಿನಗಳಿಗೆ ಸಿಲುಕಿದ್ದು 90ರ ದಶಕದಲ್ಲಿ ಅಂತರ್ಯುದ್ಧ ಶುರುವಾದಾಗ. ಆ ಯುದ್ಧದ ಪರಿಣಾಮವಾಗಿ ಮೂರು ಲಕ್ಷ ಜನ ಸಾವನ್ನಪ್ಪಿದರಲ್ಲದೆ, 45 ಲಕ್ಷ ಜನ ಕಾಯಿಲೆ ಹಾಗೂ ಉಪವಾಸದಿಂದ ನರಳಿದರು.

ಈ ದುರಂತದಿಂದ ಸೋಮಾಲಿಯಾ ಚೇತರಿಸಿಕೊಳ್ಳುತ್ತಿರುವಾಗಲೇ, ಸೋಮಾಲಿಯಾದ ಗೊಲ್ಲರ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸುತ್ತಿದ್ದ ಸೌದಿ ಅರೇಬಿಯಾ ಒಂದು ಶಾಕ್ ನೀಡಿತು. ಸೋಮಾಲಿಯಾದ ಪ್ರಾಣಿಗಳು ’ಕಣಿವೆ ಜ್ವರ’ದಿಂದ (Rift valley fever) ಬಳಲುತ್ತಿವೆಯೆಂದು ಅವುಗಳ ರಫ್ತನ್ನು ನಿಷೇಧಿಸಿತು. ಅಷ್ಟೇ ಅಲ್ಲದೆ, ಸೋಮಾಲಿಯಾದ ಪ್ರಾಣಿಗಳಿಗೆ ಬದಲಾಗಿ, ಅಲ್ಲಿನ ಮರಮಟ್ಟುಗಳತ್ತ ಸೌದಿ ಅರೇಬಿಯಾ ಕಣ್ಣುಗಳನ್ನಿಟ್ಟಿತು. ಇದ್ದಲಿನ (ಚಾರ್ಕೋಲ್) ಮುಖ್ಯ ಆಧಾರ ಈ ಮರಗಳು. ಅಷ್ಟು ಹೊತ್ತಿಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸೋಮಾಲಿಗಳು ಕಂಡಕಂಡಲ್ಲಿ ಮರಮಟ್ಟುಗಳನ್ನು ಕೆಡವಲಾರಂಭಿಸಿದ್ದರು. ನಿಧಾನವಾಗಿ ಸೋಮಾಲಿಯಾದ ಅರಣ್ಯಗಳು ನಾಶವಾಗಲಾರಂಭಿಸಿದವು.

ಆಗ, ತನ್ನ ದೇಶದ ಜನರಿಗೆ ಬುದ್ದಿ ಹೇಳಿದವಳು ಫಾತಿಮಾ ಜಿಬ್ರೆಲ್. ಈಕೆ ಸೋಮಾಲಿಯಾದ ಅಲೆಮಾರಿ ಗೊಲ್ಲರ ಕುಟುಂಬವೊಂದರಲ್ಲಿ ಜನಿಸಿದಾಕೆ. ಆದರೆ ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವಳು. ಸಹಸ್ರಾರು ವರ್ಷಗಳಿಂದ ಪರಿಸರವನ್ನೇ ನಂಬಿ ಬದುಕಿದ್ದ ತನ್ನ ಜನ ಹೀಗೆ ಪರಿಸರಕ್ಕೇ ಕೊಡಲಿ ಹಾಕಿದ್ದನ್ನು ಕಂಡ ಫಾತಿಮಾ ತಕ್ಷಣವೇ ಕ್ರಿಯಾಶೀಲವಾದಳು.

ಮರಗಳನ್ನು ಕೆಡವಿದರೆ, ಕಾಡುಗಳನ್ನು ನಾಶಮಾಡಿದರೆ, ಪರಿಸರಕ್ಕೆ ಧಕ್ಕೆ ತಂದರೆ, ಐತಿಹಾಸಿಕವಾಗಿ ಸೋಮಾಲಿಗಳು ನಂಬಿರುವ ಸಾಕುಪ್ರಾಣಿಗಳಿಗೂ ಮತ್ತು ತಮ್ಮ ಅಲೆಮಾರಿ ಜೀವನಶೈಲಿಗೂ ಹಾನಿ ತಂದುಕೊಂಡಂತೆ ಎಂದು ಭಾವಿಸಿದಳು ಫಾತಿಮಾ. “ನಾವು ಅವಲಂಬಿಸಿರುವ ಪರಿಸರವನ್ನು ಒಮ್ಮೆ ನಾಶ ಮಾಡಿದರೆ ಮತ್ತೆ ಲಕ್ಷಾಂತರ ವರ್ಷಗಳಾದರೂ ಅದನ್ನು ಸರಿಪಡಿಸಲಾರೆವು” ಎಂದ ಫಾತಿಮಾ, “ತನಗೆ ಬೇಕಾಗಿರುವ ಇದ್ದಲಿಗಾಗಿ ಸೌದಿ ಅರೇಬಿಯಾ ಸೋಮಾಲಿಯಾಕ್ಕೆ ಮಾಡುತ್ತಿರುವ ಹಾನಿಯನ್ನು ಅರ್ಥೈಸಿಕೊಂಡು ನಮ್ಮ ಬಡದೇಶಕ್ಕೆ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸಲಿ.” ಎಂದು ಘೋಷಿಸಿದಳು.

ಅಂದಿನಿಂದ ಸೋಮಾಲಿಯಾದ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಫಾತಿಮಾ. ಈಗ ಮುದುಕಿಯಾಗಿರುವ ಫಾತಿಮಾ ಚಿಕ್ಕಪುಟ್ಟ ಗ್ರಾಮಗಳಲ್ಲೂ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾಳೆ. ಇನ್ನು ಸೋಮಾಲಿಯಾದಲ್ಲಿ ಕಾಡುಗಳು ಸುರಕ್ಷಿತವಾಗಿದ್ದರೆ, ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆ ಆಗುತ್ತಿದ್ದರೆ ಅದಕ್ಕೆ ಫಾತಿಮಾ ಕಾರಣ. ಆದರೆ ಇದು ಫಾತಿಮಾ ಸುಲಭವಾಗಿ ಗಳಿಸಿದ ಸಾಧನೆಯಲ್ಲ.

ಒಂದು ದಶಕದಿಂದ ಅಂತರ್ಯುದ್ಧವನ್ನು ಎದುರಿಸುತ್ತಿರುವ ಸೋಮಾಲಿಯಾ ಈಗ ಬರಗಾಲದಿಂದ ತತ್ತರಿಸುತ್ತಿದೆ. ಈಗ ಅದು ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಕೂಡ ಆಗಿದೆ. ಈ ಎಲ್ಲದರ ಮಧ್ಯೆ ಫಾತಿಮಾ ಪರಿಸರವನ್ನು ರಕ್ಷಿಸುವುದಕ್ಕಾಗಿ, ಮಹಿಳೆಯರನ್ನು ಒಗ್ಗೂಡಿಸುತ್ತಿರುವುದಕ್ಕಾಗಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ಆದರೂ, ಈ ಎಲ್ಲಾ ತೊಂದರೆಗಳ ನಡುವೆಯೂ ಇತ್ತೀಚೆಗೆ ಸೋಮಾಲಿಯಾದ ಒಂದು ರಾಜ್ಯವಾದ ಪುಂಟ್‌ಲ್ಯಾಂಡ್‌ನಿಂದ ಇದ್ದಿಲು ರಫ್ತನ್ನು ನಿಷೇಧ ಮಾಡುವುದರಲ್ಲಿ ಯಶಸ್ವಿಯಾಗಿದ್ದಾಳೆ.

ತನ್ನ ಜನರ ಜೀವನಶೈಲಿಯನ್ನು ಮತ್ತು ಪರಿಸರವನ್ನು ಸಂರಕ್ಷಿಸುವುದರಲ್ಲಿ ಫಾತಿಮಾಳದ್ದು ಏಕಾಂಗಿ ಹೋರಾಟ. ಕಳೆದ ವಾರ ಈ ದಿಟ್ಟ ಮಹಿಳೆಯ ಕೊಡುಗೆಯನ್ನು ಪರಿಗಣಿಸಿ ಪರಿಸರ ಸಂರಕ್ಷಣೆಗಾಗಿ ’ಗೋಲ್ಡ್ ಮ್ಯಾನ್ ಎನ್‌ವೈರ್ನಮೆಂಟ್ ಪ್ರೈಜ’ನ್ನು ಈಕೆಗೆ ನೀಡಲಾಗಿದೆ. ಈ ಪ್ರಶಸ್ತಿ ಬರುವವರೆಗೂ ಫಾತಿಮಾ ಜಿಬ್ರೆಲ್ ಬಗ್ಗೆ ಸೋಮಾಲಿಯಾ ಹೊರತುಪಡಿಸಿ ಹೊರಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಕಾಳಜಿ ಮತ್ತು ಅರ್ಪಣಾಭಾವ ಇದ್ದರೆ ಯಾರಾದರೂ ತಮ್ಮ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಫಾತಿಮಾ ಜಿಬ್ರೆಲ್ ಒಂದು ಉದಾಹರಣೆ.

(ಇದು ಗೌರಿಯವರ ಕಂಡಹಾಗೆ ಅಂಕಣ ಬರಹವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀಗೆ ಉತ್ತಮ ಬರಹಗಳನ್ನು ಮರು ಪ್ರಕಟಣೆ ಮಾಡುತ್ತಿರಿ. ಧನ್ಯವಾದ. ‌

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...