ಸೆಪ್ಟೆಂಬರ್ 2018ರಲ್ಲಿ, ಹರಿಯಾಣ ಪೊಲೀಸರು ಉದ್ಯಮಿ ರಾಬರ್ಟ್ ವಾದ್ರಾ, ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ಎಫ್ ಗ್ರೂಪ್ ಮತ್ತು ಇತರರ ವಿರುದ್ಧ ಗುರುಗ್ರಾಮದಲ್ಲಿ ಭೂ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮತ್ತು ವಂಚನೆ ಆರೋಪ ಹೊರಿಸಿದ್ದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಹೆಸರು ಕೇಳಿ ಬಂದಿದ್ದ ಭೂ ಅವ್ಯವಹಾರ ಪ್ರಕರಣ 2014 ರ ಲೋಕಸಭೆ ಚುನಾವಣೆಯ ಸಂದರ್ಭ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಂದಿತ್ತು. ಇದು ಬಿಜೆಪಿಯ ಗೆಲುವಿಗೆ ಒಂದು ರೀತಿಯಲ್ಲಿ ಸಹಕಾರಿಯಾಗಿತ್ತು.
ಡಿಎಲ್ಎಫ್ ವಿರುದ್ಧ ಎಫ್ಐಆರ್ ದಾಖಲಾದ ಸುಮಾರು ಐದು ವರ್ಷಗಳ ನಂತರ ಪ್ರಕರಣ ತಿರುವು ಪಡೆದಿತ್ತು. ಹರಿಯಾಣದ ಬಿಜೆಪಿ ಸರ್ಕಾರವು ಒಪ್ಪಂದಗಳಲ್ಲಿ ಡಿಎಲ್ಎಫ್ ಯಾವುದೇ ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಿಲ್ಲ ಎಂದು 2023ರ ಏಪ್ರಿಲ್ನಲ್ಲಿ ಹೈಕೋರ್ಟ್ಗೆ ತಿಳಿಸಿತ್ತು.
ಆದರೆ, ಹರಿಯಾಣ ಸರ್ಕಾರ ಆರೋಪಿಗಳಿಗೆ ‘ಕ್ಲೀನ್ ಚಿಟ್’ ನೀಡಿಲ್ಲ. ಹೆಚ್ಚಿನ ತನಿಖೆಗಾಗಿ ಎಸ್ಐಟಿ ರಚನೆ ಮಾಡುವುದಾಗಿ ಘೋಷಿಸಿತ್ತು.
ಅಕ್ಟೋಬರ್ 2019 ಮತ್ತು ನವೆಂಬರ್ 2022 ರ ನಡುವೆ ಡಿಎಲ್ಎಫ್ ಸಂಸ್ಥೆಯು ಒಟ್ಟು 170 ಕೋಟಿ ರೂಪಾಯಿ ದೇಣಿಗೆಯನ್ನು ಬಿಜೆಪಿಗೆ ನೀಡಿರುವುದು ಚುನಾವಣಾ ಆಯೋಗ ಇತ್ತೀಚೆಗೆ ಪ್ರಕಟಿಸಿರುವ ಚುನಾವಣಾ ಬಾಂಡ್ಗಳ ಮಾಹಿತಿಯಿಂದ ಬಹಿರಂಗಗೊಂಡಿದೆ.
ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್, ಡಿಎಲ್ಎಫ್ ಗಾರ್ಡನ್ ಸಿಟಿ ಇಂದೋರ್ ಪ್ರೈವೇಟ್ ಲಿಮಿಟೆಡ್ ಮತ್ತು ಡಿಎಲ್ಎಫ್ ಲಕ್ಸುರಿ ಹೋಮ್ಸ್ ಲಿಮಿಟೆಡ್ ಎಂಬ ಮೂರು ಸಂಸ್ಥೆಗಳ ಮೂಲಕ ಡಿಎಲ್ಎಫ್ ಗ್ರೂಪ್ ಚುನಾವಣಾ ಬಾಂಡ್ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ. ಈ ಎಲ್ಲಾ ಬಾಂಡ್ಗಳ ಫಲಾನುಭವಿ ಬಿಜೆಪಿ ಮಾತ್ರವಾಗಿದೆ. ಡಿಎಲ್ಎಫ್ ಇತರ ಪಕ್ಷಗಳಿಗೆ ದೇಣಿಗೆ ನೀಡಿಲ್ಲ.
ಗಮನಾರ್ಹ ಸಂಗತಿಯೆಂದರೆ, ಅಕ್ಟೋಬರ್ 2019 ಮತ್ತು ನವೆಂಬರ್ 2022 ರ ಡಿಎಲ್ಎಫ್ ಸಂಸ್ಥೆಯು ಒಟ್ಟು 170 ಕೋಟಿ ರೂಪಾಯಿ ದೇಣಿಗೆಯನ್ನು ಬಿಜೆಪಿಗೆ ನೀಡಿತ್ತು. ಮುಂದಿನ ವರ್ಷ ಅಥವಾ ಕೊನೆಯ ದೇಣಿಗೆ ನೀಡಿದ ಸುಮಾರು 4 ತಿಂಗಳ ಬಳಿಕ ಹರಿಯಾಣದ ಬಿಜೆಪಿ ಸರ್ಕಾರ ಡಿಎಲ್ಎಫ್ಗೆ ಕ್ಲೀನ್ ಚಿಟ್ ನೀಡಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಕೃಪೆ : Newslaundry
ಇದನ್ನೂ ಓದಿ : ಚುನಾವಣಾ ಬಾಂಡ್: 745 ಕೋಟಿ ದೇಣಿಗೆ ಹೈದರಾಬಾದ್ ಮೂಲದ ಕಂಪೆನಿಗಳಿಂದ ಪಡೆದಿದ್ದ ಬಿಜೆಪಿ