ಭಿನ್ನ ಧರ್ಮದ ಯುವಕ-ಯುವತಿ ಜೊತೆಯಾಗಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ, ಅವರನ್ನು ಬಲವಂತವಾಗಿ ಪೊಲೀಸರಿಗೆ ಒಪ್ಪಿಸಿರುವ ಮತೀಯ ಗೂಂಡಾಗಿರಿ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಗುಂಡ್ಯ ಬಳಿ ನಡೆದಿದೆ.
ಪುತ್ತೂರು ಮೂಲದ ಮುಸ್ಲಿಂ ಯುವಕ ಮತ್ತು ವೇಣೂರಿನ ಹಿಂದೂ ಯುವತಿ ಆಟೋವೊಂದರಲ್ಲಿ ಗುಂಡ್ಯಗೆ ತೆರಳಿದ್ದರು. ಅವರಿಬ್ಬರು ಆಟೋ ನಿಲ್ಲಿಸಿ ಸುತ್ತಾಡುತ್ತಿದ್ದಾಗ ಬಲಪಂಥೀಯ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ, ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಬಲವಂತವಾಗಿ ಆ ಜೋಡಿಯನ್ನು ಪುತ್ತೂರು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣದ ಕುರಿತು 14 ಸೆಕೆಂಡ್ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಯುವತಿಯು “ನನ್ನ ಇಷ್ಟದವರ ಜೊತೆ ಸುತ್ತಾಡುತ್ತೇನೆ, ನೀವ್ಯಾರು ಕೇಳಲು” ಎಂದು ಬಲಪಂಥೀಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಕಾಣಬಹುದಾಗಿದೆ. ಬಲಪಂಥೀಯ ಕಾರ್ಯಕರ್ತನೊಬ್ಬ ಕೂಗಾಡುವುದು ಸಹ ದಾಖಲಾಗಿದೆ.
ಪುತ್ತೂರಿನ ಯುವಕ ತನ್ನ ಸ್ನೇಹಿತನ ಆಟೋದಲ್ಲಿ ಗೆಳತಿಯೊಡನೆ ಗುಂಡ್ಯ-ಸುಬ್ರಮಣ್ಯ ರಸ್ತೆಯಲ್ಲಿ ಬಂದಿದ್ದಾನೆ. ಗುಂಡ್ಯ ಸಮೀಪದ ದೇರಣೆ ಕ್ರಾಸ್ನಲ್ಲಿ ಆಟೋ ನಿಲ್ಲಿಸಿ ಸುತ್ತಾಡುತ್ತಿದ್ದಾಗ ಕೆಲವರು ಬಲಪಂಥೀಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಕಾರ್ಯಕರ್ತರು ಆ ಜೋಡಿಗೆ ಕಿರುಕುಳ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
Moral policing incident reported in Gundya, Puttur taluk of #DakshinKannada dist. A #Hindu girl was going in an auto with a #Muslim boy near Gundya when their auto was waylaid and stopped by right wing activists. Later, the boy and girl were handed over to cops. #Karnataka pic.twitter.com/hfyTMetDh7
— Imran Khan (@KeypadGuerilla) April 5, 2022
ಈ ಹಿಂದೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿಯ ಹತ್ತಾರು ಮತೀಯ ಗೂಂಡಾಗಿರಿ ಪ್ರಕರಣಗಳು ವರದಿಯಾಗಿವೆ. ಅದರಲ್ಲಿಯೂ ಬಸವರಾಜ ಬೊಮ್ಮಾಯಿಯವರು ಸಿಎಂ ಆದ ನಂತರ ಪ್ರಕರಣಗಳು ವೇಗ ಪಡೆದುಕೊಂಡಿವೆ. ಅವರು ಉಡುಪಿಯಲ್ಲಿಯೇ ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು. “ನೈತಿಕತೆ ಇರಬೇಕು. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ” ಎಂದು ಹೇಳುವ ಮೂಲಕ ಮತೀಯ ಗೂಂಡಾಗಿರಿಗೆ ಒಪ್ಪಿಗೆಯ ಮುದ್ರೆಯೊತ್ತಿದ್ದರು. ಅದಾದ ನಂತರ ಮಂಗಳೂರಿನಲ್ಲಿ ಹೋಟೆಲ್ಗೆ ನುಗ್ಗಿ ಜೋಡಿಗೆ ಹಲ್ಲೆ ನಡೆಸಲಾಯಿತು. ಅದೇ ಮಂಗಳೂರಿನಲ್ಲಿ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಯುವನಕ ಮೇಲೆ ಹಲ್ಲೆ ನಡೆಸಿ ಮತೀಯ ಗೂಂಡಾಗಿರಿ ಮೆರಯಲಾಯಿತು. ಪುತ್ತೂರಿನಲ್ಲಿ ಬಸ್ನಲ್ಲಿ ವಿಭಿನ್ನ ಧರ್ಮದ ಹುಡುಗ ಹುಡುಗಿ ತೆರಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಕಿರುಕುಳ ನೀಡಲಾಯಿತು. ಒಂದೇ ಕಾರಿನಲ್ಲಿ ಹಿಂದೂ ಮುಸ್ಲಿಮರು ತೆರಳುತ್ತಿದ್ದಾಗ ಅದನ್ನು ತಡೆದು ಹಿಂಸೆ ನೀಡಲಾಗಿತ್ತು. ಮುಸ್ಲಿಂ ಸಹೋದ್ಯೋಗಿಯೊಂದಿಗೆ ಹೋಟೆಲ್ನಲ್ಲಿ ಆಹಾರ ಸೇವಿಸುತ್ತಿದ್ದ ಮಹಿಳೆಗೆ ಬೆದರಿಕೆ ಹಾಕಲಾಯ್ತು. ಈ ರೀತಿಯ ಹತ್ತಾರು ಮಾರೆಲ್ ಪೊಲೀಸಿಂಗ್ ಘಟನೆಗಳು ಎರಡು ತಿಂಗಳಲ್ಲಿ ವರದಿಯಾಗಿದ್ದವು. ಈಗ ಅಂತದ್ದೆ ಘಟನೆಗಳು ಮರುಕಳಿಸಿ ಆತಂಕ ಹುಟ್ಟಿಸಿವೆ.
ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿದೆ ಕೋಮುದ್ವೇಷ
ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್-ಕ) ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ), ಆಲ್ ಇಂಡಿಯಾ ಪೀಪಲ್ಸ್ ಫೋರಮ್ (ಎಐಪಿಎಫ್) ಮತ್ತು ಗೌರಿ ಲಂಕೇಶ್ ನ್ಯೂಸ್.ಕಾಂ (gaurilankeshnews.com) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಕೋಮುದ್ವೇಷ ಅಪರಾಧ’ಗಳ ಕುರಿತು ಆತಂಕ ವ್ಯಕ್ತಪಡಿಸಿದೆ.
ಈ ವರದಿಯು ದಕ್ಷಿಣ ಕನ್ನಡದಲ್ಲಿ ಜನವರಿ 2021ರಿಂದ ಸೆಪ್ಟೆಂಬರ್ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿಕ ಘಟನೆಗಳನ್ನು ವಿಶ್ಲೇಷಿಸಿದೆ. ಜೊತೆಗೆ ಆರು ವಿಭಿನ್ನ ಮಾದರಿಯ ಘಟನೆಗಳನ್ನು ಗುರುತಿಸುತ್ತದೆ. ಅವುಗಳೆಂದರೆ, 1. ಸಾಮಾಜಿಕ ಪ್ರತ್ಯೇಕತೆಯನ್ನು ಜಾರಿಗೊಳಿಸುವುದು 2. ಆತ್ಮೀಯ ಸಂಬಂಧಗಳನ್ನು ನಿಯಂತ್ರಿಸುವುದು. 3. ಆರ್ಥಿಕ ಸಾಮಾಜಿಕ ಬಹಿಷ್ಕಾರ. 4. ಗೋವಿನ ಹೆಸರಲ್ಲಿ ದಾಳಿಗಳು. 5. ಧಾರ್ಮಿಕ ಸ್ವಾತಂತ್ರ್ಯವನ್ನು ನಿಗ್ರಹಿಸುವುದು. 6. ದ್ವೇಷ ಹರಡುವ ಭಾಷಣಗಳನ್ನು ಮಾಡುವುದು.
ಕೋಮುದ್ವೇಷವನ್ನು ತಡೆಯುವಲ್ಲಿ ಪೊಲೀಸರ ಪಾತ್ರವನ್ನು ಈ ವರದಿ ಉಲ್ಲೇಖಿಸಿದೆ. ಜೊತೆಗೆ ಪೊಲೀಸರ ತಪ್ಪುಗಳನ್ನು ವರದಿ ಉಲ್ಲೇಖಿಸಿದೆ. ಅಂತರ ಧರ್ಮೀಯ ಸಂಬಂಧಗಳಿಗೆ ತೊಂದರೆಯುಂಟುಮಾಡಿದ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ. ಬದಲಾಗಿ ಅಂತರ ಧರ್ಮೀಯ ಸ್ನೇಹಿತರು ಅಥವಾ ದಂಪತಿಗಳನ್ನೇ ಪೊಲೀಸ್ ಠಾಣೆಗೆ ಕರೆಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದೆಡೆ ಹಿಂಸಾಚಾರ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಸಂತ್ರಸ್ತರನ್ನು ಠಾಣೆಗೆ ಕರೆದೊಯ್ದು ಪ್ರಶ್ನಿಸುವ ಮೂಲಕ ತಪ್ಪಿತಸ್ಥರೆಂದು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂತರ ಧರ್ಮೀಯ ಸಂಬಂಧಗಳನ್ನು ಬಲವಂತವಾಗಿ ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ಆರೋಪಿಗಳ ಮಿತ್ರರಾಗಿದ್ದಾರೆ ಎಂದು ವರದಿಯು ಆತಂಕ ವ್ಯಕ್ತಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ಮತೀಯ ಗೂಂಡಾಗಿರಿ: ಹೋಟೆಲ್ಗೆ ನುಗ್ಗಿ ಜೋಡಿಗೆ ತೊಂದರೆ