ಪೌರತ್ವ ಕಾಯ್ದೆಗೆ ಮಾಡಿದ ತಿದ್ದುಪಡಿಗಳನ್ನು ವಿರೋಧಿಸಿ ನಟ ಮತ್ತು ರಾಜಕಾರಣಿ ಜತಿನ್ ಬೋರಾ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅಸ್ಸಾಂ ರಾಜ್ಯ ಚಲನಚಿತ್ರ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಅವರು ತ್ಯಜಿಸಿದ್ದಾರೆ.
ಗುವಾಹಟಿಯ ಲತಾಸಿಲ್ ಮೈದಾನದಲ್ಲಿ ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು “ನಾನು ಸಿಎಬಿಯನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದ್ದಾರೆ. “ಅಸ್ಸಾಂನ ಜನರಿಂದಾಗಿ ನಾನು ಮೇಲೆ ಬಂದಿದ್ದು, ನಾನು ಈ ವಿಷಯದಲ್ಲಿ ಅವರೊಂದಿಗೆ ಇದ್ದೇನೆ.” ಎಂದಿದ್ದಾರೆ.
ತೀವ್ರ ಪ್ರತಿಭಟನೆಯ ನಂತರ ಸರ್ಕಾರವು ಮಸೂದೆಯನ್ನು ಹಿಂತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ಅದನ್ನು ಅಂಗೀಕರಿಸಿತು ಎಂದ ಅವರು ನಾನು ಪಕ್ಷದ ಸದಸ್ಯನಾದ ಕಾರಣಕ್ಕೆ ಅದು ಹೇಳುವ ಎಲ್ಲವನ್ನೂ ನಾನು ಬೆಂಬಲಿಸುವುದಿಲ್ಲ. ನಾನು ಸಿಎಬಿಯನ್ನು ವಿರೋಧಿಸುತ್ತೇನೆ ಮತ್ತು ನಾನು ಅದರ ವಿರುದ್ಧ ಪ್ರತಿಭಟಿಸುತ್ತಲೇ ಇರುತ್ತೇನೆ ಎಂದಿದ್ದಾರೆ.
ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದ ನಂತರ ಮತ್ತೊಬ್ಬ ಅಸ್ಸಾಮಿ ನಟ ರವಿ ಶರ್ಮಾ ಕೂಡ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಜಹ್ನು ಬರುವಾ ಅವರು 8 ನೇ ಅಸ್ಸಾಂ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಈ ವರ್ಷದ ಚಲನಚಿತ್ರೋತ್ಸವದಿಂದ ಪೌರತ್ವ ಕಾಯ್ದೆಯ ತಿದ್ದುಪಡಿಗಳನ್ನು ವಿರೋಧಿಸಿ ತಮ್ಮ ಚಲನಚಿತ್ರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸಿಂಗರ್ ಪಾಪನ್ ಅವರು ಗುರುವಾರ ದೆಹಲಿಯಲ್ಲಿ ಅವರ ಸಂಗೀತ ಕಚೇರಿಯನ್ನು ರದ್ದುಗೊಳಿಸಿದ್ದರು. ಅವರು “ತವರು ರಾಜ್ಯ ಅಸ್ಸಾಂ ಉರಿಯುತ್ತಿದೆ, ಅಳುತ್ತಿದೆ ಮತ್ತು ಕರ್ಫ್ಯೂ ಅಡಿಯಲ್ಲಿದೆ” ಎಂದು ಹೇಳಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ಸಿಕ್ಕಿಂನ ಸ್ಥಳೀಯ ಜನರ ವಿರುದ್ಧವಿದೆ: ಭೈಚುಂಗ್ ಭೂಟಿಯಾ
ಪೌರತ್ವ ತಿದ್ದುಪಡಿ ಮಸೂದೆ ಕಾನೂನಾಗಿ ಮಾರ್ಪಟ್ಟ ನಂತರ ಹಿಮಾಲಯ ರಾಜ್ಯದಲ್ಲಿ ವಿದೇಶಿಯರು ಮತ್ತು ಇತರ ರಾಜ್ಯಗಳ ಜನರ ಅಕ್ರಮ ನುಸುಳುವಿಕೆ ತೀವ್ರವಾಗಲಿದೆ ಎಂದು ಹೆಸರಾಂತ ಫುಟ್ಬಾಲ್ ಆಟಗಾರ ಭೈಚುಂಗ್ ಭುಟಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಸಿಕ್ಕಿಂನ ಸ್ಥಳೀಯ ಜನರ ಹಿತಾಸಕ್ತಿಗೆ ಮತ್ತು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 371 (ಎಫ್) ವಿಧಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.