ಉಪ ಚುನಾವಣೆಯ ಅಭ್ಯರ್ಥಿಗೆ ರಾಜಸ್ಥಾನದ ಬಿಜೆಪಿ ಸರ್ಕಾರ ಸಚಿವ ಸ್ಥಾನ ನೀಡಿದ್ದು, ಅವರನ್ನು ಚುನಾವಣಾ ಕಣದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ.
ಸುರೇಂದ್ರ ಪಾಲ್ ಸಿಂಗ್ ಟಿಟಿ ರಾಜಸ್ಥಾನದ ನೂತನ ಸಚಿವರಾಗಿ ಡಿಸೆಂಬರ್ 30ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ, ಇದೇ ಸುರೇಂದ್ರ ಪಾಲ್ ಜನವರಿ 5ರಂದು ಕರಣ್ಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚನಾವಣೆಯ ಬಿಜೆಪಿಯ ಅಭ್ಯರ್ಥಿ ಕೂಡ ಹೌದು. ಅಭ್ಯರ್ಥಿಗೆ ಸಚಿವ ಸ್ಥಾನ ಕೊಟ್ಟರೆ ಅವರು ಚುನಾವಣೆಯ ಮೇಲೆ ಪ್ರಭಾವ ಬೀರುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಭ್ಯರ್ಥಿಗೆ ಸಚಿವ ಸ್ಥಾನ ನೀಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ವಿಶೇಷವಾಗಿ ಕಲಂ 32ರ ಪ್ರಕಾರ ಚುನಾವಣೆ ಘೋಷಣೆಯಾದ ಬಳಿಕ ತಾತ್ಕಾಲಿಕ ನೇಮಕಾತಿಗಳನ್ನು ಮಾಡಬಾರದು. ಇಲ್ಲಿ ಅಭ್ಯರ್ಥಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರಿಂದ ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಡೋಟಸಾರ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಘು ಶರ್ಮಾ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ನವೆಂಬರ್ 25, 2023ರಂದು ರಾಜಸ್ಥಾನ ವಿಧಾನಸಭೆಯ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಮತದಾನ ನಡೆದಿತ್ತು. ಕರಣ್ಪುರ ಕ್ಷೇತ್ರದ ಹಾಲಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗುರ್ಮೀತ್ ಸಿಂಗ್ ಕೂನರ್ ಅವರು ನವೆಂಬರ್ 15ರಂದು ಹಠಾತ್ ಸಾವನ್ನಪ್ಪಿದ ಹಿನ್ನೆಲೆ, ಇಲ್ಲಿನ ಚುನಾವಣೆ ಮುಂದೂಡಲಾಗಿತ್ತು. ಜನವರಿ 5ರಂದು ಕರಣ್ಪುರಕ್ಕೆ ಉಪ ಚುನಾವಣೆ ನಡೆಯಲಿದೆ.
ಮೃತ ಗುರ್ಮೀತ್ ಸಿಂಗ್ ಕೂನರ್ ಅವರ ಪುತ್ರ ರೂಪಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸುರೇಂದ್ರ ಪಾಲ್ ಸ್ಪರ್ಧಿಸಿದ್ದಾರೆ. ಇದೇ ಸುರೇಂದ್ರ ಪಾಲ್ಗೆ ಈಗ ಸಚಿವ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ : ಪಂಜಾಬ್ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ; ‘ದೇಶಭಕ್ತರಿಗೆ ಘೋರ ಅವಮಾನ’ ಎಂದ ಸಿಎಂ ಮಾನ್