ಶಾಲಾ ಮಕ್ಕಳ ಮತ್ತು ಶಿಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸುವ ಮಹತ್ವದ ಪೈಲೆಟ್ ಯೋಜನೆಗೆ ದೆಹಲಿ ಸರ್ಕಾರ ಇಂದು ಚಾಲನೆ ನೀಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಇದು ಇಡೀ ಶಿಕ್ಷಣ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಉತ್ತರದಾಯಿತ್ವವನ್ನಾಗಿ ಮಾಡಲಿದೆ ಎಂದು ಅಭಿಪ್ರಾಯ ಪಟ್ಟಿರುವ ಕೇಜ್ರಿವಾಲ್, ಶೀಘ್ರದಲ್ಲೇ ದೆಹಲಿಯ ಎಲ್ಲಾ ಸರ್ಕಾರಿ ಶಾಲಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸುತ್ತೇವೆ ಎಂದಿದ್ದಾರೆ.
ದೆಹಲಿಯ ಲಜಪತ್ ನಗರ್ ನಗರದಲ್ಲಿನ ಶಹೀದ್ ಹೇಮು ಕಲ್ಯಾಣಿ ಸರ್ವೋದಯ ವಿದ್ಯಾಲಯದಲ್ಲಿ ಸಿಸಿಟಿವಿ ಕ್ಯಾಮರ ಯೋಜನೆ ಉದ್ಘಾಟಿಸಿ ಅರವಿಂದ್ ಕೇಜ್ರಿವಾಲ್ ಮಾತಾಡಿದ್ದಾರೆ.
ಇಂದಿನ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ದೆಹಲಿಯಲ್ಲಿ ಇನ್ನು ಮುಂದೆ ಇಂತಹ ಪರಿಸ್ಥಿತಿ ಬರದಂತೆ ನಾವು ನೋಡಿಕೊಳ್ಳುತ್ತೇವೆ. ಪೋಷಕರು ಇರುವಲ್ಲಿಂದಲೇ ತಮ್ಮ ಮೊಬೈಲ್ ಗಳಲ್ಲಿ ತಮ್ಮ ಮಗ/ಮಗಳು ಸುರಕ್ಷಿತವಾಗಿದ್ದಾರೋ, ಇಲ್ಲವೋ ಎಂಬುದನ್ನು ನೋಡಬಹುದೆಂಬ ಭರವಸೆ ನೀಡುತ್ತಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ವಿರೋಧ ಪಕ್ಷಗಳು ಸಿಸಿಟಿವಿ ಕ್ಯಾಮರ ಅಳವಡಿಕೆಯ ವಿಚಾರಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಮಕ್ಕಳ ಖಾಸಗಿತನಕ್ಕೆ ಧಕ್ಕೆ ಎಂದೆಲ್ಲಾ ಹೇಳಿ ಕೋರ್ಟಿನಲ್ಲಿಯೂ ತಡೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಇದನ್ನು ಬಿಟ್ಟು ಕೊಡುವುದಿಲ್ಲ. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು ಇದು ನಮ್ಮ ಮಕ್ಕಳ ಸುರಕ್ಷತೆಗೆ ಸಹಾಯ ಮಾಡಲಿದೆ ಎಂದಿದ್ದಾರೆ.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ದಿನ, ಈ ಶಾಲೆಯಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಕೆಯ ಕಾರ್ಯ ಪೂರ್ಣಗೊಂಡಿದೆ. ಇದು ಪೋಷಕರು ಮತ್ತು ಮಕ್ಕಳನ್ನು ನೇರವಾಗಿ ಬೆಸೆಯುವ ಕೊಂಡಿಯಾಗಿದೆ. ನವೆಂಬರ್ ಒಳಗಾಗಿ ದೆಹಲಿಯ ಶಾಲೆಗಳಿಗೂ ಈ ಸೌಲಭ್ಯ ನೀಡುತ್ತೇವೆ.
“ಸಣ್ಣ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯನ್ನು ನೋಡಿ ನಾನು ತಲ್ಲಣಿಸಿಹೋಗಿದ್ದೆ. ರಾಷ್ಟ್ರ ರಾಜಧಾನಿಯಲ್ಲಿಯೇ ಮಕ್ಕಳು ಸುರಕ್ಷಿತವಾಗಿಲ್ಲ ಅಂದರೆ ನಾವೆಲ್ಲರೂ ನಾಚಿಕೆಯಿಂದ ತಲೆತಗ್ಗಿಸಬೇಕು. ಅತ್ಯಾಚಾರ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಿಸಿಟಿವಿ ಕ್ಯಾಮರಗಳು ಸಹಾಯಕವಾಗಿವೆ. ಅದಕ್ಕಾಗಿ ದೆಹಲಿಯಾದ್ಯಂತ ನಾವು ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸುತ್ತೇವೆ. ಜೊತೆಗೆ ನಾವು ದೆಹಲಿಯನ್ನು ಸರುಕ್ಷಿತವಾಗಿಡಲು ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಲು ಸಿದ್ದರಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
I am shaken after seeing plight of minor rape victim. If children r not safe even in national capital, we should all hang our heads in shame. CCTV cameras helped in nabbing accused. We r installing cameras across Delhi. We r also ready to cooperate wid Centre to make Del safe https://t.co/4GS4ST9Gj3
— Arvind Kejriwal (@ArvindKejriwal) July 6, 2019
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಇಬ್ಬರೂ ಅತ್ಯಾಚಾರಕ್ಕೊಳಗಾಗಿದ್ದ 6 ವರ್ಷದ ಹೆಣ್ಣುಮಗುವನ್ನು ನೋಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಸಫ್ದರ್ ಜಂಗ್ ಹಾಸ್ಟಿಟಲ್ ಗೆ ಭೇಟಿ ನೀಡಿದ್ದರು.