ಗೃಹ ಸಚಿವ ಅಮಿತ್ ಶಾ ಅವರು ಎನ್ಪಿಆರ್ ಕುರಿತು ರಾಜ್ಯಸಭೆಯಲ್ಲಿ ಕೊಟ್ಟ ತಮ್ಮ ಹೇಳಿಕೆಯನ್ನು ಸರಳವಾಗಿ ಲಿಖಿತ ರೂಪದಲ್ಲಿ ಬರೆದುಕೊಡಬೇಕೆಂದು ಹಲವು ಚಿಂತಕರು ಒತ್ತಾಯಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಯೋಗೇಂದ್ರ ಯಾದವ್ ಮತ್ತು ಹರ್ಷಮಂದರ್ ರವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಮ್ಮದು ಸರಳ ಬೇಡಿಕೆಯಾಗಿದ್ದು – ನೀವು ಹೇಳಿದ್ದನ್ನು ಲಿಖಿತವಾಗಿ ಬರೆದುಕೊಡಿ ಎಂದು ಆಗ್ರಹಿಸಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾರವರು NPRಗೆ ದಾಖಲೆ ತೋರಿಸಬೇಕಿಲ್ಲ. ನಿಮಗೆ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ. ನಿಮ್ಮನ್ನು ಡೌಟ್ಫುಲ್ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು.
ಈ ಕುರಿತು ಮಾತನಾಡಿರುವ ಯೋಗೇಂದ್ರ ಯಾದವ್ರವರು, “ನಾವು ಭಾರತೀಯರು ವೇದಿಕೆಯು ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿಯನ್ನು ತಿರಸ್ಕರಿಸುತ್ತದೆ. ಎನ್ಪಿಆರ್ ಮತ್ತು ಜನಗಣತಿಯನ್ನು ಯಾವುದೇ ಕಾರಣಕ್ಕೂ ಒಟ್ಟಿಗೆ ಮಾಡಬಾರದು. ಮಾರ್ಚ್ 12ರಂದು ರಾಜ್ಯಸಭೆಯಲ್ಲಿ ಅಮಿತ್ ಶಾರವರು ಮಾಡಿದ ಭಾಷಣವನ್ನು ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎನ್ಪಿಆರ್ ಅನ್ನು ರದ್ದುಗೊಳಿಸಬೇಕು, ಇದು ಎನ್ಆರ್ಸಿಗೆ ಮೊದಲ ಹೆಜ್ಜೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರ್ಷಮಂದರ್ರವರು ಆರೋಪಿಸಿದ್ದಾರೆ.