ನಿವೃತ ನ್ಯಾಯಾಧೀಶರನ್ನು ”ಭಾರತ ವಿರೋಧಿ ಗ್ಯಾಂಗ್” ಎಂದು ಟೀಕಿಸಿದ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ವಿರುದ್ಧ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ರಿಜಿಜು ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿ 90 ಮಾಜಿ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ.
”ಸರ್ಕಾರದ ಅಭಿಪ್ರಾಯಗಳನ್ನು ಒಬ್ಬ ವ್ಯಕ್ತಿಯು ಒಪ್ಪದಿದ್ದರೆ, ಆತನನ್ನು ”ರಾಷ್ಟ್ರವಿರೋಧಿ” ಎಂದು ಶಾಶ್ವತವಾಗಿ ಹಣೆಪಟ್ಟಿ ಕಟ್ಟುತ್ತೀರಿ. ಮುಂದುವರೆದು ಆತನ ವಿರುದ್ಧ ಸರ್ಕಾರವು ಎಲ್ಲಾ ರೀತಿಯ ಶಿಕ್ಷೆಯ ಕ್ರಮಗಳನ್ನು ಪ್ರಾರಂಭಿಸುತ್ತದೆ. ದೇಶದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಅದನ್ನು ಸರ್ಕಾರ ನಿಗ್ರಹಿಸಲು ಪ್ರಯತ್ನಿಸುತ್ತದೆ” ಎಂದು 90 ಮಾಜಿ ಅಧಿಕಾರಿಗಳು ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.
ಮಾಜಿ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಗಳಾದ ಹರ್ಷ್ ಮಂದರ್, ನಜೀಬ್ ಜಂಗ್ ಮತ್ತು ಮಾಜಿ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಜೂಲಿಯೊ ರಿಬೇರೊ ಇವರೆಲ್ಲಾ ಪತ್ರಕ್ಕೆ ಸಹಿ ಮಾಡಿದವರಲ್ಲಿ ಇದ್ದಾರೆ.
ಮಾರ್ಚ್ 17 ರಂದು, ಕೆಲವು ನಿವೃತ್ತ ನ್ಯಾಯಾಧೀಶರು “ಭಾರತ ವಿರೋಧಿ ಗ್ಯಾಂಗ್” ನ ಭಾಗವಾಗಿದ್ದಾರೆ ಮತ್ತು ನ್ಯಾಯಾಂಗವನ್ನು ಪ್ರತಿಪಕ್ಷದ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾನೂನು ಸಚಿವರು ಹೇಳಿದ್ದರು.
ಇದನ್ನೂಓದಿ: ಶಿಕ್ಷೆಯಿಂದ ಸಂಸದರ ಸ್ಥಾನ ತನ್ನಿಂದತಾನೇ ಅನರ್ಹ: ತೀರ್ಪು ನೀಡುವಾಗ ನ್ಯಾಯಾಲಯಗಳು ಎಚ್ಚರವಹಿಸಬೇಕು ಎಂದ ಸುಪ್ರೀಂ
ಕಳೆದ ಕೆಲವು ತಿಂಗಳುಗಳಿಂದ, ರಿಜಿಜು ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಅವರು ನ್ಯಾಯಾಧೀಶರ ನೇಮಕದ ಕೊಲಿಜಿಯಂ ವ್ಯವಸ್ಥೆಯನ್ನು ಪದೇ ಪದೇ ಟೀಕಿಸಿದ್ದರು. ಇದು ಅಪಾರದರ್ಶಕವಾಗಿದೆ ಎಂದು ಹೇಳುತ್ತಾ ಬಂದಿದ್ದಾರೆ.
ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತಾರೆ ಮತ್ತು ಸರ್ಕಾರವು ಅವುಗಳನ್ನು ಅನುಸರಿಸುವುದನ್ನು ನಿರೀಕ್ಷಿಸಲಾಗುತ್ತದೆ ಇದು ಕೊಲಿಜಿಯಂ ವ್ಯವಸ್ಥೆಯಾಗಿದೆ.
ಆದರೆ ಕೊಲಿಜಿಯಂ ನೀಡಿದ ಕೆಲವೊಂದು ಹೆಸರನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ನಿರಾಕರಣೆ ಮಾಡುತ್ತಿರುವುದು ನೋಡಿದರೆ, ಸರ್ಕಾರಕ್ಕೆ ವಿಧೇಯ ನ್ಯಾಯಾಂಗ ಸೃಷ್ಠಿ ಮಾಡುವ ಉದ್ದೇಶ ಇದ್ದಂತಿದೆ. ನ್ಯಾಯಾಂಗದ ಸ್ವಾಯತ್ತತೆಯನ್ನು ರಕ್ಷಣೆ ಮಾಡಲು ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಹಾಗೂ ತಜ್ಞರು ಬಹಿರಂಗವಾಗಿ ಗಂಭೀರ ಕಾಳಜಿ ವ್ಯಕ್ತಪಡಿಸುತ್ತಿರುವುದು ಅಚ್ಚರಿಯೇನಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ ಪಿಳ್ಳೈ, ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಸುಜಾತ ಸಿಂಗ್ ಹಾಗೂ ಆರೋಗ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಕೆ. ಸುಜಾತ ಸಿಂಗ್ ರಾವ್ ಸೇರಿ ಒಟ್ಟು 90 ಮಂದಿ ಮಾಜಿ ಅಧಿಕಾರಿಗಳು ಈ ಪತ್ರ ಬರೆದಿದ್ದಾರೆ.
”ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆ ಮಾಡುವುದು ಆಯ್ಕೆಯಲ್ಲ. ಕಾರ್ಯಾಂಗವು ನ್ಯಾಯಾಂಗದ ಮೇಲೆ ಅತಿಕ್ರಮಣ ಮಾಡುವುದು ಜನತಂತ್ರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ತೀಕ್ಷ್ಣವಾಗಿ ಮಾಜಿ ಅಧಿಕಾರಿಗಳು ಈ ಪತ್ರದಲ್ಲಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಅದರ ಕೊಲಿಜಿಯಂ ವ್ಯವಸ್ಥೆಯ ಮೇಲೆ ಸರ್ಕಾರದ ”ಸಂಯೋಜಿತ ದಾಳಿಯ ಭಾಗ” ಎಂದು ತೋರುತ್ತದೆ ಎಂದು ಗುರುವಾರ ರಿಜಿಜು ಅವರಿಗೆ ಬರೆದ ಪತ್ರದಲ್ಲಿ ಮಾಜಿ ನಾಗರಿಕ ಸೇವಕರು ತಿಳಿಸಿದ್ದಾರೆ.
ರಿಜಿಜು ಮತ್ತು ಧಂಕರ್ ಅವರು ನ್ಯಾಯಾಂಗ ನೇಮಕಾತಿಗಳ ಕುರಿತು ಸುಪ್ರೀಂ ಕೋರ್ಟ್ ಮತ್ತು ಕೊಲಿಜಿಯಂನೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಬದಲು ಅದಕ್ಕೆ ವಿರುದ್ಧವಾಗಿ ಟೀಕೆಗಳನ್ನು ಮಾಡುತ್ತಾ ವಿಷಪೂರಿತವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದ್ದಾರೆ.