ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಋತುರಾಜ್ ಅವಸ್ಥಿ ನೇಮಕವಾಗಿದ್ದಾರೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅವರನ್ನು ಕರ್ನಾಟಕಕ್ಕೆ ವರ್ಗಾಯಿಸಿ, ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
1960ರಲ್ಲಿ ಜನಿಸಿರುವ ಋತುರಾಜ್ ಅವರು, ಲಖನೌ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದು, ನ್ಯಾಯಾಂಗದಲ್ಲಿ ಸುದೀರ್ಘ ಸೇವೆ ಮಾಡಿದ್ದಾರೆ. 1987ರಲ್ಲಿ ವಕೀಲ ವೃತ್ತಿ ಆರಂಭಿಸಿ, ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. 2009ರ ಏಪ್ರಿಲ್ 13ರಂದು ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2010ರ ಡಿಸೆಂಬರ್ 24ರಂದು ಖಾಯಂ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿರಿ: ನ್ಯಾಯಾಂಗದಲ್ಲಿ ಶೇ. 50 ಮಹಿಳಾ ಮೀಸಲಾತಿಗೆ ಸಿಜೆಐ ಕರೆ
ಏಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ ಹಾಗೂ ಐದು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದ ಅರವಿಂದ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲ್ಲಿಸುತ್ತಿದ್ದ ಆರ್.ವಿ. ಮಳಿಮಠ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿರುವುದಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸತೀಶಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ, ಕಲ್ಕತ್ತಾ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಕೊಲಿಜಿಯಂ, ಸೆಪ್ಟೆಂಬರ್ನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ಮಾಡಿತ್ತು. ನೇಮಕಾತಿ ವಿಳಂಬವೂ ಆಗಿದೆ. ಈ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಆಕ್ಷೇಪಗಳೂ ವ್ಯಕ್ತವಾಗಿವೆ.
12 ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಕೊಲಿಜಿಯಂ ನೀಡಿರುವ ಶಿಫಾರಸ್ಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉನ್ನತ ಮೂಲಗಳು ಈ ಹಿಂದೆಯೇ ಆರೋಪಿಸಿವೆ.
ಒಟ್ಟು 68 ನ್ಯಾಯಮೂರ್ತಿಗಳ ನೇಮಕ ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕೆಗಳು ವ್ಯಕ್ತವಾಗಿರುವುದು ಈಗಾಗಲೇ ವರದಿಯಾಗಿದೆ. ಆಗಸ್ಟ್ 25ರಿಂದ ಸೆಪ್ಟೆಂಬರ್ 1ರವರೆಗೆ ನಡೆದ ಕೊಲಿಜಿಯಂ ಪರಿಶೀಲನೆಯ ಮುಂದೆ 112 ಮಂದಿಯ ಹೆಸರುಗಳಿದ್ದವು. ಶಿಫಾರಸ್ಸು ಮಾಡಲಾಗಿರುವ 68 ಹೆಸರುಗಳಲ್ಲಿ 44 ನ್ಯಾಯಾವಾದಿ ಹಿನ್ನೆಲೆಯವರಾಗಿದ್ದು, 24 ಮಂದಿ ನ್ಯಾಯಾಂಗದ ಸೇವೆಯ ಹಿನ್ನೆಲೆಯವರಾಗಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಶಿಫಾರಸು ಮಾಡಿದ್ದ ಎಲ್ಲ ಹೆಸರುಗಳಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಅನುಮೋದನೆ ನೀಡಿತ್ತು. ಆಗಸ್ಟ್ 31ರಂದು ಮೂವರು ಮಹಿಳೆಯರು ಸೇರಿದಂತೆ 9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಹೈಕೋರ್ಟ್ಗಳಲ್ಲಿ ತೀವ್ರತರನಾಗಿ ನ್ಯಾಯಮೂರ್ತಿಗಳ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ತುಂಬುವ ನಿಟ್ಟಿನಲ್ಲಿ 12 ಹೈಕೋರ್ಟ್ಗಳಿಗೆ ಒಮ್ಮೆಲೆ 68 ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಕೊಲಿಜಿಯಂ ಸೂಚಿಸಿದ್ದು, ಅಪೂತಪೂರ್ವ ಕ್ಷಣವೆಂದೇ ವಿಶ್ಲೇಷಿಸಲಾಗಿತ್ತು.
ಜಸ್ಟೀಸ್ ಎನ್.ವಿ.ರಮಣ, ಜಸ್ಟೀಸ್ ಯು.ಯು.ಲಲಿತ್, ಜಸ್ಟೀಸ್ ಎ.ಎಂ.ಖಾನ್ವಿಲ್ಖರ್ ಅವರನ್ನು ಒಳಗೊಂಡಿದ್ದ ಕೊಲಿಜಿಯಂ, 8 ನ್ಯಾಯಮೂರ್ತಿಗಳನ್ನು ಕೇರಳ ಹೈಕೋರ್ಟ್ಗೆ, ಕೊಲ್ಕತ್ತ ಹಾಗೂ ರಾಜಸ್ಥಾನಕ್ಕೆ ತಲಾ 6, ಗುಜರಾತ್ ಮತ್ತು ಜಾರ್ಖಾಂಡ್ಗೆ ತಲಾ 5, ಪಂಜಾಬ್, ಹರಿಯಾಣ, ಮದ್ರಾಸ್ಗೆ ತಲಾ 4, ಛತ್ತೀಸ್ಗಡಕ್ಕೆ ಇಬ್ಬರು, ಮಧ್ಯಪ್ರದೇಶಕ್ಕೆ ಒಬ್ಬರು ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.
ಮಿಜೋರಂನ ಮೊದಲ ಮಹಿಳಾ ನ್ಯಾಯಾಂಗ ಅಧಿಕಾರಿಯೆಂದು ಗುರುತಿಸಲಾಗಿರುವ ಮರ್ಲಿ ವಂಕಂಗ್ ಹೆಸರನ್ನು ಗುವಾಹತಿ ಹೈಕೋರ್ಟ್ಗೆ ಶಿಫಾರಸ್ಸು ಮಾಡಲಾಗಿತ್ತು. ಪರಿಶಿಷ್ಟ ಪಂಗಡದವರೂ ಆಗಿರುವ ಮರ್ಲಿ ಅವರನ್ನು ಒಳಗೊಂಡಂತೆ 9 ಮಹಿಳೆಯರ ಹೆಸರುಗಳನ್ನು ವಿವಿಧ ಕೋರ್ಟ್ಗಳಿಗೆ ನೇಮಿಸಲು ಕೊಲಿಂಜಿಯಂ ಶಿಫಾರಸ್ಸು ಮಾಡಿತ್ತು.
ತೆಲಂಗಾಣ ಹೈಕೋರ್ಟ್ಗೆ ನೇಮಕ ಮಾಡುವಂತೆ 7 ಮಂದಿಯ ಹೆಸರನ್ನು ಆ.17ರಂದು ಶಿಫಾರಸು ಮಾಡಿದ್ದ ಐವರು ನ್ಯಾಯಮೂರ್ತಿಗಳಿದ್ದ ಕೊಲಿಜಿಯಂ, ಮೂವರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ 9 ಮಂದಿಯನ್ನು ಸುಪ್ರೀಂ ಕೋರ್ಟ್ಗೆ ನೇಮಿಸುವಂತೆ ಐತಿಹಾಸಿಕ ನಿರ್ಧಾರ ಪ್ರಕಟಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜೀತೇಂದ್ರಕುಮಾರ್ ಮಹೇಶ್ವರಿ, ಹಿಮಾ ಕೊಹ್ಲಿ, ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಈಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ:‘ಆಮ್ಲಜನಕವನ್ನು ಹೊರಬಿಡುವ ಏಕೈಕ ಪ್ರಾಣಿ ದನ’- ಅಲಹಾಬಾದ್ ಹೈಕೋರ್ಟ್ ವಿಚಿತ್ರ ಹೇಳಿಕೆ